ಬೆಂಗಳೂರು, ಆ.25 www.bengaluruwire.com : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಗರದ ಸಮಗ್ರ ಮತ್ತು ಭವಿಷ್ಯದ ಅಭಿವೃದ್ಧಿಗಾಗಿ ಪರಿಷ್ಕೃತ ಮಹಾ ಯೋಜನೆ – 2041 (RMP-2041) ಸಿದ್ಧಪಡಿಸಲು ಜಾಗತಿಕ ಟೆಂಡರ್ ಆಹ್ವಾನಿಸಿದೆ.
ಹಿಂದೆ ಸಿದ್ಧಪಡಿಸಿದ್ದ ಆರ್ ಎಂಪಿ-2031 ಯೋಜನೆಯು ವೈಜ್ಞಾನಿಕ ಆಧಾರಗಳ ಕೊರತೆ, ಸಮರ್ಪಕ ಪಾಲುದಾರರ ಸಹಭಾಗಿತ್ವವಿಲ್ಲದ ಮತ್ತು ಅಸ್ತವ್ಯಸ್ತ ನಗರ ಬೆಳವಣಿಗೆಯನ್ನು ನಿಯಂತ್ರಿಸಲು ವಿಫಲವಾದ ಕಾರಣ ಆ ಪರಿಷ್ಕ್ರತ ಯೋಜನೆಯನ್ನು ಸರ್ಕಾರ ಕೈಬಿಟ್ಟಿತ್ತು. ಈ ಹಿನ್ನೆಲೆಯಲ್ಲಿ ಪರಿಷ್ಕ್ರತ ಮಹಾಯೋಜನೆಗೆ ಬಿಡಿಎ ಮುಂದಾಗಿದೆ.
ಆಸಕ್ತ ಸಂಸ್ಥೆಗಳು ಸೆಪ್ಟೆಂಬರ್ 30ರೊಳಗೆ ತಮ್ಮ ಪ್ರಸ್ತಾವನೆಗಳನ್ನು ಸಲ್ಲಿಸಬಹುದಾಗಿದೆ.
ಹೊಸ ಯೋಜನೆಯು ಹಿಂದಿನ ನ್ಯೂನತೆಗಳನ್ನು ಸರಿಪಡಿಸುವುದು ಮಾತ್ರವಲ್ಲದೆ, ಬೆಂಗಳೂರಿನ ಹೆಚ್ಚುತ್ತಿರುವ ಜನಸಂಖ್ಯೆ, ವಾಹನ ದಟ್ಟಣೆ ಮತ್ತು ನಗರ ಹರಡುವಿಕೆಯನ್ನು ಸಮರ್ಪಕವಾಗಿ ನಿರ್ವಹಿಸಲು ಒಂದು ದೃಢವಾದ ಅಡಿಪಾಯ ಹಾಕಲಿದೆ ಎಂದು ಬಿಡಿಎ ಅಧಿಕಾರಿಗಳು ಹೇಳಿದ್ದಾರೆ.

ಯೋಜನಾ ಕಾರ್ಯಗಳ ಭಾಗವಾಗಿ, ಈಗಾಗಲೇ ಹಿಂದಿನ ಟೆಂಡರ್ ಅಡಿಯಲ್ಲಿ ನಗರದ 1,240 ಚದರ ಕಿ.ಮೀ. ಪ್ರದೇಶದ ಹೈಟೆಕ್ 3D ಡ್ರೋನ್ ಸಮೀಕ್ಷೆ ಯ ಪೈಕಿ, ಈಗಾಗಲೇ ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್ ಸೆಂಟರ್ (KSRSAC- ಕ್ಯಾಸ್ ರಾಕ್) ಬಿಬಿಎಂಪಿ ವ್ಯಾಪ್ತಿಯಲ್ಲಿ (800 ಚದರ ಕಿ.ಮೀ) ಈಗಾಗಲೇ 3D ಡ್ರೋನ್ ಸರ್ವೆ ಪೂರ್ಣಗೊಳಿಸಿದೆ. ಉಳಿದ ಬಿಡಿಎ ವ್ಯಾಪ್ತಿಯ (440 ಚದರ ಕಿ.ಮೀ) ಪ್ರದೇಶಗಳಲ್ಲಿ ಸಮೀಕ್ಷೆ ನಡೆಯಬೇಕಿದೆ.
ಈ ಡ್ರೋನ್ ಸಮೀಕ್ಷೆಯು ಮಹಾ ಯೋಜನೆಯನ್ನು ಸಿದ್ಧಪಡಿಸಲು ಅವಶ್ಯಕವಾಗಿರುವ ಬೇಸ್ ಮ್ಯಾಪ್, ಭೂ ಬಳಕೆ ನಕ್ಷೆ, ಆರ್ಥೋ-ರೆಕ್ಟಿಫೈಡ್ ಚಿತ್ರಗಳು ಮತ್ತು ಡಿಜಿಟಲ್ ಎಲಿವೇಶನ್ ಮಾಡೆಲ್ಗಳಂತಹ ಪ್ರಮುಖ ಮಾಹಿತಿಯನ್ನು ಒದಗಿಸಲಿದೆ. ಬೆಂಗಳೂರಿನ ಕೊನೆಯ ಅನುಮೋದಿತ ಮಾಸ್ಟರ್ ಪ್ಲಾನ್ ಆರ್ ಎಂಪಿ 2015, 2005ರಲ್ಲಿ ಸಿದ್ಧಪಡಿಸಲಾಗಿತ್ತು.
ಅದಕ್ಕೂ ಮಿಗಿಲಾಗಿ, ಮುಂಬರುವ ಆರ್ ಎಂಪಿ 2041 ಯೋಜನೆಯು ದತ್ತಾಂಶ ಆಧಾರಿತ, ಎಲ್ಲರನ್ನೂ ಒಳಗೊಳ್ಳುವ ಮತ್ತು ಭವಿಷ್ಯದ ಸವಾಲುಗಳಿಗೆ ಸಿದ್ಧವಿರುವ ಯೋಜನೆಯಾಗಿರುತ್ತದೆ. ಈ ಯೋಜನೆಯ ಪ್ರಮುಖ ಅಂಶಗಳಲ್ಲಿ ‘ಸಾರ್ವಜನಿಕ ಸಾರಿಗೆ ಆಧಾರಿತ ಅಭಿವೃದ್ಧಿ’ (Transit-Oriented Development – TOD) ಕೂಡ ಒಂದು. ಇದು ಸಾರ್ವಜನಿಕ ಸಾರಿಗೆಯ ಸುತ್ತಮುತ್ತ ವಾಸಯೋಗ್ಯ ಮತ್ತು ಬಹು ಉಪಯೋಗಿ ಪ್ರದೇಶಗಳನ್ನು ನಿರ್ಮಿಸುವ ಯೋಜನೆಯಾಗಿದ್ದು, ಇದರಿಂದ ವಾಹನ ದಟ್ಟಣೆಯನ್ನು ಕಡಿಮೆ ಮಾಡಿ, ಜೀವನ ಗುಣಮಟ್ಟ ಹೆಚ್ಚಿಸುವ ಗುರಿ ಹೊಂದಿದೆ.
ವಾಸ್ತವವಾಗಿ ಈ ಡ್ರೋನ್ ಸಮೀಕ್ಷೆಯನ್ನು ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್ ಸೆಂಟರ್ ನಡೆಸಬೇಕಿತ್ತು. ಆದರೆ, ರಾಜ್ಯ ಸರ್ಕಾರ ಬದಲಾದ ಹಿನ್ನೆಲೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಹೆಚ್ಚಿನ ದಕ್ಷತೆಗಾಗಿ ಈ ಯೋಜನೆಯನ್ನು ಜಾಗತಿಕ ಟೆಂಡರ್ ಮೂಲಕ ಖಾಸಗಿ ಸಂಸ್ಥೆಗಳಿಗೆ ತೆರೆಯಲು ಬಿಡಿಎ ನಿರ್ಧರಿಸಿದೆ.
ಬಿಡಿಎಯ ನಗರ ಯೋಜನೆ ಸದಸ್ಯ ಎಲ್. ಶಶಿಕುಮಾರ್ ಮಾತನಾಡಿ, “ಈ ಯೋಜನೆಯನ್ನು ಸಮಗ್ರವಾಗಿ ರೂಪಿಸಲು ಕೃಷಿ, ವಸತಿ, ವಾಣಿಜ್ಯ ಪ್ರದೇಶಗಳು ಮತ್ತು ರೆವೆನ್ಯೂ ಜಮೀನುಗಳ ಬಗ್ಗೆ ನಮಗೆ ವಿವರವಾದ ಮೌಲ್ಯಮಾಪನಗಳು ಬೇಕಾಗಿವೆ. ಆರ್ ಎಂಪಿ 2041 ಯೋಜನೆಯು ಪಾಲುದಾರರೊಂದಿಗೆ ಸಮಾಲೋಚನೆ, ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಮತ್ತು ಪ್ರತಿಕ್ರಿಯೆ ಆಧರಿಸಿ ಪರಿಷ್ಕರಣೆ ಸೇರಿದಂತೆ ಹಲವು ಹಂತಗಳನ್ನು ಒಳಗೊಂಡಿದೆ. ಮೂಲ ನಕ್ಷೆ ಬಹುತೇಕ ಸಿದ್ಧವಾಗಿದೆ. ಈಗ ನಾವು ವಿವರವಾದ ಭೂ ಬಳಕೆ ನಕ್ಷೆಗಳನ್ನು ಸಿದ್ಧಪಡಿಸಬೇಕು ಮತ್ತು ವಿಸ್ತರಿತ ಹಸಿರು ಪ್ರದೇಶಗಳು, ಹೊಸ ರಸ್ತೆ ಜಾಲಗಳು ಮತ್ತು ಸಾರಿಗೆ ಆಧಾರಿತ ನೀತಿಯಂತಹ ವೈಶಿಷ್ಟ್ಯಗಳನ್ನು ಸಂಯೋಜಿಸಬೇಕಾಗಿದೆ” ಎಂದರು.
ಕರಡು ಯೋಜನೆ ಸಿದ್ಧವಾದ ನಂತರ ಅದನ್ನು ಗೆಜೆಟ್ನಲ್ಲಿ ಪ್ರಕಟಿಸಲಾಗುವುದು. ಸಾರ್ವಜನಿಕರಿಗೆ ಸಲಹೆ ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಈ ಎಲ್ಲ ಅಂಶಗಳನ್ನು ಪರಿಶೀಲಿಸಿ, ಅವುಗಳನ್ನು ಅಂತಿಮ ಯೋಜನೆಯಲ್ಲಿ ಸೇರಿಸಲಾಗುತ್ತದೆ. “ನಾವು ಸಂಪೂರ್ಣ ಪ್ರಕ್ರಿಯೆಯನ್ನು 2026ರ ಮಧ್ಯಭಾಗದ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಿದ್ದೇವೆ” ಎಂದು ಶಶಿಕುಮಾರ್ ಸ್ಪಷ್ಟಪಡಿಸಿದರು.






















