ಬೆಂಗಳೂರು, ಜೂ.03 www.bengaluruwire.com : “ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದ್ದು” ಎಂಬ ಅಪ್ರಬುದ್ಧ ಹೇಳಿಕೆ ನೀಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ನಟ ಕಮಲ್ ಹಾಸನ್ ಕನ್ನಡಿಗರ ಕ್ಷಮೆ ಕೋರದ ಕಾರಣ, ಅವರ ನೂತನ ಚಿತ್ರ “ಥಗ್ ಲೈಫ್” ಅನ್ನು ರಾಜ್ಯದಲ್ಲಿ ಬಿಡುಗಡೆಯಾಗುತ್ತಿಲ್ಲ.
ಇದರೊಂದಿಗೆ, ವಿವಾದಿತ ಹೇಳಿಕೆಗೆ ಕ್ಷಮೆ ಯಾಚಿಸುವುದಿಲ್ಲ ಎಂಬ ಪರೋಕ್ಷ ಸಂದೇಶವನ್ನೂ ರವಾನಿಸಿದ್ದಾರೆ. ಕರ್ನಾಟಕ ಹೈಕೋರ್ಟ್ ಇಂದು ತರಾಟೆಗೆ ತೆಗೆದುಕೊಂಡ ಬಳಿಕವೂ ತಮ್ಮ ನಿಲುವನ್ನು ಬದಲಾಯಿಸದಿರುವುದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.
ʼಥಗ್ ಲೈಫ್ʼ ಸಿನಿಮಾ ಹಂಚಿಕೆ ಮತ್ತು ಬಿಡುಗಡೆಗೆ ಅಗತ್ಯ ಬಂದೋಬಸ್ತ್ ಒದಗಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ರಾಜ್ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ ನಾರಾಯಣ್ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಇಂದು (ಬುಧವಾರ) ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠವು ನಟ ಕಮಲ್ ಹಾಸನ್ ಅವರನ್ನು ತರಾಟೆಗೆ ತೆಗೆದುಕೊಂಡಿತು. “ಮೊದಲು ಕನ್ನಡಿಗರ ಕ್ಷಮೆ ಕೇಳಿ” ಎಂದು ಖಡಕ್ ಸೂಚನೆ ನೀಡಿದ ನ್ಯಾಯಾಲಯ, “ನೀವೇನು ಇತಿಹಾಸಜ್ಞರಲ್ಲ ಭಾಷೆಯ ಬಗ್ಗೆ ಹೇಳುವುದಕ್ಕೆ” ಎಂಬುದಾಗಿ ಚಾಟಿ ಬೀಸಿತು.

ಇಂದು ಮಧ್ಯಾಹ್ನ ನ್ಯಾಯಾಲಯಕ್ಕೆ ಮಾಹಿತಿ ನೀಡಿರುವ ಕಮಲ್ ಪರ ವಕೀಲರು, ಥಗ್ ಲೈಫ್ ಸಿನಿಮಾದ ನಿರ್ಮಾಪಕರು, ಸಿನಿಮಾ ಅನ್ನು ರಾಜ್ಯದಲ್ಲಿ ಬಿಡುಗಡೆ ಮಾಡದೇ ಇರಲು ನಿರ್ಧರಿಸಿದ್ದಾರೆ. ಅಲ್ಲದೆ, ಫಿಲಂ ಚೇಂಬರ್ ಜೊತೆಗೆ ನಿರ್ಮಾಪಕರು ಚರ್ಚೆ ನಡೆಸಲು ಸಿದ್ಧವಿದ್ದಾರೆ ಎಂದು ನ್ಯಾಯಾಲಯಕ್ಕೆ ಹೇಳಿದ್ದಾರೆ. ಥಗ್ ಲೈಫ್ ಚಿತ್ರ ಜೂನ್ 5ಕ್ಕೆ ಬಿಡುಗಡೆ ಆಗಬೇಕಿತ್ತು. ಈ ಕುರಿತ ಅರ್ಜಿಯನ್ನು ಜೂನ್ 10ಕ್ಕೆ ಮುಂದೂಡಿ ನ್ಯಾಯಾಲಯ ಆದೇಶಿಸಿದೆ. ಆದ್ದರಿಂದ ಥಗ್ ಲೈಫ್ ಚಿತ್ರ ರಾಜ್ಯದಲ್ಲಿ ಬಿಡುಗಡೆಗೆ ಹಿನ್ನಡೆಯಾಗಿದೆ.

ಕಮಲ್ ಹಾಸನ್ ಅವರ ವಿವಾದಿತ ಹೇಳಿಕೆಯ ಬಳಿಕ, ಕರ್ನಾಟಕ ಚಲನಚಿತ್ರ ವಾಣಿಜ್ಯ ಸಂಘಟನೆ ಮತ್ತು ವಿವಿಧ ಕನ್ನಡಪರ ಸಂಘಟನೆಗಳು ನಟ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದವು. ಅಲ್ಲದೆ, “ಥಗ್ ಲೈಫ್” ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದವು.
ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಿಗೆ, ನಟ ಕಮಲಹಾಸನ್ ಬರೆದ ಪತ್ರದಲ್ಲಿ ತಾವು ಯಾವ ಸಂದರ್ಭದಲ್ಲಿ ಕನ್ನಡ ಭಾಷೆ ಬಗ್ಗೆ ಹೇಳಿಕೆ ನೀಡಿದ್ದು ಮತ್ತು ತಮಗೆ ಕನ್ನಡ ಭಾಷೆ ಮೇಲೆ ಅಗೌರವ ಇಲ್ಲ, ಬದಲಿಗೆ ಪ್ರೀತಿಯಿದೆ ಎಂದು ಸಮರ್ಥನೆ ಕೊಟ್ಟಿದ್ದಾರೆ. ಆದರೆ ಕ್ಷಮೆಯಾಚನೆ ಬಗ್ಗೆ ಎಲ್ಲಿಯೂ ತಿಳಿಸಿಲ್ಲ.
ಜಲ,ನೆಲದ ವಿಷಯದಲ್ಲಿ ರಾಜಿಯಿಲ್ಲ, ಕಮಲಹಾಸನ್ ಕ್ಷಮಾಪಣೆ ಹೇಳಬೇಕು ನಾವು ಬಿಡುವುದಿಲ್ಲ. ಅಂತಿಮವಾಗಿ ಕನ್ನಡ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಕರ್ನಾಟಕ ಬಂದ್ ಕರೆ ನೀಡಲಾಗುವುದು. ಕಮಲಹಾಸನ್ ಕರ್ನಾಟಕ್ಕೆ ಬರಬಾರದು, ಬಹಿಷ್ಕಾರ ಮಾಡಲಾಗುವುದು ಎಂದು ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಹೇಳಿದ್ದಾರೆ. ಈ ಬೆಳವಣಿಗೆಯು ಕನ್ನಡ ನೆಲದಲ್ಲಿ ಕನ್ನಡದ ಅಸ್ಮಿತೆಗೆ ಧಕ್ಕೆ ತರುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ ಎಂಬುದಕ್ಕೆ ಮತ್ತೊಂದು ಉದಾಹರಣೆಯಾಗಿದೆ.