ಬೆಂಗಳೂರು, ಸೆ.21 www.bengaluruwire.com : ರಾಜ್ಯದ 14 ಪ್ರಮುಖ ದೇವಾಲಯಗಳ ಸೇವಾ ದರಗಳನ್ನು ಪರಿಷ್ಕರಿಸಿ ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಪ್ರಸಕ್ತ ಸಾಲಿನಲ್ಲಿ, ಸುಮಾರು 5 ವರ್ಷಗಳಿಗಿಂತ ಹಿಂದೆ ನಿಗದಿಪಡಿಸಿದ್ದ ಸೇವಾ ದರಗಳನ್ನು ಪರಿಷ್ಕರಿಸಲಾಗಿದೆ.
ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಒಟ್ಟು 34,566 ಅಧಿಸೂಚಿತ ದೇವಾಲಯಗಳಿವೆ. ಇವುಗಳಲ್ಲಿ 205 ‘ಎ’ ವರ್ಗ, 193 ‘ಬಿ’ ವರ್ಗ ಮತ್ತು 34,168 ‘ಸಿ’ ವರ್ಗದ ದೇವಾಲಯಗಳು ಸೇರಿವೆ. ದೇವಾಲಯಗಳಲ್ಲಿ ಆಯಾ ಸಂಪ್ರದಾಯ ಮತ್ತು ಪದ್ಧತಿಗಳಿಗನುಗುಣವಾಗಿ ನಡೆಸುವ ವಿವಿಧ ಸೇವೆಗಳ ದರಗಳನ್ನು ಕಾಲಕಾಲಕ್ಕೆ ಮಾರುಕಟ್ಟೆ ದರಗಳಿಗನುಗುಣವಾಗಿ ಪರಿಷ್ಕರಿಸಲು 08.08.2016 ರಂದು ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿತ್ತು.
ಪರಿಷ್ಕೃತ ಸೇವಾ ದರಗಳು ಅನ್ವಯವಾಗುವ ದೇವಾಲಯಗಳು :
ಪ್ರಸಕ್ತ ಸಾಲಿನಲ್ಲಿ ಸೇವಾ ದರಗಳನ್ನು ಪರಿಷ್ಕರಿಸಿದ 14 ದೇವಾಲಯಗಳ ಪಟ್ಟಿ ಹೀಗಿದೆ:

* ಬೆಂಗಳೂರು ಜಿಲ್ಲೆ: ಶ್ರೀ ಯೋಗನರಸಿಂಹ ಸ್ವಾಮಿ ದೇವಾಲಯ, ಮಲ್ಲೇಶ್ವರಂ; ಶ್ರೀ ನಂದಿ ತೀರ್ಥ ಸ್ವಾಮಿ ದೇವಾಲಯ, ಮಲ್ಲೇಶ್ವರಂ.
* ಚಿಕ್ಕಬಳ್ಳಾಪುರ ಜಿಲ್ಲೆ: ಶ್ರೀ ವಿದುರಾಶ್ವತ್ಥ ನಾರಾಯಣ ಸ್ವಾಮಿ ದೇವಾಲಯ, ಗೌರಿಬಿದನೂರು ತಾಲ್ಲೂಕು; ಶ್ರೀ ಭೂ ನೀಳ ಸಮೇತ ವೆಂಕಟರಮಣಸ್ವಾಮಿ ದೇವಾಲಯ, ತಲಕಾಯಲಬೆಟ್ಟ.
* ದಕ್ಷಿಣ ಕನ್ನಡ ಜಿಲ್ಲೆ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯ, ಕಡಬ ತಾಲ್ಲೂಕು; ಶ್ರೀ ಮಹಾಲಿಂಗೇಶ್ವರ ದೇವಾಲಯ, ಪುತ್ತೂರು; ಶ್ರೀ ಮಹಾಗಣಪತಿ ದೇವಾಲಯ, ಸೌತಡ್ಕ; ಶ್ರೀ ಸೂರ್ಯ ನಾರಾಯಣಸ್ವಾಮಿ ದೇವಾಲಯ, ಮರೋಳಿ.
* ಬೆಂಗಳೂರು ದಕ್ಷಿಣ ಜಿಲ್ಲೆ (ರಾಮನಗರ): ಶ್ರೀ ಆಂಜನೇಯಸ್ವಾಮಿ ದೇವಾಲಯ, ದೇವರ ಹೊಸಹಳ್ಳಿ.
* ಚಿತ್ರದುರ್ಗ ಜಿಲ್ಲೆ: ಶ್ರೀ ಹಾಲು ರಾಮೇಶ್ವರ ದೇವಾಲಯ, ದೇವಪೂರು, ಹೊಸದುರ್ಗ ತಾಲ್ಲೂಕು.
* ರಾಯಚೂರು ಜಿಲ್ಲೆ: ಶ್ರೀ ಸೂಗೂರೇಶ್ವರಸ್ವಾಮಿ ದೇವಾಲಯ, ದೇವಸೂಗೂರು.
* ಉಡುಪಿ ಜಿಲ್ಲೆ: ಶ್ರೀ ದುರ್ಗಾಪರಮೇಶ್ವರಿ ದೇವಾಲಯ, ಮಂದಾರ್ತಿ, ಬ್ರಹ್ಮಾವರ ತಾಲ್ಲೂಕು.
* ಕೊಪ್ಪಳ ಜಿಲ್ಲೆ: ಶ್ರೀ ಹುಲಿಗೆಮ್ಮ ದೇವಾಲಯ, ಹುಲಿಗಿ, ಕೊಪ್ಪಳ ತಾಲ್ಲೂಕು.
* ಮಂಡ್ಯ ಜಿಲ್ಲೆ: ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯ, ಮೇಲುಕೋಟೆ.
ದರ ಪರಿಷ್ಕರಣೆಯ ಅಧಿಕಾರ ಮತ್ತು ಪ್ರಕ್ರಿಯೆ :
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ನಿಯಮಗಳು 2002ರ ಪ್ರಕಾರ, ದೇವಾಲಯಗಳ ವ್ಯವಸ್ಥಾಪನಾ ಸಮಿತಿಯು ಸೇವಾ ಶುಲ್ಕವನ್ನು ನಿಗದಿಪಡಿಸಬೇಕಾಗಿರುತ್ತದೆ.
ಕಾರ್ಯನಿರ್ವಾಹಕ ಅಧಿಕಾರಿಯು ವ್ಯವಸ್ಥಾಪನಾ ಸಮಿತಿಯ ನಿರ್ಣಯದೊಂದಿಗೆ ಸೇವಾ ದರಗಳ ಪ್ರಸ್ತಾವನೆಯನ್ನು ಅನುಮೋದನೆಗಾಗಿ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ದೇವಾಲಯದ ವ್ಯವಸ್ಥಾಪನಾ ಸಮಿತಿ ಅಥವಾ ಆಡಳಿತಾಧಿಕಾರಿಗಳ ಅನುಮೋದನೆಯೊಂದಿಗೆ ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು ಅಥವಾ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಪ್ರಸ್ತಾವನೆಗಳನ್ನು ಧಾರ್ಮಿಕ ದತ್ತಿ ಆಯುಕ್ತರಿಗೆ ಸಲ್ಲಿಸಬೇಕಾಗಿರುತ್ತದೆ.
ಪರಿಷ್ಕರಣೆಗಾಗಿ ಬಂದ ಪ್ರಸ್ತಾವನೆಗಳನ್ನು ಆಯುಕ್ತರ ಕಛೇರಿಯಲ್ಲಿ ಪರಿಶೀಲಿಸಲಾಗುತ್ತದೆ. ಹಿರಿಯ ಆಗಮ ಪಂಡಿತರ ಅಭಿಪ್ರಾಯವನ್ನು ಪಡೆದು, ಧಾರ್ಮಿಕ ದತ್ತಿ ಆಯುಕ್ತರು ಸೇವಾ ದರಗಳ ಪರಿಷ್ಕರಣೆಗೆ ಅನುಮೋದನೆ ನೀಡುತ್ತಾರೆ. ಈ ಪ್ರಕ್ರಿಯೆಯಲ್ಲಿ ಸರ್ಕಾರದ ಹಸ್ತಕ್ಷೇಪ ಇರುವುದಿಲ್ಲ.






















