ಬೆಂಗಳೂರು, ಆ. 25 www.bengaluruwire.com : ರಾಜಧಾನಿಯಲ್ಲಿ ವರುಣನ ಆರ್ಭಟಕ್ಕೆ ಕೊಂಚ ವಿರಾಮ ಬಿದ್ದಿದೆ. ಈ ಮಧ್ಯೆ ರಜಾ ದಿನಗಳಲ್ಲಿಯೂ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಪಾಲಿಕೆಯ ಅಧಿಕಾರಿಗಳು ಚುರುಕು ನೀಡಿದ್ದು, ಸಕ್ರಿಯವಾಗಿ ಎಲ್ಲಾ ವಲಯಗಳಲ್ಲಿ ಭಾನುವಾರವೂ ನಡೆಯಿತು.
ನಗರದ ಪ್ರಮುಖ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳಿಂದಾಗಿ ವಾಹನಗಳ ಸಂಚಾರದ ಸಮಸ್ಯೆಯಾಗಿ ಸಂಚಾರ ದಟ್ಟಣೆಯಾಗುತ್ತಿದೆ. ಈ ನಿಟ್ಟಿನಲ್ಲಿ ಸಂಚಾರಿ ಪೊಲೀಸ್ ವಿಭಾಗದಿಂದ 4,614 ಗುಂಡಿಗಳನ್ನು ಗುರುತಿಸಿ ಆದ್ಯತೆ ಮೇರೆಗೆ ಮುಚ್ಚಲು ಪಾಲಿಕೆಗೆ ಪಟ್ಟಿಯನ್ನು ನೀಡಲಾಗಿತ್ತು. ಅದರಲ್ಲಿ 3,995 ಪಾಲಿಕೆ ಹಾಗೂ 619 ಬಿಬಿಎಂಪಿಯ ಹೊರಭಾಗದಲ್ಲಿ ಬರಲಿವೆ.
ಅದರಂತೆ, ಬಿಬಿಎಂಪಿ ಗೆ 3,287 ರಸ್ತೆಗುಂಡಿಗಳು ಬರಲಿದ್ದು, ಉಳಿದ ರಸ್ತೆಗುಂಡಿಗಳು ಜಲಮಂಡಳಿ, ಬೆಸ್ಕಾಂ, ಗೇಲ್, ಮೆಟ್ರೋ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಇನ್ನಿತರೆ ಇಲಾಖೆಗಳಿಗೆ ಬರಲಿವೆ. ಈ ಸಂಬಂಧ ಬಿಬಿಎಂಪಿ ಹಾಗೂ ವಿವಿಧ ಇಲಾಖೆಗಳು ಕೈಜೋಡಿಸಿ ಕಾಲಮಿತಿಯೊಳಗಾಗಿ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸದಲ್ಲಿ ಕಾರ್ಯಪ್ರವೃತ್ತವಾಗಿವೆ.
ರಜಾ ದಿನದಲ್ಲೂ ಶೀಘ್ರ ಕೆಲಸ:

ಪಾಲಿಕೆಯ ಎಲ್ಲಾ 8 ವಲಯಗಳಲ್ಲಿಯೂ ರಜಾ ದಿನವಾದ ಶನಿವಾರ ಹಾಗೂ ಭಾನುವಾರ ಎರಡೂ ದಿನಗಳೂ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ನಡೆಸಲಾಗುತ್ತಿದೆ. ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯದ ವೇಳೆ ಅಭಿಯಂತರರುಗಳು ಸ್ಥಳದಲ್ಲಿದ್ದು, ಗುಂಡಿಗಳನ್ನು ಮುಚ್ಚಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ರಾತ್ರಿ ವೇಳೆ ಗುಂಡಿ ಮುಚ್ಚುವ ಕಾರ್ಯ:
ಬಿಬಿಎಂಪಿ ವ್ಯಾಪ್ತಿಯಲ್ಲಿ ಪಾಲಿಕೆಯ ರಸ್ತೆ ಮೂಲಭೂತ ಸೌಕರ್ಯಗಳ ವಿಭಾಗದಿಂದ ಹೊರ ವರ್ತುಲ ರಸ್ತೆ, ಹೈಡೆನ್ಸಿಟಿ ಕಾರಿಡಾರ್ ಹಾಗೂ ಪ್ರಮುಖ ರಸ್ತೆಗಳಲ್ಲಿ ರಾತ್ರಿ ವೇಳೆ ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತಿದೆ. ಅದರಂತೆ ಮೈಸೂರು ರಸ್ತೆ, ಹೊಸಕೆರೆಹಳ್ಳಿ, ಬನಶಂಕರಿ, ಕನಕಪುರ ರಸ್ತೆ, ನಾಗರಭಾವಿ, ಸೇರಿದಂತೆ ಇನ್ನಿತರೆ ರಸ್ತೆಗಳಲ್ಲಿ ನಿನ್ನೆ ರಾತ್ರಿ ಗುಂಡಿಗಳನ್ನು ಮುಚ್ಚಲಾಗಿದೆ. ಭಾನುವಾರ ಕೂಡ ರಾತ್ರಿ ವೇಳೆ ಹಲವಾರು ರಸ್ತೆಗಳಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲಾಯಿತು.
ತ್ವರಿತವಾಗಿ ಪೂರ್ಣಗೊಳಿಸಲು ಸೂಚನೆ:
ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮಳೆ ಬಂದಲ್ಲಿ ಕೋಲ್ಡ್ ಮಿಕ್ಸ್, ಇಕೋಫಿಕ್ಸ್ ಬಳಸಿಕೊಂಡು ರಸ್ತೆ ಗುಂಡಿಗಳನ್ನು ಮುಚ್ಚಬೇಕು. ಮಳೆ ಇಲ್ಲದ ವೇಳೆ ಹಾಟ್ ಮಿಕ್ಸ್ ಬಳಸಿಕೊಂಡು ರಸ್ತೆ ಗುಂಡಿಗಳನ್ನು ಮುಚ್ಚಲು ಸೂಚನೆ ನೀಡಿದ್ದಾರೆ.






















