ನವದೆಹಲಿ, ಜು.28 www.bengaluruwire.com : ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಕಳೆದ ಎಂಟು ವರ್ಷಗಳಿಂದ ನಕಲಿ ರಾಯಭಾರ ಕಚೇರಿಯನ್ನು ನಡೆಸುತ್ತಿದ್ದ ಆರೋಪದ ಮೇಲೆ ಬಂಧಿತನಾಗಿರುವ ಹರ್ಷವರ್ಧನ್ ಜೈನ್ ವಿರುದ್ಧದ ತನಿಖೆಯು ಆಘಾತಕಾರಿ ಅಂಶಗಳನ್ನು ಬಹಿರಂಗಪಡಿಸಿದೆ.
ಸುಮಾರು ರೂ. 300 ಕೋಟಿ ಮೌಲ್ಯದ ಹಗರಣ, 10 ವರ್ಷಗಳಲ್ಲಿ 162 ವಿದೇಶಿ ಪ್ರವಾಸಗಳು ಮತ್ತು ಅನೇಕ ವಿದೇಶಿ ಬ್ಯಾಂಕ್ ಖಾತೆಗಳು ಇರುವುದಾಗಿ ಪೊಲೀಸರು ಶಂಕಿಸಿದ್ದಾರೆ. ಕಳೆದ ವಾರ ಗಾಜಿಯಾಬಾದ್ನಲ್ಲಿ ಬಾಡಿಗೆ ಮನೆಯಲ್ಲಿ ನಕಲಿ ರಾಯಭಾರ ಕಚೇರಿ ನಡೆಸುತ್ತಿದ್ದ ಜೈನ್ನನ್ನು ಬಂಧಿಸಲಾಯಿತು.
ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ (STF) ನಡೆಸಿದ ತನಿಖೆಯಲ್ಲಿ, ಜೈನ್ ಉದ್ಯೋಗ ಹಗರಣದಲ್ಲಿ ಭಾಗಿಯಾಗಿದ್ದಾನೆ ಮತ್ತು ಹವಾಲಾ ಮಾರ್ಗದ ಮೂಲಕ ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿದ್ದಾನೆ ಎಂದು ತಿಳಿದುಬಂದಿದೆ. ಗಾಜಿಯಾಬಾದ್ ಆವರಣದಲ್ಲಿ ನಡೆದ ದಾಳಿಯಲ್ಲಿ, ಪೊಲೀಸರು ನಕಲಿ ರಾಜತಾಂತ್ರಿಕ ಸಂಖ್ಯೆಯ ಫಲಕಗಳನ್ನು ಹೊಂದಿರುವ ನಾಲ್ಕು ಕಾರುಗಳು, ನಕಲಿ ದಾಖಲೆಗಳು ಮತ್ತು ಐಷಾರಾಮಿ ಕೈಗಡಿಯಾರಗಳ ಸಂಗ್ರಹವನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಜೈನ್ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆಯಲು ಕೇಳಲಿದ್ದಾರೆ.
ನಕಲಿ ಐಷಾರಾಮಿ ರಾಯಭಾರ ಕಚೇರಿ :

ಗಾಜಿಯಾಬಾದ್ನ ಐಷಾರಾಮಿ ಎರಡು ಅಂತಸ್ತಿನ ಕಟ್ಟಡದ ಹೊರಗೆ, “ಗ್ರ್ಯಾಂಡ್ ಡಚಿ ಆಫ್ ವೆಸ್ಟ್ಅರ್ಕಾಟಿಕಾ” ಮತ್ತು “ಎಚ್.ಇ. ಎಚ್.ವಿ. ಜೈನ್ ಗೌರವ ಕಾನ್ಸುಲ್” ಎಂಬ ನಾಮಫಲಕವಿತ್ತು. ಆವರಣದಲ್ಲಿ ಭಾರತ ಮತ್ತು ವೆಸ್ಟ್ಆರ್ಕ್ಟಿಕಾ ಧ್ವಜಗಳನ್ನು ಹಾರಿಸಲಾಗಿತ್ತು. ವೆಸ್ಟ್ಅರ್ಕಾಟಿಕಾ, ಅಂಟಾರ್ಟಿಕಾದಲ್ಲಿರುವ ಒಂದು ಮೈಕ್ರೊನೇಶನ್ (ಸೂಕ್ಷ್ಮ ರಾಷ್ಟ್ರ) ಆಗಿದ್ದು, ಇದನ್ನು ವಿಶ್ವದ ಯಾವುದೇ ಸಾರ್ವಭೌಮ ರಾಜ್ಯ ಗುರುತಿಸಿಲ್ಲ.

ತನಿಖಾಧಿಕಾರಿಗಳ ಪ್ರಕಾರ, ಜೈನ್ ಈ ಮುಖವಾಡವನ್ನು ನೆಟ್ವರ್ಕಿಂಗ್ಗಾಗಿ ಬಳಸುತ್ತಿದ್ದನು ಮತ್ತು ನಂತರ ಜನರನ್ನು ವಿದೇಶದಲ್ಲಿ ಉದ್ಯೋಗದ ಆಮಿಷವೊಡ್ಡಿ ವಂಚಿಸುತ್ತಿದ್ದನು. ಈ ನಕಲಿ ರಾಯಭಾರ ಕಚೇರಿ 2017 ರಿಂದ ಕಾರ್ಯನಿರ್ವಹಿಸುತ್ತಿತ್ತು ಎಂದು ತನಿಖೆ ಬಹಿರಂಗಪಡಿಸಿದೆ. ತನ್ನ ಈ ನಕಲಿ ಆಟವನ್ನು ಮುಂದುವರಿಸಲು ಜೈನ್ ‘ರಾಯಭಾರ ಕಚೇರಿ’ಯ ಹೊರಗೆ ಭಂಡಾರಗಳು (ಸಮುದಾಯ ಭೋಜನ) ಸೇರಿದಂತೆ ದತ್ತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದನು. ಆತ ಆರು ತಿಂಗಳ ಹಿಂದೆ ಮಾತ್ರ ಕಟ್ಟಡವನ್ನು ಬಾಡಿಗೆಗೆ ಪಡೆದಿದ್ದರೂ, ಸುಮಾರು ಎಂಟು ವರ್ಷಗಳಿಂದ ನಕಲಿ ರಾಯಭಾರ ಕಚೇರಿಯನ್ನು ನಡೆಸುತ್ತಿದ್ದನು.

ನಕಲಿ ರಾಯಭಾರ ಕಚೇರಿಯ ಮೇಲೆ ದಾಳಿ ನಡೆಸಿದಾಗ, ಪೊಲೀಸರಿಗೆ ಜೈನ್, ವಿವಾದಿತ “ದೇವಮಾನವ” ಚಂದ್ರಸ್ವಾಮಿ ಮತ್ತು ಸೌದಿ ಶಸ್ತ್ರಾಸ್ತ್ರ ವ್ಯಾಪಾರಿ ಅದ್ನಾನ್ ಖಶೋಗ್ಗಿ ಅವರೊಂದಿಗಿನ ಫೋಟೋಗಳು ದೊರೆತಿವೆ. ಸ್ವಯಂಘೋಷಿತ ದೇವಮಾನವ ಚಂದ್ರಸ್ವಾಮಿ 80 ಮತ್ತು 90 ರ ದಶಕಗಳಲ್ಲಿ ಪ್ರಭಾವಿಯಾಗಿ ಬೆಳೆದಿದ್ದನು. ಅಷ್ಟೇ ಅಲ್ಲದೆ, ಪಿ.ವಿ. ನರಸಿಂಹ ರಾವ್, ಚಂದ್ರಶೇಖರ್ ಮತ್ತು ವಿ.ಪಿ. ಸಿಂಗ್ – ಮೂವರು ಪ್ರಧಾನ ಮಂತ್ರಿಗಳ ಆಧ್ಯಾತ್ಮಿಕ ಸಲಹೆಗಾರ ಎಂದು ಪರಿಗಣಿಸಲ್ಪಟ್ಟಿದ್ದನು. 1996 ರಲ್ಲಿ ಹಣಕಾಸಿನ ಅಕ್ರಮಗಳಿಗಾಗಿ ಆತನನ್ನು ಬಂಧಿಸಲಾಯಿತು. ಆತನ ಆಶ್ರಮದ ಮೇಲೆ ದಾಳಿ ನಡೆಸಿದಾಗ ಖಶೋಗ್ಗಿ ಜೊತೆಗಿನ ವ್ಯವಹಾರಗಳು ಸಹ ಬಹಿರಂಗಗೊಂಡಿದ್ದವು. ಚಂದ್ರಸ್ವಾಮಿ ವಿರುದ್ಧ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಗೆ ಹಣಕಾಸು ಒದಗಿಸಿದ ಆರೋಪವೂ ಇತ್ತು.
ಇದೊಂದು ಬೃಹತ್ ಹಗರಣ :
ಚಂದ್ರಸ್ವಾಮಿಯೇ ಜೈನ್ನನ್ನು ಖಶೋಗ್ಗಿ ಮತ್ತು ವಂಚಕ ಅಹ್ಸಾನ್ ಅಲಿ ಸಯ್ಯದ್ಗೆ ಪರಿಚಯಿಸಿದ್ದನು ಎಂದು ಉತ್ತರ ಪ್ರದೇಶದ ಎಸ್ಟಿಎಫ್ ಕಂಡುಹಿಡಿದಿದೆ. ಸಯ್ಯದ್, ಜೈನ್ನೊಂದಿಗೆ ಸೇರಿ 25 ಶೆಲ್ ಕಂಪನಿಗಳನ್ನು ತೆರೆದು ಅಕ್ರಮ ಹಣ ವರ್ಗಾವಣೆಗೆ ಬಳಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಹೈದರಾಬಾದ್ನಲ್ಲಿ ಜನಿಸಿದ ಸಯ್ಯದ್ ನಂತರ ಟರ್ಕಿಶ್ ಪ್ರಜೆಯಾದನು.
ಸಯ್ಯದ್ ಸ್ವಿಟ್ಜರ್ಲೆಂಡ್ನಲ್ಲಿ ವೆಸ್ಟರ್ನ್ ಅಡ್ವೈಸರಿ ಗ್ರೂಪ್ ಎಂಬ ಕಂಪನಿಯನ್ನು ನಡೆಸುತ್ತಿದ್ದನು. ಇದು ಕಂಪನಿಗಳೊಂದಿಗೆ ಸಂಪರ್ಕ ಸಾಧಿಸಿ, ಬ್ರೋಕರೇಜ್ಗೆ ಬದಲಾಗಿ ಸಾಲವನ್ನು ಪಡೆಯಲು ಸಹಾಯ ಮಾಡುವ ಭರವಸೆ ನೀಡಿತ್ತು. ಈ ಕಂಪನಿಯು ಸುಮಾರು 25 ಮಿಲಿಯನ್ ಪೌಂಡ್ಗಳ – ಸುಮಾರು ರೂ. 300 ಕೋಟಿ – ಬ್ರೋಕರೇಜ್ ಸಂಗ್ರಹಿಸಿ, ಸ್ವಿಸ್ ಪ್ರದೇಶದಿಂದ ಪರಾರಿಯಾಗಿದೆ ಎಂದು ಆರೋಪಿಸಲಾಗಿದೆ. ಅಹ್ಸಾನ್ನನ್ನು 2022 ರಲ್ಲಿ ಲಂಡನ್ನಲ್ಲಿ ಬಂಧಿಸಲಾಯಿತು. ಈ ಬೃಹತ್ ಹಗರಣದಲ್ಲಿ ಜೈನ್ನ ಪಾತ್ರ ಇರುವ ಬಗ್ಗೆ ಪೊಲೀಸರು ಈಗ ತನಿಖೆ ಮಾಡುತ್ತಿದ್ದಾರೆ.
ಜೈನ್ನ ಬಂಧನದ ನಂತರ, ಆತ ಗೌರವ ಕಾನ್ಸುಲ್ ಆಗಿದ್ದ ವೆಸ್ಟ್ಅರ್ಕಾಟಿಕಾ ಮೈಕ್ರೊನೇಶನ್ (ಪುಟ್ಟದೇಶ) ತನ್ನನ್ನು ತಾನು ದೂರ ಮಾಡಿಕೊಂಡಿದೆ. “2016 ರಲ್ಲಿ, ಎಚ್.ವಿ. ಜೈನ್ ವೆಸ್ಟ್ಅರ್ಕಾಟಿಕಾಕ್ಕೆ ಉದಾರವಾದ ದೇಣಿಗೆ ನೀಡಿದರು ಮತ್ತು ನಂತರ ನಮ್ಮ ಪರಿಸರ ಮತ್ತು ದತ್ತಿ ಮಿಷನ್ ಅನ್ನು ತಮ್ಮ ತಾಯ್ನಾಡಿನಲ್ಲಿ ಮುನ್ನಡೆಸುವ ನಮ್ಮ ಅಂತರರಾಷ್ಟ್ರೀಯ ಸ್ವಯಂಸೇವಕರ ತಂಡಕ್ಕೆ ಸೇರಲು ಅವರನ್ನು ಆಹ್ವಾನಿಸಲಾಯಿತು. ಅವರ ಅಧಿಕೃತ ಶೀರ್ಷಿಕೆ ‘ಭಾರತದ ಗೌರವ ಕಾನ್ಸುಲ್’ ಆಗಿತ್ತು. ಅವರಿಗೆ ಎಂದಿಗೂ ‘ರಾಯಭಾರಿ’ ಸ್ಥಾನ ಅಥವಾ ಅಧಿಕಾರವನ್ನು ನೀಡಲಾಗಿಲ್ಲ” ಎಂದು ವೆಸ್ಟ್ಅರ್ಕಾಟಿಕಾ ಹೇಳಿಕೆಯಲ್ಲಿ ತಿಳಿಸಿದೆ.
“ವಂಚನೆ ಮತ್ತು ಇತರ ಅಪರಾಧಗಳಿಗಾಗಿ ಅವರ ಇತ್ತೀಚಿನ ಬಂಧನದ ಸಮಯದಲ್ಲಿ, ಜೈನ್ ವೆಸ್ಟ್ಅರ್ಕಾಟಿಕಾದ ಮುದ್ರೆ ಹೊಂದಿರುವ ರಾಜತಾಂತ್ರಿಕ ಸಂಖ್ಯೆ ಫಲಕಗಳು, ಪಾಸ್ಪೋರ್ಟ್ಗಳು ಮತ್ತು ಇತರ ವಸ್ತುಗಳನ್ನು ಹೊಂದಿದ್ದರು. ಗೌರವ ಕಾನ್ಸುಲ್ ಆಗಿ, ಈ ವಸ್ತುಗಳನ್ನು ರಚಿಸಲು ಅವರಿಗೆ ಅಧಿಕಾರವಿರಲಿಲ್ಲ. ವೆಸ್ಟ್ಅರ್ಕಾಟಿಕಾ ಸ್ವತಃ, ಸಂಖ್ಯೆ ಫಲಕಗಳು ಅಥವಾ ಪಾಸ್ಪೋರ್ಟ್ಗಳನ್ನು ಬಳಸುವುದಿಲ್ಲ ಮತ್ತು ನಮ್ಮ ಪ್ರತಿನಿಧಿಗಳಿಗೆ ಹಾಗೆ ಮಾಡಲು ನಾವು ಎಂದಿಗೂ ಅನುಮತಿ ನೀಡಿಲ್ಲ ಅಥವಾ ಪ್ರೋತ್ಸಾಹಿಸಿಲ್ಲ. ತಮ್ಮ ಮನೆಯನ್ನು ‘ರಾಯಭಾರ ಕಚೇರಿ’ ಎಂದು ಕರೆಯುವ ಮೂಲಕ ಜೈನ್ ವೆಸ್ಟ್ಆರ್ಕ್ಟಿಕಾದ ಪ್ರತಿನಿಧಿಗಳ ಶಿಷ್ಟಾಚಾರವನ್ನು ಉಲ್ಲಂಘಿಸಿದ್ದಾರೆ” ಎಂದು ಅದು ಹೇಳಿದೆ.
ವೆಸ್ಟ್ಆರ್ಕ್ಟಿಕಾ, ಜೈನ್ನನ್ನು “ನಮ್ಮ ಸಂಸ್ಥೆಯ ಪ್ರತಿನಿಧಿಯಾಗಿ ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಲಾಗಿದೆ” ಎಂದು ತಿಳಿಸಿದೆ. “ನಮ್ಮ ಕಾರ್ಯಕಾರಿ ತಂಡವು ಪ್ರಸ್ತುತ ಈ ವಿಷಯವನ್ನು ಮತ್ತಷ್ಟು ಪರಿಶೀಲಿಸುತ್ತಿದೆ, ಮತ್ತು ಜೈನ್ನಿಂದ ಬಲಿಪಶುವಾದ ಯಾವುದೇ ವ್ಯಕ್ತಿಗಳ ಬಗ್ಗೆ ನಮಗೆ ವಿಷಾದವಿದೆ. ನಾವು ಭಾರತದ ಕಾನೂನು ಅಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತೇವೆ” ಎಂದು ಅದು ಹೇಳಿದೆ.
ಏನಿದು ವೆಸ್ಟ್ಆರ್ಕ್ಟಿಕಾ? :
ಅಮೆರಿಕ ನೌಕಾಪಡೆಯ ಅಧಿಕಾರಿ ಟ್ರಾವಿಸ್ ಮೆಕ್ಹೆನ್ರಿ 2001 ರಲ್ಲಿ ವೆಸ್ಟ್ಅರ್ಕಾಟಿಕಾ ಮೈಕ್ರೊನೇಶನ್ ಅನ್ನು ಸ್ಥಾಪಿಸಿ, ತನ್ನನ್ನು ತಾನು ಅದರ ಗ್ರ್ಯಾಂಡ್ ಡ್ಯೂಕ್ ಎಂದು ಘೋಷಿಸಿಕೊಂಡನು. ಅಂಟಾರ್ಕ್ಟಿಕಾದಲ್ಲಿರುವ ವೆಸ್ಟ್ಅರ್ಕಾಟಿಕಾ 6,20,000 ಚದರ ಮೈಲುಗಳ ಪ್ರದೇಶವನ್ನು ಹೊಂದಿದೆ. ಮೆಕ್ಹೆನ್ರಿ ಅಂಟಾರ್ಕ್ಟಿಕ್ ಒಪ್ಪಂದ ವ್ಯವಸ್ಥೆಯ ಲೋಪದೋಷವನ್ನು ಬಳಸಿಕೊಂಡು ತನ್ನನ್ನು ತಾನು ಆಡಳಿತಗಾರ ಎಂದು ನೇಮಿಸಿಕೊಂಡನು. ಈ ಒಪ್ಪಂದವು ದೇಶಗಳು ಅಂಟಾರ್ಕ್ಟಿಕಾದ ಭಾಗಗಳಿಗೆ ಹಕ್ಕು ಸಾಧಿಸುವುದನ್ನು ನಿಷೇಧಿಸಿದರೂ, ಅದು ಖಾಸಗಿ ವ್ಯಕ್ತಿಗಳ ಬಗ್ಗೆ ಏನನ್ನೂ ಹೇಳುವುದಿಲ್ಲ.
ವೆಸ್ಟ್ಅರ್ಕಾಟಿಕಾ ತನ್ನಲ್ಲಿ 2,356 ನಾಗರಿಕರಿದ್ದಾರೆ ಎಂದು ಹೇಳಿಕೊಂಡಿದೆ. ಅವರಲ್ಲಿ ಯಾರೂ ಅಲ್ಲಿ ವಾಸಿಸುವುದಿಲ್ಲ. ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ನೆಲೆಗೊಂಡಿರುವ ಗ್ರ್ಯಾಂಡ್ ಡಚಿ ಆಫ್ ವೆಸ್ಟ್ಅರ್ಕಾಟಿಕಾ ಹವಾಮಾನ ಬದಲಾವಣೆ ಮತ್ತು ಅಂಟಾರ್ಟಿಕಾ ಬಗ್ಗೆ ಅರಿವು ಮೂಡಿಸುವ ಲಾಭರಹಿತ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ಇದು ತನ್ನದೇ ಆದ ಧ್ವಜ, ಕರೆನ್ಸಿಯನ್ನು ಹೊಂದಿದೆ ಮತ್ತು ಯಾವುದೇ ಸರ್ಕಾರ ಗುರುತಿಸದ ಶೀರ್ಷಿಕೆಗಳನ್ನು ಸಹ ನೀಡುತ್ತದೆ.
ಒಟ್ಟಾರೆ ಎಂಟು ವರ್ಷಗಳಿಂದ ನಕಲಿ ರಾಯಭಾರ ಕಚೇರಿ ತೆರೆದು ಉದ್ಯೋಗ, ಹವಾಲಾ ಹಗರಣದಲ್ಲಿ ತೊಡಗಿರುವ ಆರೋಪ ಎದುರಿಸುತ್ತಿರುವ ಹರ್ಷವರ್ಧನ್ ಜೈನ್ ನಡೆಸಿರಬುದಾದ ಮತ್ತಷ್ಟು ಮೋಸ, ವಂಚನೆಯ ಬಗ್ಗೆ ತನಿಖೆ ಬಳಿಕ ಮತ್ತಷ್ಟು ಸಂಗತಿ ಬೆಳಕಿಗೆ ಬರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.






















