ಬೆಂಗಳೂರು: ಜೂ.16 www.bengaluruwire.com : ಬಿಬಿಎಂಪಿ ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿ ಕಟ್ಟಿದ ಕಟ್ಟಡಗಳ ಹೆಚ್ಚುವರಿ ಭಾಗಗಳನ್ನು ತೆರವು ಮಾಡುವ ಕಾರ್ಯಾಚರಣೆ ಮುಂದುವರೆಸಿದೆ. ಯಲಹಂಕ ವಲಯ ವ್ಯಾಪ್ತಿಯಲ್ಲಿ ಇಂದು 12 ಕಟ್ಟಡಗಳ ವ್ಯತಿರಿಕ್ತ ಭಾಗ ಅಥವಾ ಹೆಚ್ಚುವರಿ ಮಹಡಿಗಳನ್ನು ತೆರವುಗೊಳಿಸಲಾಗಿದೆ.
ಯಲಹಂಕ ಹಾಗೂ ಬ್ಯಾಟರಾನಪುರ ವಿಧಾನಸಭಾ ಕ್ಷೇತ್ರಗಳಲ್ಲಿ ನಕ್ಷೆ ಮಂಜೂರಾತಿ ಪಡೆದಿರುವುದನ್ನು ಉಲ್ಲಂಘಿಸಿ ನಿರ್ಮಾಣ ಮಾಡುತ್ತಿರುವ ಕಟ್ಟಡಗಳ ವ್ಯತಿರಿಕ್ತ ಹಾಗೂ ಹೆಚ್ಚುವರಿ ಮಹಡಿಗಳ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ.
ಯಲಹಂಕ ವಿಧಾನ ಸಭಾ ಕ್ಷೇತ್ರದಲ್ಲಿನ ಕೆಂಪೇಗೌಡ ವಾರ್ಡ್, ಅಟ್ಟೂರು ವಾರ್ಡ್, ಯಲಹಂಕ ನ್ಯೂಟೌನ್ ವಾರ್ಡ್, ಯಲಹಂಕ ಉಪನಗರ ಉಪ ವಿಭಾಗದ ವಾರ್ಡ್, ಬ್ಯಾಟರಾಯನಪುರ ವಿಧಾನ ಸಭಾ ಕ್ಷೇತ್ರದ ವಾರ್ಡ್ ಸಂಖ್ಯೆ-05, 06, ಕೊಡಿಗೆಹಳ್ಳಿ ವಾರ್ಡ್, ವಿದ್ಯಾರಣ್ಯಪುರ ವಾರ್ಡಿನ ಹೆಚ್.ಎಂ.ಟಿ ಬಡಾವಣೆಗಳಲ್ಲಿನ 12 ಕಟ್ಟಡಗಳ ಹೆಚ್ಚುವರಿ ಮಹಡಿ ಅಥವಾ ಭಾಗಗಳನ್ನು ಪಾಲಿಕೆ ಸಿಬ್ಬಂದಿ ತೆರವು ಮಾಡಿದ್ದಾರೆ ಎಂದು ಯಲಹಂಕ ವಲಯ ಆಯುಕ್ತರಾದ ಕರೀಗೌಡ ಅವರು ತಿಳಿಸಿದರು.
ಕಟ್ಟಡದ ಮಾಲೀಕರಿಗೆ ನೋಟಿಸ್ ಜಾರಿ:

ಯಲಹಂಕ ವಲಯ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ನಕ್ಷೆ ಮಂಜೂರಾತಿ ಪಡೆದು, ನಕ್ಷೆ ಉಲ್ಲಂಘಿಸಿ ವ್ಯತಿಕ್ತವಾಗಿ ನಿರ್ಮಿಸುವ ಹಾಗೂ ಹೆಚ್ಚುವರಿ ಮಹಡಿಗಳನ್ನು ನಿರ್ಮಾಣ ಮಾಡುವವರಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ. ಅದರಂತೆ ಕೆಲ ಕಟ್ಟಡ ಮಾಲೀಕರು ಸ್ವಯಂ ಪ್ರೇರಿತವಾಗಿ ತೆರವುಗೊಳಿಸುತ್ತಿದ್ದಾರೆ. ಇನ್ನು ಕೆಲವರು ತೆರವುಗೊಳಿಸಿರುವುದಿಲ್ಲ.

ಅಂತಹ ಕಟ್ಟಡಗಳ ವ್ಯತಿರಿಕ್ತ ಭಾಗ ಹಾಗೂ ಹೆಚ್ಚುವರಿ ಮಹಡಿಗಳನ್ನು ಪಾಲಿಕೆ ಅಧಿಕಾರಿಗಳ ಸಮ್ಮುಖದಲ್ಲಿ ತೆರವುಗೊಳಿಸಲಾಗುತ್ತಿದೆ. ತೆರವು ಕಾರ್ಯಚರಣೆ ವೇಳೆ ತಗಲುವ ವೆಚ್ಚವನ್ನು ಕಟ್ಟಡದ ಮಾಲೀಕರಿದಂಲೇ ವಸೂಲಿ ಮಾಡಲಾಗುವುದು ಎಂದು ವಿಶೇಷ ಆಯುಕ್ತ ಕರೀಗೌಡ ಅವರು ಹೇಳಿದರು.
ಕಟ್ಟಡ ಮಾಲೀಕರಿಗೆ ಎಚ್ಚರಿಕೆ:
ಯಲಹಂಕ ವಲಯ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಮಾಡಲು ನಕ್ಷೆ ಪಡೆಯುವಂತಹ ಮಾಲೀಕರಿಗೆ ನಕ್ಷೆ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಒಂದು ವೇಳೆ ನಕ್ಷೆ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಿದಲ್ಲಿ ಕಟ್ಟಡ ತೆರವುಗೊಳಿಸುವುದರ ಜೊತೆಗೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.