ಬೆಂಗಳೂರು, ಜು.17 www.bengaluruwire.com : ಡಿಜಿಟಲ್ ಪಾವತಿ ಗೇಟ್ವೇಗಳ ಮೂಲಕ ವಹಿವಾಟು ನಡೆಸುವ ವರ್ತಕರಲ್ಲಿ ಹಲವು ಗೊಂದಲಗಳಿಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ, ಇಲಾಖೆಯು ಪೂರಕ ಮಾಹಿತಿ ನೀಡುವ ಮೂಲಕ ಈ ಗೊಂದಲಗಳಿಗೆ ತೆರೆ ಎಳೆದಿದೆ. ವರ್ತಕರು ಆತಂಕಪಡದೆ, ತೆರಿಗೆ ನಿಯಮಗಳನ್ನು ಅರ್ಥಮಾಡಿಕೊಂಡು ಸಹಕರಿಸುವಂತೆ ಇಲಾಖೆ ಮನವಿ ಮಾಡಿದೆ.
ಜಿಎಸ್ಟಿ ನೋಂದಣಿ ನಿಯಮಗಳು ಏನು ಹೇಳುತ್ತವೆ? :
ಸರಕು ಮತ್ತು ಸೇವಾ ತೆರಿಗೆ ಕಾಯ್ದೆ 2017ರ ಪ್ರಕರಣ 22ರ ಅನ್ವಯ, ಸರಕುಗಳ ಪೂರೈಕೆದಾರರ ಒಟ್ಟು ವಹಿವಾಟು ಒಂದು ಹಣಕಾಸು ವರ್ಷದಲ್ಲಿ ನಗದು, ಯುಪಿಐ, ಪಿಓಎಸ್ ಮೆಷಿನ್, ಬ್ಯಾಂಕ್ ಖಾತೆ ಅಥವಾ ಇನ್ನಾವುದೇ ವಿಧಾನಗಳಿಂದ ₹40 ಲಕ್ಷಗಳನ್ನು ಮೀರಿದರೆ ಜಿಎಸ್ಟಿ ನೋಂದಣಿ ಕಡ್ಡಾಯ. ಅದೇ ರೀತಿ, ಸೇವೆಗಳ ಪೂರೈಕೆದಾರರ ವಹಿವಾಟು ₹20 ಲಕ್ಷಗಳನ್ನು ಮೀರಿದರೆ ನೋಂದಣಿ ಪಡೆಯುವುದು ಅನಿವಾರ್ಯ. ಈ ಒಟ್ಟು ವಹಿವಾಟಿನಲ್ಲಿ ತೆರಿಗೆ ವಿಧಿಸಬಹುದಾದ (Taxable) ಹಾಗೂ ತೆರಿಗೆ ವಿನಾಯಿತಿ ಪಡೆದ (Exempted) ಸರಕು ಮತ್ತು ಸೇವೆಗಳು ಎರಡೂ ಸೇರಿರುತ್ತವೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಜಿಎಸ್ಟಿ ಅಡಿಯಲ್ಲಿ ಸಾಮಾನ್ಯ (Regular) ನೋಂದಣಿ ಪಡೆದರೆ, ತೆರಿಗೆ ಬಾಧ್ಯತೆಯು ಕೇವಲ ತೆರಿಗೆ ವಿಧಿಸಬಹುದಾದ ಸರಕು ಮತ್ತು ಸೇವೆಗಳಿಗೆ ಮಾತ್ರ ಅನ್ವಯಿಸುತ್ತದೆ. ನೋಂದಾಯಿತ ವರ್ತಕರು ತಾವು ಖರೀದಿಸಿದ ವಸ್ತುಗಳ ಮೇಲೆ ಪಾವತಿಸಿದ ಇನ್ಪುಟ್ ಟ್ಯಾಕ್ಸ್ (Input Tax) ಅನ್ನು ಮಾರಾಟದ ಮೇಲೆ ಪಾವತಿಸಬೇಕಾದ ತೆರಿಗೆಗೆ ಹೊಂದಾಣಿಕೆ ಮಾಡಿಕೊಳ್ಳಬಹುದು. ಇದರಿಂದ ಪಾವತಿಸಬೇಕಾದ ನಿವ್ವಳ ತೆರಿಗೆ ಮೊತ್ತವು ಕಡಿಮೆ ಇರುತ್ತದೆ ಎಂದು ಇಲಾಖೆ ತಿಳಿಸಿದೆ.

ರಾಜಿ ತೆರಿಗೆ ಪದ್ಧತಿ – ಒಂದು ಉತ್ತಮ ಆಯ್ಕೆ :
ತಮ್ಮ ವಾರ್ಷಿಕ ವಹಿವಾಟು ₹1.50 ಕೋಟಿಗಿಂತ ಕಡಿಮೆ ಇರುವ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆಯು ಒಂದು ಸರಳ ಆಯ್ಕೆಯನ್ನು ನೀಡಿದೆ: ರಾಜಿ ತೆರಿಗೆ ಪದ್ಧತಿ (Composition Tax Scheme). ಈ ಪದ್ಧತಿಯನ್ನು ಆಯ್ಕೆ ಮಾಡಿಕೊಂಡರೆ, ವರ್ತಕರು ತಮ್ಮ ವಹಿವಾಟಿನ ಮೇಲೆ ಕೇವಲ ಶೇ. 0.5 SGST ಮತ್ತು ಶೇ. 0.5 CGST ಅಂದರೆ ಒಟ್ಟಾರೆ ಶೇ. 1ರಷ್ಟು ತೆರಿಗೆಯನ್ನು ಪಾವತಿಸಬಹುದು. ಆದರೆ, ನೋಂದಣಿ ಪಡೆಯದೆ ನಡೆಸುವ ವಹಿವಾಟಿಗೆ ಈ ರಾಜಿ ತೆರಿಗೆ ಪದ್ಧತಿ ಅನ್ವಯಿಸುವುದಿಲ್ಲ ಎಂಬುದನ್ನು ಇಲಾಖೆ ಎಚ್ಚರಿಸಿದೆ.
ಗೊಂದಲ ಬೇಡ, ಸಹಕರಿಸಿ :
ನೋಟಿಸ್ ಬಂದಿರುವ ವರ್ತಕರು ಯಾವುದೇ ಗೊಂದಲಕ್ಕೆ ಒಳಗಾಗದೆ, ಸಂಬಂಧಪಟ್ಟ ಕಚೇರಿಗೆ ತೆರಳಿ ಸೂಕ್ತ ದಾಖಲೆಗಳೊಂದಿಗೆ ವಿವರಣೆ ನೀಡಬೇಕು. ಅಧಿಕಾರಿಗಳು ಈ ದಾಖಲೆಗಳನ್ನು ಪರಿಶೀಲಿಸಿ, ಜಿಎಸ್ಟಿ ನಿಯಮಗಳು ಮತ್ತು ಅದಕ್ಕೆ ಲಭ್ಯವಿರುವ ಪರಿಹಾರಗಳ ಬಗ್ಗೆ ಮಾರ್ಗದರ್ಶನ ನೀಡಲಿದ್ದಾರೆ. ತೆರಿಗೆ ವಿನಾಯಿತಿ ಇರುವ ಸರಕು ಮತ್ತು ಸೇವೆಗಳನ್ನು ಹೊರತುಪಡಿಸಿ, ತೆರಿಗೆದಾಯಕ ವಹಿವಾಟಿಗೆ ಮಾತ್ರ ಅನ್ವಯಿಸುವ ದರಗಳನ್ವಯ ತೆರಿಗೆಯನ್ನು ವಿಧಿಸಲಾಗುತ್ತದೆ ಎಂದು ಇಲಾಖೆ ಭರವಸೆ ನೀಡಿದೆ.
ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ವರ್ತಕರಲ್ಲಿ ಸೂಕ್ತ ಮಾರ್ಗದರ್ಶನ, ಸಹಕಾರ ಹಾಗೂ ಅರಿವು ಮೂಡಿಸಲು ಸೂಚಿಸಲಾಗಿದೆ. ಅಲ್ಲದೆ, ಹೊಸದಾಗಿ ನೀಡಲಾಗುವ ನೋಂದಣಿಯು ತೆರಿಗೆದಾರರಿಗೆ ಯಾವುದೇ ತೊಂದರೆಯಾಗದಂತೆ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ.
ಯುಪಿಐ ನಿಲ್ಲಿಸಿದರೆ ತೆರಿಗೆ ತಪ್ಪದು :
ಇಲಾಖೆಯು ನೋಟಿಸು ನೀಡಿದ ಬೆನ್ನಲ್ಲೇ ಕೆಲವು ವರ್ತಕರು ಯುಪಿಐ ಮೂಲಕ ಹಣ ಪಡೆಯುವುದನ್ನು ನಿಲ್ಲಿಸಿ, ಗ್ರಾಹಕರಿಂದ ನಗದು ರೂಪದಲ್ಲಿ ಹಣ ಸ್ವೀಕರಿಸುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ವರ್ತಕರು ತಾವು ಮಾಡಿದ ವಹಿವಾಟಿನ ಪ್ರತಿಫಲವನ್ನು ಯಾವುದೇ ರೂಪದಲ್ಲಿ ಪಡೆದಿದ್ದರೂ ಜಿಎಸ್ಟಿ ತೆರಿಗೆ ಅನ್ವಯವಾಗುತ್ತದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಯುಪಿಐ ಕೇವಲ ಒಂದು ಪಾವತಿ ಮಾರ್ಗ ಮಾತ್ರ.
ಯಾವುದೇ ರೂಪದಲ್ಲಾಗಲೀ ವಹಿವಾಟು ನಡೆಸಿದಲ್ಲಿ ಅಂತಹ ವರ್ತಕರಿಂದ ಜಿಎಸ್ಟಿ ಕಾಯ್ದೆಯಡಿ ಅನ್ವಯಿಸುವ ತೆರಿಗೆಯನ್ನು ಸಂಗ್ರಹಿಸಲು ಇಲಾಖೆಯು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಎಚ್ಚರಿಸಿದೆ.
ರಾಜ್ಯದಲ್ಲಿ ಈಗಾಗಲೇ 98,915 ವರ್ತಕರು ರಾಜಿ ತೆರಿಗೆ ಪದ್ಧತಿಯಡಿ ನೋಂದಣಿ ಪಡೆದು ವ್ಯಾಪಾರ ನಡೆಸುತ್ತಿದ್ದಾರೆ. ಇದು ಒಟ್ಟು ವರ್ತಕರಲ್ಲಿ ಶೇ. 90ರಷ್ಟಿದೆ. ಉಳಿದ ಶೇ. 10ರಷ್ಟು ವರ್ತಕರು ತೆರಿಗೆ ಪಾವತಿಸದಿರುವುದು ಸಮಂಜಸವಲ್ಲ ಎಂದು ಇಲಾಖೆ ಅಭಿಪ್ರಾಯಪಟ್ಟಿದೆ. ಜಿಎಸ್ಟಿ ಕಾಯ್ದೆಯು ಇಂತಹ ತಾರತಮ್ಯಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದೆ.
ವಾರ್ಷಿಕ ವಹಿವಾಟು ₹40 ಲಕ್ಷ (ಸರಕುಗಳ ಪೂರೈಕೆದಾರರು) ಅಥವಾ ₹20 ಲಕ್ಷ (ಸೇವೆಗಳ ಪೂರೈಕೆದಾರರು) ಮೀರಿರುವ ನೋಂದಣಿ ಪಡೆಯದೇ ಇರುವ ವರ್ತಕರಿಗೆ ನೋಟಿಸ್ ನೀಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.





















