ಬೆಂಗಳೂರು, ಜು.04 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಇ-ಖಾತಾ ವಿತರಣೆ ಪ್ರಕ್ರಿಯೆ ಅವ್ಯವಸ್ಥೆಯಿಂದ ಕೂಡಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಪದ್ಮನಾಭ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇ-ಖಾತಾ ವೆಬ್ಸೈಟ್ನಲ್ಲಿ ದಾಖಲೆಗಳನ್ನು ಅಪ್ಲೋಡ್ ಮಾಡುವಲ್ಲಿ ತಾಂತ್ರಿಕ ಸಮಸ್ಯೆಗಳು, ಸಂಕೀರ್ಣ ಪ್ರಕ್ರಿಯೆಗಳು ಹಾಗೂ ಮಾಹಿತಿ ಲಭ್ಯತೆಯ ಕೊರತೆ ಆಸ್ತಿ ಮಾಲೀಕರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಅವರು ದೂರಿದ್ದಾರೆ.
ಪದ್ಮನಾಭ ರೆಡ್ಡಿ ಅವರ ಪ್ರಕಾರ, ಇ-ಖಾತಾ ಪಡೆಯುವ ಪ್ರಕ್ರಿಯೆಗಳು ಅತ್ಯಂತ ಸಂಕೀರ್ಣವಾಗಿದ್ದು, ಕೆಲವೊಮ್ಮೆ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರದ ನಡುವಿನ ಮಾಹಿತಿ ವೈಫಲ್ಯದಿಂದಾಗಿ ಪ್ರಕ್ರಿಯೆಗಳು ಮತ್ತಷ್ಟು ವಿಳಂಬವಾಗುತ್ತಿವೆ. ವಿಶೇಷವಾಗಿ ಕಾವೇರಿ ತಂತ್ರಾಂಶದಲ್ಲಿ ಇ-ಖಾತೆ ಮತ್ತು ಸ್ವತ್ತಿನ ಮಾಹಿತಿ ಲಭ್ಯವಾಗದಿರುವುದು ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿದೆ. ಇದರಿಂದಾಗಿ ಸಾರ್ವಜನಿಕರು ಪದೇ ಪದೇ ಬಿಬಿಎಂಪಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ತಿಳಿಸಿದ್ದಾರೆ.
ಅಪಾರ್ಟ್ಮೆಂಟ್ ಮಾಲೀಕರು ಕಟ್ಟಡಕ್ಕೆ ಆಕ್ಯುಪೆನ್ಸಿ ಸರ್ಟಿಫಿಕೇಟ್ (ಒಸಿ) ಪಡೆಯಲು ಅರ್ಜಿ ಸಲ್ಲಿಸಿದಾಗ ಎಸ್.ಎ.ಎಸ್. ನಂಬರ್ ಮತ್ತು ಇತರ ಸಂಬಂಧಿತ ನಂಬರ್ಗಳ ಮ್ಯಾಪಿಂಗ್ ಆಗದೆ ಇತರರ ಸ್ವತ್ತಿನೊಂದಿಗೆ ಸೇರಿಕೊಂಡು ದೋಷಪೂರಿತವಾಗಿದೆ. ಈ ತಾಂತ್ರಿಕ ಸಮಸ್ಯೆಯಿಂದಾಗಿ ಅಪಾರ್ಟ್ಮೆಂಟ್ ಮಾಲೀಕರು ಹಲವು ತಿಂಗಳುಗಳಿಂದ ಇ-ಖಾತಾ ಪಡೆಯಲಾಗದೆ ಪರದಾಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ.

ಬಿಬಿಎಂಪಿ ಈ ಕೂಡಲೇ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು, ಇ-ಖಾತಾ ಪ್ರಕ್ರಿಯೆಯನ್ನು ಸರಳೀಕರಿಸಬೇಕು ಮತ್ತು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಪದ್ಮನಾಭ ರೆಡ್ಡಿ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಹಿರಿಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಇ-ಖಾತಾ ವ್ಯವಸ್ಥೆಗೆ ಕೇಂದ್ರ ಸರ್ಕಾರದ ಇ-ಆಡಳಿತ ಚಿನ್ನದ ಪ್ರಶಸ್ತಿ ಬಂದರೂ ಸ್ವತ್ತಿನ ಮಾಲೀಕರಿಗೆ ತಪ್ಪದ ಗೋಳಾಟ :
ಇತ್ತೀಚೆಗೆ ಬಿಬಿಎಂಪಿ ಯಲಹಂಕ ವಲಯದ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಹಕಾರ ನಗರ ಆಟದ ಮೈದಾನದಲ್ಲಿ ಏರ್ಪಡಿಸಿದ್ದ ವಲಯ ಮಟ್ಟದ ಬೃಹತ್ ಇ-ಖಾತಾ ಮೇಳದಲ್ಲಿ ಪಾಲ್ಗೊಂಡಿದ್ದ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು, ಜೂ.29ರ ತನಕ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ 25 ಲಕ್ಷ ಸ್ವತ್ತುಗಳ ಪೈಕಿ ಈಗಾಗಲೇ 5,34,674 ಸ್ವತ್ತುಗಳಿಗೆ ಖಾತಾದಾರರು ಅಂತಿಮ ಇ-ಖಾತಾವನ್ನು ಪಡೆದಿದ್ದಾರೆ. ಬಿಬಿಎಂಪಿ ಇ-ಖಾತಾ ವ್ಯವಸ್ಥೆಗೆ ಕೇಂದ್ರ ಸರ್ಕಾರದಿಂದ 2024-25 ನೇ ಸಾಲಿನ “ರಾಷ್ಟ್ರೀಯ ಇ-ಆಡಳಿತ ಚಿನ್ನದ ಪ್ರಶಸ್ತಿ” ಬಂದಿದೆ ಎಂಬ ಮಾಹಿತಿ ಹಂಚಿಕೊಂಡಿದ್ದರು.
ಬಿಬಿಎಂಪಿ ಇ-ಖಾತಾ ವ್ಯವಸ್ಥೆಗೆ ಕೇಂದ್ರ ಸರ್ಕಾರದಿಂದ ಇ-ಆಡಳಿತ ಚಿನ್ನದ ಪ್ರಶಸ್ತಿ ಬಂದಿರುವಾಗ ಈ ವ್ಯವಸ್ಥೆಯಲ್ಲಿನ್ನೂ ಸುಗಮವಾಗಿ ಸ್ವತ್ತಿನ ಮಾಲೀಕರು ಅಂತಿಮ ಇ-ಖಾತಾ ಪಡೆಯುವಲ್ಲಿ ಸಮಸ್ಯೆ ಎದುರಿಸುತ್ತಿರುವುದು ಸಚಿವರು ನೀಡಿದ ಅಂಕಿಅಂಶಗಳೇ ಪದ್ಮನಾಭ ರೆಡ್ಡಿ ಅವರ ಆರೋಪವನ್ನು ಪುಷ್ಟೀಕರಿಸುತ್ತದೆ.






















