ನವದೆಹಲಿ, ಜೂ.13 www.bengaluruwire.com : ಮುಖ್ಯಮಂತ್ರಿ ಸಿದ್ದರಾಮಯ್ಯನವರು, ದೆಹಲಿಯಲ್ಲಿ ನಡೆದ 16ನೇ ಹಣಕಾಸು ಆಯೋಗದ ಸಭೆಯಲ್ಲಿ ಶುಕ್ರವಾರ ಭಾಗವಹಿಸಿ, ತೆರಿಗೆ ಹಂಚಿಕೆ ಸಂಬಂಧ ರಾಜ್ಯದ ಆಶಯಗಳು, ನಿರೀಕ್ಷೆಗಳು ಮತ್ತು ಪ್ರಸ್ತಾವನೆಗಳನ್ನು ಆಯೋಗದ ಅಧ್ಯಕ್ಷರಾದ ಡಾ.ಅರವಿಂದ್ ಪನಗಾರಿಯ ಮತ್ತು ಸದಸ್ಯರ ಮುಂದೆ ಮಂಡಿಸಿದರು.
ಸಭೆಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಕರ್ನಾಟಕದ ಪ್ರಮುಖ ಪಾತ್ರವನ್ನು ಒತ್ತಿ ಹೇಳಿದರು. ರಾಜ್ಯವು ದೇಶದ ಒಟ್ಟು ಜಿಡಿಪಿಗೆ ಸುಮಾರು 8.7% ಕೊಡುಗೆ ನೀಡುತ್ತಿದ್ದು, ಜಿ.ಎಸ್.ಟಿ ಸಂಗ್ರಹಣೆಯಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ವಿವರಿಸಿದರು.
“ಕರ್ನಾಟಕದ ಆರ್ಥಿಕ ಬಲವು ರಾಷ್ಟ್ರೀಯ ಬೆಳವಣಿಗೆಗೆ ಇಂಧನವಾಗಿದೆ. ಬೆಳವಣಿಗೆಗೆ ದಂಡ ವಿಧಿಸಬಾರದು, ಬದಲಾಗಿ ಪ್ರೋತ್ಸಾಹ ದೊರೆಯುವಂತೆ ನೋಡಿಕೊಳ್ಳುವ ಸಮಯ ಇದು. ಸಮತೋಲಿತ, ಸಂಪನ್ಮೂಲ ಹಂಚಿಕೆಯ ದೃಷ್ಟಿಕೋನವನ್ನು ಅಳವಡಿಸಿಕೊಳ್ಳುವಂತೆ ನಾವು ಆಯೋಗವನ್ನು ಒತ್ತಾಯಿಸಿದ್ದೇವೆ” ಎಂದು ಅವರು ಹೇಳಿದರು.
ಸಂಪನ್ಮೂಲ ಹಂಚಿಕೆಯಲ್ಲಿನ ತೀವ್ರ ಅಸಮತೋಲನಕ್ಕೆ ಆಕ್ಷೇಪ:

ಈ ಪ್ರಮುಖ ಕೊಡುಗೆಯ ಹೊರತಾಗಿಯೂ, ಸಂಪನ್ಮೂಲ ಹಂಚಿಕೆಯಲ್ಲಿ ಉಂಟಾಗಿರುವ ತೀವ್ರ ಅಸಮತೋಲನವನ್ನು ಮುಖ್ಯಮಂತ್ರಿಗಳು ಪ್ರಸ್ತುತ ಪಡಿಸಿದರು. ರಾಜ್ಯದಿಂದ ಕೇಂದ್ರಕ್ಕೆ ಸ್ವೀಕೃತವಾಗುವ ತೆರಿಗೆಯ ಪ್ರತಿ ರೂಪಾಯಿಗೆ ಪ್ರತಿಯಾಗಿ ರಾಜ್ಯವು ಕೇವಲ 15 ಪೈಸೆ ಮಾತ್ರ ಪಡೆಯುತ್ತದೆ ಎಂದು ತಿಳಿಸಿದರು.

15ನೇ ಹಣಕಾಸು ಆಯೋಗವು ಕರ್ನಾಟಕದ ತೆರಿಗೆ ಪಾಲನ್ನು ಶೇ.4.713 ರಿಂದ ಶೇ.3.647 ಕ್ಕೆ ಇಳಿಕೆ ಮಾಡಿದ್ದರಿಂದ 15ನೇ ಹಣಕಾಸು ಆಯೋಗದ ಅವಧಿಯಲ್ಲಿ ₹80,000 ಕೋಟಿಗಳಷ್ಟು ನಷ್ಟವಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ರಾಜ್ಯದ ಪ್ರಮುಖ ಶಿಫಾರಸುಗಳು:
ಸಂಪನ್ಮೂಲ ಹಂಚಿಕೆಯಲ್ಲಿನ ಈ ಅಸಮತೋಲನವನ್ನು ಸರಿಪಡಿಸಲು ರಾಜ್ಯವು 16ನೇ ಹಣಕಾಸು ಆಯೋಗಕ್ಕೆ ಈಗಾಗಲೇ ಜ್ಞಾಪನಾ ಪತ್ರವನ್ನು ಸಲ್ಲಿಸಿದೆ. ಮುಖ್ಯಮಂತ್ರಿಗಳು ಮಂಡಿಸಿದ ಪ್ರಮುಖ ಪ್ರಸ್ತಾವನೆಗಳು ಹೀಗಿವೆ:
* ಕೇಂದ್ರ ಹಾಗೂ ರಾಜ್ಯಗಳ ನಡುವಿನ ಹಂಚಿಕೆಯು ಕನಿಷ್ಠ 50% ಕ್ಕೆ ಹೆಚ್ಚಿಸಬೇಕು ಮತ್ತು ಸೆಸ್ಗಳು ಹಾಗೂ ಸರ್ಚಾರ್ಜ್ಗಳನ್ನು 5% ಕ್ಕೆ ಮಿತಿಗೊಳಿಸಬೇಕು.
* ಕೇಂದ್ರದ ತೆರಿಗೆಯೇತರ ಆದಾಯವನ್ನು ರಾಜ್ಯಗಳಿಗೆ ಹಂಚಿಕೆಯಾಗುವ ಪಾಲಿನಲ್ಲಿ (divisible pool) ಸೇರಿಸಲು ಶಿಫಾರಸು ಮಾಡಿದೆ.
* ರಾಜ್ಯಗಳ ನಡುವಿನ ಹಂಚಿಕೆಗೆ ಸಂಬಂಧಿಸಿದಂತೆ, ಪ್ರತಿ ರಾಜ್ಯವು ತಾನು ನೀಡುವ ಕೊಡುಗೆಯಲ್ಲಿ ಸುಮಾರು 60% ಅನ್ನು ಉಳಿಸಿಕೊಳ್ಳಲು ಮತ್ತು 40% ಅನ್ನು ಉಳಿದ ರಾಜ್ಯಗಳಿಗೆ ಹಂಚಿಕೆಯಾಗಬೇಕೆಂದು ಸೂಚಿಸಿದೆ. ಇದು ಬೆಳವಣಿಗೆ ಮತ್ತು ಸಮಾನತೆ ಎರಡನ್ನೂ ಖಚಿತಪಡಿಸುತ್ತದೆ.
* ಸೂತ್ರವನ್ನು ನ್ಯಾಯಯುತವಾಗಿಸಲು, ಕರ್ನಾಟಕವು ಆದಾಯ-ದೂರ (income-distance) ಮಾನದಂಡದ ಪಾಲನ್ನು ಕಡಿಮೆ ಮಾಡಲು ಮತ್ತು ರಾಜ್ಯದ ಆರ್ಥಿಕ ಕೊಡುಗೆಗೆ ಹೆಚ್ಚಿನ ಪಾಲನ್ನು ನೀಡುವಂತೆ ಆಯೋಗಕ್ಕೆ ಪ್ರಸ್ತಾಪಿಸಿದೆ.
ಹೆಚ್ಚುವರಿ ಜ್ಞಾಪಕ ಪತ್ರದ ಪ್ರಮುಖ ಪ್ರಸ್ತಾವನೆಗಳು:
ಮುಖ್ಯಮಂತ್ರಿಗಳು ಹೆಚ್ಚುವರಿ ಜ್ಞಾಪಕ ಪತ್ರವನ್ನು ಆಯೋಗಕ್ಕೆ ಸಲ್ಲಿಸಿದರು. ಇದರಲ್ಲಿ, ಸಂಪನ್ಮೂಲ ಹಂಚಿಕೆಯು ಹೆಚ್ಚು ಬೆಳವಣಿಗೆ-ಆಧಾರಿತ ಮತ್ತು ನ್ಯಾಯಯುತವಾಗಿಸಲು ನಿರ್ಣಾಯಕ ಸುಧಾರಣೆಗಳಿಗೆ ಕರೆ ನೀಡಿದ್ದಾರೆ.
ಪ್ರಮುಖ ಪ್ರಸ್ತಾವನೆಗಳು:
* ತಲಾವಾರು ತೆರಿಗೆ ಹಂಚಿಕೆಯಲ್ಲಿ ಹೆಚ್ಚುತ್ತಿರುವ ಅಸಮಾನತೆಗಳು, ಆದಾಯ ಕೊರತೆ, ಅನುದಾನಗಳ ಅವೈಜ್ಞಾನಿಕ ವಿನ್ಯಾಸ ಮತ್ತು ರಾಜ್ಯ-ನಿರ್ದಿಷ್ಟ ಅನುದಾನಗಳ ಅನಿರೀಕ್ಷಿತತೆಯ ಕುರಿತು ಪ್ರಸ್ತಾಪಿಸಲಾಗಿದೆ.
* ದೇಶದ ಜಿಡಿಪಿ (GDP) ಗೆ ರಾಜ್ಯದ ಕೊಡುಗೆಯು ಹೆಚ್ಚಾಗಿರುವ ಹೊರತಾಗಿಯೂ, ತಲಾವಾರು ತೆರಿಗೆ ಹಂಚಿಕೆಯು ಗಮನಾರ್ಹವಾಗಿ ಕುಸಿದಿದೆ – 14ನೇ ಮತ್ತು 15ನೇ ಹಣಕಾಸು ಆಯೋಗಗಳ ನಡುವಿನ ರಾಷ್ಟ್ರೀಯ ಸರಾಸರಿಯ 95% ರಿಂದ 73% ಕ್ಕೆ ಕುಸಿದಿದೆ.
* ಸಂಪನ್ಮೂಲ ಹಂಚಿಕೆಯಲ್ಲಿ ಸಮಾನತೆ ಮುಖ್ಯವಾಗಿದ್ದರೂ, ಇದು ಸ್ಥಿರವಾದ ಆರ್ಥಿಕ ಕಾರ್ಯಕ್ಷಮತೆ ಮತ್ತು ಆರ್ಥಿಕ ಶಿಸ್ತನ್ನು ಪಾಲಿಸುವ ರಾಜ್ಯಗಳಿಗೆ ದಂಡ ವಿಧಿಸುವಂತಾಗಬಾರದು.
* ಆದ್ದರಿಂದ, ಆದಾಯ-ದೂರ ಮಾನದಂಡದ ಪಾಲನ್ನು 20% ರಷ್ಟು ಕಡಿಮೆ ಮಾಡಿ ದೇಶದ ಜಿಡಿಪಿಯಲ್ಲಿ ರಾಜ್ಯಗಳ ಕೊಡುಗೆಯನ್ನು ಅಳತೆಗೋಲಾಗಿ ಪರಿಗಣಿಸಿ ಇದಕ್ಕೆ 20% ಅಂಕವನ್ನು ನೀಡಬೇಕೆಂದು ಪ್ರಸ್ತಾಪಿಸಿದೆ.
* ರಾಜಸ್ವ ಕೊರತೆ ಅನುದಾನಗಳನ್ನು ಅಂದಾಜಿಸಲು ಆಯೋಗವು ಪರಿಕಲ್ಪಿಸುವ ವೆಚ್ಚದ ಆದ್ಯತೆಗಳು ವ್ಯಕ್ತಿನಿಷ್ಠ ಮೌಲ್ಯಮಾಪನಗಳನ್ನು ಪ್ರತಿಬಿಂಬಿಸುತ್ತವೆ. ಕಲ್ಯಾಣ ಕಾರ್ಯಕ್ರಮಗಳ ಮೇಲಿನ ವೆಚ್ಚಗಳನ್ನು ಕನಿಷ್ಠ ಸಂಬಳ, ಪಿಂಚಣಿ ಮತ್ತು ಬಡ್ಡಿ ಪಾವತಿಗಳಂತಹ ಬದ್ಧ ವೆಚ್ಚಗಳಿಗೆ ಸಮಾನವಾಗಿ ಪರಿಗಣಿಸಬೇಕು.
* ಕೇಂದ್ರ ಸರ್ಕಾರದ ವಿವೇಚನಾಧಾರಿತ ಅನುದಾನವಾಗಿರುವ ರಾಜ್ಯ ಕೇಂದ್ರಿತ ಅನುದಾನದ ಬದಲಾಗಿ ಒಟ್ಟು ಕೇಂದ್ರ ಸ್ವೀಕೃತಿಗಳ 0.3% ರಷ್ಟು ಅನುದಾನವನ್ನು ಸೂತ್ರ ಆಧಾರಿತ ಹಂಚಿಕೆಯ ಮೂಲಕ ರಾಜ್ಯಗಳಿಗೆ ನೀಡಬೇಕೆಂದು ಶಿಫಾರಸು ಮಾಡಲಾಗಿದೆ.
* ಬೆಂಗಳೂರಿನ ಮೂಲಸೌಕರ್ಯವನ್ನು ಬಲಪಡಿಸಲು ₹1.15 ಲಕ್ಷ ಕೋಟಿ ಹೂಡಿಕೆಗೆ ಬೆಂಬಲವನ್ನು ಮುಖ್ಯಮಂತ್ರಿ ಕೋರಿದರು.
* ಕಲ್ಯಾಣ ಕರ್ನಾಟಕ ಮತ್ತು ಮಲೆನಾಡಿನಲ್ಲಿ ಪ್ರಾದೇಶಿಕ ಅಂತರವನ್ನು ಕಡಿಮೆ ಮಾಡುವ ಅಗತ್ಯವನ್ನು ಅವರು ಒತ್ತಿ ಹೇಳಿದರು.
ಈ ಸಭೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್, ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಮುಖ್ಯಮಂತ್ರಿ ಕಚೇರಿ ಮತ್ತು ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.