ಫ್ರಾಂಕ್ಫರ್ಟ್, ಜು.5 www.bengaluruwire.com : ಕರ್ನಾಟಕದ ಕೌಶಲ್ಯಪೂರ್ಣ ಯುವಕರಿಗೆ ಜರ್ಮನಿಯಲ್ಲಿ ಉದ್ಯೋಗ ಮತ್ತು ಗೌರವಾನ್ವಿತ ಜೀವನವನ್ನು ಒದಗಿಸುವ ಮಹತ್ವಕಾಂಕ್ಷೆಯ “ಬೆಂಗಳೂರು-ಜರ್ಮನಿ ಕೌಶಲ್ಯ ಸೇತುವೆ ಯೋಜನೆಗೆ” (ಸ್ಕಿಲ್ಸ್ ಬ್ರಿಡ್ಜ್ ನೆಟ್ವರ್ಕ್) ಇಂದು ಫ್ರಾಂಕ್ಫರ್ಟ್ನಲ್ಲಿ ಚಾಲನೆ ನೀಡಲಾಯಿತು.
ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್ ಮತ್ತು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಈ ಯೋಜನೆಗೆ ಚಾಲನೆ ನೀಡಿದರು.
ಈ ಯೋಜನೆಯು ಕರ್ನಾಟಕದ ಸರ್ಕಾರಿ ಉಪಕರಣ ಮತ್ತು ತರಬೇತಿ ಕೇಂದ್ರ (GTTC) ಮತ್ತು ಜರ್ಮನ್ ವೃತ್ತಿಪರ ಸಂಸ್ಥೆಗಳು ಹಾಗೂ ಉದ್ಯೋಗದಾತರ ನಡುವಿನ ದೀರ್ಘಕಾಲೀನ ದ್ವಿಪಕ್ಷೀಯ ಪಾಲುದಾರಿಕೆಯಾಗಿದೆ. ಇದು ಒಂದು ಬಾರಿಯ ಪ್ರಾಯೋಗಿಕ ಯೋಜನೆಯಲ್ಲ, ಬದಲಿಗೆ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾದ ದೀರ್ಘಾವಧಿಯ ಪಾಲುದಾರಿಕೆಯಾಗಿದೆ ಎಂದು ಸಚಿವ ಡಾ. ಪಾಟೀಲ್ ತಿಳಿಸಿದರು.
ಈ ಯೋಜನೆಯಡಿ, ವಿದ್ಯಾರ್ಥಿಗಳಿಗೆ ಕರ್ನಾಟಕದಲ್ಲಿ ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ತರಬೇತಿ ನೀಡಲಾಗುವುದು. ತದನಂತರ ಸಂಪೂರ್ಣ ಪಾರದರ್ಶಕತೆ, ಸುರಕ್ಷತೆ ಮತ್ತು ಘನತೆಯೊಂದಿಗೆ ಜರ್ಮನಿಗೆ ವಲಸೆ ಹೋಗಲು ಅನುವು ಮಾಡಿಕೊಡಲಾಗುವುದು. ಆರೋಗ್ಯ ರಕ್ಷಣೆ, ಸಾರಿಗೆ, ಮೆಕಾಟ್ರಾನಿಕ್ಸ್ ಮತ್ತು ಉತ್ಪಾದನೆ ಸೇರಿದಂತೆ ವಿವಿಧ ಕೈಗಾರಿಕೆ ಕ್ಷೇತ್ರಗಳಲ್ಲಿ ಜರ್ಮನಿಯಲ್ಲಿ ಹೆಚ್ಚುತ್ತಿರುವ ಕೌಶಲ್ಯಪೂರ್ಣ ಕಾರ್ಮಿಕರ ಬೇಡಿಕೆಯನ್ನು ಪೂರೈಸಲು ಈ ಯೋಜನೆ ಸಹಕಾರಿಯಾಗಲಿದೆ.

2026ರ ವೇಳೆಗೆ ವಾರ್ಷಿಕವಾಗಿ 500 ಯುವಕರನ್ನು ಜರ್ಮನ್ ಸಂಸ್ಥೆಗಳಿಗೆ ಕಳುಹಿಸುವ ಗುರಿಯನ್ನು ಸರ್ಕಾರ ಹೊಂದಿದೆ, ಇದನ್ನು 2030ರ ವೇಳೆಗೆ 1,000ಕ್ಕೆ ಹೆಚ್ಚಿಸಲಾಗುವುದು. ಇದಕ್ಕಾಗಿ ಬೆಂಗಳೂರು, ಮೈಸೂರು, ಕಲಬುರಗಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಜರ್ಮನ್ ಭಾಷಾ ಪ್ರಯೋಗಾಲಯಗಳು ಮತ್ತು ಅಂತಾರಾಷ್ಟ್ರೀಯ ಪಠ್ಯಕ್ರಮದೊಂದಿಗೆ ಕೌಶಲ್ಯ ಕೇಂದ್ರಗಳನ್ನು ತೆರೆಯಲಾಗಿದೆ.
ಅಲ್ಲದೆ, ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ಮೇಲ್ವಿಚಾರಣೆ ಮಾಡಲು ಡಿಜಿಟಲ್ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಸಹ ಪರಿಚಯಿಸಲಾಗುವುದು. ಕೌಶಲ್ಯ, ಸುರಕ್ಷತೆ ಮತ್ತು ಸಾಮಾಜಿಕ ಘನತೆಗೆ ಆದ್ಯತೆ ನೀಡುವ ಸರ್ಕಾರಿ ನಿಯಂತ್ರಿತ ಜಾಗತಿಕ ಚಲನಶೀಲತೆ ಟ್ರ್ಯಾಕ್ ಅನ್ನು ಆರಂಭಿಸಿದ ಮೊದಲ ರಾಜ್ಯ ಕರ್ನಾಟಕ ಎಂದು ಸಚಿವ ಪಾಟೀಲ್ ಹೆಮ್ಮೆ ವ್ಯಕ್ತಪಡಿಸಿದರು.
ಫ್ರಾಂಕ್ಫರ್ಟ್ನಲ್ಲಿ ನೆಲೆಸಿರುವ ಕನ್ನಡಿಗರಿಗೆ ಸಚಿವರು ಮನವಿ ಮಾಡಿದ್ದು, ಕರ್ನಾಟಕದಿಂದ ಬರುವ ಯುವ ಸಮುದಾಯಕ್ಕೆ ಭಾವನಾತ್ಮಕ ಮತ್ತು ಸಾಂಸ್ಕೃತಿಕ ಬೆಂಬಲವನ್ನು ನೀಡುವಂತೆ ಕೋರಿದರು.





















