ಅಹಮದಾಬಾದ್, ಜೂ.03 www.bengaluruwire.com : ಕನ್ನಡಿಗರ ಹೃದಯ ಸಾಮ್ರಾಟ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು ಕೊನೆಗೂ ಐಪಿಎಲ್ ಪ್ರಶಸ್ತಿಯನ್ನು ಮಂಗಳವಾರ ಗೆದ್ದುಕೊಂಡಿದೆ. 18 ವರ್ಷಗಳ ಸುದೀರ್ಘ ಕಾಯುವಿಕೆಗೆ ತೆರೆ ಎಳೆದ ಆರ್ಸಿಬಿ, ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಚಾಂಪಿಯನ್ ಪಟ್ಟಕ್ಕೇರಿದೆ. ಈ ಐತಿಹಾಸಿಕ ಕ್ಷಣಕ್ಕೆ ಬೆಂಗಳೂರು ಮಾತ್ರವಲ್ಲದೆ, ಕರ್ನಾಟಕದ ಮೂಲೆ ಮೂಲೆಯಲ್ಲೂ ಅಭಿಮಾನಿಗಳು ಸಂಭ್ರಮಿಸಿದ್ದಾರೆ.

2025ರ ಐಪಿಎಲ್ ಫೈನಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ರನ್ ಗಳಿಂದ ಬಗ್ಗುಬಡಿದ ಆರ್ಸಿಬಿ 18ನೇ ಆವೃತ್ತಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. 191 ರನ್ಗಳ ಗುರಿ ನೀಡಿದ್ದ ಆರ್ಸಿಬಿ ಪಂಜಾಬ್ ಕಿಂಗ್ಸ್ ತಂಡವನ್ನು 184 ರನ್ಗಳಿಗೆ ನಿಯಂತ್ರಿಸುವ ಮೂಲಕ 6 ರನ್ ಗಳ ರೋಚಕ ಜಯ ಸಾಧಿಸಿ ಚೊಚ್ಚಲ ಟ್ರೋಫಿ ತನ್ನದಾಗಿಸಿಕೊಂಡಿತು. ಈ ಮೂಲಕ 18 ವರ್ಷಗಳಿಂದ “ಕಪ್ ನಮ್ದೇ” ಎಂಬ ಕನಸು ಕೊನೆಗೂ ನನಸಾಗಿ ಐಪಿಎಲ್ ಕಪ್ ಆರ್ ಸಿಬಿ ಪಾಲಾಗಿದೆ.

ಫೈನಲ್ ಪಂದ್ಯದಲ್ಲಿ ಆರ್ಸಿಬಿ ನೀಡಿದ್ದ ಸವಾಲಿನ ಗುರಿಯನ್ನು ಬೆನ್ನಟ್ಟಿದ ಪಿಬಿಕೆಎಸ್ ಕೊನೆಗೂ ಗುರಿ ಮುಟ್ಟುವಲ್ಲಿ ವಿಫಲವಾಯ್ತು. ಆದರೆ ಕೊನೆಯವರೆಗೂ ಕಠಿಣ ಸವಾಲನ್ನು ಸ್ವೀಕರಿಸಿದರೂ, ಯಶಸ್ಸು ಪಡೆಯಲು ಹಿನ್ನಡೆ ಅನುಭವಿಸಿತು.

ಆರ್ಸಿಬಿ ಪರ ಅತಿ ಹೆಚ್ಚು ರನ್ ಗಳಿಸಿದ ವಿರಾಟ್ ಕೊಹ್ಲಿ 35 ಎಸೆತಗಳಲ್ಲಿ 43 ರನ್ ಗಳಿಸಿದರು. ಪಂಜಾಬ್ ಪರ ಕೈಲ್ ಜೇಮಿಸನ್ ಮತ್ತು ಅರ್ಶ್ದೀಪ್ ಸಿಂಗ್ ತಲಾ ಮೂರು ವಿಕೆಟ್ ಪಡೆದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಪಂಜಾಬ್ ಕಿಂಗ್ಸ್ 20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 184 ರನ್ಗಳಿಸಲಷ್ಟೇ ಶಕ್ತವಾಯಿತು. ಪಂಜಾಬ್ ಪರ ಶಶಾಂಕ್ ಸಿಂಗ್ ಅಜೇಯ 61 ರನ್ ಗಳಿಸಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ.

ಕಳೆದ 18 ವರ್ಷಗಳಿಂದ ನಿರಂತರವಾಗಿ ಐಪಿಎಲ್ನಲ್ಲಿ ಭಾಗವಹಿಸುತ್ತಿದ್ದ ಆರ್ಸಿಬಿ, ಮೂರು ಬಾರಿ ಫೈನಲ್ಗೆ ಪ್ರವೇಶಿಸಿದ್ದರೂ, ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ. “ಈ ಸಲ ಕಪ್ ನಮ್ದೇ” ಎಂಬ ಘೋಷಣೆ ಪ್ರತಿ ವರ್ಷವೂ ಕೇಳಿಬರುತ್ತಿತ್ತು, ಆದರೆ ಅದು ಈ ಬಾರಿಯಷ್ಟೇ ನನಸಾಗಿದೆ.

ಈ ಗೆಲುವು ಕೇವಲ ಒಂದು ಟ್ರೋಫಿ ಮಾತ್ರವಲ್ಲ, ಕೋಟ್ಯಂತರ ಅಭಿಮಾನಿಗಳ ಬಹುದಿನಗಳ ಕನಸಿನ ಸಾಕಾರವಾಗಿದೆ. ಪಂದ್ಯ ಮುಗಿದ ತಕ್ಷಣ, ಅಹಮದಾಬಾದ್ ನಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ಹರ್ಷೋದ್ಗಾರ ಮಾಡಿದರು. ಇತ್ತ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಆರ್ ಸಿಬಿ ಗೆಲುವಿನಿಂದ ಸಂತಸಕ್ಕೆ ಪಟಾಕಿ, ಸಿಹಿ ಹಂಚಿ ಸಂಭ್ರಮಿಸಿತು. (Photo credit : jiohotstar, RCB)