ನವದೆಹಲಿ, ಜೂ.21 www.bengaluruwire.com : ದೇಶಾದ್ಯಂತ ಭಾರತೀಯ ಸೇನಾಪಡೆಗಳು 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅತ್ಯಂತ ಉತ್ಸಾಹದಿಂದ ಆಚರಿಸಿದವು. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಜಮ್ಮು ಮತ್ತು ಕಾಶ್ಮೀರದ ಉಧಂಪುರದಲ್ಲಿರುವ ಉತ್ತರ ಕಮಾಂಡ್ನಲ್ಲಿ ಸುಮಾರು 2,500 ಯೋಧರೊಂದಿಗೆ ವಿವಿಧ ಆಸನಗಳು ಮತ್ತು ಉಸಿರಾಟದ ವ್ಯಾಯಾಮಗಳನ್ನು ಮಾಡುವ ಮೂಲಕ ಯೋಗ ದಿನಾಚರಣೆಯನ್ನು ಮುನ್ನೆಡಸಿದರು.
ಯೋಗವು ಇಂದಿನ ವೇಗದ ಜಗತ್ತಿನಲ್ಲಿ ಜನರು ಎದುರಿಸುತ್ತಿರುವ ಒತ್ತಡ, ಆತಂಕ ಮತ್ತು ಖಿನ್ನತೆಯಂತಹ ಸಮಸ್ಯೆಗಳಿಗೆ ಸಾರ್ವತ್ರಿಕ ಪರಿಹಾರವಾಗಿದೆ ಎಂದು ರಕ್ಷಣಾ ಸಚಿವರು ಈ ಸಂದರ್ಭದಲ್ಲಿ ಬಣ್ಣಿಸಿದರು. ಸೇನಾ ಸಿಬ್ಬಂದಿ ಯೋಗದ ಕಡೆಗೆ ತೋರಿಸಿದ ಒಲವನ್ನು ಅವರು ಶ್ಲಾಘಿಸಿದರು, ಇದು ಅವರ ಶಿಸ್ತು ಮತ್ತು ಗಮನದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ನುಡಿದರು.
ಸಿಯಾಚಿನ್ನಿಂದ ಇಂದಿರಾ ಪಾಯಿಂಟ್ವರೆಗೆ ಯೋಗಾಸನ: ಗಡಿ ಪ್ರದೇಶಗಳಲ್ಲಿ ಬಿಆರ್ಒ ಸಿಬ್ಬಂದಿಯ ಭಾಗಿ :

ಭಾರತದ ಸೇನೆಯು ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ನಿಂದ ಹಿಡಿದು ದೇಶದಾದ್ಯಂತ ಎಲ್ಲಾ ಭೂಪ್ರದೇಶಗಳು ಮತ್ತು ಹವಾಮಾನ ಪರಿಸ್ಥಿತಿಗಳಲ್ಲಿ ಯೋಗಾಭ್ಯಾಸ ನಡೆಸಿತು. ಕಾರ್ಯಕ್ರಮದಲ್ಲಿ ಹಾಲಿ ಕರ್ತವ್ಯದಲ್ಲಿರುವ ಯೋಧರು, ನಿವೃತ್ತ ಯೋಧರು, ಅವರ ಕುಟುಂಬಗಳು, ಮಕ್ಕಳು ಮತ್ತು ನಾಗರಿಕರು ಉತ್ಸಾಹದಿಂದ ಭಾಗವಹಿಸಿ ‘ಯೋಗವನ್ನು ಜೀವನಶೈಲಿಯನ್ನಾಗಿ’ ಅಳವಡಿಸಿಕೊಂಡರು.


ಇನ್ನು, ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (ಬಿಆರ್ಒ) ಸಿಬ್ಬಂದಿ, ಅವರ ಕುಟುಂಬಗಳು ಮತ್ತು ಮಕ್ಕಳು ಭಾರತದ ಕೆಲವು ಅತ್ಯಂತ ದುರ್ಗಮ ಮತ್ತು ಸವಾಲಿನ ಪ್ರದೇಶಗಳಲ್ಲಿ — ಹಿಮದಿಂದ ಆವೃತವಾದ ಕಣಿವೆಗಳು, ಪ್ಯಾಂಗೊಂಗ್ ತ್ಸೋ ದಡಗಳು, ಸೆಲಾ ಸುರಂಗದಿಂದ ಹಿಡಿದು ಮರುಭೂಮಿಗಳು ಮತ್ತು ಬಯಲು ಪ್ರದೇಶಗಳವರೆಗೆ — ಯೋಗ ಮಾಡಲು ಒಗ್ಗೂಡಿದರು.

ಭಾರತದ ಅತಿದೊಡ್ಡ ದಕ್ಷಿಣದ ತುದಿಯಾದ ‘ಇಂದಿರಾ ಪಾಯಿಂಟ್’ನಲ್ಲಿ ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್ನ ಕಮಾಂಡರ್-ಇನ್-ಚೀಫ್ ಲೆಫ್ಟಿನೆಂಟ್ ಜನರಲ್ ದಿನೇಶ್ ಸಿಂಗ್ ರಾಣಾ ಅವರು ಮೂರು ಸೇನಾಪಡೆಗಳು ಮತ್ತು ಭಾರತೀಯ ಕರಾವಳಿ ಕಾವಲುಪಡೆಯ ಯೋಧರೊಂದಿಗೆ ಸೂರ್ಯೋದಯದ ವೇಳೆ ಯೋಗಸಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಇದು ಸಾಮರಸ್ಯ, ಏಕತೆ ಮತ್ತು ರಾಷ್ಟ್ರೀಯ ಒಗ್ಗಟ್ಟನ್ನು ಸಂಕೇತಿಸಿತು. ಶ್ರೀ ವಿಜಯಪುರಂನಲ್ಲಿರುವ ಐಎನ್ಎಸ್ ಉತ್ಕ್ರೋಶ್ನಲ್ಲಿ 900ಕ್ಕೂ ಹೆಚ್ಚು ಸಿಬ್ಬಂದಿ ಮತ್ತು ಅವರ ಕುಟುಂಬಗಳು ಸಾಮೂಹಿಕ ಯೋಗದಲ್ಲಿ ಭಾಗವಹಿಸಿ ಉತ್ತಮ ಆರೋಗ್ಯ ಕಾಯ್ದುಕೊಳ್ಳುವ ವಿಧಾನವನ್ನು ಅಳವಡಿಸಿಕೊಂಡರು.
ಭಾರತ-ಫ್ರಾನ್ಸ್ ಜಂಟಿ ಯೋಗ: ಸಂಸ್ಕೃತಿ ವಿನಿಮಯಕ್ಕೆ ವೇದಿಕೆ
ಭಾರತ-ಫ್ರಾನ್ಸ್ ಜಂಟಿ ಸೇನಾಭ್ಯಾಸ ‘ಶಕ್ತಿ-VIII’ ರ ಭಾಗವಾಗಿ, ಕ್ಯಾಂಪ್ ಲಾರ್ಜಾಕ್, ಲಾ ಕ್ಯಾವಲೇರಿಯಲ್ಲಿ ಜಂಟಿಯಾಗಿ ಯೋಗಾಸನ ನಡೆಸಿದವು. ಈ ಕಾರ್ಯಕ್ರಮವು ದೈಹಿಕ ಸಾಮರ್ಥ್ಯ ಮತ್ತು ಆಂತರಿಕ ಸಾಮರಸ್ಯವನ್ನು ಉತ್ತೇಜಿಸುವುದಲ್ಲದೆ, ಸಾಂಸ್ಕೃತಿಕ ವಿನಿಮಯಕ್ಕೆ ವೇದಿಕೆಯಾಗಿ ಕಾರ್ಯನಿರ್ವಹಿಸಿತು. ಇದು ಯೋಗದ ಸಾರ್ವತ್ರಿಕ ಸಂದೇಶವನ್ನು ಒಗ್ಗೂಡಿಸುವ ಶಕ್ತಿಯಾಗಿ ಹರಡಿತು. ಒಟ್ಟಾರೆ, ದೇಶದಾದ್ಯಂತ ಯೋಧರು ಯೋಗದ ಮಹತ್ವವನ್ನು ಸಾರಿದರು.


























