ಬೆಂಗಳೂರು, ಜು.30 www.bengaluruwire.com : ಹಲವು ದಿನಗಳಿಂದ ಉಲ್ಲಾಳ ವಾರ್ಡಿನ ಉಲ್ಲಾಳ ಕೆರೆ ಮುಖ್ಯ ಪ್ರವೇಶದ್ವಾರದ ಬಳಿಯ 100 ಅಡಿ ರಸ್ತೆಯಲ್ಲಿನ ಅಪಾಯಕಾರಿ ಗುಂಡಿಯನ್ನು ಬಿಡಿಎ ತಾತ್ಕಾಲಿಕವಾಗಿ ಸರಿಪಡಿಸಿದ್ದಾರೆ. ನಗರದಲ್ಲಿನ ರಸ್ತೆಗೆ ಡಾಂಬರ್ ಪೂರೈಸುವ ಕಣ್ಣೂರು ಡಾಂಬರ್ ಮಿಶ್ರಣ ಘಟಕ 2 ವಾರದಲ್ಲಿ ಪುನರಾರಂಭವಾಗಲಿದೆ. ಇದು ಬೆಂಗಳೂರು ವೈರ್ ವರದಿ ಪರಿಣಾಮ.
ಜೀವ ಬಲಿತೆಗೆದುಕೊಂಡ ರಸ್ತೆಗುಂಡಿ, ಬೆಂಗಳೂರು ವೈರ್ ವರದಿ :
ಮಾಗಡಿರಸ್ತೆಯಿಂದ ಕೆಂಗೇರಿ ಹೋಗುವ ಬಂಡೆಮಠದ ಕಡೆಗೆ ಸಾಗುವ 100 ಅಡಿ ದ್ವಿಪಥ ರಸ್ತೆಯಲ್ಲಿ ಬೆಂಗಳೂರು ಜಲಮಂಡಳಿ ಕಾವೇರಿ 5ನೇ ಹಂತದಲ್ಲಿ 6 ಅಡಿ ವ್ಯಾಸದ ಬೃಹತ್ ನೀರಿನ ಪೈಪ್ ಅಳವಡಿಸಿದೆ. ಹೀಗೆ ಅಳವಡಿಸಿದ ಜಲಮಂಡಳಿ ನೀರಿನ ಪೈಪ್ ನಿರ್ವಹಣೆಗೆಂದು ಈ ಭಾಗದಲ್ಲಿ ಬೆಂಗಳೂರು ನೀರು ಸರಬರಾಜ ಮತ್ತು ಒಳಚರಂಡಿ ಮಂಡಳಿಯು ಸಿಮೆಂಟ್ ಸ್ಲಾಬ್ ಮಧ್ಯದಲ್ಲಿ ಮ್ಯಾನ್ ಹೋಲ್ ಅಳವಡಿಸಿದೆ. ಬೃಹತ್ ಪೈಪಿಗೆ ಅಳವಡಿಸಿದ ವಾಲ್ವ್ ಹಾಳಾಗಿ ಅಲ್ಲಿಂದ ನೀರು ಸೋರಿಕೆಯಾಗಿ, ಸ್ಲಾಬ್ ಎರಡೂ ಅಂಚಿನಲ್ಲಿ ದೊಡ್ಡ ಗುಂಡಿ ಸೃಷ್ಟಿಯಾಗಿತ್ತು.

ಈ ಅಪಾಯಕಾರಿ ರಸ್ತೆಗುಂಡಿಯಿಂದ ಇದೇ ಸ್ಥಳದಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಯುವತಿಯೋರ್ವಳು ಬಿದ್ದು ಆಕೆಯ ಮೇಲೆ ಬಸ್ ಹರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಈ ಕುರಿತಂತೆ ಹಾಗೂ ನಗರದಲ್ಲಿ ರಸ್ತೆಗುಂಡಿ ಮುಚ್ಚಲು ಅಗತ್ಯವಾದ ಕಣ್ಣೂರು ಡಾಂಬರು ಮಿಶ್ರಣ ಘಟಕ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಬಗ್ಗೆ ವಿಸ್ತಾರವಾಗಿ ಬೆಂಗಳೂರು ವೈರ್ ಜು.29ರಂದು ಬೆಳಗ್ಗೆ ವರದಿ ಪ್ರಕಟಿಸಿತ್ತು. ಅಲ್ಲದೆ ನಗರದಲ್ಲಿನ ರಸ್ತೆಗುಂಡಿಗಳ ಬಗ್ಗೆ ವಾಸ್ತವ ಅಂಕಿಅಂಶಗಳನ್ನು ಎತ್ತಿ ತೋರಿಸಿತ್ತು.

ಬಿಡಿಎ, ಜಲಮಂಡಳಿ ಮತ್ತು ಬಿಬಿಎಂಪಿಯ ತ್ವರಿತ ಸ್ಪಂದನೆ :
“BW SPECIAL | ಉಲ್ಲಾಳ ವಾರ್ಡಿನ 100 ಅಡಿ ರಸ್ತೆಯಲ್ಲಿದೆ ಸ್ಪಾಟ್ ಔಟ್ ಪಾಯಿಂಟ್!! : ಕಣ್ಣೂರು ಡಾಂಬರ್ ಮಿಕ್ಸ್ ಪ್ಲಾಂಟ್ ಕಣ್ಮುಚ್ಚಿ 1 ವಾರ : ಸಾವಿಗೆ ಕಾದು ಕುಳಿತಿವೆ ಸಾವಿರಾರು ರಸ್ತೆಗುಂಡಿಗಳು” ಎಂಬ ಶೀರ್ಷಿಕೆ ಅಡಿಯಲ್ಲಿ ಸುದ್ದಿ ಪ್ರಕಟವಾದ ನಂತರ ಕೆಲವೇ ಗಂಟೆಗಳಲ್ಲಿ (ಜು.29) ಸ್ಥಳಕ್ಕೆ ಸಿಬ್ಬಂದಿಯೊಂದಿಗೆ ಧಾವಿಸಿದ ಬಿಡಿಎ ಎಂಜಿನಿಯರ್, ನೀರು ಸೋರಿಕೆಯಿಂದ ಹಾನಿಯಾದ ರಸ್ತೆಗುಂಡಿಯನ್ನು ತಾತ್ಕಾಲಿಕವಾಗಿ ಸರಿಪಡಿಸಿದರು.
ಬೆಂಗಳೂರು ಜಲಮಂಡಳಿಯ ಕಾವೇರಿ ಯೋಜನೆ ಎಂಜಿನಿಯರ್ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಬೃಹತ್ ನೀರಿನ ಪೈಪಿನ ವಾಲ್ವ್ ಹಾಳಾಗಿದ್ದು ಸರಿಪಡಿಸುವುದಾಗಿ ಬೆಂಗಳೂರು ವೈರ್ ಗೆ ಭರವಸೆ ನೀಡಿದರು. “ಕಾವೇರಿ 5ನೇ ಹಂತದ ನೀರಿನ ಪೈಪ್ ಅಳವಡಿಸಿರುವ ಸ್ಕೌರ್ ವಾಲ್ವ್ ಹಾಳಾಗಿದ್ದು, ಶೀಘ್ರದಲ್ಲಿಯೇ ಈ ಭಾಗದ ನೀರಿನ ಪೈಪ್ ಬಂದ್ ಮಾಡಿ ಹೊಸ ವಾಲ್ವ್ ಅಳವಡಿಸುತ್ತೇನೆ. ಆಗ ನೀರಿನ ಸೋರಿಕೆ ನಿಲ್ಲಲ್ಲಿದೆ. ಬಳಿಕ ಸಿಮೆಂಟ್ ಸ್ಲಾಬ್ ಸುತ್ತ ಸಿಮೆಂಟ್ ಕಾಂಕ್ರಿಟ್ ಹಾಕುತ್ತೇವೆ” ಎಂದು ಕಾವೇರಿ ಯೋಜನೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಘವೇಂದ್ರ ತಿಳಿಸಿದ್ದಾರೆ.
ಡಾಂಬರು ಘಟಕ ಪುನರಾರಂಭ, ಗುಂಡಿಗಮನ ಆ್ಯಪ್ ದೋಷ ಸರಿಪಡಿಸುವ ಭರವಸೆ :
ಇನ್ನೊಂದೆಡೆ ಪಾಲಿಕೆ ವ್ಯಾಪ್ತಿಯಲ್ಲಿ ಆರ್ಟಿಯಲ್, ಸಬ್ ಆರ್ಟಿಯಲ್ ರಸ್ತೆಗಳಲ್ಲಿ ಮಳೆ ಮತ್ತಿತರ ಕಾರಣಗಳಿಂದ ಸೃಷ್ಟಿಯಾಗಿರುವ ಗುಂಡಿಗಳನ್ನು ಬಿಬಿಎಂಪಿ ಸರಿಯಾಗಿ ಮುಚ್ಚುತ್ತಿಲ್ಲ. ವಾರ್ಡ್ ರಸ್ತೆಯಲ್ಲಿ ಸಾವಿರಾರು ಗುಂಡಿಗಳು ಸೃಷ್ಟಿಯಾಗಿದ್ದುವಾಹನ ಸವಾರರು, ಪಾದಚಾರಿ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಬೆಂಗಳೂರು ವೈರ್ ಇದೇ ಸುದ್ದಿಯಲ್ಲಿ ವರದಿ ಮಾಡಿತ್ತು.
ನಗರದ ರಸ್ತೆಗೆ ಡಾಂಬರು ಪೂರೈಸುವ ಪಾಲಿಕೆಯು ಮಹದೇವಪುರ ವಲಯದ ಕಣ್ಣೂರಿನಲ್ಲಿ ಸ್ಥಾಪಿಸಿರುವ ಡಾಂಬರು ಮಿಶ್ರಣ ಘಟಕ ಕಳೆದ ಒಂದು ವಾರದಿಂದ ಸ್ಥಗಿತಗೊಂಡಿರುವ ಬಗ್ಗೆ ಬಿಬಿಎಂಪಿ ಹಿರಿಯ ಅಧಿಕಾರಿಗಳ ಗಮನ ಸೆಳೆದಿತ್ತು.
ಈ ಬಗ್ಗೆ ಬೆಂಗಳೂರು ವೈರ್ ಜೊತೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, “ಕಣ್ಣೂರು ಡಾಂಬರು ಮಿಶ್ರಣ ಘಟಕ ಕಾರಣಾಂತರಗಳಿಂದ ಕಳೆದ ಒಂದು ವಾರದಿಂದ ಸ್ಥಗಿತಗೊಂಡಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಟೆಂಡರ್ ಆಹ್ವಾನಿಸಿದ್ದು, ಎರಡು ವಾರದಲ್ಲಿ ಪುನಃ ಘಟಕ ಆರಂಭವಾಗಲಿದೆ. ಗುಂಡಿಗಮನ ಆಂಡ್ರಾಯ್ಡ್ ನಲ್ಲಿನ ದೋಷ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು” ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು ವೈರ್ ಸಾರ್ವಜನಿಕರ ಆಸಕ್ತಿ, ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಆಡಳಿತ ನಡೆಸುವ ವರ್ಗದ ತಪ್ಪುಒಪ್ಪುಗಳನ್ನು ಯಾವುದೇ ಮುಲಾಜಿಲ್ಲದೆ ವರದಿ ಪ್ರಕಟಿಸುವ ತನ್ನ ಕಾಯಕವನ್ನು ಮುಂದುವರೆಸಲಿದೆ. ಓದುಗರ ಬೆಂಬಲ ಸದಾ ಬೆಂಬಲ, ಪ್ರೋತ್ಸಾಹ ಸದಾ ಬೆಂಗಳೂರು ವೈರ್ ಮೇಲಿದೆ ಎಂದು ಭಾವಿಸುತ್ತದೆ.























