ಬೆಂಗಳೂರು: ಜೂ.2 www.bengaluruwire.com : ಇತ್ತೀಚೆಗೆ ಮಂಡ್ಯ ಮತ್ತು ದಾವಣಗೆರೆ ಜಿಲ್ಲೆಯಲ್ಲಿ ನಡೆದ ದುರಂತ ಘಟನೆಯ ನಂತರ ಸಾರ್ವಜನಿಕರ ಜೀವ ಸುರಕ್ಷತೆ ಹಾಗೂ ಪೊಲೀಸ್ ಸಿಬ್ಬಂದಿಯ ಕ್ಷೇಮದೃಷ್ಟಿಯಿಂದ ಪೊಲೀಸ್ ಇಲಾಖೆಯು ವಾಹನ ತಪಾಸಣೆಯ ಕುರಿತು ಮಹತ್ವದ ಸೂಚನೆಗಳನ್ನು ನೀಡಿದೆ.
ಅದರಲ್ಲೂ ಕಾರಣವಿಲ್ಲದೇ ಸಾರ್ವಜನಿಕರ ವಾಹನಗಳನ್ನು ತಡೆದು ತಪಾಸಣೆ ನಡೆಸುವುದನ್ನು ನಿಷೇಧಿಸಿ, ಸಂಚಾರ ನಿಯಮಗಳ ಸ್ಪಷ್ಟ ಉಲ್ಲಂಘನೆ ಕಂಡುಬಂದಲ್ಲಿ ಮಾತ್ರ ಕ್ರಮ ಕೈಗೊಳ್ಳಲು ಸೂಚಿಸಿದೆ. ಈ ಕುರಿತು ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಹಾಗೂ ಪೊಲೀಸ್ ಮಹಾ ನಿರೀಕ್ಷಕ ಡಾ. ಎಂ.ಎ. ಸಲೀಂ ಅವರು ಮೇ 31 ರಂದು ಮಹತ್ವದ ಸುತ್ತೋಲೆ ಹೊರಡಿಸಿದ್ದಾರೆ.
ಮಂಡ್ಯ, ದಾವಣಗೆರೆ ದುರಂತಗಳ ಹಿನ್ನೆಲೆ:
ಇತ್ತೀಚೆಗೆ ನಡೆದ ಮಂಡ್ಯ ಮತ್ತು ದಾವಣಗೆರೆ ಜಿಲ್ಲೆಯ ದುರಂತ ಘಟನೆಗಳು ಈ ಹೊಸ ಆದೇಶಕ್ಕೆ ಪ್ರಮುಖ ಕಾರಣವಾಗಿವೆ. ಮೇ 26 ರಂದು ಮಂಡ್ಯದಲ್ಲಿ ಹೆದ್ದಾರಿಯಲ್ಲಿ ವಾಹನ ತಪಾಸಣೆ ಮಾಡುವಾಗ ಉಂಟಾದ ಅಪಘಾತದಲ್ಲಿ ಮಗುವೊಂದು ಮೃತಪಟ್ಟಿತ್ತು. ಅಲ್ಲದೆ, ಮೇ 13 ರಂದು ದಾವಣಗೆರೆಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿದವರನ್ನು ಹಿಡಿಯುವ ಯತ್ನದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಕ್ಯಾಂಟರ್ ಅಪಘಾತದಿಂದಾಗಿ ಮೃತಪಟ್ಟಿದ್ದರು.
ಈ ಘಟನೆಗಳು ಪೊಲೀಸರು ತಪಾಸಣೆ ನಡೆಸುವಾಗ ಸುರಕ್ಷತಾ ಕ್ರಮಗಳನ್ನು ಕಡೆಗಣಿಸುತ್ತಿರುವುದು ಕಂಡುಬಂದಿದೆ. ಇದರಿಂದ ಸಾರ್ವಜನಿಕರು ಹಾಗೂ ಪೊಲೀಸರ ಜೀವಕ್ಕೂ ಅಪಾಯ ಎದುರಾಗುತ್ತಿರುವುದು ಗಂಭೀರ ವಿಷಯವೆಂದು ಪರಿಗಣಿಸಿ, ಈ ಸುತ್ತೋಲೆಯನ್ನು ಹೊರಡಿಸಲಾಗಿದೆ.
ಪ್ರಮುಖ ನಿರ್ದೇಶನಗಳು:
* ಅಕಾರಣ ತಪಾಸಣೆಗೆ ನಿಷೇಧ: ಪೊಲೀಸರು ಸಕಾರಣವಿಲ್ಲದೇ ಸಾರ್ವಜನಿಕರ ವಾಹನಗಳನ್ನು ತಡೆದು ದಾಖಲೆಗಳನ್ನು ಪರಿಶೀಲಿಸುವುದು ಅಥವಾ ತಪಾಸಣೆ ನಡೆಸುವುದು ಸಂಪೂರ್ಣವಾಗಿ ನಿಷಿದ್ಧ.
* ಕಣ್ಣಿಗೆ ಕಾಣುವ ಉಲ್ಲಂಘನೆಗಳಿಗೆ ಮಾತ್ರ ಕ್ರಮ: ಕಣ್ಣಿಗೆ ಕಾಣುವ ಸಂಚಾರ ನಿಯಮ ಉಲ್ಲಂಘನೆಗಳು (Visible violations) ಕಂಡುಬಂದಲ್ಲಿ ಮಾತ್ರ ಅಂತಹ ವಾಹನಗಳನ್ನು ನಿಲ್ಲಿಸಿ ಪ್ರಕರಣ ದಾಖಲಿಸಬಹುದು.
* ಹೆದ್ದಾರಿಗಳಲ್ಲಿ ಬ್ಯಾರಿಕೇಡ್ ನಿಷಿದ್ಧ:
ಹೆದ್ದಾರಿಗಳಲ್ಲಿ “Zig Zag” ಮಾದರಿಯಲ್ಲಿ ಬ್ಯಾರಿಕೇಡ್ ಹಾಕಿ ವಾಹನಗಳನ್ನು ತಡೆಯುವುದನ್ನು ನಿಷೇಧಿಸಲಾಗಿದೆ.
* ಹಠಾತ್ ತಡೆಯುವಿಕೆ ನಿಷಿದ್ಧ:
ರಸ್ತೆಯಲ್ಲಿ ದಿಢೀರನೆ ಅಡ್ಡಬಂದು ವಾಹನ ನಿಲ್ಲಿಸುವಂತೆ ಹೇಳುವುದನ್ನು ನಿಲ್ಲಿಸಬೇಕು.
* ದೈಹಿಕವಾಗಿ ಎಳೆಯುವಿಕೆ ನಿಷಿದ್ಧ:
ಬೈಕ್ನ ಹಿಂಬದಿ ಸವಾರನನ್ನು ಹಿಡಿದು ಎಳೆಯುವುದು ಹಾಗೂ ವಾಹನಗಳ ಕೀಲಿಕೈ (Key) ಅನ್ನು ತೆಗೆದುಕೊಳ್ಳುವುದನ್ನು ಮಾಡಬಾರದು.
* ಬೆನ್ನಟ್ಟುವುದನ್ನು ನಿಷೇಧಿಸಿ: ವೇಗವಾಗಿ ಚಲಿಸುವ ವಾಹನಗಳನ್ನು ಬೆನ್ನಟ್ಟುವುದನ್ನು ನಿಷೇಧಿಸಲಾಗಿದೆ. ಬದಲಾಗಿ, ವಾಹನದ ನೋಂದಣಿ ಸಂಖ್ಯೆಯನ್ನು ಗುರುತಿಸಿಕೊಂಡು, ಜಿಲ್ಲಾ ಪೊಲೀಸ್ ಠಾಣೆಗಳ ನಿಯಂತ್ರಣ ಕೊಠಡಿಗಳಿಗೆ ಮಾಹಿತಿ ರವಾನಿಸಿ, ನಂತರ ಪತ್ತೆಹಚ್ಚಿ ಪ್ರಕರಣ ದಾಖಲಿಸಬಹುದು.
ಪೊಲೀಸರ ಸುರಕ್ಷತೆಗೆ ಆದ್ಯತೆ:
ಪ್ರತಿಫಲಿತ ಜಾಕೆಟ್ ಹಾಗೂ ಎಲ್ಇಡಿ ಬ್ಯಾಟನ್: ಸಂಚಾರ ನಿಯಮ ಉಲ್ಲಂಘನೆದಾರರ ವಿರುದ್ಧ ಕ್ರಮ ಕೈಗೊಳ್ಳುವಾಗ ಅಥವಾ ವಾಹನಗಳನ್ನು ತಪಾಸಣೆ ಮಾಡುವಾಗ ಪೊಲೀಸರು ತಮ್ಮ ಸುರಕ್ಷತೆಗಾಗಿ ಕಡ್ಡಾಯವಾಗಿ ‘Reflective Jacket’ ಗಳನ್ನು ಧರಿಸಬೇಕು. ಸಂಜೆ ವೇಳೆಯಲ್ಲಿ ‘LED Baton’ ಗಳನ್ನು ಉಪಯೋಗಿಸಬೇಕು.
ಬಾಡಿ ವಾರ್ನ್ ಕ್ಯಾಮರಾ ಕಡ್ಡಾಯ:
ವಾಹನ ತಪಾಸಣೆ ಮಾಡುವ ಸಂದರ್ಭದಲ್ಲಿ ಕಡ್ಡಾಯವಾಗಿ ‘Body worn camera’ ಗಳನ್ನು ಧರಿಸಬೇಕು.
ತಂತ್ರಜ್ಞಾನ ಆಧಾರಿತ ನಿಯಮ ಪಾಲನೆ:
ಸಂಪರ್ಕರಹಿತ ಪ್ರವರ್ತನೆ (Contactless enforcement): ‘Traffic Management Centre (TMC)’ / ‘Intelligent Traffic Management System (ITMS)’ ಅಳವಡಿಸಿರುವ ಘಟಕಗಳಲ್ಲಿ ಆದಷ್ಟು ಸಂಪರ್ಕರಹಿತ ಪ್ರವರ್ತನಾ ಮುಖಾಂತರ ಪ್ರಕರಣಗಳನ್ನು ದಾಖಲಿಸುವುದು.
ಎಫ್.ಟಿ.ವಿ.ಆರ್. (FTVR) ದಾಖಲಿಸುವುದು: ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಹಾಗೂ ಇತರೆ ರಸ್ತೆಗಳಲ್ಲಿ ಅತಿ ವೇಗವಾಗಿ ಚಲಿಸುವ ವಾಹನಗಳನ್ನು ತಡೆಯುವ ಪ್ರಯತ್ನ ಮಾಡಬಾರದು. ಬದಲಾಗಿ, ತಂತ್ರಜ್ಞಾನ ಆಧಾರಿತ ನಿಯಮಗಳ ಜಾರಿಯನ್ನು ಅನುಸರಿಸಿ ಎಫ್.ಟಿ.ವಿ.ಆರ್. ದಾಖಲಿಸಬೇಕು.
ಇತರೆ ಪ್ರಮುಖ ಸೂಚನೆಗಳು:
ಜಾಗೃತಿ ಕಾರ್ಯಕ್ರಮಗಳು:
ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕಾಲಕಾಲಕ್ಕೆ ಸರಿಯಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.
ಸುರಕ್ಷತಾ ಸಲಕರಣೆಗಳ ಅಳವಡಿಕೆ:
ವಾಹನಗಳ ವೇಗವನ್ನು ಇಳಿಸುವ ಸಲುವಾಗಿ, ತಪಾಸಣೆಯ ಸ್ಥಳದ ಸುಮಾರು 100-150 ಮೀಟರ್ ಮೊದಲೇ ‘ರಿಫ್ಲೆಕ್ಟಿವ್ ರಬ್ಬರ್ ಕೋನ್ಗಳನ್ನು’ ಹಾಗೂ ಇತರೆ ಸುರಕ್ಷತಾ ಸಲಕರಣೆಗಳನ್ನು ಅಳವಡಿಸಬೇಕು.
ರಾತ್ರಿ ವೇಳೆ ಸಿಗ್ನಲ್ ದೀಪಗಳ ಬಳಿ ತಪಾಸಣೆ:
ರಾತ್ರಿ ಮತ್ತು ತಡರಾತ್ರಿಯ ಸಂದರ್ಭದಲ್ಲಿ ಸಂಚಾರ ಸಿಗ್ನಲ್ ದೀಪಗಳಿರುವ / ಜಂಕ್ಷನ್ ಗಳ ಬದಿಯಲ್ಲೇ ವಾಹನಗಳನ್ನು ತಪಾಸಣೆ ಮಾಡುವುದು ಸೂಕ್ತ.
ಹೆದ್ದಾರಿಗಳಲ್ಲಿ ನಾಕಾಬಂಧಿ ನಿಷಿದ್ಧ:
ಕಾನೂನು ಮತ್ತು ಸುವ್ಯವಸ್ಥೆ ಪೊಲೀಸರು ನಡೆಸುವ ನಾಕಾಬಂಧಿ ಪ್ರಕ್ರಿಯೆಗಳನ್ನು ಸಾಧ್ಯವಾದಷ್ಟು ಹೆದ್ದಾರಿಗಳಲ್ಲಿ ನಡೆಸಬಾರದು. ಅಗತ್ಯವಿದ್ದರೆ ಸಂಚಾರ ಪೊಲೀಸರ ಬೆಂಬಲ ಮತ್ತು ಸಹಕಾರವನ್ನು ಪಡೆದುಕೊಳ್ಳಬೇಕು.
ಕಟ್ಟುನಿಟ್ಟಿನ ಪಾಲನೆಗೆ ಸೂಚನೆ:
ರಾಜ್ಯದ ಎಲ್ಲಾ ಪೊಲೀಸ್ ಆಯುಕ್ತರುಗಳು ಹಾಗೂ ಪೊಲೀಸ್ ಅಧೀಕ್ಷಕರುಗಳು ಈ ವಿಷಯದ ಕುರಿತು ವೈಯಕ್ತಿಕ ಗಮನಹರಿಸಿ, ತಮ್ಮ ಅಧೀನಕ್ಕೊಳಪಡುವ ಅಧಿಕಾರಿ / ಸಿಬ್ಬಂದಿಗಳು ಈ ಸುತ್ತೋಲೆಯನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಕಟ್ಟುನಿಟ್ಟಾಗಿ ನಿರ್ದೇಶನಗಳನ್ನು ನೀಡುವಂತೆ ಕರ್ನಾಟಕ ಪೊಲೀಸ್ ಮಹಾನಿರ್ದೇಶಕರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ. ಈ ಹೊಸ ನಿಯಮಗಳು ಸಾರ್ವಜನಿಕರ ಮತ್ತು ಪೊಲೀಸರ ಸುರಕ್ಷತೆಗೆ ಮಹತ್ವದ ಹೆಜ್ಜೆಯಾಗಿವೆ.