ನವದೆಹಲಿ, ಆ.16 www.bengaluruwire.com : ಶ್ರೀಕೃಷ್ಣನ 5,252ನೇ ಜನ್ಮದಿನಾಚರಣೆಯಾದ ಕೃಷ್ಣ ಜನ್ಮಾಷ್ಟಮಿಯನ್ನು ಭಾರತದಾದ್ಯಂತ ಇಂದು (ಆಗಸ್ಟ್ 16)ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಲಕ್ಷಾಂತರ ಭಕ್ತರು ದೇವಸ್ಥಾನಗಳಲ್ಲಿ ಮತ್ತು ತಮ್ಮ ತಮ್ಮ ಮನೆಗಳಲ್ಲಿ ಪೂಜೆ, ಪ್ರಾರ್ಥನೆ, ಭಜನೆಗಳಲ್ಲಿ ಪಾಲ್ಗೊಂಡು ಈ ಮಹತ್ವದ ಹಬ್ಬವನ್ನು ಸಡಗರದಿಂದ ಆಚರಿಸುತ್ತಿದ್ದಾರೆ.
ಮಧ್ಯರಾತ್ರಿಯ ವಿಶೇಷ ಪೂಜೆ:
ಕೃಷ್ಣ ಜನ್ಮಾಷ್ಟಮಿಯ ಪ್ರಮುಖ ಆಚರಣೆಯಾದ ನಿಶಿತ ಪೂಜೆಯನ್ನು (ಮಧ್ಯರಾತ್ರಿ ಪೂಜೆ) 12:04 ರಿಂದ 12:47ರವರೆಗೆ ನೆರವೇರಿಸಲಾಯಿತು. ನಿಶಿತ ಪೂಜೆಯು ಹಿಂದೂಗಳಿಗೆ ಮಹತ್ವವಾಗಿದ್ದು, ಇದೇ ಸಮಯದಲ್ಲಿ ಶ್ರೀಕೃಷ್ಣನು ಹುಟ್ಟಿದ್ದು ಎಂದು ಪುರಾಣಗಳು ಹೇಳುತ್ತವೆ. ದೇಶದಾದ್ಯಂತ ಭಕ್ತರು ಉಪವಾಸ ವ್ರತ ಆಚರಿಸಿ, ಭಕ್ತಿಗೀತೆಗಳನ್ನು ಹಾಡಿ, ಕೃಷ್ಣನ ಜೀವನದ ಘಟನೆಗಳನ್ನು ಬಿಂಬಿಸುವ ‘ಝಾಂಕಿ’ಗಳಲ್ಲಿ (ಜೀವಂತ ದೃಶ್ಯಗಳು) ಭಾಗವಹಿಸಿ, ತಡರಾತ್ರಿಯ ಪೂಜೆಯಲ್ಲಿ ಪಾಲ್ಗೊಂಡರು. ಈ ಆಚರಣೆಗಳು ತೀವ್ರ ಆಧ್ಯಾತ್ಮಿಕ ವಾತಾವರಣವನ್ನು ಸೃಷ್ಟಿಸಿದ್ದವು.
ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಆಚರಣೆ:


ಶ್ರೀಕೃಷ್ಣನ ಜನ್ಮಸ್ಥಳವೆಂದೇ ನಂಬಲಾಗಿರುವ ಮಥುರಾದ ಶ್ರೀ ಕೃಷ್ಣ ಜನ್ಮಭೂಮಿಯಲ್ಲಿ ವಿಶೇಷ ಅಭಿಷೇಕ, ಮಧ್ಯರಾತ್ರಿ ಆರತಿ, ಅಲಂಕೃತ ತೊಟ್ಟಿಲು ಮತ್ತು ಕೃಷ್ಣನ ಬಾಲ್ಯವನ್ನು ಬಿಂಬಿಸುವ ದೃಶ್ಯರೂಪಕಗಳು ಗಮನ ಸೆಳೆದವು. ಅದೇ ರೀತಿ, ಬೃಂದಾವನದ ಬಾಂಕೆ ಬಿಹಾರಿ ದೇವಸ್ಥಾನದಲ್ಲಿ ಭಜನೆ, ಹೂವಿನ ಅಲಂಕಾರಗಳು ಮತ್ತು ಬೆಳಗಿನ ಜಾವದ ಮಂಗಳಾರತಿ ಭಕ್ತರನ್ನು ಭಕ್ತಿಯಲ್ಲಿ ಮುಳುಗಿಸಿದವು.
ಪಶ್ಚಿಮ ಭಾರತದ ದ್ವಾರಕೆಯ ದ್ವಾರಕಾಧೀಶ ದೇವಸ್ಥಾನದಲ್ಲಿ ಪ್ರಾಚೀನ ವೈಭವದ ಪೂಜಾ ಕೈಂಕರ್ಯಗಳು ಜರುಗಿದವು. ದಕ್ಷಿಣ ಭಾರತದ ಕೇರಳದ ಗುರುವಾಯೂರು ದೇವಸ್ಥಾನದಲ್ಲಿ ಸಾಂಪ್ರದಾಯಿಕ ಪೂಜೆ ಮತ್ತು ಸಂಗೀತಗಳು ಜನ್ಮಾಷ್ಟಮಿಗೆ ದಕ್ಷಿಣ ಭಾರತದ ಸೊಗಡನ್ನು ನೀಡಿದವು. ಜೈಪುರದ ಗೋವಿಂದ ದೇವ್ ಜಿ ದೇವಸ್ಥಾನದಲ್ಲಿ ರಾಜಮನೆತನದ ಸಂಪ್ರದಾಯಗಳಿಗೆ ಅನುಗುಣವಾಗಿ ವಿಶೇಷ ಪ್ರಾರ್ಥನೆಗಳು ನಡೆದವು. ಇನ್ನು, ಭುವನೇಶ್ವರದ ಅನಂತ ವಾಸುದೇವ ದೇವಸ್ಥಾನದಲ್ಲಿ ಪ್ರಶಾಂತ ಮತ್ತು ಭವ್ಯತೆಯ ಆಚರಣೆಗಳು ಕಂಡುಬಂದವು.
ಇಸ್ಕಾನ್ ದೇವಾಲಯಗಳಲ್ಲಿ ವೈಭವದ ಆಚರಣೆ:

ಬೆಂಗಳೂರು, ದೆಹಲಿ, ಮತ್ತು ಮುಂಬೈನಂತಹ ಪ್ರಮುಖ ನಗರಗಳಲ್ಲಿನ ಇಸ್ಕಾನ್ (ISKCON) ದೇವಾಲಯಗಳು ವೈಭವಪೂರಿತ ಕಾರ್ಯಕ್ರಮಗಳನ್ನು ಆಯೋಜಿಸಿದ್ದವು. ಭಜನೆಗಳು, ಮಧ್ಯರಾತ್ರಿ ಆರತಿ, ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲ ವರ್ಗದ ಸಾವಿರಾರು ಭಕ್ತರನ್ನು ಆಕರ್ಷಿಸಿದ್ದವು.
ಉಡುಪಿಯಲ್ಲಿ ವಿಶೇಷ ಆಚರಣೆ:

ಉಡುಪಿಯ ಪ್ರಸಿದ್ಧ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಈ ಬಾರಿಯ ಜನ್ಮಾಷ್ಟಮಿ ಆಚರಣೆ ವಿಭಿನ್ನವಾಗಿ ನಡೆಯುತ್ತಿದೆ. ಉಡುಪಿ ಶ್ರೀ ಕೃಷ್ಣದೇವರಿಗೆ ವಿವಿಧ ಬಗೆಯ ನೈವೆದ್ಯ, ಸಾಂಪ್ರದಾಯಿಕ ಅಲಂಕಾರಗಳನ್ನು ಮಾಡಲಾಗಿತ್ತು. ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ಸ್ವಾಮೀಜಿಗಳು ಶ್ರೀಕೃಷ್ಣ ಮಠದಲ್ಲಿ ಪಾರಾಯಣ, ಶ್ರೀ ಗೋವಿಂದ ದೇವ್ ಗಿರಿ ಮಹಾರಾಜ್ ಅನುಗ್ರಹ ಸಂದೇಶ ನೀಡಿದರು. ವಿಪ್ರ ಮಹಿಳೆಯರಿಂದ ಲಕ್ಷ್ಮೀಶೋಭಾನೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ದೇಶದ ಬಹುತೇಕ ಭಾಗಗಳಲ್ಲಿ ಇಂದು ಜನ್ಮಾಷ್ಟಮಿ ಆಚರಿಸಿದರೆ, ಉಡುಪಿಯಲ್ಲಿ ‘ಶ್ರೀ ಕೃಷ್ಣ ಲೀಲೋತ್ಸವ’ವನ್ನು ಸೆಪ್ಟೆಂಬರ್ 14 ರಂದು ಆಚರಿಸಲಾಗುತ್ತದೆ. ಇದು ಸ್ಥಳೀಯ ಪಂಚಾಂಗ ಮತ್ತು ವೈಷ್ಣವ ಸಂಪ್ರದಾಯಗಳನ್ನು ಆಧರಿಸಿದ ವಿಶಿಷ್ಟ ಸಂಪ್ರದಾಯವಾಗಿದೆ. 48 ದಿನಗಳವರೆಗೆ ನಡೆಯುವ ಈ ಆಚರಣೆಯಲ್ಲಿ ಕುಚೇಲ ಅವಲಕ್ಕಿ, ಬೆಣ್ಣೆ ಕಾಣಿಕೆ, ಮತ್ತು ಅರ್ಘ್ಯ ಪ್ರಧಾನದಂತಹ ಪೂಜೆಗಳು ಸೇರಿವೆ.
ಹುಲಿವೇಷ, ರಾಕ್ಷಸವೇಷ, ಮೃಣ್ಮಯ ಮೂರ್ತಿ ಮೆರವಣಿಗೆ ಮತ್ತು ಜನಪ್ರಿಯ ‘ಮೊಸರು ಕುಡಿಕೆ’ ಉತ್ಸವಗಳ ಮೂಲಕ ಭಕ್ತರು ಶ್ರೀಕೃಷ್ಣನ ತುಂಟತನವನ್ನು ಸ್ಮರಿಸಿದರು.
ಒಟ್ಟಾರೆ, ಮಥುರಾ, ಬೃಂದಾವನದಿಂದ ಹಿಡಿದು ದಕ್ಷಿಣದ ಉಡುಪಿ ಮತ್ತು ಗುರುವಾಯೂರಿನವರೆಗೆ, ಹಾಗೂ ದೇಶದ ವಿವಿಧೆಡೆ ಇರುವ ಇಸ್ಕಾನ್ ದೇವಾಲಯಗಳವರೆಗೆ, ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬವು ಪ್ರೀತಿ, ಸತ್ಯ ಮತ್ತು ನ್ಯಾಯದ ಸಂದೇಶ ಸಾರುವ ಹಬ್ಬವಾಗಿ ಭಕ್ತರನ್ನು ಒಂದುಗೂಡಿಸಿತು. ಭವ್ಯ ಅಲಂಕಾರಗಳು, ಸಂಗೀತ ಕಾರ್ಯಕ್ರಮಗಳು ಮತ್ತು ಬೀದಿ ನಾಟಕಗಳು ಹಬ್ಬದ ಸಾಮುದಾಯಿಕ ಉತ್ಸಾಹವನ್ನು ಪ್ರತಿಬಿಂಬಿಸಿದವು.
ಭಾರತವು ಈ ಶುಭ ಸಂದರ್ಭವನ್ನು ಸಂಭ್ರಮದಿಂದ ಆಚರಿಸಿದಂತೆ, ಭಕ್ತರು ಶಾಂತಿ, ಸಮೃದ್ಧಿ, ಮತ್ತು ಸಂತೋಷಕ್ಕಾಗಿ ಶ್ರೀಕೃಷ್ಣನ ಆಶೀರ್ವಾದವನ್ನು ಕೋರಿದರು.























