ಆನೇಕಲ್, ಜೂ.11 www.bengaluruwire.com : ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಕೆಲವೇ ದಿನಗಳಲ್ಲಿ ಮರಿ ಹಾಕುವ ನಿರೀಕ್ಷೆಯಲ್ಲಿದ್ದ “ಕಾವ್ಯ” ಹೆಸರಿನ ಹೆಣ್ಣು ಜೀಬ್ರಾ, ಆಘಾತ ಮತ್ತು ಕ್ಯಾಪ್ಚರ್ ಮಯೋಪತಿಯಿಂದಾಗಿ ಮೃತಪಟ್ಟಿದೆ ಎಂದು ಉದ್ಯಾನವನದ ಆಡಳಿತಾಧಿಕಾರಿ ಸೂರ್ಯಸೇನ್ ತಿಳಿಸಿದ್ದಾರೆ. ಈ ಘಟನೆ ಪ್ರಾಣಿಪ್ರಿಯರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.
2022ರ ಏಪ್ರಿಲ್ 4ರಂದು ಜನಿಸಿದ ಪ್ಲೈನ್ಸ್ ಜೀಬ್ರಾಕ್ಕೆ “ಕಾವ್ಯ” ಎಂದು ಹೆಸರಿಡಲಾಗಿತ್ತು. ಈ ಜೀಬ್ರಾ ಪ್ರಾಣಿಪ್ರಿಯರಿಗೆ ವಿಶೇಷ ಆಕರ್ಷಣೆಯಾಗಿತ್ತು. ಇತ್ತೀಚೆಗೆ ಇದು ಚೈನ್ ಲಿಂಕ್ ಜಾಲರಕ್ಕೆ ಡಿಕ್ಕಿ ಹೊಡೆದು ಗಾಯಗೊಂಡಿತ್ತು. ಅಲ್ಲದೆ, ಗಂಡು ಜೀಬ್ರಾಗಳ ಆಂತರಿಕ ಕದನ ಅಥವಾ ಕಾಡಿನ ಪರಭಕ್ಷಕ ಪ್ರಾಣಿಗಳ ಪ್ರವೇಶದಿಂದ ಆಘಾತಕ್ಕೀಡಾಗಿ, ಬಾಹ್ಯ ಒತ್ತಡ ಉಂಟಾಗಿ ಮೃತಪಟ್ಟಿರಬಹುದು ಎಂದು ಸೂರ್ಯಸೇನ್ ಸ್ಪಷ್ಟಪಡಿಸಿದ್ದಾರೆ.
ಈ ಘಟನೆಯ ಕುರಿತು ಮಾತನಾಡಿರುವ ಅವರು, ಇನ್ನು ಮುಂದೆ ಇಂತಹ ದುರ್ಘಟನೆಗಳು ಸಂಭವಿಸದಂತೆ ಹೆಚ್ಚಿನ ಮುಂಜಾಗ್ರತೆ ವಹಿಸಲಾಗುವುದು ಎಂದು ಭರವಸೆ ನೀಡಿದರು. ಬನ್ನೇರುಘಟ್ಟ ಉದ್ಯಾನವನದಲ್ಲಿ ಒಟ್ಟು 8 ಜೀಬ್ರಾಗಳಿದ್ದು, ಇದರಲ್ಲಿ ಒಂದು ಜೀಬ್ರಾ ಮೃತಪಟ್ಟಿದ್ದು, ಸದ್ಯ ಇನ್ನು ಎರಡು ಗಂಡು ಹಾಗೂ 5 ಹೆಣ್ಣು ಜೀಬ್ರಾಗಳಿವೆ.
ಜೀಬ್ರಾ ಸಾವಿಗೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸಿ, ಸಮಗ್ರ ವರದಿ ಸಲ್ಲಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಸೂಚನೆ ನೀಡಿದ್ದಾರೆ. ಅಲ್ಲದೆ, ಇನ್ನುಮುಂದೆ ವನ್ಯಮೃಗಗಳು ಅಸಹಜ ಸಾವಿಗೀಡಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶ ನೀಡಿದ್ದಾರೆ ಎಂದು ತಿಳಿಸಿದರು. ಈ ಸಾವುಗಳ ಕುರಿತು ಪ್ರಾಣಿಪ್ರೀಯರು ಮತ್ತು ಪರಿಸರ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಉದ್ಯಾನವನದ ನಿರ್ವಹಣೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.

ಕ್ಯಾಪ್ಚರ್ ಮಯೋಪತಿ ಎಂದರೇನು?:

ಕ್ಯಾಪ್ಚರ್ ಮಯೋಪತಿ (CM) ಕಾಡು ಮತ್ತು ಸಾಕು ಪ್ರಾಣಿಗಳಲ್ಲಿ ಕಂಡುಬರುವ ಗಂಭೀರ ಚಯಾಪಚಯ ಕಾಯಿಲೆಯಾಗಿದ್ದು, ಸ್ನಾಯು ಹಾನಿ ಮತ್ತು ಅವುಗಳ ಕಾರ್ಯ ಸ್ಥಗಿತದಿಂದ ನಿರೂಪಿಸಲ್ಪಟ್ಟಿದೆ. ಇದು ಹೆಚ್ಚಾಗಿ ಪ್ರಾಣಿಗಳ ಸೆರೆಹಿಡಿಯುವಿಕೆ, ನಿರ್ವಹಣೆ ಅಥವಾ ಸಾಗಣೆಯ ಸಮಯದಲ್ಲಿ ಪ್ರಾಣಿಗಳಲ್ಲಿ ಒತ್ತಡ ಮತ್ತು ಪರಿಶ್ರಮದಿಂದ ಉಂಟಾಗುತ್ತದೆ.