ಬೆಂಗಳೂರು, ಜೂ.13 www.bengaluruwire.com : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ತನ್ನ ಮೂಲಸೌಕರ್ಯ ಯೋಜನೆಗಳಿಗೆ ಅಡ್ಡಿಯಾಗಿದ್ದ ಆಸ್ತಿಗಳನ್ನು ವಶಪಡಿಸಿಕೊಳ್ಳುವ ಕಾರ್ಯಾಚರಣೆಯನ್ನು ಮುಂದುವರಿಸಿದೆ. ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ರಸ್ತೆ ನಿರ್ಮಾಣಕ್ಕೆ ಅಗತ್ಯವಿದ್ದ 3 ಎಕರೆ 12 ಗುಂಟೆ ಜಮೀನನ್ನು ನ್ಯಾಯಾಲಯದ ಆದೇಶದ ಬೆನ್ನಲ್ಲೇ ತೆರವುಗೊಳಿಸಿದೆ.
ಬೆಂಗಳೂರು ದಕ್ಷಿಣ ತಾಲ್ಲೂಕು, ಕೆಂಗೇರಿ ಹೋಬಳಿ, ಸೂಲಿಕೆರೆ ಗ್ರಾಮದ ಸರ್ವೆ ನಂ. 43/1 ರಲ್ಲಿರುವ ಒಟ್ಟು 3 ಎಕರೆ 12 ಗುಂಟೆ ಪ್ರದೇಶವನ್ನು ಮುಖ್ಯ ವರ್ತುಲ ರಸ್ತೆ ಕಾಮಗಾರಿಗೆ ಭೂಸ್ವಾಧೀನ ಮಾಡಲಾಗಿತ್ತು. ಆದರೆ, ಈ ಪ್ರದೇಶದ ಭೂಮಾಲೀಕರು ರಸ್ತೆ ಕಾಮಗಾರಿ ಮಾಡಲು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ದೀರ್ಘ ಕಾನೂನು ಹೋರಾಟದ ಬಳಿಕ, ಪ್ರಾಧಿಕಾರದ ಪರವಾಗಿ ನ್ಯಾಯಾಲಯವು ತೀರ್ಪು ನೀಡಿದ ಹಿನ್ನೆಲೆಯಲ್ಲಿ, ಬಿಡಿಎ ಈ ಕ್ರಮ ಕೈಗೊಂಡಿದೆ.
ನ್ಯಾಯಾಲಯದ ಆದೇಶದ ನಂತರವೂ ಭೂಮಾಲೀಕರು ಬಡಾವಣೆಯ ಮುಖ್ಯ ರಸ್ತೆಯ ಕಾಮಗಾರಿಗೆ ಅಡ್ಡಿಪಡಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ, ಸಹಾಯಕ ಕಾರ್ಯಪಾಲಕ ಅಭಿಯಂತರರು ಭೂಮಾಲೀಕರುಗಳ ವಿರುದ್ಧ ಎಫ್.ಐ.ಆರ್. ಅನ್ನು ದಾಖಲಿಸಿ, ಸ್ಥಳೀಯ ಪೊಲೀಸರ ನೆರವಿನೊಂದಿಗೆ ಶುಕ್ರವಾರ ಬೆಳಗ್ಗೆ ಈ ಪ್ರದೇಶವನ್ನು ಯಶಸ್ವಿಯಾಗಿ ವಶಪಡಿಸಿಕೊಂಡರು.
ಈ ಕಾರ್ಯಾಚರಣೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾರ್ಯನಿರತ ಪಡೆಯ ಆರಕ್ಷಕ ಅಧೀಕ್ಷಕರು, ನಾಡಪ್ರಭು ಕೆಂಪೇಗೌಡ ವಿಭಾಗದ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಇವರುಗಳನ್ನೊಳಗೊಂಡ ತಂಡ ಸ್ಥಳೀಯ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ನೆರವೇರಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
