ರಾಮನಗರ, ಜೂ.09 www.bengaluruwire.com : ಪರಿಸರ ಮಾಲಿನ್ಯಕ್ಕೆ ದೊಡ್ಡ ಸವಾಲಾಗಿರುವ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಮತ್ತು ಬೆಂಗಳೂರು ಹಾಲು ಒಕ್ಕೂಟ (ಬಮೂಲ್) ಮಹತ್ವದ ಹೆಜ್ಜೆ ಇಟ್ಟಿದೆ.
ನಂದಿನಿ ಹಾಲನ್ನು ಸಂಗ್ರಹಿಸಲು ಪ್ಲಾಸ್ಟಿಕ್ ಕವರ್ ಬದಲಿಗೆ, ಜೋಳದ ಪಿಷ್ಟದಿಂದ ತಯಾರಿಸಿದ, ಕೇವಲ ಆರು ತಿಂಗಳೊಳಗೆ ಸಂಪೂರ್ಣವಾಗಿ ಕರಗಿಹೋಗುವ ಪರಿಸರಸ್ನೇಹಿ ಹಾಲು ಕವರ್ಗಳ ಪ್ರಾಯೋಗಿಕ ಬಳಕೆಯನ್ನು ಆರಂಭಿಸಿದೆ. ಈ ಮೂಲಕ ಬಮೂಲ್, ಹಸಿರು ಕ್ರಾಂತಿಗೆ ಹೊಸ ಆಯಾಮ ನೀಡಿದೆ. ಪರಿಸರ ದಿನಾಚರಣೆ ಅಂಗವಾಗಿ ಬಮೂಲ್ನ ಕನಕಪುರದ ಶಿವನಹಳ್ಳಿ ಮೆಗಾಡೇರಿ ಘಟಕದಲ್ಲಿ, ಬಮೂಲ್ ನಿರ್ದೇಶಕ ಡಿ.ಕೆ.ಸುರೇಶ್, ದೇಶದಲ್ಲೇ ಮೊದಲ ಬಾರಿಗೆ ಹೈನೋದ್ಯಮದಲ್ಲಿ ಹಾಲನ್ನು ಪ್ಯಾಕ್ ಮಾಡಲು ಬಯೋ ಡಿ ಕಂಪೋಸಬಲ್ ಕವರ್ ಬಳಕೆ ಮಾಡುವ ಪ್ರಯೋಗಿಕ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ಪ್ಲಾಸ್ಟಿಕ್ ಮುಕ್ತ ಸಮಾಜದೆಡೆಗೆ ಬಮೂಲ್ನ ದಿಟ್ಟ ಹೆಜ್ಜೆ :
ದಿನನಿತ್ಯದ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಹಾಲು ಕವರ್ಗಳು, ಪ್ಲಾಸ್ಟಿಕ್ ತ್ಯಾಜ್ಯದ ಪ್ರಮಾಣವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದವು. ಲಕ್ಷಾಂತರ ಹಾಲು ಕವರ್ಗಳು ಪ್ರತಿದಿನ ಭೂಮಿಗೆ ಸೇರುತ್ತಿದ್ದು, ಇವು ಕರಗಲು ನೂರಾರು ವರ್ಷಗಳನ್ನು ತೆಗೆದುಕೊಳ್ಳುತ್ತಿದ್ದವು.

ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬಮೂಲ್ ಕೈಗೊಂಡ ಸುದೀರ್ಘ ಪ್ರಯತ್ನದ ಫಲವಾಗಿ, ಇದೀಗ ವಿದೇಶಿ ತಂತ್ರಜ್ಞಾನದ ಸಹಾಯದಿಂದ, ಜೋಳದ ಪಿಷ್ಟ ಆಧಾರಿತ ಬಯೋ ಡಿಗ್ರೇಡಬಲ್ ಹಾಲು ಕವರ್ಗಳನ್ನು ಯಶಸ್ವಿಯಾಗಿ ಬಳಕೆಗೆ ತರುತ್ತಿದೆ. ಈ ಕವರ್ ಗಳು ಇತರ ಸಾವಯವ ವಸ್ತುಗಳಂತೆ ವಾತಾವರಣದಲ್ಲಿ ಬಹು ಬೇಗನೆ ವಿಘಟನೆ ಹೊಂದುತ್ತದೆ.

ತಂತ್ರಜ್ಞಾನದ ಅದ್ಭುತ: ಜೋಳದ ಪಿಷ್ಟದಿಂದ ಹಾಲು ಕವರ್!
ಈ ಹೊಸ ಕವರ್ಗಳು ಜೋಳದ ಪಿಷ್ಟ (Corn Starch) ಮತ್ತು ಇತರ ನೈಸರ್ಗಿಕ, ನವೀನ ಪದಾರ್ಥಗಳನ್ನು ಬಳಸಿ ತಯಾರಿಸಲ್ಪಟ್ಟಿವೆ. ಇವು ಸಾಂಪ್ರದಾಯಿಕ ಪ್ಲಾಸ್ಟಿಕ್ ಕವರ್ಗಳಷ್ಟೇ ಬಾಳಿಕೆ ಬರುವ, ಹಾಲನ್ನು ಸುರಕ್ಷಿತವಾಗಿಡಲು ಸಮರ್ಥವಾಗಿವೆ ಎಂದು ಬಮೂಲ್ ಅಧಿಕಾರಿಗಳು ದೃಢಪಡಿಸಿದ್ದಾರೆ. ಆದರೆ, ಇವುಗಳ ಮಹತ್ವದ ವಿಶೇಷತೆಯೆಂದರೆ, ಬಳಕೆಯ ನಂತರ ಇವುಗಳನ್ನು ಪರಿಸರದಲ್ಲಿ ವಿಲೇವಾರಿ ಮಾಡಿದಾಗ, ಕೇವಲ 6 ತಿಂಗಳೊಳಗೆ ಇವು ಸಂಪೂರ್ಣವಾಗಿ ಕರಗಿ ಭೂಮಿಗೆ ಸೇರಿ, ಯಾವುದೇ ತ್ಯಾಜ್ಯವನ್ನು ಉಳಿಸುವುದಿಲ್ಲ.
ಇದು ಮಣ್ಣು ಮತ್ತು ನೀರಿನ ಮಾಲಿನ್ಯವನ್ನು ಗಣನೀಯವಾಗಿ ತಗ್ಗಿಸುತ್ತದೆ. ಪ್ಲಾಸ್ಟಿಕ್ ಕವರ್ಗಳಿಂದ ಉಂಟಾಗುತ್ತಿದ್ದ ಒಳಚರಂಡಿ ಮುಚ್ಚಿಹೋಗುವಿಕೆ ಮತ್ತು ಪರಿಸರಕ್ಕೆ ಹಾನಿಯಾಗುವಂತಹ ಯಾವುದೇ ಸಮಸ್ಯೆಯೂ ಈ ಹೊಸ ಕವರ್ಗಳಿಂದ ಇರುವುದಿಲ್ಲ.
ಪ್ರಾಯೋಗಿಕವಾಗಿ ಬಯೋ ಡಿಗ್ರೇಡಬಲ್ ಕವರ್ ಬಳಕೆ :
ಬಮೂಲ್ನ ಕನಕಪುರದ ಶಿವನಹಳ್ಳಿ ಮೆಗಾಡೇರಿ ಘಟಕದಲ್ಲಿ ಹೊಸದಾಗಿ ಸ್ಥಾಪಿಸಿರುವ ಜೋಳದ ಪಿಷ್ಟದಿಂದ ತಯಾರಿಸಿದ ಈ ಪರಿಸರಸ್ನೇಹಿ 2 ಲೇಯರ್ ಬಯೋ ಡಿಗ್ರೇಡಬಲ್ ಹಾಲು ಕವರ್ಗಳನ್ನು ತಯಾರಿಸಲಾಗುತ್ತಿದೆ. ಪ್ರಯೋಗಿಕವಾಗಿ 2 ಲಕ್ಷ ಬಯೋ ಡಿ ಗ್ರೇಡಬಲ್ ಕವರ್ ಗಳನ್ನು ಬಳಸಿ ನಂದಿನಿ ಹಾಲನ್ನು ಪ್ಯಾಕ್ ಮಾಡಲಾಗುತ್ತಿದೆ. ಹಾಲನ್ನು ಈ ಪರಿಸರಸ್ನೇಹಿ ಕವರ್ಗಳಲ್ಲಿ ತುಂಬಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇವುಗಳ ಬಳಕೆಯನ್ನು ಮತ್ತಷ್ಟು ಹೆಚ್ಚಿಸುವ ಯೋಜನೆ ಬಮೂಲ್ನಲ್ಲಿದೆ.
ಈ ಮೂಲಕ, ಕೆಎಂಎಫ್ ದೇಶದಲ್ಲಿಯೇ ಪ್ರಥಮ ಬಾರಿಗೆ ಈ ತಂತ್ರಜ್ಞಾನವನ್ನು ಬಳಸಿ, ಹಾಲು ಪ್ಯಾಕೇಜಿಂಗ್ನಲ್ಲಿ ಕ್ರಾಂತಿ ಸೃಷ್ಟಿಸಿದೆ. ಈ ಕವರ್ಗಳ ಉತ್ಪಾದನೆಗೆ ಅಗತ್ಯ ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳನ್ನು ಬಮೂಲ್ ಅಳವಡಿಸಿಕೊಂಡಿದೆ.
ಗ್ರಾಹಕರು ಮತ್ತು ಪರಿಸರಕ್ಕೆ ಲಾಭ :
ಬಮೂಲ್ನ ಈ ಪರಿಸರಸ್ನೇಹಿ ಕ್ರಮವು ಗ್ರಾಹಕರಲ್ಲಿ ಪರಿಸರ ಪ್ರಜ್ಞೆಯನ್ನು ಮತ್ತಷ್ಟು ಹೆಚ್ಚಿಸಲಿದೆ. ತಾವೂ ಕೂಡ ಪ್ಲಾಸ್ಟಿಕ್ ತ್ಯಾಜ್ಯ ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಬಹುದು ಎಂಬ ಅರಿವನ್ನು ಮೂಡಿಸಲಿದೆ. ಆರಂಭದಲ್ಲಿ ಈ ಕವರ್ಗಳ ಉತ್ಪಾದನಾ ವೆಚ್ಚವು ಸಾಂಪ್ರದಾಯಿಕ ಕವರ್ಗಳಿಗಿಂತ ತುಸು ಹೆಚ್ಚಿರಬಹುದು. ಆದರೆ, ದೀರ್ಘಕಾಲೀನವಾಗಿ ಪರಿಸರಕ್ಕೆ ಆಗುವ ಲಾಭ, ಸ್ವಚ್ಛ ವಾತಾವರಣ, ಮತ್ತು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯ ವೆಚ್ಚ ಕಡಿತವನ್ನು ಪರಿಗಣಿಸಿದರೆ, ಇದು ಸಮರ್ಥನೀಯ ಮತ್ತು ಅತ್ಯಗತ್ಯವಾದ ಹೂಡಿಕೆಯಾಗಿದೆ.
ಇತರೆ ಹಾಲು ಒಕ್ಕೂಟಗಳಿಗೆ ಪ್ರೇರಣೆ ಮತ್ತು ಮುಂದಿನ ದಾರಿ :
ಬಮೂಲ್ನ ಈ ವಿನೂತನ ಮತ್ತು ಯಶಸ್ವಿ ಉಪಕ್ರಮವು ರಾಜ್ಯದ ಇತರೆ ಹಾಲು ಒಕ್ಕೂಟಗಳಿಗೂ ಪ್ರೇರಣೆಯಾಗಲಿದೆ. ಭವಿಷ್ಯದಲ್ಲಿ, ಇಂತಹ ಪರಿಸರಸ್ನೇಹಿ ಪ್ಯಾಕೇಜಿಂಗ್ ವ್ಯವಸ್ಥೆಗಳು ಭಾರತದಾದ್ಯಂತ ಹಾಲು ಉತ್ಪನ್ನಗಳಲ್ಲಿ ಸಾಮಾನ್ಯವಾಗುವ ಸಾಧ್ಯತೆಯಿದೆ. ಇದು ದೇಶದ ಸಮಗ್ರ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಗೆ ದೊಡ್ಡ ಕೊಡುಗೆ ನೀಡಲಿದೆ ಮತ್ತು ‘ಪ್ಲಾಸ್ಟಿಕ್ ಮುಕ್ತ ಭಾರತ’ದ ಕನಸನ್ನು ನನಸು ಮಾಡುವಲ್ಲಿ ಪ್ರಮುಖ ಹೆಜ್ಜೆಯಾಗಲಿದೆ.
ಪರಿಸರ ಸಂರಕ್ಷಣೆ ಕೇವಲ ಸರ್ಕಾರ ಅಥವಾ ಕೆಲವು ಸಂಸ್ಥೆಗಳ ಜವಾಬ್ದಾರಿಯಲ್ಲ, ಅದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ಬಮೂಲ್ನ ಈ ದಿಟ್ಟ ಮತ್ತು ಯಶಸ್ವಿ ನಿರ್ಧಾರವು ಸಮಾಜಕ್ಕೆ ಮಾದರಿಯಾಗಿದೆ. ಈ ಪರಿಸರ ಸ್ನೇಹಿ ಕ್ರಮಕ್ಕೆ ಗ್ರಾಹಕರು ಕೈಜೋಡಿಸಿ, ಹಸಿರು ಮತ್ತು ಸ್ವಚ್ಛ ಭವಿಷ್ಯಕ್ಕೆ ಅಡಿಪಾಯ ಹಾಕುವಲ್ಲಿ ಸಹಕರಿಸುವುದು ಅತ್ಯಗತ್ಯ.