ಬೆಂಗಳೂರು, ಜು.29 www.bengaluruwire.com : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಬಸ್ಗಳಲ್ಲಿ ಹೊಸ ಲಗೇಜ್ ನಿಯಮ ಜಾರಿಗೆ ಬಂದಿದೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳು ಮತ್ತು ಕೆಲವು ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳನ್ನು ನಿಗಮದ ಅಧಿಕಾರಿಗಳು ಸ್ಪಷ್ಟವಾಗಿ ಅಲ್ಲಗಳೆದಿದ್ದಾರೆ. ಈ ಸುದ್ದಿ ಸತ್ಯಕ್ಕೆ ದೂರವಾಗಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಕೆಎಸ್ಆರ್ಟಿಸಿ ತಿಳಿಸಿದೆ.
ನಿಗಮದ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಸಾರ್ವಜನಿಕ ಪ್ರಯಾಣಿಕರ ಲಗೇಜ್ ಮತ್ತು ಸರಕುಗಳನ್ನು ಸಾಗಿಸಲು ಬಹಳ ಹಿಂದಿನಿಂದಲೂ ವ್ಯವಸ್ಥೆ ಜಾರಿಯಲ್ಲಿದೆ. 1999ರ ನವೆಂಬರ್ 5ರಿಂದಲೇ ವಾಷಿಂಗ್ ಮೆಷಿನ್, ಫ್ರಿಜ್, ಟ್ರಕ್ ಟೈರ್, ಅಲ್ಯೂಮಿನಿಯಂ ಪೈಪ್, ಕಬ್ಬಿಣದ ಪೈಪ್, ಪಾತ್ರೆ, ಬೆಕ್ಕು, ನಾಯಿ, ಮೊಲಗಳಂತಹ ವಸ್ತುಗಳನ್ನು ಬಸ್ಸಿನಲ್ಲಿ ಲಭ್ಯವಿರುವ ಸ್ಥಳಾವಕಾಶಕ್ಕೆ ಅನುಗುಣವಾಗಿ ಸಾಗಿಸಲು ಅವಕಾಶ ಕಲ್ಪಿಸಲಾಗಿದೆ.
ಈ ವ್ಯವಸ್ಥೆಯ ಅನುಷ್ಠಾನದಲ್ಲಿ ಕಾಲದಿಂದ ಕಾಲಕ್ಕೆ ದರ ಪರಿಷ್ಕರಣೆ, 30 ಕೆ.ಜಿ. ವರೆಗೆ ಲಗೇಜ್ಗೆ ಉಚಿತ ಅವಕಾಶ ಹಾಗೂ ಸಾಗಿಸಬಹುದಾದ ವಸ್ತುಗಳ ಪ್ರಯಾಣದ ಕುರಿತು ನಿಯಮಗಳನ್ನು ರೂಪಿಸಲಾಗಿದೆ. ಪ್ರಸ್ತುತ, 2022ರ ಅಕ್ಟೋಬರ್ 28ರಿಂದ ಜಾರಿಯಲ್ಲಿರುವ ಲಗೇಜ್ ನಿಯಮಗಳು ಹಾಗೂ ಸುತ್ತೋಲೆಯನ್ನೇ ಅನುಸರಿಸಲಾಗುತ್ತಿದೆ.
2022ರ ಅಕ್ಟೋಬರ್ 28ರ ನಂತರ ಇತ್ತೀಚೆಗೆ ಯಾವುದೇ ಹೊಸ ಲಗೇಜ್ ನಿಯಮ ಅಥವಾ ಸುತ್ತೋಲೆಯನ್ನು ನಿಗಮದಲ್ಲಿ ಜಾರಿಗೆ ತಂದಿಲ್ಲ ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ, ಹೊಸ ನಿಯಮಗಳ ಬಗ್ಗೆ ಹರಡುತ್ತಿರುವ ಮಾಹಿತಿ ಶುದ್ಧ ಸುಳ್ಳು ಎಂದು ಸಾರ್ವಜನಿಕರು ಗಮನಿಸಬೇಕು ಎಂದು ನಿಗಮ ಮನವಿ ಮಾಡಿದೆ.
























