ಸವಾಲುಗಳನ್ನು ಮೆಟ್ಟಿ ನಿಲ್ಲುವ ಛಲ, ದೇಶಪ್ರೇಮದ ಕಿಚ್ಚು ಮತ್ತು ದೃಢ ಸಂಕಲ್ಪಕ್ಕೆ ವಯಸ್ಸು ಮುಖ್ಯವಲ್ಲ ಎಂಬುದನ್ನು ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (NCC) ನ ಹತ್ತು ಯುವ ಕೆಡೆಟ್ಗಳು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಮೇ 18 ರ ಮುಂಜಾನೆಯಲ್ಲಿ ಜಗತ್ತಿನ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಅನ್ನು ಯಶಸ್ವಿಯಾಗಿ ಏರಿ, ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಇಡೀ ದೇಶವೇ ಹೆಮ್ಮೆಪಡುವಂತೆ ಮಾಡಿದ್ದಾರೆ. ಈ ಅಭೂತಪೂರ್ವ ಸಾಧನೆಯನ್ನು ಮಾಡಿರುವ ಕೆಡೆಟ್ಗಳಿಗೆ ದೆಹಲಿಯಲ್ಲಿ ಇತ್ತೀಚೆಗೆ ಭವ್ಯ ಸ್ವಾಗತ ದೊರೆತಿತ್ತು.
ಕೇವಲ 16 ರಿಂದ 19 ವರ್ಷ ವಯಸ್ಸಿನವರಾದ ಈ ಹತ್ತು ಕೆಡೆಟ್ಗಳು (ಐದು ಪುರುಷರು ಮತ್ತು ಐದು ಮಹಿಳೆಯರು) ಅತ್ಯಂತ ಪ್ರತಿಕೂಲ ಹವಾಮಾನ, ಕಠಿಣ ಭೂಪ್ರದೇಶ ಮತ್ತು ಚಳಿ ಗಾಳಿಯನ್ನು ಎದುರಿಸಿ ತಮ್ಮ ಗುರಿಯನ್ನು ತಲುಪಿದ್ದಾರೆ. ಎವರೆಸ್ಟ್ ಶಿಖರವನ್ನು ಏರಿದ ಈ ಯುವ ತಂಡದ ಕಿರಿಯ ಸದಸ್ಯ ಕೇವಲ 16 ವರ್ಷ ವಯಸ್ಸಿನವರು ಎಂಬುದು ಗಮನಾರ್ಹ.
“ನಮ್ಮ ಹೃದಯದಲ್ಲಿ ದೇಶಪ್ರೇಮದ ಕಿಚ್ಚಿತ್ತು. ಎವರೆಸ್ಟ್ ಶಿಖರದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವುದೇ ನಮ್ಮ ಗುರಿಯಾಗಿತ್ತು. ಪ್ರತೀ ಹೆಜ್ಜೆಯಲ್ಲೂ ನಮ್ಮ ದೇಶದ ಮೇಲಿನ ಪ್ರೀತಿ ನಮಗೆ ಶಕ್ತಿಯಾಯಿತು” ಎಂದು ತಂಡದ ಸದಸ್ಯರಾದ ರಾಜಸ್ಥಾನದ ಕೆಡೆಟ್ ಮೋನಿಕಾ ಹೆಮ್ಮೆಯಿಂದ ಹೇಳಿದ್ದಾರೆ.

ಈ ಸಾಧನೆಯ ಕುರಿತು ಮಾತನಾಡಿರುವ ರಕ್ಷಣಾ ಸಚಿವಾಲಯ, “ಈ ಕೆಡೆಟ್ಗಳು ಅಸಾಧಾರಣ ಧೈರ್ಯ, ಸ್ಥಿತಿಸ್ಥಾಪಕತ್ವ ಮತ್ತು ತಂಡದ ಮನೋಭಾವವನ್ನು ಪ್ರದರ್ಶಿಸಿದ್ದಾರೆ. ಪ್ರತಿಕೂಲ ಹವಾಮಾನ ಮತ್ತು ಕಠಿಣ ಭೂಪ್ರದೇಶದ ಹೊರತಾಗಿಯೂ ಶೇ. 100ರಷ್ಟು ಯಶಸ್ಸಿನ ಪ್ರಮಾಣವನ್ನು ಸಾಧಿಸಿದ್ದಾರೆ” ಎಂದು ತಿಳಿಸಿದೆ.

ಉತ್ತರಾಖಂಡದ ಕೆಡೆಟ್ ವೀರೇಂದ್ರ ಸಿಂಗ್ ಸಾಮಂತ್ ತಮ್ಮ ಅನುಭವ ಹಂಚಿಕೊಳ್ಳುತ್ತಾ, “ಪ್ರತಿ ಹಂತದಲ್ಲೂ ಸವಾಲುಗಳು ಎದುರಾಗುತ್ತಿದ್ದವು. ಆದರೆ, ನಮ್ಮ ತರಬೇತಿ ಮತ್ತು ಸಹ ಕೆಡೆಟ್ಗಳ ಬೆಂಬಲ ನಮಗೆ ಮುನ್ನಡೆಯಲು ನೆರವಾಯಿತು. ಶಿಖರ ತಲುಪಿದ ಕ್ಷಣ ನಮ್ಮೆಲ್ಲರ ಕಣ್ಣಲ್ಲಿ ಆನಂದಭಾಷ್ಪವಿತ್ತು” ಎಂದರು.

ಈ ಸಾಹಸಮಯ ಯಾತ್ರೆಯನ್ನು ಏಪ್ರಿಲ್ 3 ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನವದೆಹಲಿಯಿಂದ ಉದ್ಘಾಟಿಸಿದ್ದರು. 2013 ಮತ್ತು 2016 ರ ನಂತರ ಎನ್ಸಿಸಿ ಯ ಮೂರನೇ ಯಶಸ್ವಿ ಎವರೆಸ್ಟ್ ದಂಡಯಾತ್ರೆಯಾಗಿದೆ.
ಈ ಪ್ರೇರಣಾದಾಯಕ ತಂಡದಲ್ಲಿ ರಾಜಸ್ಥಾನದ ಕೆಡೆಟ್ ಮೋನಿಕಾ, ಪಶ್ಚಿಮ ಬಂಗಾಳದ ಕೆಡೆಟ್ ಪ್ರತಿಮಾ ರೈ, ಮೇಘಾಲಯದ ಕೆಡೆಟ್ ರಿಫಿನೆಸ್ ವಾರ್ಜ್ರಿ, ಹಿಮಾಚಲ ಪ್ರದೇಶದ ಕೆಡೆಟ್ ಕೃತಿಕಾ ಶರ್ಮಾ, ಲಡಾಖ್ನ ಕೆಡೆಟ್ ಅಬಿದಾ ಅಫ್ರೀನ್, ಜಮ್ಮು ಮತ್ತು ಕಾಶ್ಮೀರದ ಕೆಡೆಟ್ ಮೋಹಿತ್ ಕಂತಿಯಾ, ಚಂಡೀಗಢದ ಕೆಡೆಟ್ ಪದ್ಮಾ ನಂಗೈಲ್, ಉತ್ತರಾಖಂಡದ ಕೆಡೆಟ್ ವೀರೇಂದ್ರ ಸಿಂಗ್ ಸಾಮಂತ್, ಕೆಡೆಟ್ ಸಚಿನ್ ಕುಮಾರ್ ಮತ್ತು ಕೆಡೆಟ್ ಮುಕುಲ್ ಬಂಗ್ವಾಲ್ ಸೇರಿದ್ದಾರೆ.
ಈ ಕೆಡೆಟ್ಗಳು ಅನನುಭವಿಗಳಾಗಿದ್ದರೂ ಎವೆರೆಸ್ಟ್ ಏರಿ ಸಾಧನೆ :
ಹತ್ತು ಮಂದಿ ಎನ್ಸಿಸಿ ಕೆಡೆಟ್ ಗಳು ಮೌಂಟ್ ಅಬಿ ಗಮಿನ್ನ ಪೂರ್ವಭಾವಿ ಆರೋಹಣ ಮತ್ತು ಸಿಯಾಚಿನ್ ಬೇಸ್ ಕ್ಯಾಂಪ್ನಲ್ಲಿರುವ ಆರ್ಮಿ ಮೌಂಟೆನಿಯರಿಂಗ್ ಇನ್ಸ್ಟಿಟ್ಯೂಟ್ನಲ್ಲಿ ಚಳಿಗಾಲದ ತರಬೇತಿ ಶಿಬಿರ ಸೇರಿದಂತೆ ಕಠಿಣ ಆಯ್ಕೆ ಮತ್ತು ತರಬೇತಿಗೆ ಒಳಗಾಗಿದ್ದರು. “ಅವರ ಅಸಾಧಾರಣ ಶಿಸ್ತು ಮತ್ತು ದೈಹಿಕ ಸಾಮರ್ಥ್ಯವನ್ನು ಶೆರ್ಪಾ ಮಾರ್ಗದರ್ಶಿಗಳು ಮತ್ತು ಇತರ ಅಂತರಾಷ್ಟ್ರೀಯ ಪರ್ವತಾರೋಹಿಗಳು ಶ್ಲಾಘಿಸಿದ್ದಾರೆ” ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಎನ್ಸಿಸಿ ಯ ಈ ಯುವ ಕೆಡೆಟ್ಗಳ ಸಾಧನೆಯು ಮುಂದಿನ ಪೀಳಿಗೆಗೆ ಸ್ಫೂರ್ತಿದಾಯಕವಾಗಿದೆ. ಕೇವಲ ಶೈಕ್ಷಣಿಕ ಕ್ಷೇತ್ರದಲ್ಲಿ ಮಾತ್ರವಲ್ಲದೆ, ಸಾಹಸಮಯ ಕ್ಷೇತ್ರಗಳಲ್ಲೂ ಭಾರತೀಯ ಯುವಕರು ಅಸಾಮಾನ್ಯ ಸಾಧನೆಗಳನ್ನು ಮಾಡಬಲ್ಲರು ಎಂಬುದನ್ನು ಇದು ತೋರಿಸಿಕೊಟ್ಟಿದೆ. ಈ ಸಾಧನೆಯು ಭಾರತದ ಯುವ ಶಕ್ತಿಯ ಸಾಮರ್ಥ್ಯಕ್ಕೆ ಉತ್ತಮ ನಿದರ್ಶನವಾಗಿದೆ.
ಮೌಂಟ್ ಎವರೆಸ್ಟ್ ಏರಿದ ಎನ್ಸಿಸಿ ಕೆಡೆಟ್ ಗಳ ಸ್ಪೂರ್ತಿದಾಯಕ ಮಾತುಗಳನ್ನು ರಕ್ಷಣಾ ಸಚಿವಾಲಯವು ‘ರಕ್ಷಾ ಸೂತ್ರ’ ಹೆಸರಿನ ಪೋಡ್ ಕಾಸ್ಟ್ ಮೂಲಕ ಜಗತ್ತಿಗೆ ತಿಳಿಸಿದೆ. ಕೆಳಗಿನ ಯೂಟ್ಯೂಬ್ ಚಾನಲ್ ನಲ್ಲಿ ಅದನ್ನು ಕೇಳಬಹುದು.