ಬೆಂಗಳೂರು, ಜು.04 www.bengaluruwire.com : ಬಿಡಿಎ ನಿಂದ 1600 ಶಾಲೆ, ದೇವಸ್ಥಾನ, ಚರ್ಚ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಿಗೆ ಸಿಎ ನಿವೇಶನವನ್ನು ಹಂಚಿಕೆ ಮಾಡಲಾಗಿದೆ. ಆ ಪೈಕಿ 250ಕ್ಕೂ ಹೆಚ್ಚು ಸಿಎ ನಿವೇಶನಗಳ ಗುತ್ತಿಗೆ ಅವಧಿ ಮುಗಿದಿದ್ದು, ನವೀಕರಣಕ್ಕೆ ಬಂದಿದೆ. ಅದನ್ನು ಗುತ್ತಿಗೆ ಪಡೆದವರು 120 ದಿನಗಳ ಒಳಗಾಗಿ ಸಂಪೂರ್ಣ ಗುತ್ತಿಗೆ ಮೌಲ್ಯವನ್ನು ಕಟ್ಟಿದರೆ ಶೇ.18ರಷ್ಟು ಸಂಪೂರ್ಣ ಬಡ್ಡಿಯನ್ನು ಒಂದು ಬಾರಿಯ ಕ್ರಮವಾಗಿ ಮನ್ನಾ ಮಾಡಲಾಗುತ್ತದೆ ಎಂದು ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರೀಸ್ ಹೇಳಿದರು.
ಬಿಡಿಎ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಾ, ನಾಗರೀಕ ಸೌಲಭ್ಯ ನಿವೇಶನ ಹಂಚಿಕೆ ಪಡೆದಿರುವ ವಿವಿಧ ಸಂಘ ಸಂಸ್ಥೆಗಳು ಬಾಕಿ ಉಳಿಸಿಕೊಂಡಿರುವ ಸಂಪೂರ್ಣ ಗುತ್ತಿಗೆ ಮೌಲ್ಯವನ್ನು ಬಿಡಿಎ ಪ್ರಕಟಣೆ ನೀಡಿದ 120 ದಿನಗಳ ಒಳಗಾಗಿ ಪಾವತಿಸಿದಲ್ಲಿ ನಿಯಮಾನುಸಾರ ವಿಧಿಸಲಾಗುವ ಬಡ್ಡಿಯ ಮೊತ್ತವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.
ಪ್ರಸ್ತುತ 250ಕ್ಕೂ ಸಿಎ ನಿವೇಶನಗಳ ಗುತ್ತಿಗೆ ಅವಧಿ ವಿವಿಧ ಅವಧಿಗಳಲ್ಲಿ ಮುಗಿದಿದ್ದು, ಹಲವು ವರ್ಷಗಳಿಂದ ಗುತ್ತಿಗೆ ನವೀಕರಣ ಬಾಕಿ ಶುಲ್ಕವನ್ನು ನೀಡದ ಕಾರಣ ಅಸಲು, ಬಡ್ಡಿ ಸಾಕಷ್ಟು ಬೆಳೆದಿದೆ. ಅದರ ಜೊತೆಗೆ ಶೇ.18 ಜಿಎಸ್ ಟಿ ಕೂಡ ಬಿಡಿಎ ಹಾಕಲಿದೆ. ಅದೂ ಅಲ್ಲದೇ ಈ ಸಿಎ ನಿವೇಶನಗಳ ಮಾರ್ಗಸೂಚಿ ದರವೂ ಕಾಲಾನಂತರದಲ್ಲಿ ಸಾಕಷ್ಟು ಹೆಚ್ಚಾಗಿರುವ ಕಾರಣ ಗೈಡೆನ್ಸ್ ವ್ಯಾಲ್ಯೂ ಆಧಾರಿತವಾದ ಗುತ್ತಿಗೆ ಮೌಲ್ಯವೂ ಕೂಡ ಹೆಚ್ಚಾಗಿದೆ. ಮೂಲಗಳ ಮಾಹಿತಿ ಪ್ರಕಾರ ಬಾಕಿ ನವೀಕರಣ ಗುತ್ತಿಗೆ ಮೌಲ್ಯದ ಅಸಲೇ 150 ಕೋಟಿ ರೂ. ದಾಟುತ್ತಿದ್ದು, ಬಡ್ಡಿಯ ಮೊತ್ತ ದ್ವಿಗುಣವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬಿಡಿಎಗೆ ಆಸ್ತಿ ತೆರಿಗೆ ಸಂಪನ್ಮೂಲದ ಪೈಕಿ ಸಿಎ ನಿವೇಶನ ಗುತ್ತಿಗೆ ನವೀಕರಣ ಶುಲ್ಕವೂ ಪ್ರಮುಖ ಆದಾಯ ಮೂಲವಾಗಿದೆ.
ಹೆಬ್ಬಾಳ ಮೇಲ್ಸೇತುವೆ ಹೆಚ್ಚುವರಿ ಲೂಪ್ ಅಭಿವೃದ್ಧಿಪಡಿಸುವ ಕಾಮಗಾರಿ ನಡೆಯುತ್ತಿದ್ದು, ಆಗಸ್ಟ್ 15 ರ ಸುಮಾರಿಗೆ ಸಾರ್ವಜನಿಕರಿಗೆ ಮುಕ್ತವಾಗಲಿದೆ. ಈ ಕಾಮಗಾರಿಯ ಅಂದಾಜು ವೆಚ್ಚ ವಿಳಂಬಗತಿಯಿಂದ ಏರಿಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ ಬಿಡಿಎ ಅಧ್ಯಕ್ಷ ಹ್ಯಾರೀಸ್, 73 ಕಿ.ಮೀ ಉದ್ದದ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಯೋಜನೆಗೆ ಭೂಸ್ವಾಧೀನಕ್ಕಾಗಿ ರೈತರಿಗೆ ಪ್ರತಿ ಎಕರೆಗೆ ಭೂಪರಿಹಾರ ನೀಡುವ ಪ್ರಕ್ರಿಯೆ ಯಾವ ಹಂತದಲ್ಲಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ, ಭೂ ಪರಿಹಾರ ನಿಗದಿಪಡಿಸುವ ಸಂಬಂಧ ವಿಶೇಷ ಉದ್ದೇಶ ಘಟಕ (SPV) ಸಮಿತಿ ರಚನೆಯಾಗಿದೆ ಎಂದಷ್ಟೇ ಹೇಳಿದರು.

ಈಗಾಗಲೇ ಹಲವು ವರ್ಷಗಳಿಂದ ಬಾಕಿ ಉಳಿದಿರುವ ಬೆಂಗಳೂರಿನ ಪ್ರಮುಖ ರಸ್ತೆ ಯೋಜನೆಯು ಸರ್ಕಾರ ಹಾಗೂ ಬಿಡಿಎ ಹಂತದಲ್ಲಿ ಇನ್ನೂ ರೈತರಿಗೆ ಭೂ ಪರಿಹಾರ ನಿಗದಿಪಡಿಸದೆ, ಭೂಸ್ವಾಧೀನ ಪ್ರಕ್ರಿಯೆ ಸೇರಿದಂತೆ ಮೊದಲಾದ ಹಂತಗಳನ್ನು ದಾಟಲು ಅಗತ್ಯವಾಗಿದೆ.
ಡಾ.ಶಿವರಾಮ ಕಾರಂತ ಬಡಾವಣೆಯಲ್ಲಿ ಸಾರ್ವಜನಿಕರಿಗೆ ನಿವೇಶನ ಹಂಚಿಕೆಗಾಗಿ ಯಾವಾಗ ಅರ್ಜಿ ಆಹ್ವಾನಿಸಲಾಗುತ್ತದೆ ಎಂಬ ಸುದ್ದಿಗಾರರ ಪ್ರಶ್ನೆಗೆ, ಬಡಾವಣೆ ನಿರ್ಮಾಣ, ಕಾಮಗಾರಿ, ಭೂಸ್ವಾಧೀನ ವಿಚಾರಗಳಿಗೆ ಸಂಬಂಧಿಸಿದ ವಿಷಯ ಕೋರ್ಟ್ ನಲ್ಲಿದ್ದು, ನ್ಯಾಯಾಲಯದ ಸೂಚನೆ ಅನ್ವಯ ಕ್ರಮವಹಿಸುತ್ತೇವೆ ಎಂದು ಹ್ಯಾರೀಸ್ ಮತ್ತು ಬಿಡಿಎ ಆಯುಕ್ತ ಮಣಿವಣ್ಣನ್ ತಿಳಿಸಿದರು.
ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಮಾಡಿ ಹಲವು ವರ್ಷಗಳಾದರೂ, ನಿವೇಶನ ಹಂಚಿಕೆ ಮಾಡಿದವರು ಲೇಔಟ್ ಅಭಿವೃದ್ಧಿಪಡಿಸಿದರೂ ಇನ್ನೂ ಮನೆ ಕಟ್ಟಿಕೊಂಡಿಲ್ಲ ಎಂದು ಬಿಡಿಎ ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದರು. ಆಗ ಈ ಬಡಾವಣೆಗಳಲ್ಲಿ ಸಾಕಷ್ಟು ಮೂಲಭೂತ ಸೌಲಭ್ಯದ ಕೊರತೆಯಿದೆ ಎಂದು ಮಾಧ್ಯಮದವರು ಗಮನ ಸೆಳೆದಾಗ, ಕೆಂಪೇಗೌಡ ಲೇಔಟ್ ನಲ್ಲಿ ಇರುವ 9 ಬ್ಲಾಕ್ ಗಳ ಪೈಕಿ 5 ಬ್ಲಾಕ್ ಗಳಲ್ಲಿ ಸಂಪೂರ್ಣ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ. ಕೇವಲ 4 ಬ್ಲಾಕ್ ಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಕಾನೂನಾತ್ಮಕ ತೊಂದರೆ ಹಾಗೂ ಮತ್ತಿತರ ಕಾರಣಕ್ಕೆ ಸಂಪೂರ್ಣ ಅಭಿವೃದ್ಧಿ ಸಾಧ್ಯವಾಗಿಲ್ಲ ಎಂದು ಆಯುಕ್ತರು ಮಾಹಿತಿ ನೀಡಿದರು.
ಸಾರ್ವಜನಿಕರ ಕುಂದು ಕೊರತೆಯನ್ನು ಈಡೇರಿಸಲು 9483166622 ವಾಟ್ಸಪ್ ನಂಬರ್ ಸಂಪರ್ಕಿಸಬಹುದಾಗಿದೆ. ಕೇಂದ್ರ ಕಚೇರಿಯಲ್ಲಿ ಕುಂದು ಕೊರತೆ ನಿವಾರಣೆಗಾಗಿ ಶೀಘ್ರದಲ್ಲಿಯೇ ಇದಕ್ಕಾಗಿ ಕಾಲ್ ಸೆಂಟರ್ ಆರಂಭಿಸಲಾಗುವುದು. ಈ ಕೇಂದ್ರವು ಬೆಳಗ್ಗೆ 10ರಿಂದ ಸಂಜೆ 6ರ ತನಕ ಕಾರ್ಯನಿರ್ವಹಿಸಲಿದೆ ಎಂದರು.
30 ದಿನಗಳ ಒಳಗಾಗಿ ಪ್ರತಿ ಕುಂದು ಕೊರತೆಗಳು ನಿವಾರಣೆಯಾಗಲಿದೆ. ಒಂದೊಮ್ಮರ ಬಿಡಿಎ ನಿಯಮಾನುಸಾರ ಕ್ರಮವಹಿಸಲು ಸಾಧ್ಯವಾಗದಿದ್ದಲ್ಲಿ ಸೂಕ್ತ ಹಿಂಬರಹ ನೀಡಿ ಪ್ರಕರಣ ಮುಕ್ತಾಯ ಮಾಡಲಾಗುತ್ತದೆ. ಪ್ರಾಧಿಕಾರ 30 ದಿನಗಳಲ್ಲಿ ಕೈಗೊಂಡಿರುವ ಪರಿಹಾರ ಕ್ರಮವು ಸಾರ್ವಜನಿಕರಿಗೆ ತೃಪ್ತಿಕರವಾಗದೇ ಇದ್ದಲ್ಲಿಆ ಅಹವಾಲನ್ನು ಬಿಡಿಎ ನಿಯಮಗಳಲ್ಲಿ ಪರಿಹರಿಸಲು ಅವಕಾಶವಿಲ್ಲದಿದ್ದಲ್ಲಿ ಅವುಗಳನ್ನು ಪ್ರತಿ ಗುರುವಾರ ಮಧ್ಯಾಹ್ನ ವಲಯವಾರು ಸಾರ್ವಜನಿಕರ ಸಮಕ್ಷಮ ಅವರ ಕೋರಿಕೆ ಅಥವಾ ಮನವಿಗಳನ್ನು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಕಾನೂನು ರೀತ್ಯ ಪರಿಹರಿಸುವ ಬಗ್ಗೆ ಸಭೆ ನಡೆಸಲಾಗುತ್ತದೆ ಎಂದು ಬಿಡಿಎ ಆಯುಕ್ತ ಮಣಿವಣ್ಣನ್ ಹೇಳಿದರು.
ಪ್ರಾಯೋಗಿಕವಾಗಿ ಬಿಡಿಎ ಕೇಂದ್ರ ಕಚೇರಿಯಲ್ಲಿ ಅಧ್ಯಕ್ಷರ ನೇತೃತ್ವದಲ್ಲಿ ಜು.03ರಂದು ಸಾರ್ವಜನಿಕ ಕುಂದುಕೊರತೆ ಸಭೆ ಆಯೋಜಿಸಲಾಗಿತ್ತು. ಅಲ್ಲಿ ಸಭೆಗೆ ಹಾಜರಾಗಿದ್ದ 20 ಅರ್ಜಿದಾರರ ಪೈಕಿ 6 ಮನವಿಗಳನ್ನು ಸ್ಥಳದಲ್ಲಿಯೇ ಪರಿಹರಿಸಲಾಯಿತು ಎಂದು ಅವರು ತಿಳಿಸಿದರು.






















