ಬೆಂಗಳೂರು, ಜೂ.07 www.bengaluruwire.com : ಚೆನಾಬ್ ಸೇತುವೆ ನಿರ್ಮಾಣದಲ್ಲಿ 17 ವರ್ಷಗಳ ಕಾಲ ಶ್ರಮಿಸಿದ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ), ಬೆಂಗಳೂರು ಪ್ರೊಫೆಸರ್ ಜಿ. ಮಾಧವಿ ಲತಾ ಅವರು ಭಾರತೀಯ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದ್ದಾರೆ.
ಜಮ್ಮು-ಕಾಶ್ಮೀರದ ಚೆನಾಬ್ ನದಿಯ ಮೇಲೆ ನಿರ್ಮಿಸಲಾದ ಈ ಸೇತುವೆ ವಿಶ್ವದ ಎತ್ತರದ ರೈಲು ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸೇತುವೆಯನ್ನು ಶುಕ್ರವಾರವಷ್ಟೇ ಉದ್ಘಾಟಿಸಿದ್ದಾರೆ.
ಅಂಧ್ರಪ್ರದೇಶದ ಯೆದುಗುಂಡ್ಲಪಾಡು ಗ್ರಾಮದಿಂದ ಬಂದ ಮೊದಲ ಇಂಜಿನಿಯರ್ ಆಗಿರುವ ಮಾಧವಿ ಲತಾ, ಜೆಎನ್ಟಿಯು, ಎನ್ಐಟಿ ವಾರಂಗಲ್ ಹಾಗೂ ಐಐಟಿ ಮದ್ರಾಸ್ನಲ್ಲಿ ವಿದ್ಯಾಭ್ಯಾಸ ಪೂರೈಸಿದ್ದಾರೆ. ಐಐಎಸ್ಸಿ ಯಲ್ಲಿ 2003ರಿಂದ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಚೆನಾಬ್ ಸೇತುವೆ ಯೋಜನೆಯಲ್ಲಿ ಮಾಧವಿ ಕತಾ ಪಾತ್ರವೇನು?:

ಮಾಧವಿ ಲತಾ ಅವರು 2005ರಿಂದ 2022ರವರೆಗೆ ಈ ಯೋಜನೆಯಲ್ಲಿ ಶಿಲಾ ತಜ್ಞೆಯಾಗಿ ಕಾರ್ಯನಿರ್ವಹಿಸಿದರು. ಆಕೆಯ ಪ್ರಮುಖ ಜವಾಬ್ದಾರಿಗಳಲ್ಲಿ ಶಿಲಾ ಸ್ಥಿರತೆ, ಸೇತುವೆಯ ಆಧಾರದ ವಿನ್ಯಾಸ ಮತ್ತು ಜಿಯೋ ಟೆಕ್ನಿಕಲ್ ಸುರಕ್ಷತಾ ವ್ಯವಸ್ಥೆಗಳ ರೂಪುರೇಷೆ ಸೇರಿವೆ. ಹಿಮಾಲಯದ ದುರ್ಬಲ ಭೂಗರ್ಭ, ಬೃಹತ್ ಗಾಳಿಚುರುಕು, ಭೂಕಂಪನ ಮುಂತಾದ ಸವಾಲುಗಳನ್ನು ಎದುರಿಸಲು “ಡಿಸೈನ್-ಅಸ್-ಯು-ಗೋ” ತಂತ್ರವನ್ನು ಅನುಸರಿಸಿ, ಪ್ರತಿ ಹಂತದಲ್ಲೂ ಭೂಗರ್ಭದ ಸ್ಥಿತಿಗತಿಯ ಪ್ರಕಾರ ವಿನ್ಯಾಸವನ್ನು ಬದಲಾಯಿಸಿದರು.

ಸಾಮಾಜಿಕ ಮಾಧ್ಯಮದಲ್ಲಿ, ಐಐಎಸ್ಸಿ ಈ ಮೈಲಿಗಲ್ಲನ್ನು ಒಪ್ಪಿಕೊಂಡಿದೆ. “ಚೆನಾಬ್ಬ್ರಿಡ್ಜ್ಗೆ ಪ್ರೊಫೆಸರ್ ಮಾಧವಿ ಲತಾ ಮತ್ತು ಅವರ ತಂಡದ ಕೊಡುಗೆಯ ಬಗ್ಗೆ ನಮಗೆ ಹೆಮ್ಮೆ ಇದೆ” ಎಂದು ಸಂಸ್ಥೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ. ಇಳಿಜಾರಿನ ಸ್ಥಿರತೆ, ಬಂಡೆಗಳ ಆಧಾರಗಳು ಮತ್ತು ಭೌಗೋಳಿಕ ಅಪಾಯಗಳನ್ನು ತಡೆದುಕೊಳ್ಳುವ ಅಡಿಪಾಯ ವಿನ್ಯಾಸದ ಕುರಿತು ಅವರ ಕೆಲಸವನ್ನು ಶ್ಲಾಘಿಸಿದೆ.
ಚೆನಾಬ್ ಸೇತುವೆಯ ಕುರಿತ ಸಂಕ್ಷಿಪ್ತ ಮಾಹಿತಿ :
1,486 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಚೆನಾಬ್ ಸೇತುವೆಯನ್ನು ಸರ್ಕಾರವು “ಇತ್ತೀಚಿನ ಇತಿಹಾಸದಲ್ಲಿ ಭಾರತದ ಯಾವುದೇ ರೈಲ್ವೆ ಯೋಜನೆ ಎದುರಿಸುತ್ತಿರುವ ಅತಿದೊಡ್ಡ ಸಿವಿಲ್-ಎಂಜಿನಿಯರಿಂಗ್ ಸವಾಲು” ಎಂದು ಬಣ್ಣಿಸಿದೆ. ಚೆನಾಬ್ ಸೇತುವೆ 1,315 ಮೀ. ಉದ್ದ, 359 ಮೀಟರ್ ಎತ್ತರದ ಈ ಸೇತುವೆ ಐಫೆಲ್ ಟವರ್ಗಿಂತ 35 ಮೀಟರ್ ಎತ್ತರವಾಗಿದೆ. ಈ ಯೋಜನೆಯು ಕಾಶ್ಮೀರ ಕಣಿವೆಯಲ್ಲಿ ಸಂಪರ್ಕವನ್ನು ಹಾಗೂ ದೇಶದ ಉಳಿದ ಭಾಗಗಳಿಗೆ ರೈಲು ಮಾರ್ಗದ ಮೂಲಕ ಹಲವು ನಗರಗಳ ಸಂಪರ್ಕವನ್ನು ಸುಧಾರಿಸುತ್ತದೆ.