- ಸಾಕ್ಷ್ಯಾಚಿತ್ರ ವಿಶ್ಲೇಷಣೆ : ವ್ಯೋಮಕೇಶ್.ಎಂ, ಹಿರಿಯ ಪತ್ರಕರ್ತರು
ಪಶ್ಚಿಮ ಘಟ್ಟಗಳ ಮಡಿಲಲ್ಲಿ ಅರಳಿ ನಿಂತಿರುವ ನೀಲಿ ಬೆಟ್ಟಗಳು, ಅಂದರೆ ನೀಲಗಿರಿ, ಭೌಗೋಳಿಕ ಗಡಿಗಳನ್ನು ಮೀರಿದ ಒಂದು ಅದ್ಭುತ ಲೋಕ. ತಮಿಳುನಾಡು, ಕರ್ನಾಟಕ, ಮತ್ತು ಕೇರಳ ರಾಜ್ಯಗಳ ತ್ರಿಕೋನದಲ್ಲಿ, ಪಶ್ಚಿಮ ಮತ್ತು ಪೂರ್ವ ಘಟ್ಟಗಳನ್ನು ಸಮನ್ವಯಗೊಳಿಸುವ ಈ ಪರ್ವತ ಶ್ರೇಣಿಯ ಅನಾವರಣವು “Nilgiris: A Shared Wilderness” ಎಂಬ ಸಾಕ್ಷ್ಯಚಿತ್ರದ ಮೂಲಕ ಈಗ ನಿಮ್ಮೆದುರಿದೆ. ಕನ್ನಡಿಗ ನಿರ್ದೇಶಕ ಸಂದೇಶ್ ಕಡೂರ್ ಅವರ ಕಲ್ಪನೆಯಲ್ಲಿ ಅರಳಿದ ಈ ದೃಶ್ಯಕಾವ್ಯವು ಬೆಂಗಳೂರು ಸೇರಿದಂತೆ ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಮನ ಸೆಳೆಯುತ್ತಿದೆ.
ನೀಲಗಿರಿ: ಹೆಸರಿನ ಹಿಂದಿನ ಸೌಂದರ್ಯ ಮತ್ತು ತತ್ವ :
‘ನೀಲಗಿರಿ’ ಅಥವಾ ‘ನೀಲಿ ಬೆಟ್ಟಗಳು’ ಎಂಬ ಹೆಸರು, ಇಲ್ಲಿ ವ್ಯಾಪಕವಾಗಿ ಕಂಡುಬರುವ ನೀಲಿಬಣ್ಣದ ಕುರಿಂಜಿ ಹೂಗಳಿಂದ ಬಂದಿದೆ ಎಂದು ಹೇಳಲಾಗುತ್ತದೆ. ಈ ಹೂಗಳು ತಮ್ಮ ಅನನ್ಯ ಸೌಂದರ್ಯದಿಂದ ಬೆಟ್ಟಗಳಿಗೆ ವಿಶಿಷ್ಟ ನೀಲಿ ಛಾಯೆಯನ್ನು ನೀಡುತ್ತವೆ. ಆದರೆ, “Nilgiris: A Shared Wilderness” ಎಂಬ ಶೀರ್ಷಿಕೆ ಕೇವಲ ಭೌಗೋಳಿಕ ಅಥವಾ ಸಸ್ಯಶಾಸ್ತ್ರೀಯ ಅರ್ಥಗಳನ್ನು ಮೀರಿದೆ.

ಸುಮಾರು ಎರಡು ಶತಮಾನಗಳ ಹಿಂದೆ ತೋಡ ಮತ್ತು ಇರುಳಿಗ ಬುಡಕಟ್ಟು ಜನಾಂಗದವರ ನೆಲೆಯಾಗಿದ್ದ ಈ ಪ್ರದೇಶ, ಇಂದು ನವನಾಗರಿಕತೆಯ ಹಿಡಿತಕ್ಕೆ ಸಿಲುಕಿ ತನ್ನ ‘ವನ್ಯತೆ’ಯ ಬಹುಭಾಗವನ್ನು ಕಳೆದುಕೊಂಡಿದೆ. ಆದರೂ, ಉಳಿದಿರುವ ಅಲ್ಪ ಪ್ರದೇಶವನ್ನು ಸಸ್ಯ, ಪ್ರಾಣಿ ಮತ್ತು ಪಕ್ಷಿ ಸಂಕುಲಗಳು ಮನುಷ್ಯರೊಂದಿಗೆ ‘ಹಂಚಿಕೊಂಡು’ ಬದುಕುತ್ತಿವೆ. ಈ ಹಂಚಿಕೆ, ಸಹಬಾಳ್ವೆಯ ತತ್ವವನ್ನು ಸಾಕ್ಷ್ಯಚಿತ್ರ ಪರಿಣಾಮಕಾರಿಯಾಗಿ ಬಿಂಬಿಸುತ್ತದೆ.


ಮಾನವ-ವನ್ಯಜೀವಿ ಸಂಘರ್ಷದ ಮೌನ ವೇದನೆ :
ಕಾಡುಗಳ ನಾಶ, ಅತಿಯಾದ ವ್ಯವಸಾಯ ಮತ್ತು ಅನಿಯಂತ್ರಿತ ನಗರೀಕರಣದಿಂದಾಗಿ ವನ್ಯಜೀವಿಗಳ ನೆಲೆದಾಣಗಳು ತೀವ್ರವಾಗಿ ಕುಗ್ಗುತ್ತಿವೆ. ಈ ಸಂದರ್ಭದಲ್ಲಿ, ಪ್ರಾಣಿ-ಪಕ್ಷಿ ಸಂಕುಲಗಳು ಮಾನವ ನಿರ್ಮಿತ ವ್ಯವಸ್ಥೆಯೊಂದಿಗೆ ಹೊಂದಿಕೊಳ್ಳುವ ಅನಿವಾರ್ಯತೆಗೆ ಸಿಲುಕಿವೆ. ಮಾನವರು, ಅವರ ವಾಹನಗಳು, ಮತ್ತು ತ್ಯಾಜ್ಯದ ರಾಶಿಗಳ ಜೊತೆಗೇ ಬದುಕಲು ಪ್ರಾಣಿಗಳು ಕಲಿತುಕೊಂಡಿವೆ. ಚಹಾ ಮತ್ತು ಕಾಫಿ ತೋಟಗಳಲ್ಲಿ ಹಗಲಿನಲ್ಲಿ ಮಾನವರ ಸಂಚಾರವಿದ್ದರೆ, ಇರುಳಿನಲ್ಲಿ ಪ್ರಾಣಿಗಳು ಆಹಾರ ಹುಡುಕುತ್ತವೆ. ಮಾನವ ನಿರ್ಮಿತ ಆಸ್ತಿಗಳಿಗೆ ಹಾನಿಯಾಗದಂತೆ ತಮ್ಮ ಆಹಾರವನ್ನು ಕಂಡುಕೊಳ್ಳುವ ಪ್ರಾಣಿಗಳ ಸೂಕ್ಷ್ಮ ಸಂವೇದನೆ, ಮನುಷ್ಯನ ಸ್ವಾರ್ಥ ಗುಣಕ್ಕೆ ಅವುಗಳ ಬದುಕಿನ ಮೂಲಕ ವ್ಯಂಗ್ಯವಾದ ಪ್ರತಿಕ್ರಿಯೆ ನೀಡುತ್ತದೆ. ಈ ಸಂಘರ್ಷಗಳು ಮತ್ತು ಅಸ್ತಿತ್ವ ಉಳಿಸಿಕೊಳ್ಳಲು ನಡೆಯುವ ಹೋರಾಟವನ್ನು ಸಾಕ್ಷ್ಯಚಿತ್ರವು ಮನಮುಟ್ಟುವಂತೆ ಚಿತ್ರಿಸಿದೆ.

ವಿಸ್ಮಯಕಾರಿಯಾದ ನೀಲಗಿರಿಯ ಜೀವವೈವಿಧ್ಯ :
ಎಲ್ಲಾ ಸವಾಲುಗಳ ನಡುವೆಯೂ, ನೀಲಗಿರಿ ಬೆಟ್ಟಗಳು ಅದ್ಭುತ ಜೀವವೈವಿಧ್ಯವನ್ನು ಉಳಿಸಿಕೊಂಡಿರುವುದು ಪರಿಸರ ಪ್ರೇಮಿಗಳಿಗೆ ವಿಸ್ಮಯ ಮೂಡಿಸುತ್ತದೆ. 2637 ಮೀಟರ್ ಎತ್ತರದ ದೊಡ್ಡ ಬೆಟ್ಟ ಮತ್ತು ಸುತ್ತಲಿನ ಶೋಲಾ ಕಾಡುಗಳಲ್ಲಿ ಹುಲಿಗಳು, ಆನೆಗಳು, ಚಿರತೆಗಳು, ಕರಡಿಗಳು, ಕತ್ತೆಕಿರುಬಗಳು, ಕಾಡುನಾಯಿಗಳು, ಕಾಡುಹಂದಿ, ಕಾಡೆಮ್ಮೆಗಳು, ಜಿಂಕೆ-ಸಾರಂಗಳು ಕಾಣಸಿಗುತ್ತವೆ. ಮೋಯಾರ್ ನದಿಯ ತಟದಲ್ಲಿ ಮಂಗಗಳು, ನವಿಲು, ಮಂಗಟ್ಟೆ ಹಕ್ಕಿ, ಹದ್ದುಗಳು, ಗಿಣಿಗಳು, ಮೈನಾ ಮುಂತಾದ ಪಕ್ಷಿಗಳು ವಿಹರಿಸುತ್ತವೆ. ಅಪರೂಪದ ಕಪ್ಪೆ ಪ್ರಭೇದಗಳು, ಮತ್ತು ಶಿಲಾಯುಗದ ಮಾನವರು ರಚಿಸಿರುವ ರೇಖಾಚಿತ್ರಗಳು ಇಲ್ಲಿನ ಐತಿಹಾಸಿಕ ಮತ್ತು ಜೈವಿಕ ಮಹತ್ವವನ್ನು ಎತ್ತಿ ತೋರಿಸುತ್ತವೆ. ಯುನೆಸ್ಕೋ ನೀಲಗಿರಿ ಪರ್ವತ ಶ್ರೇಣಿಯನ್ನು ಭಾರತದ ಮೊದಲ ಜೀವಮಂಡಲ ಮೀಸಲು ಪ್ರದೇಶ (Biosphere Reserve) ಎಂದು ಮಾನ್ಯ ಮಾಡಿದೆ.
ಸಂದೇಶ್ ಕಡೂರ್ ಅವರ ದೃಶ್ಯ ವೈಭವ :

ಅತ್ಯುತ್ತಮ ಛಾಯಾಗ್ರಹಣದಿಂದ ಕೂಡಿದ 75 ನಿಮಿಷಗಳ ಈ ಸಾಕ್ಷ್ಯಚಿತ್ರ, ತನ್ನ ಸಂದೇಶವನ್ನು ಸ್ಪಷ್ಟವಾಗಿ ಪ್ರಸ್ತುತಪಡಿಸುವಲ್ಲಿ ಯಶಸ್ವಿಯಾಗಿದೆ. ಸಂದೇಶ್ ಕಡೂರ್ ಮತ್ತು ನಕುಲ್ ರಾಜ್ ಅವರ ಅದ್ಭುತ ಕ್ಯಾಮರಾ ವರ್ಕ್, ನೀಲ್ ಅಧಿಕಾರಿ ಮತ್ತು ಸ್ಯಾಮ್ ಮಿಲ್ಸ್ ಅವರ ಮನಮುಟ್ಟುವ ಸಂಗೀತ, ಮತ್ತು ಸುಶೀಲಾ ರಾಮನ್ ಅವರ ಆಕರ್ಷಕ ನಿರೂಪಣಾ ಧ್ವನಿ ಸಾಕ್ಷ್ಯಚಿತ್ರಕ್ಕೆ ಜೀವ ತುಂಬಿವೆ. ಸಾಕ್ಷ್ಯಚಿತ್ರವು ಪರಿಸರ ಪ್ರೀತಿಯನ್ನು ಹೆಚ್ಚಿಸುವುದಲ್ಲದೆ, ಪರಿಸರ ಸಂರಕ್ಷಣೆಗಾಗಿ ಪ್ರತಿಯೊಬ್ಬರೂ ದನಿ ಎತ್ತುವಂತೆ ಜಾಗೃತಿ ಮೂಡಿಸುತ್ತದೆ. ಅಲ್ಲದೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪರಿಸರ ಸಂರಕ್ಷಣೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಚಿಂತಿಸುವಂತೆ ಎಚ್ಚರಿಸುತ್ತದೆ.
ಜುಲೈ 18 ರಂದು ಮಳೆಗಾಲದ ಹಸಿರು ಸಿರಿಯಿಂದ ಕಂಗೊಳಿಸುವ ಈ ಸಂದರ್ಭದಲ್ಲಿ, ನೀಲಗಿರಿ ಕಾಡಿನ ಕುರಿತಂತೆ ಬಿಡುಗಡೆಗೊಂಡ “Nilgiris: A Shared Wilderness” ಕೇವಲ ಒಂದು ಸಾಕ್ಷ್ಯಚಿತ್ರವಲ್ಲ, ಬದಲಾಗಿ ಮನುಕುಲ ಮತ್ತು ಪ್ರಕೃತಿಯ ನಡುವಿನ ಸೂಕ್ಷ್ಮ ಸಂಬಂಧವನ್ನು ಎತ್ತಿಹಿಡಿಯುವ ಒಂದು ಮಹತ್ವದ ಹೆಜ್ಜೆ. ಇದು ಪ್ರತಿಯೊಬ್ಬರೂ ನೋಡಲೇಬೇಕಾದ ದೃಶ್ಯಕಾವ್ಯ.
“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್, ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.






















