ಕೊಪ್ಪಳ, ಸೆ.16 www.bengaluruwire.com : ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಹಾಗೂ ಕಾಮಗಾರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಕೊಪ್ಪಳ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಅವರ ಸಹೋದರ ಶಕೀಲ್ ಪಟೇಲ್ ಹಾಗೂ ಕೆಲವು ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಡಿವೈಎಸ್ಪಿ ವಸಂತಕುಮಾರ್ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ನಗರಸಭೆಯ ಪ್ರಮುಖ ಕಡತಗಳು ಹಾಗೂ ಕಾಮಗಾರಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ದಾಳಿ ತಂಡದಲ್ಲಿ ಇಬ್ಬರು ಡಿವೈಎಸ್ಪಿ, ಎಂಟು ಇನ್ಸ್ಪೆಕ್ಟರ್ಗಳು ಹಾಗೂ 30ಕ್ಕೂ ಹೆಚ್ಚು ಅಧಿಕಾರಿಗಳಿದ್ದಾರೆ.

10 ಕೋಟಿ ರೂ. ಭ್ರಷ್ಟಾಚಾರದ ಆರೋಪ :
ಕಳೆದ ವರ್ಷ (2023-24) ನಗರಸಭೆಯಲ್ಲಿ ನಡೆದ 336ಕ್ಕೂ ಹೆಚ್ಚು ಕಾಮಗಾರಿಗಳಲ್ಲಿ ಸುಮಾರು ₹10 ಕೋಟಿಗೂ ಹೆಚ್ಚು ಭ್ರಷ್ಟಾಚಾರ ನಡೆದಿರುವ ಬಗ್ಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿತ್ತು. ಅರ್ಧಮರ್ದ ಕಾಮಗಾರಿ ನಡೆಸಿರುವುದು ಅಥವಾ ಕಾಮಗಾರಿ ಮಾಡದೆಯೇ ಹಣ ಪಡೆದಿರುವಂತಹ ಗಂಭೀರ ಆರೋಪಗಳು ಕೇಳಿ ಬಂದಿದ್ದವು.


ಈ ದೂರಿನ ಆಧಾರದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ನಗರಸಭೆಯ ಕಚೇರಿಯಲ್ಲಿ ದಾಖಲೆಗಳನ್ನು ಪರಿಶೀಲಿಸುವ ಜೊತೆಗೆ, ಜೆ.ಇ. ಸೋಮಲಿಂಗಪ್ಪ, ಆರ್.ಐ. ಉಜ್ವಲ್ ಮತ್ತು ಗುತ್ತಿಗೆದಾರರಾದ ಪ್ರವೀಣ್ ಕಂದಾರಿ ಅವರ ಮನೆಗಳ ಮೇಲೆಯೂ ತಪಾಸಣೆ ನಡೆಸಲಾಗಿದೆ.
ಲೋಕಾಯುಕ್ತ ಮೂಲಗಳ ಪ್ರಕಾರ, ದಾಖಲೆಗಳ ಪರಿಶೀಲನೆ ಮುಗಿದ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಈ ಅಕ್ರಮಗಳಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ ಮತ್ತು ವಂಚನೆಯ ಪ್ರಮಾಣ ಎಷ್ಟಿದೆ ಎಂಬುದು ತನಿಖೆಯ ನಂತರ ಸ್ಪಷ್ಟವಾಗಲಿದೆ.






















