ಬೆಂಗಳೂರು, ಆ.20 www.bengaluruwire.com : ಬೆಂಗಳೂರು ನಗರದ ಆಡಳಿತ ಸುಧಾರಣೆಗೆ ಇತ್ತೀಚೆಗೆ ಸರ್ಕಾರದಲ್ಲಿ ಅಂಗೀಕಾರಗೊಂಡ ‘ಬೃಹತ್ ಬೆಂಗಳೂರು ಆಡಳಿತ ಕಾಯ್ದೆ-2024’ (Greater Bengaluru Governance Act, 2024-GBGA) ಅಸಮರ್ಪಕವಾಗಿದೆ ಎಂದು ಬೆಂಗಳೂರಿನ ಸಿವಿಲ್ ಸೊಸೈಟಿ ಸಂಸ್ಥೆ ‘ಜನಾಗ್ರಹ’ ತನ್ನ ವರದಿಯಲ್ಲಿ ಹೇಳಿದೆ.
ನಾಗರಿಕ ಕೇಂದ್ರಿತ ಆಡಳಿತ ಪದ್ಧತಿಗಳ ಬಗ್ಗೆ ಅಧ್ಯಯನ ನಡೆಸುವ ಈ ಸಂಸ್ಥೆಯು ‘ಭಾರತದ ನಗರ ವ್ಯವಸ್ಥೆಗಳ ವಾರ್ಷಿಕ ಸಮೀಕ್ಷೆ’ (ASICS) ಅಡಿಯಲ್ಲಿ ಈ ವಿಶ್ಲೇಷಣೆಯನ್ನು ಮಾಡಿದೆ. ಈ ವರದಿಯ ಆಧಾರದ ಮೇಲೆ, ಬೆಂಗಳೂರು ಆಡಳಿತ ಕಾಯ್ದೆ-2024 ಕೇವಲ 10ಕ್ಕೆ 3.4 ಅಂಕ ಗಳಿಸಿದೆ.
‘ನಗರದ ಆಡಳಿತ ಸುಧಾರಣೆಗೆ ಈ ಕಾಯ್ದೆ ಒಂದು ಉತ್ತಮ ಪ್ರಯತ್ನವಾದರೂ, ಇದರ ಕರಡು ರಚನೆ ಸಮರ್ಪಕವಾಗಿಲ್ಲ’ ಎಂದು ಜನಾಗ್ರಹದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಕಾಂತ್ ವಿಶ್ವನಾಥನ್ ಹೇಳಿದ್ದಾರೆ. ಈ ಕಾಯ್ದೆಯು ಪಾಲಿಕೆಗಳಿಗೆ ಸಂಪೂರ್ಣ ಸ್ವಾಯತ್ತತೆ ಹಾಗೂ ಅಧಿಕಾರ ಹಸ್ತಾಂತರ ಮಾಡುವ ವಿಷಯದಲ್ಲಿ ವಿಫಲವಾಗಿದೆ ಎಂದು ವರದಿ ಹೇಳುತ್ತದೆ.
ಬದಲಾಗಿ, ಈ ಹಿಂದೆ ‘ಬ್ರ್ಯಾಂಡ್ ಬೆಂಗಳೂರು ಸಮಿತಿ’ಯು ಸಿದ್ಧಪಡಿಸಿದ ‘ಬೃಹತ್ ಬೆಂಗಳೂರು ಆಡಳಿತ ಮಸೂದೆ, 2024’ (GBG Bill, 2024) ಉತ್ತಮ ಕರಡು ರಚನೆ ಹೊಂದಿದ್ದು, ಇದಕ್ಕೆ 10ಕ್ಕೆ 6.8 ಅಂಕಗಳು ದೊರೆತಿದ್ದವು.

ವರದಿಯ ಪ್ರಮುಖ ಅಂಶಗಳು :
* ಜನಾಗ್ರಹವು ಈ ವಿಶ್ಲೇಷಣೆಯ ಸಂದರ್ಭದಲ್ಲಿ ಜಿಬಿಜಿಎ, 2024 ಕಾಯ್ದೆಯನ್ನು ‘ಬ್ರ್ಯಾಂಡ್ ಬೆಂಗಳೂರು ಸಮಿತಿ’ಯ ಮಸೂದೆ ಮತ್ತು ಕರ್ನಾಟಕದ ಇನ್ನಿತರ ಪಾಲಿಕಾ ಕಾಯ್ದೆಗಳಾದ ‘ಬೆಂಗಳೂರು ಮಹಾನಗರ ಪಾಲಿಕೆ ಕಾಯ್ದೆ-2020’ ಹಾಗೂ ‘ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ ಆಕ್ಟ್-1976’ಗಳೊಂದಿಗೆ ಹೋಲಿಸಿ ನೋಡಿದೆ.
* ಕಾಯ್ದೆಯನ್ನು 33 ವಿವಿಧ ಮಾನದಂಡಗಳ ಮೇಲೆ ವಿಶ್ಲೇಷಿಸಲಾಗಿದೆ. ವಿಶ್ಲೇಷಣೆಯಲ್ಲಿ, ಹಣಕಾಸು ಮತ್ತು ಸಿಬ್ಬಂದಿ ನಿರ್ವಹಣೆಯ ಕೆಲವು ಭಾಗಗಳಲ್ಲಿ ಸುಧಾರಣೆಗಳಿದ್ದರೂ, ಯೋಜನಾ ರಚನೆ, ರಾಜಕೀಯ ನಾಯಕತ್ವ ಮತ್ತು ನಾಗರಿಕರ ಭಾಗವಹಿಸುವಿಕೆಯಂತಹ ಪ್ರಮುಖ ಅಂಶಗಳಲ್ಲಿ ಕಾಯ್ದೆ ವಿಫಲವಾಗಿದೆ ಎಂದು ವರದಿ ತಿಳಿಸಿದೆ.
* ಅಲ್ಲದೆ, ಜನಾಗ್ರಹವು, ಬೆಂಗಳೂರಿನ ಭವಿಷ್ಯದ ಉತ್ತಮ ಆಡಳಿತಕ್ಕಾಗಿ ಸರ್ಕಾರವು ಅನುಸರಿಸಬೇಕಾದ 46 ನಿರ್ದಿಷ್ಟ ಕ್ರಮಗಳನ್ನು ಸೂಚಿಸಿದೆ. ಈ ಕ್ರಮಗಳಲ್ಲಿ ನಗರ ಪಾಲಿಕೆಗಳ ರಚನೆ, ವಾರ್ಡ್ ಮೀಸಲಾತಿ ಪ್ರಕ್ರಿಯೆಯನ್ನು ಮಾರ್ಚ್ 2026ರೊಳಗೆ ಪೂರ್ಣಗೊಳಿಸುವುದು. ಹಾಗೂ ಬೆಂಗಳೂರು ಮೆಟ್ರೋಪಾಲಿಟನ್ ಪ್ಲಾನಿಂಗ್ ಸಮಿತಿ ರಚನೆ, ಆರ್ಥಿಕ ಹಾಗೂ ಆಡಳಿತಾತ್ಮಕ ಸ್ವಾಯತ್ತತೆ ನೀಡುವುದು, ಏರಿಯಾ ಸಭಾಗಳನ್ನು ರಚಿಸುವುದು ಸೇರಿವೆ.
* ಕಳೆದ 5 ವರ್ಷಗಳಿಂದ ಬೆಂಗಳೂರಿನಲ್ಲಿ ಚುನಾಯಿತ ಸರ್ಕಾರವಿಲ್ಲ. ಇದು ನಗರದ ಅಭಿವೃದ್ಧಿಗೆ ಧಕ್ಕೆ ತರುತ್ತಿದೆ ಎಂದು ಜನಾಗ್ರಹದ ನಿರ್ದೇಶಕ ಸಂತೋಷ ನಾರ್ಗುಂಡ್ ಹೇಳಿದ್ದಾರೆ.
ಈ ವರದಿಯು ಸರ್ಕಾರಕ್ಕೆ ಬೆಂಗಳೂರಿನ ಆಡಳಿತ ವ್ಯವಸ್ಥೆ ಸುಧಾರಿಸಲು ಒಂದು ಉತ್ತಮ ಮಾರ್ಗದರ್ಶಿಯಾಗಿದೆ. ಸರ್ಕಾರವು ಈ ಸುಧಾರಣೆಗಳನ್ನು ಶೀಘ್ರವೇ ಜಾರಿಗೆ ತರಲು ಮುಂದಾಗಬೇಕು ಎಂದು ಜನಾಗ್ರಹ ಸಂಸ್ಥೆ ಒತ್ತಾಯಿಸಿದೆ.
ಜಿಬಿಎನಲ್ಲಿನ ಅಂಶಗಳ ಸ್ಪಷ್ಟನೆಗಾಗಿ ತಿದ್ದುಪಡಿ ತರಲಾಗಿದೆ :
ಇನ್ನೊಂದೆಡೆ 2025ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಗಳವಾರ ಅಂಗೀಕರಿಸಲಾಗಿದೆ.
2025ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕದ ಪ್ರಸ್ತಾವನೆ ವೇಳೆ ಮಾತನಾಡಿದ ಶಿವಕುಮಾರ್ ಅವರು, “ಇದರಲ್ಲಿ ಒಂದು ಸಣ್ಣ ಸ್ಪಷ್ಟನೆ ನೀಡುವುದಿದೆ. ಏಕೆಂದರೆ ಮಸೂದೆ ಅಂಗೀಕಾರಗೊಂಡಿದ್ದರೂ ಕೆಲವರು ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದರು. ಹೀಗಾಗಿ ಈ ಮಸೂದೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಸಂವಿಧಾನದ 74ನೇ ತಿದ್ದುಪಡಿ ಅಡಿಯಲ್ಲಿ ಬರುವ ಪಾಲಿಕೆಗಳ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂಬ ಅಂಶವನ್ನು ಸ್ಪಷ್ಟಪಡಿಸಲಾಗಿದೆ” ಎಂದು ತಿಳಿಸಿದರು.
“ಈಗ ಜಾರಿಯಲ್ಲಿರುವ ಕಾಯ್ದೆ ಅನುಸಾರ ಜಿಬಿಎ ಅಡಿಯಲ್ಲಿ ರಚಿಸಲಾಗಿರುವ ಪಾಲಿಕೆಗಳ ವಿಚಾರದಲ್ಲಿ ಪ್ರಾಧಿಕಾರವು ಹಸ್ತಕ್ಷೇಪ ಮಾಡಲು ಅವಕಾಶವಿದೆ ಎಂದು ಯಾರೋ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಪಾಲಿಕೆಗಳನ್ನು ಸರ್ಕಾರದ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ ಈ ಅಂಶವನ್ನು ಪ್ರಸ್ತುತ ತಿದ್ದುಪಡಿ ವಿಧೇಯಕದಲ್ಲಿ ತೆಗೆದು ಹಾಕಲಾಗಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
“ಪಾಲಿಕೆಗಳನ್ನು ಸರ್ಕಾರದ ನಿಯಂತ್ರಣಕ್ಕೆ ತೆಗೆದುಕೊಳ್ಳುವುದಿಲ್ಲ. ಪಾಲಿಕೆಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿವೆ. ಪಾಲಿಕೆಗಳ ಕಾರ್ಯಚಟುವಟಿಕೆಯಲ್ಲಿ ಜಿಬಿಎ ಹಸ್ತಕ್ಷೇಪ ಇಲ್ಲ ಎಂಬ ಸ್ಪಷ್ಟನೆ ನೀಡಲು ಈ ತಿದ್ದುಪಡಿ ತರಲಾಗಿದೆ” ಎಂದು ಅವರು ಹೇಳಿದರು.






















