ಬೆಂಗಳೂರು, ಜು.03 www.bengaluruwire.com : ಲೋಕಾಯುಕ್ತ ಸಂಸ್ಥೆಯ ಹೆಸರು ಹೇಳಿಕೊಂಡು ಸುಲಿಗೆ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು ಈ ಬಗ್ಗೆ ಸರ್ಕಾರಿ ನೌಕರರು, ಅಧಿಕಾರಿಗಳು ಎಚ್ಚರವಹಿಸಬೇಕು. ಲೋಕಾಯುಕ್ತ ಸಂಸ್ಥೆಗೆ ನೇರವಾಗಿ ನಿರ್ಭೀತಿಯಿಂದ ವಿಷಯ ತಿಳಿಸಿದಲ್ಲಿ, ಲೋಕಾಯುಕ್ತ ಸಂಸ್ಥೆ ಆ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ಭರವಸೆ ನೀಡಿದ್ದಾರೆ.
ಇತ್ತೀಚೆಗೆ, ನಿಂಗಪ್ಪ.ಜಿ ಅಲಿಯಾಸ್ ನಿಂಗಪ್ಪ ಸಾವಂತ ಎಂಬ ವ್ಯಕ್ತಿ ಅಬಕಾರಿ ಇಲಾಖೆ ಮತ್ತು ಬಿಬಿಎಂಪಿ ವ್ಯಾಪ್ತಿಯ ಸರ್ಕಾರಿ ಅಧಿಕಾರಿಗಳಿಗೆ ವಾಟ್ಸಾಪ್ ಮೂಲಕ ಕರೆ ಮಾಡಿ, ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ಪರಿಚಯವಿದೆ ಎಂದು ಹೇಳಿಕೊಂಡು ಹಣ ಸುಲಿಗೆ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು. ಈತ ಹಿಂದಿನ ಬೆಂಗಳೂರು ನಗರ-1 ವಿಭಾಗದ ಪೊಲೀಸ್ ಅಧೀಕ್ಷಕ ಶ್ರೀನಾಥ ಜೋಷಿ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಸರ್ಕಾರಿ ಅಧಿಕಾರಿಗಳಿಗೆ ಅಕ್ರಮ ಆಸ್ತಿ ಬಗ್ಗೆ ಬೆದರಿಸಿ ಲಂಚ ವಸೂಲಿ ಮಾಡುತ್ತಿರುವುದು ತನಿಖೆಯಲ್ಲಿ ಮೇಲ್ನೋಟಕ್ಕೆ ಕಂಡುಬಂದಿದೆ.
ಶ್ರೀನಾಥ ಜೋಷಿ ವಿರುದ್ಧವೂ ತನಿಖೆ ನಡೆಯುತ್ತಿದ್ದು, ಅವರ ಮನೆಯನ್ನು ಶೋಧಿಸಲಾಗಿದೆ. ಈ ಇಬ್ಬರೂ ಕರ್ನಾಟಕ ಹೈಕೋರ್ಟ್ ನಿಂದ ತನಿಖೆಗೆ ತಾತ್ಕಾಲಿಕ ತಡೆಯಾಜ್ಞೆ ಪಡೆದಿದ್ದಾರೆ. ಲೋಕಾಯುಕ್ತ ಸಂಸ್ಥೆಯ ಅಧಿಕಾರಿ/ಸಿಬ್ಬಂದಿ ಹೆಸರನ್ನು ಹೇಳಿಕೊಂಡು ಹಣ ವಸೂಲಿ ಮಾಡುತ್ತಿರುವ ಸಂಬಂಧ ಈಗಾಗಲೇ 41 ಎಫ್ಐಆರ್ಗಳು ದಾಖಲಾಗಿವೆ. ಆನಂದ ಕುಮಾರ್ ಎಂಬ ವ್ಯಕ್ತಿ ಲೋಕಾಯುಕ್ತ ಮತ್ತು ಉಪಲೋಕಾಯುಕ್ತ-2 ನ್ಯಾಯಮೂರ್ತಿ ಬಿ. ವೀರಪ್ಪ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆಯೂ ದೂರು ದಾಖಲಾಗಿದೆ ಎಂದು ಲೋಕಾಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ವಿವರಿಸಿದ್ದಾರೆ.
ಲೋಕಾಯುಕ್ತದಲ್ಲಿನ ಕಾರ್ಯಭಾರ ಹೆಚ್ಚಳಕ್ಕೆ ಅನುಗುಣವಾಗಿ ಹುದ್ದೆಗಳನ್ನು ಭರ್ತಿ ಮಾಡಲು ಮತ್ತು ಹೊಸ ಹುದ್ದೆಗಳನ್ನು ಸೃಜಿಸಲು ಸರ್ಕಾರಕ್ಕೆ ಹಲವು ಬಾರಿ ಪತ್ರ ಬರೆದಿದ್ದರೂ, ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ನ್ಯಾಯಮೂರ್ತಿ ಪಾಟೀಲ್ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ, ಗ್ರೂಪ್-ಸಿ ವೃಂದದ 66 ಸಿಬ್ಬಂದಿ ಹುದ್ದೆಗಳು ಮತ್ತು 8 ಪೊಲೀಸ್ ಅಧೀಕ್ಷಕರ ಹುದ್ದೆಗಳು ಖಾಲಿ ಇವೆ. ಹೊಸದಾಗಿ 339 ಅಧಿಕಾರಿ/ಸಿಬ್ಬಂದಿ ಹುದ್ದೆಗಳು ಮತ್ತು ಕಾನೂನು ಕೋಶಕ್ಕೆ 12 ಹುದ್ದೆಗಳನ್ನು ಸೃಜಿಸುವ ಪ್ರಸ್ತಾವನೆಗಳು ಸರ್ಕಾರದ ಹಂತದಲ್ಲಿ ಬಾಕಿ ಇವೆ. ಆಂತರಿಕ ನಿಗಾ ಘಟಕ ಸ್ಥಾಪನೆ ಪ್ರಸ್ತಾವನೆಯನ್ನು ಸರ್ಕಾರ ತಿರಸ್ಕರಿಸಿದೆ ಎಂದು ತಿಳಿಸಿದೆ.
ಲೋಕಾಯುಕ್ತ ನ್ಯಾಯಮೂರ್ತಿಯವರು 2022ರ ಜೂನ್ 15ರಿಂದ ಅಧಿಕಾರ ವಹಿಸಿಕೊಂಡ ನಂತರ 230ಕ್ಕೂ ಹೆಚ್ಚು ಸ್ವಯಂಪ್ರೇರಿತ ದೂರು ಪ್ರಕರಣಗಳನ್ನು ದಾಖಲಿಸಿದ್ದಾರೆ. ಜಲಮೂಲಗಳ ರಕ್ಷಣೆ, ಪರಿಸರ ಸಂರಕ್ಷಣೆ, ಕಸ ವಿಲೇವಾರಿ ಮತ್ತು ಆಸ್ಪತ್ರೆಗಳಲ್ಲಿನ ಲೋಪದೋಷಗಳ ಕುರಿತು ಲೆಕ್ಕವಿಲ್ಲದಷ್ಟು ಸ್ವಯಂಪ್ರೇರಿತ ಪ್ರಕರಣಗಳನ್ನು ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.
ಸುಮಾರು 500ಕ್ಕೂ ಅಧಿಕ ಶೋಧನಾ ವಾರಂಟ್ಗಳನ್ನು ನೀಡಿದ್ದು, ಅನೇಕ ಕಚೇರಿಗಳಿಂದ ದಾಖಲೆಗಳನ್ನು ವಶಪಡಿಸಿಕೊಂಡು ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಲೋಕಾಯುಕ್ತ ಸಂಸ್ಥೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಕರಣಗಳ ಅಂಕಿ-ಅಂಶಗಳು (ಏಪ್ರಿಲ್ 1, 2023 ರಿಂದ ಜೂನ್ 30, 2025ರವರೆಗೆ):
* ಲೋಕಾಯುಕ್ತರ ವ್ಯಾಪ್ತಿ: 4048 ಹಳೆಯ ಪ್ರಕರಣಗಳು, 6491 ಹೊಸ ಪ್ರಕರಣಗಳು, 3429 ವಿಲೇವಾರಿ, 7110 ಬಾಕಿ.
* ಉಪಲೋಕಾಯುಕ್ತ-1ರ ವ್ಯಾಪ್ತಿ: 4711 ಹಳೆಯ ಪ್ರಕರಣಗಳು, 7322 ಹೊಸ ಪ್ರಕರಣಗಳು, 5106 ವಿಲೇವಾರಿ, 6927 ಬಾಕಿ.
* ಉಪಲೋಕಾಯುಕ್ತ-2ರ ಪ್ರಭಾರ (ಏಪ್ರಿಲ್ 1, 2023 ರಿಂದ ಜುಲೈ 5, 2024): 4530 ಹಳೆಯ ಪ್ರಕರಣಗಳು, 3801 ಹೊಸ ಪ್ರಕರಣಗಳು, 1806 ವಿಲೇವಾರಿ, 6525 ಬಾಕಿ.
* ಉಪಲೋಕಾಯುಕ್ತ-2ರ ವ್ಯಾಪ್ತಿ (ಜುಲೈ 6, 2024 ರಿಂದ ಜೂನ್ 30, 2025): 5162 ಹಳೆಯ ಪ್ರಕರಣಗಳು, 3080 ಹೊಸ ಪ್ರಕರಣಗಳು, 131 ವಿಲೇವಾರಿ, 8647 ಬಾಕಿ.
ಲೋಕಾಯುಕ್ತ, ಉಪಲೋಕಾಯುಕ್ತ-1 ಮತ್ತು ಉಪಲೋಕಾಯುಕ್ತ-2ರ ನ್ಯಾಯಮೂರ್ತಿಗಳು ಸಹ ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಪ್ರವಾಸ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾರ್ವಜನಿಕರ ಅಹವಾಲು ಸ್ವೀಕರಿಸಿ, ದೂರು ಪ್ರಕರಣಗಳ ವಿಲೇವಾರಿ ಮಾಡುತ್ತಾ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದ್ದಾರೆ.






















