ಬೆಂಗಳೂರು, ಜೂ.04 www.bengaluruwire.com : 18 ವರ್ಷಗಳ ಬಳಿಕ ಮೊದಲ ಬಾರಿಗೆ ಕಪ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಚಿನ್ನಸ್ವಾಮಿ ಸ್ಟೇಡಿಯಮ್ ನಲ್ಲಿ ನಡೆಯುವ ಸಂಭ್ರಮಾಚರಣೆ ನಡೆಯಬೇಕಿದ್ದ ಸಂಭ್ರಮಾಚರಣೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಒಮ್ಮೆಗೆ ತೆರಳಿದ್ದರಿಂದ ಕಾಳ್ತುಳಿತ ಸಂಭವಿಸಿ 12 ಮಂದಿ ಸಾವನ್ನಪ್ಪಿ, 20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡರು ಹೇಳಲಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಆರ್ ಸಿಬಿ ಮಧ್ಯಾಹ್ನದ ವೇಳೆಗೆ ರಾಜಧಾನಿಗೆ ಬಂದಿಳಿದ ನಂತರ, ಎಚ್ಎಎಲ್ನಿಂದ ತಾಜ್ ವೆಸ್ಟೆಂಡ್ ಹೊಟೇಲ್ಗೆ ತೆರಳುತ್ತಿದ್ದ ವೇಳೆ ಲಕ್ಷಾಂತರ ಅಭಿಮಾನಿಗಳು ರಸ್ತೆ ಅಕ್ಕಪಕ್ಕದಲ್ಲಿ ನಿಂತು ಸಂಭ್ರಮಾಚರಣೆ ನಡೆಸುತ್ತಿದ್ದರು. ಹೀಗೆ ಖುಷಿಪಡುವ ಸಂಭ್ರಮ ಚಿನ್ನಸ್ವಾಮಿ ಸ್ಟೇಡಿಯಮ್ ನಲ್ಲಿ ವಿಜಯದ ಸಂಭ್ರಮಾಚರಣೆ ಆಗಬೇಕಿದ್ದ ಸಂಭ್ರಮ 12 ಮಂದಿ ಸಾವನ್ನಪ್ಪಿ, 30ಕ್ಕೂ ಹೆಚ್ಚು ಮಂದಿ ಕಾಲ್ತುಳಿತದಲ್ಲಿ ಗಾಯಗೊಂಡು ಆ ಸ್ಥಳವು ಸೂತಕದ ಸ್ಥಳವಾಗಿ ಮಾರ್ಪಟ್ಟಿತ್ತು. 33 ಮಂದಿಯ ಪೈಕಿ 9 ಮಂದಿಯು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ದುರ್ಘಟನೆಯಲ್ಲಿ ಈತನಕ ಗಾಯಗೊಂಡು, 27 ಮಂದಿಯನ್ನು ವೈದೇಹಿ ಹಾಗೂ ಬೌರಿಂಗ್ ಆಸ್ಪತ್ರೆ, ಮಣಿಪಾಲ್ ಆಸ್ಪತ್ರೆಗೆ ಸೇರಿಸಲಾಗಿದೆ.

ವೈದೇಹಿಯಲ್ಲಿ ಹಾಗೂ ಬೌರಿಂಗ್ ಆಸ್ಪತ್ರೆಯಲ್ಲಿ ಮತ್ತು ಮಣಿಪಾಲ್ ಆಸ್ಪತ್ರೆಯಲ್ಲಿ ಕಾಲ್ತಳಿದಲ್ಲಿ ಗಾಯಗೊಂಡವರು ಮೃತಪಟ್ಟಿದ್ದಾರೆ.
ಆರ್ಸಿಬಿ ಪಡೆಯು ನಗರದಲ್ಲಿ ವಿಜಯ ಯಾತ್ರೆ ಕೈಗೊಂಡು ಆರ್ಸಿಬಿ ಅಭಿಮಾನಿಗಳಲ್ಲಿ ಪುಳಕವುಂಟು ಮಾಡಲು ಕಾತುರವಾಗಿತ್ತು. ಇದಾದ ನಂತರ ಚಿನ್ನಸ್ವಾಮಿ ಸ್ಟೇಡಿಯಮ್ ನಲ್ಲಿ ಆರ್ಸಿಬಿ ವಿಜಯೋತ್ಸವ ಸಂಭ್ರಮ ನೋಡಲು ಅಭಿಮಾನಿಗಳಿಗೆ ಸೀಮಿತ ಉಚಿತ ಪ್ರವೇಶ ಪಾಸ್ ಹಂಚಿಕೆ ಮಾಡುವುದಾಗಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪ್ರಕಟಿಸಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿನ್ನೆ ಅಹಮದಾಬಾದ್ ನಲ್ಲಿ ಸಾಧಿಸಿದ ಅಭೂತಪೂರ್ವ ಗೆಲುವಿನ ಸಂಭ್ರಮಾಚರಣೆ ಹಮ್ಮಿಕೊಂಡಿತ್ತು.


ಆದರೆ ಸ್ಟೇಡಿಯಮ್ ನಲ್ಲಿ ಸೀಮಿತ ಉಚಿತ ಪಾಸ್ ಸಿಗುತ್ತಾ? ಹಣಕೊಟ್ಟು ಟಿಕೆಟ್ ಪಡೆಯಬೇಕಾ? ಎಂಬ ಬಗ್ಗೆ ಸ್ಟೇಡಿಯಮ್ ಹತ್ತಿರ ಬಂದ ಅಭಿಮಾನಿಗಳಿಗೆ ಮಾಹಿತಿ ಕೊರತೆಯೂ ಈ ರೀತಿಯ ದುರ್ಘಟನೆಗೆ ಕಾರಣವಾಯ್ತಾ ಎಂಬ ಬಗ್ಗೆ ಇನ್ನಿಷ್ಟೇ ಮಾಹಿತಿ ತಿಳಿದು ಬರಬೇಕಾಗಿದೆ.

ದುರ್ಘಟನೆಯ ಬಗ್ಗೆ ನ್ಯಾಯಾಂಗ ತನಿಖೆಗೆ ಬಿಜೆಪಿ ಆಗ್ರಹ :

“ರಾಜ್ಯ ಸರ್ಕಾರ ಪೂರ್ವ ತಯಾರಿ ಇಲ್ಲದೆ, ಪೊಲೀಸರ ಪೂರ್ವಾನುಮತಿ ಪಡೆಯದೆ ಆತುರಾತುರವಾಗಿ ಸಂಭ್ರಮಾಚರಣೆ ಮಾಡಲು, ಪೊಲೀಸರ ಒತ್ತಾಯಪೂರ್ವಕವಾಗಿ ಒಪ್ಪಿಸಿ, ಆರ್ ಸಿಬಿ ವಿಜಯೋತ್ಸವ ನಡೆಸಲು, ರಾಜ್ಯ ಸರ್ಕಾರದ ಪ್ರಚಾರದ ಹುಚ್ಚಿಗೆ ಜನರು ಪರದಾಡುವಂತಾಗಿದೆ. ಚಿನ್ನಸ್ವಾಮಿ ಸ್ಟೇಡಿಯಮ್ ನಲ್ಲಿ ಸೂಕ್ತ ಭದ್ರತೆ, ಪೂರ್ವಸಿದ್ಧತೆ ಕೈಗೊಳ್ಳದೆ ಸಂಭ್ರಮಾಚರಣೆ ಆಯೋಜಿಸಲಾಗಿತ್ತು. ಈಗಾಗಲೇ 12 ಜನ ಪ್ರಾಣ ಕಳೆದುಕೊಂಡಿದ್ದಾರೆ. ಈ ದುರ್ಘಟನೆ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕಿದೆ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಗ್ರಹಿಸಿದ್ದಾರೆ.

ಸಾವಿರಾರು ಜನರ ಪ್ರವೇಶಕ್ಕೆ ಕೇವಲ 3 ಗೇಟ್ ನಿಂದ ಪ್ರವೇಶ? :

35,000 ಸೀಟಿನ ಸಾಮರ್ಥ್ಯ ಹೊಂದಿದ ಚಿನ್ನಸ್ವಾಮಿ ಸ್ಟೇಡಿಯಮ್ ನಲ್ಲಿ, ಪಾಸ್ ಪಡೆದವರಿಗೆ ಕೇವಲ ಮೂರು ಗೇಟ್ ಗಳಿಂದ ಒಳಗೆ ಬಿಡುವಾಗ, ಟಿಕೆಟ್ ಇಲ್ಲದವರೂ ಆ ಸ್ಥಳಕ್ಕೆ ನುಗ್ಗಿದಾಗ, ಗೇಟ್ ಏರಿ ಒಳ ಹೋಗುವಾಗ, ಏಕಾಏಕಿ ತಳ್ಳಾಟ ನಡೆದಾಗ ಕಾಲ್ತುಳಿತ ಸಂಭವಿಸಿತು. ಗೇಟ್ ಹೊರಗೆ ಸಾವಿರಾರು ಜನರು ಜಮಾಯಿಸಿದ್ದರು. ಹೀಗಿದ್ದಾಗ ಇನ್ನು ಹಲವು ಗೇಟ್ ಗಳನ್ನು ತೆಗೆಯುವ ಬದಲು ಕೇವಲ ಮೂರು ಗೇಟ್ ತೆಗೆದಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸಂಜೆ 4 ಗಂಟೆಗೆ ವಿಧಾನಸೌಧದ ಗ್ರಾಂಡ್ ಸ್ಟೆಪ್ ಬಳಿ ರಾಜ್ಯ ಸರ್ಕಾರದಿಂದ ಐಪಿಎಲ್ ಚಾಂಪಿಯನ್ ಆಟಗಾರರನ್ನು ಸನ್ಮಾನಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಮಾಹಿತಿ ತಿಳಿದ ಅಸಂಖ್ಯಾತ ಮಂದಿ ವಿಧಾನಸೌಧದ ಮುಂಭಾಗದ ರಸ್ತೆ, ಪಾರ್ಕ್ ಜಾಗಗಳಲ್ಲಿ, ಸಿಕ್ಕ ಸಿಕ್ಕ ಜಾಗಗಳಲ್ಲಿ ಆರ್ ಸಿಬಿ ಟೀಮ್ ಆಟಗಾರರನ್ನು ಸನ್ಮಾನವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಜಮಾಯಿಸಿದ್ದರು.

ಅಂತಿಮವಾಗಿ ಬೆಂಗಳೂರು ಪೊಲೀಸರು ಚಿನ್ನಸ್ವಾಮಿ ಸ್ಟೇಡಿಯಮ್ ನಲ್ಲಿ ಆರ್ಸಿಬಿ ವಿಜಯೋತ್ಸವ ಸಂಭ್ರಮಾಚರಣೆಗೆ ಕೇವಲ 15 ನಿಮಿಷ ಕಾಲಾವಕಾಶ ನೀಡಿದರು. ಈ ಮಧ್ಯೆ ಸ್ಟೇಡಿಯಮ್ ನಲ್ಲಿ ಆರ್ ಸಿಬಿ ವಿಜಯೋತ್ಸವ ನಡೆಯಿತು. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾವೇರಿ ನಿವಾಸದಲ್ಲಿ ತುರ್ತು ಸಭೆ ನಡೆಸಿದರು.

ಸಂಜೆ 6.15 ವೇಳೆಗೆ ಕಬ್ಬನ್ ಪಾರ್ಕ್, ವಿಧಾನಸೌಧದಲ್ಲಿ ಅಪಾರ ಅಭಿಮಾನಿಗಳು ಸೇರ್ಪಡೆಗೊಂಡು, ಜನದಟ್ಟಣೆ ಉಂಟಾಗಿರುವ ಕಾರಣ, ನಮ್ಮ ಮೆಟ್ರೋ ಈ ಎರಡು ನಿಲ್ದಾಣಗಳಲ್ಲಿ ಮೆಟ್ರೋ ರೈಲ್ ನಿಲ್ಲಿಸದೆ ಸಾಗುತ್ತಿತ್ತು.
ಮೊದಲಿಗೆ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಬಂದ ಆರ್ ಸಿಬಿ ಕ್ಯಾಪ್ಟನ್ ರಜತ್ ಪಾಟೀದಾರ್ ಪಡೆಗೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆತ್ಮೀಯವಾಗಿ ಸ್ವಾಗತ ಕೋರಿದರು. ಈ ವೇಳೆ, ಆರ್ಸಿಬಿ ಸ್ಟಾರ್ ವಿರಾಟ್ ಕೊಹ್ಲಿಗೆ (Virat Kohli) ಕನ್ನಡದ ಬಾವುಟ ಹಾಗೂ ಆರ್ ಸಿಬಿ ಬಾವುಟ ನೀಡಿದರು. ಇದನ್ನು ಹಾರಿಸುವ ಮೂಲಕ ವಿರಾಟ್ ಸಂತಸಪಟ್ಟಿದ್ದರು.
ಎಚ್ಎಎಲ್ ನಿಂದ ತಾಜ್ ವೆಸ್ಟ್ ಎಂಡ್ ಹೋಟೆಲ್ ಕಡೆಗೆ ತೆರಳಿದ ಆರ್ ಸಿಬಿ ತಂಡವನ್ನು ರಸ್ತೆಬದಿಯಲ್ಲಿ ನಿಂತಿದ್ದ ಲಕ್ಷಾಂತರ ಅಭಿಮಾನಿಗಳು ಭರ್ಜರಿಯಾಗಿ ಸ್ವಾಗತಿಸಿದರು. ಅಭಿಮಾನಿಗಳನ್ನ ಕಂಡ ವಿರಾಟ್ ಕೊಹ್ಲಿ, ಚಾಂಪಿಯನ್ ಟ್ರೋಫಿಯನ್ನು ತೋರಿಸಿ ಸಂತಸಪಟ್ಟಿದ್ದರು. ಹೆಚ್ಎಎಲ್ನಿಂದ ತಾಜ್ ವೆಸ್ಟೆಂಡ್ವರೆಗಿನ ದಾರಿಯುದ್ದಕ್ಕೂ ಅಭಿಮಾನಿಗಳ ಸಾಗರವೇ ನೆರೆದಿತ್ತು. ಆರ್ ಸಿಬಿ ತಂಡ ತೆರಳುತ್ತಿದ್ದ ಬಸ್ ಹಿಂದೆಮುಂದೆ ಭದ್ರತೆಗಾಗಿ ಪೊಲೀಸರ ಭರ್ಜರಿ ಸರ್ಪಗಾವುಲು ದಾರಿಯುದ್ದಕ್ಕೂ ಇತ್ತು.
ರಸ್ತೆ ಇಕ್ಕೆಲಗಳಲ್ಲೆಲ್ಲಾ ಫ್ಯಾನ್ಸ್ ನಿಂತು `ಆರ್ಸಿಬಿ.. ಆರ್ಸಿಬಿ.. ಕೊಹ್ಲಿ.. ಕೊಹ್ಲಿ’ ಎಂದು ಕೂಗಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು. ಈ ವೇಳೆ ಫ್ಯಾನ್ಸ್ಗಳ ಹರ್ಷವನ್ನು ಕಂಡ ವಿರಾಟ್ ಕೊಹ್ಲಿ ಅವರು ಬಸ್ನಲ್ಲೇ ಕುಳಿತು ಅಭಿಮಾನಿಗಳಿಗೆ ಚಾಂಪಿಯನ್ ಟ್ರೋಫಿ ತೋರಿಸಿ ಸಂತಸ ಪಟ್ಟರು. ಟ್ರೋಫಿ ಮೇಲೆ ಕೈತಟ್ಟಿ ‘ಈ ಸಲ ಕಪ್ ನಮ್ದು’ ಎಂಬಂತೆ ಸನ್ನೆ ಮಾಡಿದರು. ಕೊಹ್ಲಿಯನ್ನು ಕಂಡು ಅಭಿಮಾನಿಗಳು ಕೂಡ ಫುಲ್ ಥ್ರಿಲ್ ಆಗಿದ್ದರು. ಅಂತಿಮವಾಗಿ ಸಂಭ್ರಮಾಚರಣೆ ಸೂತಕದ ಮನೆಯಾಗಿದ್ದು ದುರದೃಷ್ಟಕರ.