ಅಹಮದಾಬಾದ್, ಜೂ.12 www.bengaluruwire.com : ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾಕ್ಕೆ ಸೇರಿದ ಬೋಯಿಂಗ್ 787-8 ಡ್ರೀಮ್ಲೈನರ್ ವಿಮಾನವು ಟೇಕ್ ಆಫ್ ಆದ ತಕ್ಷಣವೇ ಪತನಗೊಂಡು ಭಾರಿ ಅಪಘಾತ ಸಂಭವಿಸಿದೆ.
ವಿಮಾನದಲ್ಲಿ 232 ಪ್ರಯಾಣಿಕರು ಮತ್ತು 10 ಸಿಬ್ಬಂದಿ ಸೇರಿದಂತೆ ಒಟ್ಟು 242 ಜನರಿದ್ದರು ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ತಿಳಿಸಿದೆ. ಈ ಅಪಘಾತದಿಂದಾಗಿ ವಿಮಾನದಲ್ಲಿದ್ದ ಬಹುತೇಕ ಮಂದಿ ಮೃತಪಟ್ಟಿದ್ದು, ಹಲವರು ತೀವ್ರ ಗಾಯಗೊಂಡಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ತುರ್ತು ಚಿಕಿತ್ಸೆಗೆ ವರ್ಗಾಯಿಸಲಾಗಿದೆ.
ಏರ್ ಇಂಡಿಯಾ ವಿಮಾನವು ಬಿಜೆ ಹಾಸ್ಟೆಲ್ ಮೇಲೆ ಪತನವಾಗಿದ್ದು, ಘಟನೆಯ ಸಂದರ್ಭದಲ್ಲಿ 50 ಜನ ವೈದ್ಯ ವಿದ್ಯಾರ್ಥಿಗಳಿದ್ದರು. ವಿಮಾನ ಅಪಘಾತದಿಂದ ಹಾಸ್ಟೆಲ್ ಕಟ್ಟಡ ಸಂಪೂರ್ಣವಾಗಿ ಧ್ವಂಸವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬುಧವಾರ ಮಧ್ಯಾಹ್ನ 1.38ಕ್ಕೆ ಈ ದುರಂತ ಸಂಭವಿಸಿದೆ. ವಿಮಾನವು ಕಡಿಮೆ ಎತ್ತರದಲ್ಲಿ ಹಾರಲು ಹೆಣಗಾಡುತ್ತಿರುವುದು ಮತ್ತು ನಂತರ ಕಟ್ಟವೊಂದರ ಮೇಲೆ ಅಪ್ಪಳಿಸಿ ಭಾರಿ ಬೆಂಕಿಯ ಚೆಂಡಾಗಿ ಸ್ಫೋಟಗೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ. ಲಂಡನ್ಗೆ ಸುದೀರ್ಘ ಪ್ರಯಾಣಕ್ಕೆ ಸಿದ್ಧವಾಗಿದ್ದರಿಂದ ವಿಮಾನದಲ್ಲಿ ಭಾರೀ ಪ್ರಮಾಣದ ಇಂಧನವಿತ್ತು ಎನ್ನಲಾಗಿದೆ.


ಏರ್ ಇಂಡಿಯಾ ತನ್ನ ಹೇಳಿಕೆಯಲ್ಲಿ, “ಅಹಮದಾಬಾದ್-ಲಂಡನ್ ಗ್ಯಾಟ್ವಿಕ್ ಮಾರ್ಗದ AI 171 ವಿಮಾನವು ಇಂದು ಅಪಘಾತಕ್ಕೀಡಾಗಿದೆ. ಪ್ರಸ್ತುತ ನಾವು ಹೆಚ್ಚಿನ ವಿವರಗಳನ್ನು ಖಚಿತಪಡಿಸಿಕೊಳ್ಳುತ್ತಿದ್ದೇವೆ ಮತ್ತು ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ನೀಡುತ್ತೇವೆ” ಎಂದು ತಿಳಿಸಿದೆ.

ಅಪಘಾತ ಸ್ಥಳದಿಂದ ದಟ್ಟವಾದ ಹೊಗೆ ಆಕಾಶಕ್ಕೆ ಏರುತ್ತಿರುವ ದೃಶ್ಯಗಳು ಕಂಡುಬಂದಿವೆ. ಕನಿಷ್ಠ ಎರಡು ಡಜನ್ ಆಂಬ್ಯುಲೆನ್ಸ್ಗಳು ಸ್ಥಳಕ್ಕೆ ಧಾವಿಸಿದ್ದು, ಕೆಲ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಪೊಲೀಸರು ಆ ಪ್ರದೇಶದಲ್ಲಿ ಸಂಚಾರವನ್ನು ನಿರ್ಬಂಧಿಸಿದ್ದಾರೆ.

ದುರ್ಘಟನೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ತೀವ್ರ ಸಂತಾಪ ಸೂಚಿಸಿದ್ದಾರೆ. ಏರ್ ಇಂಡಿಯಾ ಪತನವಾದ ವಿಮಾನದಲ್ಲಿ 53 ಬ್ರಿಟನ್ ಪ್ರಜೆಗಳಿದ್ದರು ಎಂದು ಬ್ರಿಟನ್ ಪ್ರಧಾನಿ ಹೇಳಿದ್ದಾರೆ.
ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಾಪು ಅವರು ವೈಯಕ್ತಿಕವಾಗಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದು, ಎಲ್ಲಾ ವಿಮಾನಯಾನ ಮತ್ತು ತುರ್ತು ಪ್ರತಿಕ್ರಿಯೆ ಏಜೆನ್ಸಿಗಳಿಗೆ ತ್ವರಿತ ಮತ್ತು ಸಂಘಟಿತ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ್ದಾರೆ. “ವಿಮಾನದಲ್ಲಿದ್ದ ಎಲ್ಲರಿಗೂ ಮತ್ತು ಅವರ ಕುಟುಂಬಗಳಿಗೂ ಅವರು ಕ್ಷೇಮವಾಗಿರಲೆಂದು ನಾನು ಪ್ರಾರ್ಥಿಸುತ್ತೇನೆ” ಎಂದು ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇಂದು ಮಧ್ಯಾಹ್ನ ನಡೆದ ಏರ್ ಇಂಡಿಯಾ ದುರಂತದಲ್ಲಿ ಗುಜರಾತ್ ಮಾಜಿ ಮುಖ್ಯಮಂತ್ರಿ 68 ವರ್ಷದ ವಿಜಯ್ ರೂಪಾನಿ ಕೂಡ ಮೃತಪಟ್ಟಿದ್ದಾರೆ. ಅವರು ಇಂದು ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗಿನ ಫೊಟೊವನ್ನು ಸಹ ಪ್ರಯಾಣಿಕರೊಬ್ಬರು ಸೆಲ್ಫಿ ತೆಗೆದು ತಮ್ಮವರಿಗೆ ಕಳುಹಿಸಿದ ಫೊಟೊ ಬೆಂಗಳೂರು ವೈರ್ ಗೆ ಲಭ್ಯವಾಗಿದೆ.

ಡಿಜಿಸಿಎ ನೀಡಿರುವ ಹೇಳಿಕೆಯ ಪ್ರಕಾರ, 8,200 ಗಂಟೆಗಳ ಅನುಭವವಿರುವ ಕ್ಯಾಪ್ಟನ್ ಸುಮೀತ್ ಸಬರ್ವಾಲ್ ಮತ್ತು 1,100 ಗಂಟೆಗಳ ಅನುಭವವಿರುವ ಫಸ್ಟ್ ಆಫೀಸರ್ ಕ್ಲೈವ್ ಕುಂದರ್ ಅವರು ಅಪಘಾತಕ್ಕೆ ಕೆಲವೇ ಮೊದಲು ‘ಮೇಡೇ’ (Mayday) ಕರೆ ಮಾಡಿದ್ದರು. ದುರಂತದ ಬಗ್ಗೆ ವಿಮಾನಯಾನ ಸಚಿವಾಲಯವು ತನಿಖೆಗೆ ಆದೇಶಿಸಿದೆ. 2010ರಲ್ಲಿ ಮಂಗಳೂರಿನಲ್ಲಿ ಇಂತದ್ದೇ ದೊಡ್ಡ ವಿಮಾನ ದುರಂತ ನಡೆದಾಗ 158 ಜನ ಸಾವನ್ನಪ್ಪಿದ್ದರು.

ಮೇಡೇ ಕರೆ ಎಂದರೇನು?:
ಮೇಡೇ ಕರೆ ಎಂಬುದು ಅಂತರರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಸಂಕಷ್ಟ ಸಂಕೇತವಾಗಿದ್ದು, ಇದನ್ನು ಪ್ರಾಥಮಿಕವಾಗಿ ವಾಯುಯಾನ ಮತ್ತು ಸಮುದ್ರ ಸಂವಹನದಲ್ಲಿ ಜೀವಕ್ಕೆ ಅಪಾಯಕಾರಿ ತುರ್ತು ಪರಿಸ್ಥಿತಿಯನ್ನು ಸೂಚಿಸಲು ಬಳಸಲಾಗುತ್ತದೆ. ಈ ಪದವು ಫ್ರೆಂಚ್ ಪದ “ಮೈಡರ್” ನಿಂದ ಬಂದಿದೆ, ಇದರರ್ಥ “ನನಗೆ ಸಹಾಯ ಮಾಡಿ”. ಇದನ್ನು ಮೊದಲು 1920 ರ ದಶಕದಲ್ಲಿ ಪರಿಚಯಿಸಲಾಯಿತು ಮತ್ತು ಈಗ ಜಾಗತಿಕವಾಗಿ ಪ್ರಮಾಣಿತ ಪ್ರೋಟೋಕಾಲ್ ಆಗಿದೆ.