ಬೆಂಗಳೂರು, ಸೆ.02 www.bengaluruwire.com : ರಾಜ್ಯ ಸರ್ಕಾರವು ಅಂತು ಇಂತೂ ಅಂತಿಮವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA)ದ ಅಡಿಯಲ್ಲಿ ಇಂದು (ಸೆಪ್ಟೆಂಬರ್ 2) ಅಧಿಕೃತವಾಗಿ ಜಿಬಿಎ ವ್ಯಾಪ್ತಿಯಲ್ಲಿ ಐದು ನಗರ ಪಾಲಿಕೆಗಳನ್ನು ಅಧಿಕೃತವಾಗಿ ರಚಿಸಿ ಅಂತಿಮ ಆದೇಶ ಹೊರಡಿಸಿದೆ.
ಆ ಮೂಲಕ 18 ವರ್ಷಗಳ ಹಿಂದೆ ರಚಿಸಲಾಗಿದ್ದ ಬಿಬಿಎಂಪಿಯು ತನ್ನ ಅಸ್ಥಿತ್ವ ಕಳೆದುಕೊಂಡು ಪೂರ್ಣ ಪ್ರಮಾಣದಲ್ಲಿ ಜಿಬಿಎ ಆಡಳಿತ ಇಂದಿನಿಂದ ಜಾರಿಗೆ ಬಂದಂತಾಗಿದೆ. ಇದರೊಂದಿಗೆ, 2008ರಲ್ಲಿ ಸ್ಥಾಪನೆಗೊಂಡ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಅಸ್ತಿತ್ವಕ್ಕೆ ತೆರೆ ಬಿದ್ದಿದ್ದು, ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ, 2024 (2025ರ ಕರ್ನಾಟಕ ಕಾಯ್ದೆ ಸಂಖ್ಯೆ 36) ಸಂಪೂರ್ಣವಾಗಿ ಜಾರಿಗೆ ಬಂದಿದೆ.
ಈ ಹೊಸ ಪಾಲಿಕೆಗಳು:
* ಬೆಂಗಳೂರು ಕೇಂದ್ರ ನಗರ ಪಾಲಿಕೆ

* ಬೆಂಗಳೂರು ಪೂರ್ವ ನಗರ ಪಾಲಿಕೆ
* ಬೆಂಗಳೂರು ಪಶ್ಚಿಮ ನಗರ ಪಾಲಿಕೆ
* ಬೆಂಗಳೂರು ಉತ್ತರ ನಗರ ಪಾಲಿಕೆ
* ಬೆಂಗಳೂರು ದಕ್ಷಿಣ ನಗರ ಪಾಲಿಕೆ
ರಾಜ್ಯ ಸರ್ಕಾರವು ಐದು ನಗರ ಪಾಲಿಕೆಗಳ ಗಡಿಗಳನ್ನು ಗುರ್ತಿಸುವ ಬಗ್ಗೆ ಅಂತಿಮ ಅಧಿಸೂಚನೆಯ ಜೊತೆ ಜೊತೆಗೆ, ಆಯಾ ಐದು ನಗರ ಪಾಲಿಕೆ ವ್ಯಾಪ್ತಿಯಡಿಯಲ್ಲಿ ವಾರ್ಡ್ ಗಳ ರಚನೆ ಸಂಬಂಧ ಮುಖ್ಯ ಆಯುಕ್ತ ಮಹೇಶ್ವರ ರಾವ್ ಅಧ್ಯಕ್ಷತೆಯಲ್ಲಿ ಇಬ್ಬರು ಸದಸ್ಯರು ಹಾಗೂ ಓರ್ವ ಸದಸ್ಯ ಕಾರ್ಯದರ್ಶಿಯನ್ನು ಒಳಗೊಂಡ ವಾರ್ಡ್ ಗಳ ಪುನರ್ವಿಂಗಡನಾ ಆಯೋಗವನ್ನು 3 ತಿಂಗಳ ಅವಧಿಗೆ ಸೀಮಿತವಾಗಿ ರಚಿಸಿ ಅಧಿಸೂಚನೆ ಹೊರಡಿಸಿದೆ.

ವಾರ್ಡ್ ಪುನರ್ವಿಂಗಡಣೆ ಪ್ರಕ್ರಿಯೆಗೆ ಮಾರ್ಗಸೂಚಿ ಪ್ರಕಟ :
ಐದು ನಗರ ಪಾಲಿಕೆಗಳಿಗೆ ಸಂಬಂಧಿಸಿದ ವಾರ್ಡ್ಗಳ ಪುನರ್ವಿಂಗಡಣೆ ಪ್ರಕ್ರಿಯೆಗಾಗಿ ಸರ್ಕಾರವು ಮಾರ್ಗಸೂಚಿಗಳನ್ನು ರಚಿಸಿ ಆದೇಶಿಸಿದೆ. ಈ ಉದ್ದೇಶಕ್ಕಾಗಿ, ವಾರ್ಡ್ಗಳ ಪುನರ್ವಿಂಗಡಣಾ ಆಯೋಗವನ್ನು ಮೂರು ತಿಂಗಳ ಅವಧಿಗೆ ರಚಿಸಲಾಗಿದೆ.
ವಾರ್ಡ್ ವಿಂಗಡಣೆಯ ಪ್ರಮುಖ ಮಾರ್ಗಸೂಚಿಗಳು:
* ಜನಸಂಖ್ಯೆ: ವಾರ್ಡ್ಗಳ ಜನಸಂಖ್ಯೆಯು ಸಾಧ್ಯವಾದಷ್ಟು ಸಮಾನವಾಗಿರಬೇಕು. ಹಿಂದಿನ ಜನಗಣತಿಯ (2011) ಪ್ರಕಾರ, ಪ್ರತಿ ವಾರ್ಡ್ನಲ್ಲಿ ಸರಾಸರಿ ಜನಸಂಖ್ಯೆಯನ್ನು 20,000 ಎಂದು ನಿರ್ಧರಿಸಲಾಗಿದೆ. ಜನಸಾಂದ್ರತೆಯ ವ್ಯತ್ಯಾಸದಿಂದಾಗಿ, ಪ್ರತಿ ನಗರ ಪಾಲಿಕೆಯ ವಾರ್ಡ್ನಲ್ಲಿನ ಸರಾಸರಿ ಜನಸಂಖ್ಯೆಯು 20,000ದ ±25%ರ ಒಳಗೆ ಇರಬೇಕು. ಒಂದು ನಗರ ಪಾಲಿಕೆಯಲ್ಲಿ ವಾರ್ಡ್ಗಳ ಸಂಖ್ಯೆ 150ಕ್ಕಿಂತ ಹೆಚ್ಚಿರಬಾರದು.
* ಭೌಗೋಳಿಕ ಗಡಿಗಳು: ವಾರ್ಡ್ಗಳನ್ನು ವಿಧಾನಸಭೆ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಯೊಳಗೆ ವಿಂಗಡಿಸಬೇಕು ಮತ್ತು ಒಂದು ವಾರ್ಡ್ ಇತರ ವಿಧಾನಸಭಾ ಕ್ಷೇತ್ರಗಳಿಗೆ ವ್ಯಾಪಿಸಬಾರದು. ಅವು ಭೌಗೋಳಿಕವಾಗಿ ದಟ್ಟವಾದ ಪ್ರದೇಶಗಳಾಗಿರಬೇಕು ಮತ್ತು ಮರುವಿಂಗಡಣೆ ಮಾಡುವಾಗ ಭೌತಿಕ ಲಕ್ಷಣಗಳು, ಸಂವಹನ ಸೌಲಭ್ಯಗಳು, ಮತ್ತು ಸಾರ್ವಜನಿಕರ ಅನುಕೂಲತೆಗಳನ್ನು ಪರಿಗಣಿಸಬೇಕು.
ಕಾಲಮಿತಿ: ಅಂತಿಮ ಅಧಿಸೂಚನೆ ನವೆಂಬರ್ 1ರೊಳಗೆಸರ್ಕಾರವು ವಾರ್ಡ್ಗಳ ರಚನೆಗೆ ಕಾಲಾನುಕ್ರಮಣಿಕೆಯನ್ನು ನಿಗದಿಪಡಿಸಿದೆ.
ವಾರ್ಡ್ಗಳ ಪುನರ್ವಿಂಗಡಣಾ ಆಯೋಗವು ವಾರ್ಡ್ ಗಳ ರಚನೆ ಬಗ್ಗೆ ಮೂರು ವಾರಗಳಲ್ಲಿ (ಸೆ.23) ಸರ್ಕಾರಕ್ಕೆ ವಾರ್ಡುಗಳ ರಚನಾ ವರದಿಯನ್ನು ಸಲ್ಲಿಕೆ ಮಾಡಲಿದೆ. ಸರ್ಕಾರದಿಂದ (ಸೆ.26) ಕರಡು ವರದಿ ಪ್ರಕಟ, ಸಲಹೆ, ಅಕ್ಷೇಪಣೆಗಳಿಗೆ ಎರಡು ವಾರಗಳ ಕಾಲಾವಧಿ (ಅ.10), ವಾರ್ಡ್ ಪುನರ್ವಿಂಗಡಣಾ ಆಯೋಗವು ಸಲಹೆ/ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮ ಶಿಫಾರಸ್ಸನ್ನು ಸರ್ಕಾರಕ್ಕೆ (ಅ.17) ಸಲ್ಲಿಕೆ ಮಾಡಲಿದೆ. ಅಂತಿಮವಾಗಿ 5 ನಗರ ಪಾಲಿಕೆಗಳ ವಾರ್ಡ್ ರಚನೆ ಬಗ್ಗೆ ನವೆಂಬರ್ 11ರ ಒಳಗಾಗಿ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಲಿದೆ.
ಇಂದು ಐದು ನಗರ ಪಾಲಿಕೆ ರಚನೆ ಕುರಿತಂತೆ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದ ನಂತರ ನೂತನ ಜಿಬಿಎ ಆಡಳಿತ ಪ್ರಕ್ರಿಯೆ ಹಂತ ಹಂತವಾಗಿ ಅನುಷ್ಠಾನವಾಗಲಿದೆ.
ಬೆಂಗಳೂರಿಗೆ ಇಂದು ಐತಿಹಾಸಿಕ ದಿನ : ಡಿಸಿಎಂ
ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಇಂದು ಮಾತನಾಡಿದ ಉಪ ಮಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಐದು ಮಹಾನಗರ ಪಾಲಿಕೆ ಬೆಂಗಳೂರಿನ ಹೆಸರನ್ನು ಇಟ್ಟುಕೊಂಡೇ ಇಂದು ಅಸ್ತಿತ್ವಕ್ಕೆ ಬಂದಿದೆ. ಆ ಮೂಲಕ ಐತಿಹಾಸಿಕ ದಿನಕ್ಕೆ ಬೆಂಗಳೂರಿನ ಜನತೆ ಸಾಕ್ಷಿಯಾಗಿದ್ದಾರೆ. ಈಗ ಜನಪ್ರತಿನಿಧಿಗಳು ಇಲ್ಲದಿರುವುದರಿಂದ ಅಲ್ಲಿನ ಆಡಳಿತಕ್ಕೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.
ಕಾನೂನಿನಲ್ಲೇ ಬೆಂಗಳೂರು ಹೆಸರಿಗೆ ಧಕ್ಕೆಯಾಗದಂತೆ ಅವಕಾಶ ಮಾಡಿಕೊಳ್ಳಲಾಗಿದೆ. ಸೆ.02 ರ ಒಳಗಾಗಿ ಐದು ಮಹಾನಗರ ಪಾಲಿಕೆ ಅಧಿಸೂಚನೆ ಹೊರಡಿಸಲಾಗಿದೆ. ನ.01 ಒಳಗಾಗಿ ವಾರ್ಡ್ ಪುನರ್ವಿಂಗಡಣೆ, ವಾರ್ಡ್ ಮೀಸಲಾತಿ ನಿಗದಿತ ಅವಧಿಯೊಳಗೆ ಅಧಿಸೂಚನೆ ಮಾಡುತ್ತೇವೆ ಎಂದು ಸುಪ್ರೀಂಕೋರ್ಟಿಗೆ ಸರ್ಕಾರ ತಿಳಿಸಿದೆ ಎಂದರು.
ಯಾವುದೇ ನಗರ ಪಾಲಿಕೆಯಲ್ಲಿ ಹಿರಿಯ ಐಎಎಸ್ ಅಧಿಕಾರಿಗಳು ಆಯುಕ್ತರನ್ನು ನೇಮಕ ಮಾಡಿದ್ದೇವೆ. ಹೆಚ್ಚುವರಿ ಆಯುಕ್ತರು ಐಎಎಸ್ ಅಧಿಕಾರಿ ಇರಲಿದ್ದಾರೆ. ಇಂದಿನಿಂದ ಸಂಗ್ರಹವಾಗುವ ಆಸ್ತಿ ತೆರಿಗೆ, ಕಂದಾಯವನ್ನು ಆಯಾ ನಗರ ಪಾಲಿಕೆಗಳಿಗೆ ಸೇರಲಿದೆ.
ಒಂದೊಂದು ಕಾರ್ಪೊರೇಷನ್ ಗೆ ಗರಿಷ್ಠ 150 ವಾರ್ಡ್ ರಚಿಸಲು ಅವಕಾಶವಿದೆ. ತಲಾ 100 ವಾರ್ಡ್ ಗಳಂತೆ ಎಲ್ಲಾ ನಗರ ಪಾಲಿಕೆ ಸೇರಿದಂತೆ 500 ಕಾರ್ಪೊರೇಟರ್ ಗಳನ್ನು ಅವಕಾಶ ಮಾಡಿಕೊಡಲಿದ್ದೇವೆ. ಮಹಿಳೆಯರಿಗೂ ಕಾರ್ಪೊರೇಟರ್ ಆಗಿ ಸ್ಪರ್ಧಿಸಲು ಅವಕಾಶ ನೀಡುತ್ತೇವೆ. ಜಿಬಿಎ ಮೆಗಾ ಪ್ರಾಜೆಕ್ಟ್ ನಿರ್ವಹಿಸಲಿದೆ. ಜಿಬಿಎ ಕೆಳಗಿನ ನಗರ ಪಾಲಿಕೆ ಚುನಾವಣೆ 2011 ಜನಗಣತಿಯಂತೆ 20,000 ಕನಿಷ್ಠ ಜನಸಂಖ್ಯೆಯಂತೆ ಒಂದರಂತೆ ವಾರ್ಡ್ ರಚನೆಯಾಗಲಿದೆ.
ಜಿಬಿಎ ಪ್ರದೇಶ ವ್ಯಾಪ್ತಿ ವಿಸ್ತರಿಸಲು ಕಾನೂನಿನಲ್ಲಿ ಆವಕಾಶ ಮಾಡಿಕೊಟ್ಟಿದೆ. ಸದ್ಯ ಬಿಬಿಎಂಪಿ ಪ್ರದೇಶದ ವ್ಯಾಪ್ತಿಯೊಳಗೆ ವಾರ್ಡ್ ರಚನೆಯಾಗಲಿದೆ. ನಾನು ರಾಜಕಾರಣ ಅವಕಾಶಕ್ಕಾಗಿ, ಲಾಭಕ್ಕಾಗಿ ಜಿಬಿಎ ಅಥವಾ ಐದು ನಗರ ಪಾಲಿಕೆ ರಚನೆ ಮಾಡಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.
ಕೆಲವೊಂದು ನಗರ ಪಾಲಿಕೆಗಳಲ್ಲಿ ಆರ್ಥಿಕ ಸಂಪನ್ಮೂಲ ಹೆಚ್ಚಾಗಿದೆ ಅಂತ ಅದನ್ನು ಬೇರೆ ನಗರ ಪಾಲಿಕೆಗಳಿಗೆ ಸೇರಿಸಲಾಗುವುದಿಲ್ಲ ಎಂದು ಮಾಧ್ಯಮದ ಪ್ರಶ್ನೆಯೊಂದಕ್ಕೆ ಉತ್ತರಿದರು.
ಐದು ನಗರ ಪಾಲಿಕೆಗಳಿಗೆ ನ.1 ಸ್ವಂತ ಕಟ್ಟಡ ಕಟ್ಟಲು ಶಂಕುಸ್ಥಾಪನೆ :
ನವೆಂಬರ್ 1 ರಂದು ಐದು ನಗರ ಪಾಲಿಕೆಗಳಿಗೆ ಸ್ವಂತ ಕಟ್ಟಡಗಳನ್ನು ಕಟ್ಟಲು ಸೂಕ್ತ ಜಾಗಕ್ಕೆ ಸ್ಥಳ ಗುರ್ತಿಸಿದ್ದೇವೆ. ಅಂದು ಭೂಮಿ ಪೂಜೆ ನಡೆಸುತ್ತೇವೆ. ಬಿಬಿಎಂಪಿ ಕಟ್ಟಡದಂತೆ ಪಾರಂಪರಿಕ ಕಟ್ಟಡ ವಿನ್ಯಾಸದಂತೆ ಅಪರೂಪದ ಕಟ್ಟಡಕ್ಕೆ ಸಾರ್ವಜನಿಕರು, ತಂತ್ರಜ್ಞರು ಸಲಹೆ ಸೂಚನೆ ನೀಡಬಹುದು. ಜಿಬಿಎ ಹಾಗೂ ಐದು ನಗರ ಪಾಲಿಕೆ ಲೋಗೋಗಳ ವಿನ್ಯಾಸವನ್ನು ಸಾರ್ವಜನಿಕರು ನೀಡಬಹುದು.






















