ಬೆಂಗಳೂರು, ಜೂ.10 www.bengaluruwire.com : ಬೆಂಗಳೂರು ದಕ್ಷಿಣ ತಾಲ್ಲೂಕಿನ ಉತ್ತರಹಳ್ಳಿ ಹೋಬಳಿ, ತಲಘಟ್ಟಪುರ ಗ್ರಾಮದ ಸರ್ವೆ ನಂಬರ್ 30 ರಲ್ಲಿರುವ 11.16 ಎಕರೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಕಬಳಿಸಲು ಯತ್ನಿಸಲಾಗುತ್ತಿದೆ ಎಂದು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಎನ್. ಆರ್. ರಮೇಶ್ ಅವರು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಈ ಭೂಮಿಯ ಮಾರುಕಟ್ಟೆ ಮೌಲ್ಯ 150 ಕೋಟಿ ರೂಪಾಯಿಗಳಿಗೂ ಅಧಿಕ ಎಂದು ಅಂದಾಜಿಸಲಾಗಿದೆ. ತಲಘಟ್ಟಪುರ ಸರ್ವೆ ನಂ. 30 ರಲ್ಲಿನ ಭೂಮಿ ಸಂಪೂರ್ಣ ಸರ್ಕಾರಿ ಬಂಡೆ, ಎಲ್ ಮತ್ತು ಡಿ ಪೋಡಿ (P) ಜಮೀನಾಗಿದೆ. ಕಳೆದ ಎರಡು ವರ್ಷಗಳಿಂದ ಈ ಪ್ರಕರಣ ಚಾಲ್ತಿಯಲ್ಲಿದೆ. ಹೀಗಿರುವಾಗ ಬೆಂಗಳೂರು ದಕ್ಷಿಣ ತಾಲ್ಲೂಕು ತಹಸೀಲ್ದಾರ್ ಕಚೇರಿಯ ಅಧಿಕಾರಿಗಳು/ನೌಕರರು ಸುರೇಂದ್ರನ ಎಂಬಾತನ ಪ್ರಭಾವಕ್ಕೆ ಒಳಗಾಗಿ, ಈ ಅಮೂಲ್ಯ ಸರ್ಕಾರಿ ಆಸ್ತಿ ಆತನ ಪಾಲಾಗುವಂತೆ ಟಿಪ್ಪಣಿಗಳನ್ನು ಸಿದ್ಧಪಡಿಸಿದ್ದಾರೆ ಎಂದು ದೂರಿನಲ್ಲಿ ರಮೇಶ್ ಆರೋಪಿಸಿದ್ದಾರೆ.

ಕೆ. ಎನ್. ಸುರೇಂದ್ರ ಎಂಬಾತನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಲವು ಸರ್ಕಾರಿ ಭೂಮಿಗಳನ್ನು ಕಬಳಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸದ್ಯದಲ್ಲೇ ಈ ಕಡತವು ಬೆಂಗಳೂರು ನಗರ ಜಿಲ್ಲೆಯ ಸಹಾಯಕ ಆಯುಕ್ತರಾದ ಅಪೂರ್ವ ಬಿದರಿ ಅವರ ಕಚೇರಿಗೆ ತಲುಪುವ ನಿರೀಕ್ಷೆಯಿದೆ. ಹೀಗಾಗಿ ಈ ಸರ್ಕಾರಿ ಭೂಮಿಯನ್ನು ರಕ್ಷಿಸಲು ಮತ್ತು ಅಕ್ರಮ ಟಿಪ್ಪಣಿಗಳನ್ನು ಸಿದ್ಧಪಡಿಸಿದ ಭ್ರಷ್ಟ ಅಧಿಕಾರಿಗಳು ಹಾಗೂ ನೌಕರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಎನ್. ಆರ್. ರಮೇಶ್ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.