ಬೆಂಗಳೂರು, ಜು.29 www.bengaluruwire.com : ರಾಜಧಾನಿಯಲ್ಲಿ ಈ ಬಾರಿಯ ಮಳೆಗಾಲದಲ್ಲಿ ಸಾಕಷ್ಟು ರಸ್ತೆಗುಂಡಿಗಳು ಸೃಷ್ಟಿಯಾಗುತ್ತಿದ್ದು, ಬಿಬಿಎಂಪಿಯಿಂದ ರಸ್ತಡ ಗುಂಡಿ ಮುಚ್ಚುವ ಪ್ರಕ್ರಿಯೆ ಆಮೆಗತಿಯಲ್ಲಿ ಸಾಗುತ್ತಿದೆ. ಹೀಗಾಗಿ ರಸ್ತೆಗುಂಡಿ ಆಧಾರಿತ ಅಪಘಾತಗಳು ಸಂಭವಿಸುತ್ತಲೇ ಇದೆ. ಉಲ್ಲಾಳ ವಾರ್ಡಿನ ಉಲ್ಲಾಳ ಕೆರೆ ಮುಖ್ಯ ಪ್ರವೇಶದ್ವಾರದ ಬಳಿಯ 100 ಅಡಿ ರಸ್ತೆಯಲ್ಲಿನ ಗುಂಡಿಯು ವಾಹನ ಸವಾರರನ್ನು ಸಾವಿನ ಮನೆಗೆ ಕರೆದೊಯ್ಯಲು ಬಾಯ್ತೆರೆದು ಕೂತಿದೆ.
ಇದೇ 100 ಅಡಿ ರಸ್ತೆಯಲ್ಲಿ ಕಾವೇರಿ 5ನೇ ಹಂತದ ಬೃಹದಾಕಾರದ ಪೈಪ್ ರಸ್ತೆ ಮಧ್ಯದಲ್ಲಿಯೇ ಹಾದು ಹೋಗಿದ್ದು, ಪೈಪ್ ನಿರ್ವಹಣೆಗೆಂದು ಈ ಭಾಗದಲ್ಲಿ ಬೆಂಗಳೂರು ನೀರು ಸರಬರಾಜ ಮತ್ತು ಒಳಚರಂಡಿ ಮಂಡಳಿಯು ಸಿಮೆಂಟ್ ಸ್ಲಾಬ್ ಅಳವಡಿಸಿದ್ದು, ಆ ಸ್ಲಾಬ್ ಎರಡೂ ಅಂಚಿನಲ್ಲಿ ಮಳೆಯಿಂದಾಗಿ ದೊಡ್ಡ ಗುಂಡಿ ಸೃಷ್ಟಿಯಾಗಿದೆ. ಇದು ಬಿಡಿಎ ವಿಶ್ವೇಶ್ವರಯ್ಯ ಬಡಾವಣೆ ವ್ಯಾಪ್ತಿಗೆ ಬರುತ್ತದೆ. ಆದರೆ ಇಂತಹ ಸಾವಿರಾರು ರಸ್ತೆಗುಂಡಿಗಳಿದ್ದರೂ ಬಿಡಿಎ ಆಗಲಿ, ಬಿಬಿಎಂಪಿ ಆಗಲಿ ಗಮನ ಹರಿಸುತ್ತಿಲ್ಲ ಎಂದು ಸ್ಥಳೀಯ ನಾಗರೀಕರು ದೂರುತ್ತಿದ್ದಾರೆ.
ಈಗಾಗಲೇ ಇದೇ ಸ್ಥಳದಲ್ಲಿ ಯುವತಿ ಸೇರಿದಂತೆ 3 ಮಂದಿ ಬಲಿಯಾಗಿದ್ದಾರೆ :

ಈ ಹಿಂದೆ ಇದೇ ಜಾಗದಲ್ಲಿ ರಸ್ತೆಗುಂಡಿಯಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುವಾಗ ಬಿದ್ದು ಯುವತಿಯೋರ್ವಳ ಮೇಲೆ ಬಸ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಳು. ಈಗ ಮತ್ತದೇ ಜಾಗದಲ್ಲಿ ಬೃಹತ್ ಗುಂಡಿ ಸೃಷ್ಟಿಯಾಗಿದೆ. ಕೂಡಲೇ ಜಲ್ಲಿ, ಡಾಂಬರ್ ಹಾಕಿ ಅದನ್ನು ಮುಚ್ಚದಿದ್ದಲ್ಲಿ ರಸ್ತೆ ಅಪಘಾತ, ಸಾವುನೋವುಗಳಾಗುವ ಸಾಧ್ಯತೆಯಿದೆ. ಕಾವೇರಿ ನೀರಿಗಾಗಿ, ಜಲಮಂಡಳಿ 6 ಅಡಿ ವ್ಯಾಸದ ನೀರಿನ ಪೈಪ್ ಅಳವಡಿಕೆ ಸಂದರ್ಭದಲ್ಲಿ ಇದೇ ಸ್ಥಳದಲ್ಲಿ ಇಬ್ಬರು ಕೂಲಿ ಕಾರ್ಮಿಕರು ಮಳೆನೀರು ಗುಂಡಿಯಲ್ಲಿ ತುಂಬಿ ಇದೇ ಸ್ಥಳದಲ್ಲಿ ಮೃತಪಟ್ಟಿದ್ದರು.

ಗುಂಡಿಗಮನವಿಲ್ಲದ ಆಪ್ !! :
ಕೇವಲ ಇದೊಂದು ಸ್ಯಾಂಪಲ್ ಅಷ್ಟೆ. ನಗರದಲ್ಲಿ ಸರ್ವ ಋತುವಿನಲ್ಲೂ ರಸ್ತೆ ಗುಂಡಿ ಸಮಸ್ಯೆ ಸವಾರರನ್ನು ಬೆಂಬಿಡದೆ ಕಾಡುತ್ತಲೇ ಇವೆ. ನಗರದ ಹಲವೆಡೆ ನಿತ್ಯ ಅಪಘಾತಗಳು ಸಂಭವಿಸುತ್ತಿದ್ದು, ಬೈಕ್ ಸವಾರರು ಹಾಗೂ ಪಾದಚಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾವಿಗೀಡಾಗುತ್ತಿದ್ದಾರೆ. ಪಾಲಿಕೆ ಗುಂಡಿಗಮನ ಆಪ್ ಬಿಡುಗಡೆ ಮಾಡಿದ್ದರೂ, ಆ ಆಪ್ ನಲ್ಲಿ ಸಾರ್ವಜನಿಕರು ಸ್ಥಳದಲ್ಲೇ ಫೊಟೋ ಹೊಡೆಯಬಹುದು. ಆದರೆ ಮ್ಯಾಪ್ ನಲ್ಲಿ ಜಿಪಿಎಸ್ ನಕ್ಷೆ ದಾಖಲಿಸಲು ಸೂಕ್ತ ರೀತಿ ವ್ಯವಸ್ಥೆ ಕಲ್ಪಿಸಿಲ್ಲ. ಇಲ್ಲೂ ಅವ್ಯವಸ್ಥೆ ಮನೆ ಮಾಡಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 13,873 ಕಿ.ಮೀ ಉದ್ದದ ರಸ್ತೆ ಜಾಲವಿದೆ. ಈ ಪೈಕಿ ಆರ್ಟೀರಿಯಲ್ ಹಾಗೂ ಸಬ್ ಆರ್ಟಿಯಲ್ ರಸ್ತೆಗಳು 1,344 ಕಿ.ಮೀ. ಹಾಗೂ ವಾರ್ಡ್ ರಸ್ತೆಗಳು 12,529 ಕಿ.ಮೀ. ಉದ್ದ ಇವೆ. ಈ ರಸ್ತೆಗಳ ನಿರ್ವಹಣೆ, ದುರಸ್ತಿಗಾಗಿಯೇ ಬಿಬಿಎಂಪಿಯು ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಹಣವನ್ನು ವೆಚ್ಚ ಮಾಡುತ್ತದೆ ಹೀಗಿದ್ದರೂ, ನಗರದ ಬಹುತೇಕ ರಸ್ತೆಗಳು ಹೊಂಡ-ಗುಂಡಿಗಳಿಂದ ಅಧ್ವಾನವಾಗಿವೆ.
ನಗರದಲ್ಲಿ ಜು.29ರ ತನಕ ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 27,248 ರಸ್ತೆ ಹಾಗೂ ರಸ್ತೆ ಗುಂಡಿ ಸಂಬಂಧಿತ ದೂರುಗಳು ದಾಖಲಾಗಿದ್ದು, ಆ ಪೈಕಿ 13,714 ಪ್ರಕರಣಗಳು ಇತ್ಯರ್ಥಗೊಂಡಿವೆ. ಅಲ್ಲದೆ ಹೊಸದಾಗಿ 3,646 ಪ್ರಕರಣಗಳು ದಾಖಲಿವೆ. 1,450 ಕಡೆ ರಸ್ತೆ ಗುಂಡಿ ಮುಚ್ಚುವ, ಸರಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ. 27 ಪ್ರಕರಣಗಳಲ್ಲಿ ಆ ರಸ್ತೆಗಳು ಗುತ್ತಿಗೆದಾರರ ದೋಷ ಹೊಣೆಗಾರಿಕೆ ಅವಧಿಯೊಳಗೆ ಬರುತ್ತಿದೆ. ಅಲ್ಲದೆ ದುರುದಾರರ 8,069 ಪ್ರಕರಣಗಳನ್ನು ತಿರಸ್ಕರಿಸಿರುವುದಕ್ಕೆ ಕಾರಣ ತಿಳಿದುಬಂದಿಲ್ಲ.
ಕಣ್ಣೂರು ಡಾಂಬರು ಮಿಶ್ರಣ ಘಟಕ ಕಣ್ಮುಚ್ಚಿ 1 ವಾರ :

ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ತ್ವರಿತವಾಗಿ ಮುಚ್ಚಲು ಕ್ರಮ ಕೈಗೊಳ್ಳಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್ ಅವರು ಅಧಿಕಾರಿಗಳಿಗೆ ಆಗಾಗ ಕಟ್ಟುನಿಟ್ಟಿನ ಸೂಚನೆ ನೀಡುತ್ತಲೇ ಇದ್ದಾರೆ. ಆದರೆ ರಸ್ತೆಗುಂಡಿಗಳಿಗೆ ಮುಕ್ತಿಯೇ ಸಿಕ್ಕಿಲ್ಲ. ಪಾಲಿಕೆಯು ಮಹದೇವಪುರ ವಲಯದ ಕಣ್ಣೂರಿನಲ್ಲಿ 4.5 ಎಕರೆ ಜಾಗದಲ್ಲಿ ಸುಮಾರು 7.5 ಕೋಟಿ ರೂ. ವೆಚ್ಚದಲ್ಲಿ 2020ರಲ್ಲಿ ಡಾಂಬರು ಮಿಶ್ರಣ ಘಟಕನ್ನು ಸ್ಥಾಪಿಸಿದ್ದು, ಈ ಘಟಕವು ಕಳೆದ ಒಂದು ವಾರದಿಂದ ಕಾರಣಾಂತರದಿಂದ ಕಾರ್ಯನಿರ್ವಹಿಸುತ್ತಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.
ಈ ಘಟಕವು ಒಂದು ಗಂಟೆಗೆ 100/120 ಟಿಪಿಹೆಚ್ ಸಾಮರ್ಥ್ಯವುಳ್ಳ ಡಾಂಬರ್ ಅನ್ನು ತಯಾರಿಸಬಹುದಾಗಿದ್ದು, ದಿನಕ್ಕೆ 50 ರಿಂದ 60 ಟ್ರಕ್ ಡಾಂಬರ್ ತಯಾರಿಸಬಹುದಾಗಿದೆ. ಇದರಿಂದ ನಗರದಾದ್ಯಂತ ತ್ವರಿತ ಗತಿಯಲ್ಲಿ ರಸ್ತೆಗುಂಡಿಗಳನ್ನು ಮುಚ್ಚಬಹುದಾಗಿದೆ. ಪಾಲಿಕೆಯಿಂದಲೇ ಡಾಂಬರ್ ತಯಾರಿಸುತ್ತಿರುವುದರಿಂದ ವೆಚ್ಚ ಕಡಿಮೆಯಾಗಲಿದ್ದು, ಗುಣಮಟ್ಟ ಕಾಪಾಡಿಕೊಳ್ಳಬಹುದಾಗಿದೆ. ಯಾವುದೇ ಗುತ್ತಿಗೆದಾರರ ಮೇಲೆ ಅವಲಂಬಿತವಾಗುವ ಅಗತ್ಯವಿರುವುದಿಲ್ಲ ಎಂದು ಪಾಲಿಕೆಯ ಹಿಂದಿನ ಆಯುಕ್ತರು ಹೇಳಿದ್ದರು.
ಟನ್ ಗೆ 4,600₹ ಮೊತ್ತ ಸಾಲದೆ ಸಾಗಣೆ, ಡಾಂಬರ್ ಹಾಕೋದು ನಿಂತಿದೆ :

ಈ ಡಾಂಬರು ಮಿಶ್ರಣ ಘಟಕದಲ್ಲಿ ಬಿಬಿಎಂಪಿ ಹಾಟ್ ಮಿಕ್ಸ್ ಹಾಗೂ ಕೋಲ್ಡ್ ಮಿಕ್ಸ್ ಪೂರೈಕೆ ಮಾಡುತ್ತದೆ. ಹಾಟ್ ಮಿಕ್ಸ್ ಅನ್ನು ಗುತ್ತಿಗೆ ಪಡೆದ ಸಂಸ್ಥೆಯು ತಮ್ಮ ಟ್ರಕ್ ನಲ್ಲಿ ಕೊಂಡೊಯ್ದು, ಬಿಬಿಎಂಪಿ ವ್ಯಾಪ್ತಿಯ ಆರ್ಟಿಯಲ್ ಹಾಗೂ ಸಬ್ ಆರ್ಟಿಯಲ್ ರಸ್ತೆಯಲ್ಲಿ ಉಂಟಾಗುವ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡುತ್ತದೆ. ಆದರೆ ಇದೀಗ ಗುತ್ತಿಗೆ ಪಡೆದ ವೆಂಕಟಾಚಲಪತಿ ಸಂಸ್ಥೆಯು ಪಾಲಿಕೆ ಡಾಂಬರ್ ಕೊಂಡೊಯ್ದು ರಸ್ತೆಗೆ ಹಾಕಲು ಟನ್ ಗೆ ನೀಡುವ 4,600₹ ಹಣ ಯಾವುದಕ್ಕೂ ಸಾಲದೆಂದು ಸಾಗಣೆ ಹಾಗೂ ಡಾಂಬರ್ ಹಾಕುತ್ತಿಲ್ಲ ಎಂದು ಪಾಲಿಕೆ ಅಧಿಕಾರಿಗಳು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಬಿಬಿಎಂಪಿಯಿಂದ ನಿರ್ಮಿಸಿರುವ ಡಾಂಬರು ಮಿಶ್ರಣ ಘಟಕವು ಸಂಪೂರ್ಣ ಸ್ವಯಂ ಚಾಲಿತವಾಗಿದ್ದು, ಘಟಕದಲ್ಲಿ ತಯಾರಾಗುವ ಡಾಂಬರಿನ ಉಷ್ಣಾಂಶವು 150 ರಿಂದ 160 ಇರಲಿದ್ದು, ಗುಂಡಿಗಳು ಮುಚ್ಚುವ ಸ್ಥಳಕ್ಕೆ ಹೋಗುವ ವೇಳೆಗೆ 120 ಉಷ್ಣಾಂಶವಿದ್ದರೆ ಉತ್ತಮ ಗುಣಮಟ್ಟದಲ್ಲಿ ರಸ್ತೆಗುಂಡಿಗಳನ್ನು ಮುಚ್ಚುವ ಜೊತೆಗೆ ಹೆಚ್ಚುದಿನಗಳ ಕಾಲ ಬಾಳಿಕೆ ಬರುತ್ತದೆ ಎಂದು ಹೇಳಲಾಗಿತ್ತು. ಆದರೆ ಈ ಘಟಕವಿಟ್ಟುಕೊಂಡೂ ನಗರದಲ್ಲಿನ ರಸ್ತೆಗುಂಡಿಗಳಿಗೆ ಪರಿಹಾರ ಇನ್ನೂ ದೊರೆತಿಲ್ಲ.
ಒಂದೆಡೆ ರಸ್ತೆ ಗುಂಡಿ : ಮತ್ತೊಂದೆಡೆ ರಸ್ತೆ ಅಪಘಾತ ನಿಲ್ಲುತ್ತಿಲ್ಲ :
ನಗರದ ಹಲವೆಡೆ ನಿತ್ಯ ಅಪಘಾತಗಳು ಸಂಭವಿಸುತ್ತಿದ್ದು, ಬೈಕ್ ಸವಾರರು ಹಾಗೂ ಪಾದಚಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾವಿಗೀಡಾಗುತ್ತಿದ್ದಾರೆ. ಸಂಚಾರ ಪೊಲೀಸರು ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, ಬೆಂಗಳೂರಿನಲ್ಲಿ (ಬೆಂಗಳೂರು) 2024 ರ ರಸ್ತೆ ಅಪಘಾತಗಳ ಇತ್ತೀಚಿನ ಲಭ್ಯವಿರುವ ಅಂಕಿಅಂಶಗಳು ಈ ಕೆಳಗಿನವುಗಳನ್ನು ತೋರಿಸುತ್ತವೆ:
ಒಟ್ಟು ಅಪಘಾತಗಳು: 4,784 (2023 ಕ್ಕೆ ಹೋಲಿಸಿದರೆ 4% ಇಳಿಕೆ)
ಮಾರಣಾಂತಿಕ ಅಪಘಾತಗಳು: 871
ಒಟ್ಟು ಸಾವುಗಳು: 893
ಮಾರಣಾಂತಿಕವಲ್ಲದ ಅಪಘಾತಗಳು: 3,913
ಒಟ್ಟು ಗಾಯಗೊಂಡವರು: 4,052
ಆದರೆ ಗಮನಾರ್ಹ ಸಂಖ್ಯೆಯ ಅಪಘಾತಗಳು ಸ್ವಯಂ (ಒಂಟಿ ವಾಹನ) ಅಪಘಾತಗಳಿಗೆ ಕಾರಣವಾಗಿವೆ. ಇದು 2024 ರಲ್ಲಿ ಶೇ.3.34 ರಷ್ಟು ಹೆಚ್ಚಾಗಿದೆ ಎಂದು ಈ ಹಿಂದೆ ಸಂಚಾರಿ ಪೊಲೀಸರು ಬಿಡುಗಡೆ ಮಾಡಿದ ಅಂಕಿಅಂಶದಲ್ಲಿ ವರದಿಯಾಗಿದೆ. ಒಟ್ಟಾರೆ ಮಳೆಗಾಲದಲ್ಲಿ ಬೆಂಗಳೂರಿನಲ್ಲಿ ಆರ್ಟಿಯಲ್ ಹಾಗೂ ಸಬ್ ಆರ್ಟಿಯಲ್ ರಸ್ತೆಗಳಿಗೆ ಹೋಲಿಸಿದರೆ ವಾರ್ಡ್ ರಸ್ತೆಗಳು ಗುಂಡಿಮಯವಾಗಿದೆ. ಇದು ಸಾವುನೋವುಗಳಿಗೆ ಕಾರಣವಾಗದಂತೆ ಪಾಲಿಕೆ ಕೂಡಲೇ ಗಮನಹರಿಸಬೇಕಿದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.























