ಬೆಂಗಳೂರು, ಸೆ.15 www.bengaluruwire.com : ನಗರದ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಲು ಆದ್ಯತೆ ನೀಡುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಲ್ಲೇಶ್ವರಂನ ಐ.ಪಿ.ಪಿ ಕೇಂದ್ರದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಮತ್ತು ಗುತ್ತಿಗೆದಾರರೊಂದಿಗೆ ಚರ್ಚೆ ನಡೆಸಿ, ಪ್ರಮುಖ ರಸ್ತೆಗಳ ದುರಸ್ತಿ ಮತ್ತು ನಿರ್ವಹಣೆ ಕುರಿತು ಮಹತ್ವದ ನಿರ್ದೇಶನಗಳನ್ನು ನೀಡಿದರು.
ಪ್ರಸ್ತುತ, ನಗರದಲ್ಲಿ 1,648 ಕಿ.ಮೀ.ಗಳಷ್ಟು ಪ್ರಮುಖ ರಸ್ತೆಗಳಿದ್ದು, ಇವುಗಳಲ್ಲಿ 143 ಕಿ.ಮೀ. ಉದ್ದದ 82 ರಸ್ತೆಗಳಲ್ಲಿ 1,700 ಕೋಟಿ ರೂ. ವೆಚ್ಚದಲ್ಲಿ ವೈಟ್ ಟಾಪಿಂಗ್ ಕಾಮಗಾರಿಗಳು ಪ್ರಗತಿಯಲ್ಲಿವೆ. ರಾವ್ ಅವರು ಈ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸುವಂತೆ ಸೂಚಿಸಿದರು. ಅಲ್ಲದೆ, ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ, ಬ್ಯಾರಿಕೇಡ್ ಮತ್ತು ಕಾಷನ್ ಟೇಪ್ಗಳನ್ನು ಅಳವಡಿಸುವಂತೆ ಮತ್ತು ರಸ್ತೆ ಬದಿಯಲ್ಲಿರುವ ನಿರ್ಮಾಣ ತ್ಯಾಜ್ಯವನ್ನು ತಕ್ಷಣವೇ ತೆರವುಗೊಳಿಸುವಂತೆ ಸೂಚಿಸಿದರು.
ಅದೇ ರೀತಿ, 694 ಕೋಟಿ ರೂ. ವೆಚ್ಚದಲ್ಲಿ 349 ಕಿ.ಮೀ. ಉದ್ದದ 182 ರಸ್ತೆಗಳಲ್ಲಿ ಬ್ಲಾಕ್ ಟಾಪಿಂಗ್ ಕಾಮಗಾರಿಗಳು ನಡೆಯುತ್ತಿದ್ದು, ಅವುಗಳನ್ನು ನವೆಂಬರ್ 2025ರ ಒಳಗಾಗಿ ಪೂರ್ಣಗೊಳಿಸಲು ನಿರ್ದೇಶನ ನೀಡಿದರು. ಡಾಂಬರೀಕರಣದ ವೇಳೆ ರಸ್ತೆ ಮೇಲೆ ನೀರು ನಿಲ್ಲದಂತೆ ನೋಡಿಕೊಳ್ಳಲು ವಿಶೇಷ ಗಮನ ಹರಿಸಲು ತಿಳಿಸಿದರು.

ದೋಷ ಹೊಣೆಗಾರಿಕೆ ಅವಧಿ (ಡಿಎಲ್ಪಿ) ಅಡಿಯಲ್ಲಿ ಬರುವ 401 ಕಿ.ಮೀ.ಗಳಷ್ಟು ರಸ್ತೆಗಳ ಗುಂಡಿಗಳನ್ನು ದುರಸ್ತಿಗೊಳಿಸಲು ಗುತ್ತಿಗೆದಾರರಿಗೆ ಗಡುವು ನೀಡುವಂತೆಯೂ ರಾವ್ ತಾಕೀತು ಮಾಡಿದರು. ಗಡುವು ಮೀರಿ ಕೆಲಸ ಮಾಡದಿದ್ದರೆ, ಪಾಲಿಕೆಯೇ ದುರಸ್ತಿ ಕಾರ್ಯ ಕೈಗೊಂಡು ಗುತ್ತಿಗೆದಾರರ ಅನುದಾನದಲ್ಲಿ ಕಡಿತಗೊಳಿಸುವಂತೆ ಸೂಚನೆ ನೀಡಿದರು.
ಹೈ ಡೆನ್ಸಿಟಿ ಕಾರಿಡಾರ್ಗಳಲ್ಲಿ ಕಾಮಗಾರಿಗೆ ವೇಗ ನೀಡುವಂತೆ, ರಸ್ತೆಗಳನ್ನು ಸ್ವಚ್ಛವಾಗಿಡುವಂತೆ, ಮತ್ತು ಮೆಟ್ರೋ ಕಾಮಗಾರಿ ಸ್ಥಳಗಳಲ್ಲಿ ತ್ಯಾಜ್ಯ ಮತ್ತು ಹೂಳನ್ನು ತೆರವುಗೊಳಿಸದಿದ್ದರೆ ಸಂಬಂಧಪಟ್ಟವರಿಗೆ ನೋಟಿಸ್ ನೀಡುವಂತೆ ನಿರ್ದೇಶನಗಳನ್ನು ನೀಡಲಾಯಿತು. ಈ ಎಲ್ಲಾ ವಿವರಗಳನ್ನು ಒಳಗೊಂಡಂತೆ ರಸ್ತೆ ಗುಂಡಿಗಳು, ಕಾಮಗಾರಿಗಳು ಮತ್ತು ಗುತ್ತಿಗೆದಾರರ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ಲಭ್ಯವಾಗುವಂತೆ ಹೊಸ ಸಾಫ್ಟ್ವೇರ್ ಅನ್ನು ಅಭಿವೃದ್ಧಿಪಡಿಸುವ ಬಗ್ಗೆಯೂ ಚರ್ಚಿಸಲಾಯಿತು.
ಈ ವೇಳೆ ನಗರ ಪಾಲಿಕೆಗಳ ಆಯುಕ್ತರಾದ ರಾಜೇಂದ್ರ ಚೊಳನ್, ರಮೇಶ್ ಡಿ.ಎಸ್, ಪೊಮ್ಮಲ ಸುನಿಲ್ ಕುಮಾರ್, ರಮೇಶ್ ಕೆ.ಎನ್, ಡಾ. ರಾಜೇಂದ್ರ ಕೆ.ವಿ, ಹೆಚ್ಚುವರಿ ಆಯುಕ್ತರಾದ ಲತಾ ಆರ್, ಲೋಖಂಡೆ ಸ್ನೇಹಲ್ ಸುಧಾಕರ್, ದಿಗ್ವಿಜಯ್ ಬೋಡ್ಕೆ, ನವೀನ್ ಕುಮಾರ್ ರಾಜು ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.






















