ಬೆಂಗಳೂರು, ಮೇ.31 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆಯನ್ನು ಸಮರ್ಥವಾಗಿ ನಿಭಾಯಿಸಲು ಮಹತ್ವದ ಕ್ರಮ ಕೈಗೊಂಡಿದೆ. ನಗರದ ತ್ಯಾಜ್ಯ ವಿಲೇವಾರಿಗಾಗಿ 33 ಪ್ಯಾಕೇಜ್ಗಳಲ್ಲಿ ಬೃಹತ್ ಟೆಂಡರ್ ಆಹ್ವಾನಿಸಲಾಗಿದ್ದು, ಒಟ್ಟು ಏಳು ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗುತ್ತಿದೆ. ಈ ಯೋಜನೆಯಿಂದ ವಾರ್ಷಿಕ ₹544.91 ಕೋಟಿ ವೆಚ್ಚವಾಗಲಿದ್ದು, ಏಳು ವರ್ಷಗಳ ಅವಧಿಗೆ ಅಂದಾಜು ₹4,500 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ಗುಣಮಟ್ಟದ ಸೇವೆಗೆ ಆದ್ಯತೆ:
ಈ ಬೃಹತ್ ಯೋಜನೆಯು ಬೆಂಗಳೂರಿನಲ್ಲಿ ತ್ಯಾಜ್ಯ ನಿರ್ವಹಣೆಯ ಗುಣಮಟ್ಟವನ್ನು ಗಣನೀಯವಾಗಿ ಸುಧಾರಿಸುವ ಗುರಿ ಹೊಂದಿದೆ. ಹೊಸ ಟೆಂಡರ್ ಪ್ರಕ್ರಿಯೆಯು ಪ್ರಾಥಮಿಕವಾಗಿ ತ್ಯಾಜ್ಯ ಸಂಗ್ರಹಣೆ, ನಿರ್ದಿಷ್ಟ ಸ್ಥಳದಲ್ಲಿ ಎರಡನೇ ಹಂತದ ತ್ಯಾಜ್ಯ ವಿಂಗಡಣೆ, ರಸ್ತೆ ಗುಡಿಸಿದ ಕಸ ಸಂಗ್ರಹಿಸಲು 33 ವಿಭಾಗವಾರು ಟೆಂಡರ್ ಆಹ್ವಾನಿಸಲಾಗಿದೆ. ಪ್ರತಿ ವರ್ಷ ಹಣದುಬ್ಬರ ದರಕ್ಕೆ ಶೇ.5 ರಷ್ಟು ಹೆಚ್ಚಳದೊಂದಿಗೆ ಗುತ್ತಿಗೆ ಮೊತ್ತದಲ್ಲಿ ಹೆಚ್ಚಳವಾಗಲಿದೆ ಎಂದು ಟೆಂಡರ್ ನಲ್ಲಿ ನಮೂದಿಸಲಾಗಿದೆ.
ಕಸ ಸಂಗ್ರಹ, ಸಾಗಣೆ ಮತ್ತು ವಿಲೇವಾರಿ ಪ್ರಕ್ರಿಯೆಯನ್ನು ಇನ್ನಷ್ಟು ದಕ್ಷಗೊಳಿಸಲು ನೆರವಾಗಲಿದೆ. ಪಾರದರ್ಶಕತೆ ಮತ್ತು ಜವಾಬ್ದಾರಿಗೆ ಆದ್ಯತೆ ನೀಡಿ, ಉತ್ತಮ ಗುಣಮಟ್ಟದ ಸೇವೆಗಳನ್ನು ಒದಗಿಸುವ ಸಾಮರ್ಥ್ಯವಿರುವ ಗುತ್ತಿಗೆದಾರರನ್ನು ಆಯ್ಕೆ ಮಾಡಲು ಬಿಬಿಎಂಪಿ ನಿರ್ಧರಿಸಿದೆ. ಈ ಹಿನ್ನಲೆಯಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಜಣೆ ಕಂಪನಿ (BSWML) ಯು ಟೆಂಡರ್ ಆಹ್ವಾನಿಸಿದ್ದು, ತ್ಯಾಜ್ಯವನ್ನು ವಿಂಗಡಿಸಿದ ಮಾದರಿಯಲ್ಲಿ ಸಂಗ್ರಹಿಸುವಂತೆ ತಿಳಿಸಿದೆ. ಎನ್ ಜಿಒ, ಟ್ರಸ್ಟ್, ಪಾಲುದಾರಿಕೆ ಕಂಪನಿಗಳು ಟೆಂಡರ್ ನಲ್ಲಿ ಭಾಗವಹಿಸಬಹುದಾಗಿದೆ. ಒಬ್ಬರಿಗೆ ಒಂದು ಪ್ಯಾಕೇಜ್ ನೀಡಲಾಗುತ್ತದೆ ಎಂದು ಟೆಂಡರ್ ಷರತ್ತಿನಲ್ಲಿ ತಿಳಿಸಲಾಗಿದೆ.

ಮೇ 28ರಂದು ಟೆಂಡರ್ ಆಹ್ವಾನಿಸಿದ್ದು, ಜೂನ್ 27ರ ಒಳಗೆ ಬಿಡ್ ಸಲ್ಲಿಸಲು, ಜೂನ್ 30ರಂದು ಟೆಂಡರ್ ತೆರೆಯಲಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 27 ವಿಧಾನಸಭಾ ಕ್ಷೇತ್ರಗಳ ಪೈಕಿ (ಆನೇಕಲ್ ಹೊರತುಪಡಿಸಿ) 21 ವಿಧಾನಸಭಾ ಕ್ಷೇತ್ರಗಳಿಗೆ ಒಂದು ಪ್ಯಾಕೇಜ್ ನಿಗದಿಪಡಿಸಲಾಗಿದೆ. ಇದಲ್ಲದೆ, ಮಹದೇವಪುರ, ದಾಸರಹಳ್ಳಿ, ಬೆಂಗಳೂರು ದಕ್ಷಿಣ, ಕೆ.ಆರ್.ಪುರ, ಯಶವಂತಪುರ, ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳಿಗೆ ತಲಾ ಎರಡು ಪ್ಯಾಕೇಜ್ ನಿಗದಿಪಡಿಸಲಾಗಿದೆ.

ವಾರ್ಡ್ ಮಟ್ಟದಲ್ಲಿ ತ್ಯಾಜ್ಯ ನಿರ್ವಹಣೆ:
ಬಿಎಸ್ ಡಬ್ಲ್ಯುಎಂಎಲ್ ಕಂಪನಿಯು 2022ರ ಸೆಪ್ಟೆಂಬರ್ ನಲ್ಲಿ 89 ಪ್ಯಾಕೇಜ್ ಗಳಲ್ಲಿ ಟೆಂಡರ್ ಕರೆದಿತ್ತು. ಆಗ ಹೆಚ್ಚಿನ ಬಿಡ್ ದಾರರು ಟೆಂಡರ್ ಅರ್ಹತೆ ಹೊಂದಿಲ್ಲದ ಕಾರಣ ಅದನ್ನು ರದ್ದುಪಡಿಸಲಾಗಿತ್ತು. ಪುನಃ 2023ರ ಜನವರಿಯಲ್ಲಿ ಟೆಂಡರ್ ಕರೆದಾಗ, ಅರ್ಹತಾ ಸುತ್ತಿನಲ್ಲಿ ಕಾರಣಾಂತರಗಳಿಂದ ಕೆಲವರನ್ನು ಅನರ್ಹಗೊಳಿಸಲಾಗಿತ್ತುಮ ಹಾಗಾಗಿ ಈ ವಿಷಯ ಕೋರ್ಟ್ ಮೆಟ್ಟಿಲೇರಿತ್ತು. ಆಗ ಸರ್ಕಾರ ಹೊಸದಾಗಿ ಟೆಂಡರ್ ಕರೆಯುವುದಾಗಿ ತಿಳಿಸಿತ್ತು. ಬಳಿಕ 33 ಪ್ಯಾಕೇಜ್ ಗೆ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದ ಬಳಿಕ ಟೆಂಡರ್ ಕರೆಯಲಾಗಿದೆ.
ಈ 33 ಪ್ಯಾಕೇಜ್ಗಳು ನಗರದ ವಿವಿಧ ವಾರ್ಡ್ಗಳನ್ನು ಒಳಗೊಂಡಿದ್ದು, ವಾರ್ಡ್ ಮಟ್ಟದಲ್ಲಿ ತ್ಯಾಜ್ಯ ನಿರ್ವಹಣೆಯನ್ನು ಇನ್ನಷ್ಟು ಸುಧಾರಿಸಲು ಅವಕಾಶ ಕಲ್ಪಿಸಲಿದೆ. ಇದರಿಂದ ಕಸ ವಿಲೇವಾರಿಯಲ್ಲಿನ ವಿಳಂಬ ಮತ್ತು ಸಮಸ್ಯೆಗಳನ್ನು ಕಡಿಮೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ನಗರದಲ್ಲಿ ಸ್ವಚ್ಛತೆ ಕಾಪಾಡಲು ಮತ್ತು ಸಾರ್ವಜನಿಕ ಆರೋಗ್ಯವನ್ನು ಉತ್ತಮಪಡಿಸಲು ಇದು ನಿರ್ಣಾಯಕ ಹೆಜ್ಜೆಯಾಗಿದೆ.
ಪ್ರಸ್ತುತ ಹೊಸ ಟೆಂಡರ್ ನಡಿ ಪ್ಯಾಕೇಜ್ ನಲ್ಲಿ ಗುತ್ತಿಗೆ ನೀಡುವ ತನಕ ಹಿಂದಿನ ವ್ಯವಸ್ಥೆಯಡಿ ನಗರದಲ್ಲಿ ತ್ಯಾಜ್ಯ ವಿಲೇವಾರಿ ನಡೆಯುತ್ತಿದೆ. ಆದರೆ ನಗರ ಬಹುತೇಕ ಕಡೆ ಸೂಕ್ತ ರೀತಿಯಲ್ಲಿ ತ್ಯಾಜ್ಯ ಸಂಗ್ರಹವಾಗದ ಕಾರಣ ರಸ್ತೆ ಬದಿ, ಕಾಲಿ ನಿವೇಶನ ಮತ್ತಿತರ ಕಡೆ ತ್ಯಾಜ್ಯ ಸಮಸ್ಯೆ ವ್ಯಾಪಕವಾಗಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿದೆ. ಏಪ್ರಿಲ್ ನಿಂದಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಜೊತೆಗೆ ಘನತ್ಯಾಜ್ಯ ಶುಲ್ಕವನ್ನು ಸಂಗ್ರಹಿಸಲಾಗುತ್ತಿದ್ದರೂ, ಕಸದ ಸಮಸ್ಯೆಗೆ ಮುಕ್ತಿ ದೊರಕಿಲ್ಲ.