ಬೆಂಗಳೂರು, ಜೂ.16 www.bengaluruwire.com : ಹಿಂದೂ ಧರ್ಮದ ಮೇಲಿನ ದಾಳಿಗಳನ್ನು ನಿಲ್ಲಿಸಲು ಮತ್ತು ಹಿಂದೂ ಮಕ್ಕಳಿಗೆ ಹಿಂದೂ ಧರ್ಮದ ಬಗ್ಗೆ ಶಿಕ್ಷಣದಲ್ಲಿ ಕಲಿಸಲು ಭಾರತದಾದ್ಯಂತದ 1,000 ಕ್ಕೂ ಹೆಚ್ಚು ಸಂತರು ನಗರದಲ್ಲಿ ಸೋಮವಾರ ನಡೆದ ಭಾರತೀಯ ಸಂತ ಮಹಾಪರಿಷತ್ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದಾರೆ.
ಇಲ್ಲಿ ಸೋಮವಾರ ನಡೆದ ಭಾರತೀಯ ಸಂತ ಮಹಾಪರಿಷತ್ತಿನ ಉದ್ಘಾಟನಾ ಸಮಾರಂಭದಲ್ಲಿ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರು ಅನುಗ್ರಹ ಸಂದೇಶ ನೀಡಿದರು. ಭಾರತೀಯ ಸಂಸ್ಕೃತಿಯ ಸಾರ, ಸಂತರ ಹೊಣೆಗಾರಿಕೆ ಹಾಗೂ ಸಮುದಾಯದಲ್ಲಿ ಐಕ್ಯತೆಯ ಮಹತ್ವವನ್ನು ತಮ್ಮ ಪ್ರವಚನದಲ್ಲಿ ವಿವರಿಸಿದರು.
ಸಂಸ್ಕೃತಿಯೇ ನಮ್ಮ ದಿಕ್ಸೂಚಿ:
ಭಾರತೀಯ ಸಂಸ್ಕೃತಿಯು ಅತಿ ಪ್ರಾಚೀನ ಮತ್ತು ಶ್ರೇಷ್ಠವಾದುದು ಎಂದು ಬಣ್ಣಿಸಿದ ಶ್ರೀಗಳು, ಈ ಸಂಸ್ಕೃತಿಯು ನಮ್ಮನ್ನು ದುಃಖದಿಂದ ಸುಖದೆಡೆಗೆ, ಅಜ್ಞಾನದಿಂದ ಜ್ಞಾನದೆಡೆಗೆ ಮತ್ತು ಲೌಕಿಕತೆಯಿಂದ ಅಲೌಕಿಕತೆಯೆಡೆಗೆ ಕೊಂಡೊಯ್ಯುವ ಶಕ್ತಿ ಹೊಂದಿದೆ ಎಂದರು.

ಭಾಷೆ, ಸಂಪ್ರದಾಯ, ಪ್ರಾದೇಶಿಕ ಭೇದಭಾವಗಳನ್ನು ಮೀರಿ, ಎಲ್ಲರನ್ನು ಒಗ್ಗೂಡಿಸಿ ಭಾರತೀಯ ಸಂಸ್ಕೃತಿಯನ್ನು ಸಂರಕ್ಷಿಸುವುದು ಈ ಪರಿಷತ್ತಿನ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು.

ಸಂತರೇ ಸಂಸ್ಕೃತಿಯ ರಕ್ಷಕರು:
ಸಂಸ್ಕೃತಿಯ ರಕ್ಷಣೆ ಮತ್ತು ಪ್ರಚಾರದಲ್ಲಿ ಸಾಧು-ಸಂತರು ಪ್ರಮುಖ ಪಾತ್ರ ವಹಿಸುತ್ತಾರೆ ಎಂಬುದನ್ನು ಸ್ವಾಮೀಜಿಯವರು ಒತ್ತಿ ಹೇಳಿದರು. ಸಂತರ ಪ್ರಭಾವದಿಂದ ಜನರು ಸಂಸ್ಕೃತಿಯನ್ನು ಅನುಸರಿಸಿ, ತಮ್ಮ ಬದುಕನ್ನು ಸುಖಮಯವಾಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ಮಹಾಕಾರ್ಯದಲ್ಲಿ ಎಲ್ಲ ಸಂತರು ಭಾಗವಹಿಸಿ, ಜನರಿಗೆ ಬೋಧಿಸಬೇಕು ಹಾಗೂ ಸಂಸ್ಕೃತಿಯ ಮಹತ್ವವನ್ನು ಸಾರಬೇಕು ಎಂದು ಶ್ರೀಗಳು ಕರೆ ನೀಡಿದರು.
ವೈವಿಧ್ಯತೆಯಲ್ಲಿ ಏಕತೆಯ ಸಂದೇಶ:
ಭಾರತೀಯ ಸಂಸ್ಕೃತಿಯು ಎಲ್ಲರಿಗೂ ಸಮಾನವಾದುದು ಮತ್ತು ಇದರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಶ್ರೀಗಳು ಪ್ರತಿಪಾದಿಸಿದರು. ಭಾರತವು ಹಲವು ಪ್ರಾಂತ್ಯಗಳು, ಭಾಷೆಗಳು, ಸಮಾಜಗಳು ಮತ್ತು ಸಂಪ್ರದಾಯಗಳ ಸಂಗಮವಾಗಿದ್ದರೂ, ಭಾರತೀಯ ಸಂಸ್ಕೃತಿಯು ಎಲ್ಲವನ್ನೂ ಒಂದೇ ಸೂತ್ರದಲ್ಲಿ ಬೆಸೆಯುತ್ತದೆ. ಹೂವಿನ ಹಾರದಲ್ಲಿ ವಿವಿಧ ಬಣ್ಣ ಮತ್ತು ಪರಿಮಳದ ಹೂವುಗಳಿದ್ದರೂ, ಅವು ಒಂದೇ ದಾರದಿಂದ ಒಗ್ಗೂಡಿರುವಂತೆ, ಭಾರತೀಯ ಸಂಸ್ಕೃತಿಯು ದೇಶದ ವೈವಿಧ್ಯತೆಯನ್ನು ಒಂದುಗೂಡಿಸುತ್ತದೆ ಎಂದು ಉಪಮೆಯ ಮೂಲಕ ವಿವರಿಸಿದರು.
ಪ್ರಾದೇಶಿಕತೆ ಮೀರಿದ ರಾಷ್ಟ್ರೀಯತೆ:
“ನಾವು ದಕ್ಷಿಣ ಭಾರತದವರಲ್ಲ, ದಕ್ಷಿಣದಲ್ಲಿ ಹುಟ್ಟಿದ ಭಾರತದವರು” ಎಂಬ ಭಾವನೆಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದು ಸ್ವಾಮೀಜಿಯವರು ಸಂದೇಶ ನೀಡಿದರು. ಈ ದೇಶ ನಮ್ಮದು, ಈ ಸಂಸ್ಕೃತಿ ನಮ್ಮದು ಎಂಬ ಭಾವನೆ ಎಲ್ಲರಲ್ಲೂ ಮೂಡಬೇಕು ಎಂದು ಆಶಿಸಿದರು.
ಶ್ರೀ ಕಂಚಿ ಕಾಮಕೋಟಿ ಪೀಠಾಧಿಪತಿ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮಿಗಳು ಭಾರತೀಯ ಸಂತ ಮಹಾ ಸಮ್ಮೇಳನದಲ್ಲಿ ಭಾಗವಹಿಸಿ, ಸಮ್ಮೇಳನದ ಸಂಕಲ್ಪದ ಸಂಸ್ಕೃತ ಆವೃತ್ತಿಯನ್ನು ಓದಿದರು. ನಂತರ ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಸಮ್ಮೇಳನವನ್ನು ಆಯೋಜಿಸುವಲ್ಲಿ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮತ್ತು ಶ್ರೀ ಜಯೇಂದ್ರ ಪುರಿ ಅವರ ಪ್ರಯತ್ನಗಳನ್ನು ಶ್ಲಾಘಿಸಿದರು.
ಸಮ್ಮೇಳನವು ಸಾಮಾನ್ಯ ಕನಿಷ್ಠ ಕಾರ್ಯಕ್ರಮದೊಂದಿಗೆ ಪ್ರಾರಂಭವಾಗಿದೆ ಮತ್ತು ಭವಿಷ್ಯದಲ್ಲಿ ಇದು ಸಾಮಾನ್ಯ ಗರಿಷ್ಠ ಕಾರ್ಯಕ್ರಮವಾಗಿ ಅರಳಬೇಕಾಗಿದೆ ಎಂದು ಹೇಳಿದರು. ಸಮ್ಮೇಳನದಲ್ಲಿ ಕಲ್ಪಿಸಲಾದ ಕೇಂದ್ರೀಕೃತ ಪ್ರಯತ್ನಗಳು ನಮ್ಮ ದೇಶವನ್ನು ‘ವಿಶ್ವ ಗುರು’ವನ್ನಾಗಿ ಮಾಡುತ್ತದೆ. ಇದು ಜಗತ್ತಿನಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಖಾತ್ರಿಪಡಿಸುತ್ತದೆ ಎಂದು ಶ್ರೀಗಳು ತಿಳಿಸಿದರು ಎಂದು ಕಂಚಿಮಠದ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.
ಸಭೆಯಲ್ಲಿ ಚಿತ್ರಕೂಟಾ ಸ್ವಾಮಿ ರಾಮಭದ್ರಾಚಾರ್ಯ, ಕಂಚಿ ಕಾಮಕೋಟಿ ಪೀಠಾ ಶಂಕರಾಚಾರ್ಯ ಸ್ವಾಮಿ ವಿಜಯೇಂದ್ರ ಸರಸ್ವತಿ ಸ್ವಾಮಿ, ಪಂ. ಗೋವಿಂದದೇವ ಗಿರಿ, ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮಿ, ಸುತ್ತೂರಿನ ದೇಶಿಕೇಂದ್ರ ಸ್ವಾಮಿ, ಹರಿಹರಪುರ ಮಠದ ಸ್ವಯಂ ಪ್ರಕಾಶ್ ಸಚ್ಚಿದಾನಂದ ಸ್ವಾಮಿ, ಕೈಲಾಸ ಆಶ್ರಮದ ಜಯೇಂದ್ರಪುರಿ ಮಹಾಸ್ವಾಮಿ, ಆದಿಚುಂಚನಗಿರಿ ನಿರ್ಮಲಾನಂದ ಮಹಾಸ್ವಾಮಿ ಹಾಗೂ ಸನಾತನ ಸಂಸ್ಥೆಯ ಧಾರ್ಮಿಕ ಪ್ರಚಾರಕ ಸಂತ ರಮಾನಂದ ಗೌಡ, ಜಪಾನ್, ಅಮೆರಿಕ ಅಥವಾ ಇತರ ದೇಶಗಳ ಬೌದ್ಧ ಮತ್ತು ಜೈನ ಅನುಯಾಯಿಗಳು ಭಾಗವಹಿಸಿದ್ದರು.