ಬೆಂಗಳೂರು, ಜು.28 www.bengaluruwire.com : ರಾಜ್ಯ ಸರ್ಕಾರವು ‘ಬಿ’ ಖಾತಾ ಸ್ವತ್ತುಗಳಿಗೆ ‘ಎ’ ಖಾತೆ ನೀಡುವ ಕುರಿತು ಹೊರಡಿಸಿರುವ ಆದೇಶವು ಗೊಂದಲಗಳಿಂದ ಕೂಡಿದ್ದು, ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಹೆಚ್ಚಿನ ಆರ್ಥಿಕ ತೊಂದರೆಯನ್ನುಂಟು ಮಾಡುತ್ತದೆ ಎಂದು ಮಾಜಿ ವಿರೋಧ ಪಕ್ಷದ ನಾಯಕ ಹಾಗೂ ಕಾಚರಕನಹಳ್ಳಿ ವಾರ್ಡ್ನ ಮಾಜಿ ಸದಸ್ಯ ಪದ್ಮನಾಭ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಖಾತಾ ವ್ಯವಸ್ಥೆಯ ಗೊಂದಲ :
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ‘ಎ’ ಅಥವಾ ‘ಬಿ’ ಖಾತೆಗಳು ಜಾರಿಯಲ್ಲಿಲ್ಲ. ಕೇವಲ ‘ಖಾತೆ’ ಎಂಬ ಒಂದೇ ವ್ಯವಸ್ಥೆ ಇದೆ ಎಂದು ರೆಡ್ಡಿ ಸ್ಪಷ್ಟಪಡಿಸಿದರು. ಆದರೆ, ‘ಬಿ’ ಖಾತೆಗಳನ್ನು ‘ಎ’ ಖಾತೆಗಳಾಗಿ ಪರಿವರ್ತಿಸುತ್ತೇವೆ ಎಂದು ಸರ್ಕಾರಿ ಆದೇಶದಲ್ಲಿ ತಿಳಿಸಿರುವುದು ಆಶ್ಚರ್ಯಕರ ಎಂದು ಅವರು ಹೇಳಿದರು.
ಈ ಹಿಂದೆ 2009ರ ಆಗಸ್ಟ್ 25 ರಂದು ರಾಜ್ಯ ಸರ್ಕಾರವು ಖಾತೆ ಇರುವ ಸ್ವತ್ತುಗಳಿಂದ ಆಸ್ತಿ ತೆರಿಗೆಯನ್ನು ‘ಎ’ ರಿಜಿಸ್ಟರ್ನಲ್ಲಿ, ಖಾತೆ ಇಲ್ಲದ ಸ್ವತ್ತುಗಳಿಂದ ಪಡೆಯುವ ಆಸ್ತಿ ತೆರಿಗೆಯನ್ನು ‘ಬಿ’ ರಿಜಿಸ್ಟರ್ನಲ್ಲಿ ನಮೂದಿಸಲು ಆದೇಶಿಸಿತ್ತು. ಈಗಿನ ರಾಜ್ಯ ಸರ್ಕಾರವು ಇದನ್ನು ‘ಎ’ ಖಾತೆ ಮತ್ತು ‘ಬಿ’ ಖಾತೆ ಎಂದು ಆದೇಶದಲ್ಲಿ ತಿಳಿಸಿರುವುದು ಕಾನೂನುಬಾಹಿರವಾಗಿ ಇಲ್ಲದ ಖಾತೆಯ ಹೆಸರಿನಲ್ಲಿ ಲಕ್ಷಾಂತರ ರೂಪಾಯಿಗಳನ್ನು ವಸೂಲು ಮಾಡಲು ಹೊರಟಿರುವುದು ಖಂಡನೀಯ ಎಂದು ರೆಡ್ಡಿ ಆರೋಪಿಸಿದರು.

ರೆವೆನ್ಯೂ ನಿವೇಶನಗಳ ‘ಎ’ ಖಾತೆ ಪಡೆಯುವ ಪ್ರಕ್ರಿಯೆ ದುಬಾರಿ :
ರಾಜ್ಯ ಸರ್ಕಾರ ಹೊರಡಿಸಿರುವ ಹೊಸ ಆದೇಶದ ಪ್ರಕಾರ, 2024ರ ಸೆಪ್ಟೆಂಬರ್ 30ಕ್ಕಿಂತ ಮುಂಚೆ ನೋಂದಣಿ (ಕ್ರಯ ಪತ್ರ) ಆಗಿರುವ ರೆವೆನ್ಯೂ ನಿವೇಶನಗಳಿಗೆ ‘ಎ’ ಖಾತೆ ಪಡೆಯಲು ಹಲವು ಕಠಿಣ ಮತ್ತು ದುಬಾರಿ ಪ್ರಕ್ರಿಯೆಗಳನ್ನು ಅನುಸರಿಸಬೇಕಾಗಿದೆ. ಮೊದಲು ಖಾಸಗಿ ರಸ್ತೆಗಳನ್ನು ಸಾರ್ವಜನಿಕ ರಸ್ತೆಗಳೆಂದು ಘೋಷಿಸಲು ಅರ್ಜಿ ಸಲ್ಲಿಸಬೇಕು, ಇದಕ್ಕೆ ಭೂಮಾಲೀಕರು ಯಾವುದೇ ಪರಿಹಾರವನ್ನು ಪಡೆಯಲು ಅರ್ಹರಿರುವುದಿಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕ ರಸ್ತೆ ಎಂದು ಘೋಷಿಸಿದ ನಂತರವಷ್ಟೇ, ಆನ್ಲೈನ್ ಮೂಲಕ ‘ಎ’ ಖಾತೆಗಾಗಿ ಅರ್ಜಿ ಸಲ್ಲಿಸಬೇಕು.
ಇದಲ್ಲದೆ, ನಿವೇಶನದ ಮಾರುಕಟ್ಟೆ ದರದ (Guidance Value) 5% ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದು ಸಾಮಾನ್ಯ ಜನರಿಗೆ ಭಾರಿ ಹೊರೆಯಾಗಲಿದೆ. ಉದಾಹರಣೆಗೆ, 30X40 ಅಳತೆಯ 1200 ಚದರ ಅಡಿ ನಿವೇಶನಕ್ಕೆ ಮಾರುಕಟ್ಟೆ ಮೌಲ್ಯ 5000 ರೂಪಾಯಿ ಆಗಿದ್ದರೆ, 5% ಶುಲ್ಕವಾಗಿ 3,00,000 ರೂ. ಪಾವತಿಸಬೇಕಾಗುತ್ತದೆ. ಇದರ ಜೊತೆಗೆ ಭೂ ಪರಿವರ್ತನೆ ಶುಲ್ಕ (Land Conversion Fee), ಪ್ರೊಸೆಸಿಂಗ್ ಶುಲ್ಕ/ಸ್ಕ್ರೂಟಿನಿ ಶುಲ್ಕ ಮತ್ತು ಇಂಪ್ರೂವ್ಮೆಂಟ್ ಚಾರ್ಜಸ್ಗಳನ್ನು ಪಾವತಿಸಬೇಕಿದೆ.
ಬೈಲಾ ಉಲ್ಲಂಘನೆ: ಲಕ್ಷಾಂತರ ರೂ. ವ್ಯರ್ಥ :
ಕಂದಾಯ ನಿವೇಶನಗಳಲ್ಲಿ ಕಟ್ಟಡಗಳನ್ನು ನಿರ್ಮಿಸಿ ‘ಬಿ’ ಖಾತೆ ಪಡೆದಿರುವ ಪ್ರಕರಣಗಳಲ್ಲಿ, ಭೂ ಪರಿವರ್ತನೆ ಶುಲ್ಕ, ಸಿಂಗಲ್ ಪ್ಲಾಟ್ ಫೀ, ಪ್ರೊಸೆಸಿಂಗ್/ಸ್ಕ್ರೂಟಿನಿ ಶುಲ್ಕಗಳನ್ನು ಪಾವತಿಸಿದ ನಂತರವೂ, ಕಟ್ಟಡಗಳು ಬೈಲಾ ನಿಯಮಗಳ ಪ್ರಕಾರ ಇದ್ದರೆ ಮಾತ್ರ ‘ಎ’ ಖಾತೆ ದೊರೆಯುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಕಟ್ಟಡಗಳು ಬೈಲಾ ವಿರುದ್ಧವಾಗಿ ನಿರ್ಮಿಸಿದ್ದರೆ, ಖಾತೆಯ ರಿಮಾರ್ಕ್ಸ್ ಕಾಲಂನಲ್ಲಿ ‘ಕಟ್ಟಡ ಉಲ್ಲಂಘನೆ’ ಎಂದು ನಮೂದಿಸಿ ಇಸಿ/ಎಂಟ್ರಿ ಮಾಡಲಾಗುವುದು. ಇದರಿಂದ ಬೈಲಾ ವಿರುದ್ಧವಾಗಿ ಕಟ್ಟಿರುವ ಕಟ್ಟಡಗಳಿಗೆ ಲಕ್ಷಾಂತರ ರೂ.ಗಳನ್ನು ಪಾವತಿಸಿದರೂ ಪ್ರಯೋಜನವಾಗುವುದಿಲ್ಲ ಎಂದು ಪದ್ಮನಾಭ ರೆಡ್ಡಿ ಆತಂಕ ವ್ಯಕ್ತಪಡಿಸಿದರು.
ಬಹುಮಹಡಿ ಫ್ಲಾಟ್ಗಳು ಅಥವಾ ಒಂದೇ ಫ್ಲಾಟ್ನಲ್ಲಿ ಬಹು ಘಟಕಗಳನ್ನು ನಿರ್ಮಿಸಲಾದ ‘ಬಿ’ ಖಾತೆ ಹೊಂದಿರುವ ಕಟ್ಟಡಗಳಿಗೆ, ಶುಲ್ಕ ಪಾವತಿಸಿದ ನಂತರ ಬೈಲಾ ಪ್ರಕಾರ ಇದ್ದರೆ ಮಾತ್ರ ದಂಡ ವಿಧಿಸಿ, ಸ್ವಾಧೀನ ಪ್ರಮಾಣಪತ್ರ ನೀಡಲಾಗುವುದು ಮತ್ತು ನಂತರ ‘ಎ’ ಖಾತೆ ಮಾಡಿಕೊಡಲಾಗುವುದು. ಬೈಲಾ ವಿರುದ್ಧವಾಗಿದ್ದರೆ ‘ಬಿ’ ಖಾತೆಯಲ್ಲಿಯೇ ಮುಂದುವರಿಸಲಾಗುವುದು ಎಂದು ತಿಳಿಸಿರುವುದು ಬಡ ಮತ್ತು ಮಧ್ಯಮ ವರ್ಗದ ಜನರನ್ನು ತ್ರಿಶಂಕು ಸ್ಥಿತಿಗೆ ತಳ್ಳಲಿದೆ ಎಂದು ರೆಡ್ಡಿ ಹೇಳಿದರು.
ಪೂರ್ವ ಮತ್ತು ನಂತರದ ತಾರತಮ್ಯ :
2024ರ ಸೆಪ್ಟೆಂಬರ್ 30ಕ್ಕಿಂತ ಮುಂಚೆ ಬೆಸ್ಕಾಂ ಸಂಪರ್ಕ ಹೊಂದಿರುವ ಬೈಲಾ ರಹಿತ ಕಟ್ಟಡಗಳಿಗೆ ‘ಬಿ’ ಖಾತೆ ನೀಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಆದರೆ, 2014ರ ಸೆಪ್ಟೆಂಬರ್ 30ರ ನಂತರ ನೋಂದಣಿ ಆಗಿರುವ ನಿವೇಶನಗಳು/ಕಟ್ಟಡಗಳಿಗೆ ‘ಬಿ’ ಖಾತೆ ಸಹ ನೀಡುವುದಿಲ್ಲ ಎಂದು ಸರ್ಕಾರಿ ಆದೇಶದಲ್ಲಿರುವುದು ಬಡ/ಮಧ್ಯಮ ವರ್ಗದ ಅಮಾಯಕ ಕುಟುಂಬಗಳನ್ನು ಸಂಕಷ್ಟಕ್ಕೆ ಸಿಲುಕಿಸುತ್ತದೆ ಎಂದು ರೆಡ್ಡಿ ಪ್ರತಿಪಾದಿಸಿದರು.
ನಗರದಲ್ಲಿನ ಸುಮಾರು 25 ಲಕ್ಷ ಕಟ್ಟಡಗಳಲ್ಲಿ ಬೈಲಾ ಪ್ರಕಾರ ನಿರ್ಮಿಸಿರುವುದು ಶೇಕಡಾ ಐದರಷ್ಟು ಕೂಡ ಇರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಒಂದು ಕಡೆ ‘ಬಿ’ ಖಾತೆಯಿಂದ ‘ಎ’ ಖಾತೆ ಮಾಡಿಕೊಡುತ್ತೇವೆ ಎಂದು ಲಕ್ಷಾಂತರ ರೂ. ವಸೂಲು ಮಾಡಲು ಮುಂದಾಗಿ, ಮತ್ತೊಂದು ಕಡೆ ಬೈಲಾ ವಿರುದ್ಧವಾಗಿರುವ ಕಟ್ಟಡಗಳಿಗೆ ‘ಎ’ ಖಾತೆ ಇಲ್ಲ, ‘ಬಿ’ ಖಾತೆ ಮಾತ್ರ ಗ್ಯಾರಂಟಿ ಎಂದು ಹೇಳಿರುವುದು ಹಿಂದೆ ತಪ್ಪು ಮಾಡಿದವರಿಗೆ ಶಿಕ್ಷೆ ಇಲ್ಲ, ಈಗ ತಪ್ಪು ಮಾಡಿದವರಿಗೆ ಮಾತ್ರ ಶಿಕ್ಷೆ ಎಂಬಂತಾಗಿದೆ ಎಂದು ಅವರು ಟೀಕಿಸಿದರು.
ಶುಲ್ಕಗಳಲ್ಲಿ ಅಸಮಂಜಸತೆ :
ಹಿಂದೆ ಎಚ್.ಡಿ. ದೇವೇಗೌಡರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ (1994-95), ಹೊಸದಾಗಿ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿದ ಪ್ರದೇಶಗಳ ಕಂದಾಯ ನಿವೇಶನಗಳು/ಕಟ್ಟಡಗಳಿಗೆ ಚದರ ಗಜಕ್ಕೆ 100 ರೂ. ಮತ್ತು ಹಳೆಯ ಪ್ರದೇಶಗಳಿಗೆ 50 ರೂ. ಶುಲ್ಕ ವಿಧಿಸಿ ಖಾತೆ ಮಾಡಿಕೊಡಲಾಗುತ್ತಿತ್ತು. ನಂತರ 2014ರ ಜುಲೈ 1 ರಂದು ರಾಜ್ಯ ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ, 2007ರಲ್ಲಿ ಬಿಬಿಎಂಪಿಗೆ ಹೊಸದಾಗಿ ಸೇರಿರುವ ಪ್ರದೇಶಗಳ ಕಂದಾಯ ನಿವೇಶನಗಳಿಗೆ ಚದರ ಮೀಟರ್ಗೆ 250 ರೂ. ಮತ್ತು ಹಳೆಯ 100 ವಾರ್ಡ್ಗಳ ಕಂದಾಯ ನಿವೇಶನಗಳು/ಕಟ್ಟಡಗಳಿಗೆ ಖಾತೆ ಮಾಡಿಕೊಡಲಾಗುತ್ತಿತ್ತು.
ಆದರೆ, ಈಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಸಿಂಗಲ್ ಪ್ಲಾಟ್ ಮಂಜೂರಾತಿಗೆ ಚದರ ಅಡಿಗೆ 250 ರಿಂದ 500 ರೂ. ವರೆಗೆ ಪಾವತಿಸಬೇಕಾಗಿದೆ ಎಂದು ತಿಳಿಸಿದೆ. 1200 ಚದರ ಅಡಿ ನಿವೇಶನಕ್ಕೆ 3 ಲಕ್ಷದಿಂದ 6 ಲಕ್ಷ ರೂ. ವರೆಗೆ ಪಾವತಿಸಬೇಕಾಗಿದೆ. ಇದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಭೂ ಪರಿವರ್ತನೆ ಆಗಿರುವ ಸ್ವತ್ತುಗಳಿಗೆ ಏಕ ನಿವೇಶನ ಮಂಜೂರಾತಿ ಪಡೆಯಲು ವಸತಿ ನಿವೇಶನಗಳಿಗೆ ಚದರ ಅಡಿಗೆ 24.60 ರೂ. ಮತ್ತು ವಾಣಿಜ್ಯ ನಿವೇಶನಗಳಿಗೆ ಚದರ ಅಡಿಗೆ 27.35 ರೂ. ಶುಲ್ಕಕ್ಕಿಂತ ಸುಮಾರು 10 ಪಟ್ಟು ಹೆಚ್ಚಾಗಿದೆ ಎಂದು ರೆಡ್ಡಿ ಹೋಲಿಕೆ ಮಾಡಿದರು.
ಇದು ಶ್ರೀಮಂತರ ನಿವೇಶನಗಳಿಗಿಂತ ಬಡವರ ನಿವೇಶನಗಳಿಗೆ 10 ಪಟ್ಟು ಜಾಸ್ತಿ ಶುಲ್ಕ ವಿಧಿಸಿದಂತಾಗಿದೆ. ಇದು ಬೆಲೆ ಏರಿಕೆ ಸರದಾರ ಸಿದ್ದರಾಮಯ್ಯನವರ ಸಾಮಾಜಿಕ ನ್ಯಾಯದ ಜನಪರ ಕಾಳಜಿ ಆಡಳಿತ ಎಂದು ವ್ಯಂಗ್ಯವಾಡಿದರು.
ಈ ಹೊಸ ಆದೇಶದಿಂದ ಬೆಂಗಳೂರು ನಗರದಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಕಟ್ಟಡಗಳಿಗೆ ಬೆಸ್ಕಾಂ/ಬಿಡಬ್ಲ್ಯೂಎಸ್ಎಸ್ಬಿ ಸಂಪರ್ಕ ಸಿಗುವುದಿಲ್ಲ ಎಂದು ರೆಡ್ಡಿ ಕಳವಳ ವ್ಯಕ್ತಪಡಿಸಿದರು. ಭಾರತ ದೇಶದ ಯಾವ ನಗರಗಳಲ್ಲೂ ಇಲ್ಲದ ಇಂತಹ ಆದೇಶಗಳನ್ನು ತಂದು ಬಡ-ಮಧ್ಯಮ ವರ್ಗದ ಜನರ ಶೋಷಣೆ ಮಾಡುತ್ತಿರುವ ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಜನರಿಗೆ ಅನುಕೂಲವಾಗುವಂತಹ ಆದೇಶಗಳನ್ನು ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದ್ದಾರೆ.






















