ಬೆಂಗಳೂರು, ಮೇ.29 www.bengaluruwire.com : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ನಿರ್ಮಿಸಿರುವ ಬಡಾವಣೆಗಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿ, ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡಿದ ನಂತರವೇ ಹೊಸ ಬಡಾವಣೆಗಳ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕು ಎಂದು ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ಸುರೇಶ್ ಕುಮಾರ್ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ನಗರದ ಉತ್ತರ ಭಾಗದಲ್ಲಿ ನಿರ್ಮಾಣವಾಗುತ್ತಿರುವ ಪ್ರತಿಷ್ಠಿತ ಡಾ. ಕೆ. ಶಿವರಾಮ ಕಾರಂತ (ಎಸ್.ಕೆ) ಬಡಾವಣೆಯಲ್ಲಿ ಮೊದಲ ಹಂತದ 30 ಸಾವಿರ ನಿವೇಶನಗಳ ಹಂಚಿಕೆಗೂ ಮುನ್ನವೇ ಎರಡನೇ ಹಂತದ ಸರ್ವೆ ಕಾರ್ಯ ಶುರುವಾಗಿದೆ ಎಂದು ಸುರೇಶ್ ಕುಮಾರ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಮೊದಲ ಹಂತದಲ್ಲಿ ಸುಮಾರು 3,546 ಎಕರೆ ಪ್ರದೇಶದಲ್ಲಿ 30 ಸಾವಿರ ನಿವೇಶನ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಬಾಕಿ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಇನ್ನೂ ಮೂರು ತಿಂಗಳ ಗಡುವು ನೀಡಲಾಗಿದೆ.
ಆದರೆ, ಈ ಪ್ರಕರಣ ನ್ಯಾಯಾಲಯದಲ್ಲಿ ಇನ್ನೂ ಇತ್ಯರ್ಥವಾಗಿಲ್ಲ. ನ್ಯಾಯಾಲಯ ಆದೇಶ ನೀಡಿದ ಕೂಡಲೇ ನಿವೇಶನ ಹಂಚಿಕೆಗೆ ಅರ್ಜಿ ಆಹ್ವಾನಿಸಲಾಗುತ್ತದೆ. ಇದರಲ್ಲಿ ಸುಮಾರು 10-12 ಸಾವಿರ ನಿವೇಶನಗಳನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡಲಾಗುತ್ತದೆ ಎಂದು ಬಿಡಿಎ ಮೂಲಗಳು ತಿಳಿಸಿವೆ ಎಂದು ಅವರು ಹೇಳಿದ್ದಾರೆ.
ಬಿಡಿಎನ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸುರೇಶ್ ಕುಮಾರ್, ಶಿವರಾಮ ಕಾರಂತ ಬಡಾವಣೆ ಮಾತ್ರವಲ್ಲದೆ ಅಂಜನಾಪುರ, ಸರ್. ಎಂ. ವಿ. ಲೇಔಟ್, ಕೆಂಪೇಗೌಡ ಬಡಾವಣೆ, ಅರ್ಕಾವತಿ ಬಡಾವಣೆಗಳನ್ನು ನಿರ್ಮಿಸಲು ರೈತರಿಂದ ಭೂಮಿ ಪಡೆದ ನಂತರವೂ ಕೆಲವರಿಗೆ ಇಲ್ಲಿಯವರೆಗೂ ಪರಿಹಾರ ನೀಡಿಲ್ಲ. ಇದರಿಂದ ರೈತರು ನಿತ್ಯವೂ ಪರಿಹಾರಕ್ಕಾಗಿ ಬಿಡಿಎ ಕಚೇರಿಗೆ ಅಲೆದಾಡುತ್ತಿರುವುದು ಸಾಮಾನ್ಯವಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲೇ ನಿರ್ಮಿಸಲಾದ ಬಡಾವಣೆಗಳ ಪೂರ್ಣ ಪ್ರಮಾಣದ ಅಭಿವೃದ್ಧಿ ಮಾಡದೆ, ಮೂಲಭೂತ ಸೌಕರ್ಯ ಒದಗಿಸದೆ ಇರುವಾಗ ನಿವೇಶನದಾರರಿಗೆ ಮನೆ ಕಟ್ಟಿಕೊಳ್ಳಲು ಆಗದಂತಹ ಸ್ಥಿತಿ ಉಂಟಾಗಿದೆ. ಇದರಿಂದ ಈ ಬಡಾವಣೆಗಳಲ್ಲಿ ಶೇ. 30ರಿಂದ 40ರಷ್ಟು ನಿವೇಶನಗಳು ಇನ್ನೂ ಖಾಲಿ ಇವೆ. ಹೀಗಿರುವಾಗ ಹೊಸ ಬಡಾವಣೆಗಳ ನಿರ್ಮಾಣದ ಅಗತ್ಯವಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.
ಪ್ರಾಧಿಕಾರದಿಂದ ಭೂಮಿ ಕಳೆದುಕೊಂಡವರಿಗೂ ಹಾಗೂ ನಿವೇಶನ ಪಡೆದವರಿಗೂ ಇದರಿಂದ ಉಪಯೋಗವಾಗುತ್ತಿಲ್ಲ. ಈ ಸಂದರ್ಭದಲ್ಲಿ ಹೊಸ ಬಡಾವಣೆ ಅಥವಾ ಎರಡನೇ ಹಂತದ ಸರ್ವೆ ಕಾರ್ಯ ಮಾಡುವುದರಿಂದ ಲಕ್ಷಾಂತರ ಗಿಡಮರಗಳ ಮಾರಣಹೋಮ ಆಗುತ್ತಿದೆ ಎಂದು ಸುರೇಶ್ ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಪರಿಷ್ಕೃತ ಮಹಾಯೋಜನೆ-2015 ಮತ್ತು ವಲಯ ನಿಯಮಾವಳಿಗಳಂತೆ ಕಾಯ್ದಿರಿಸಲಾಗಿದ್ದ ಕೃಷಿ ಭೂಮಿಯನ್ನು ಭೂ ಬದಲಾವಣೆ ಹೆಸರಿನಲ್ಲಿ ಈಗಾಗಲೇ ವಸತಿ ಮತ್ತು ಕೈಗಾರಿಕಾ ಉದ್ದೇಶಗಳಿಗೆ ಬದಲಾವಣೆ ಮಾಡಿರುವುದರಿಂದ ಕೃಷಿ ಭೂಮಿಯ ವಿಸ್ತರಣೆ ಕ್ಷೀಣಿಸಿದ್ದು, ಹಸಿರು ವಲಯ ಕಡಿಮೆಯಾಗುತ್ತಿದೆ. ಜೊತೆಗೆ ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದ ವಾಯು ಮಾಲಿನ್ಯ ವಿಪರೀತವಾಗಿದ್ದು, ಭವಿಷ್ಯದಲ್ಲಿ ಶುದ್ಧ ಗಾಳಿಗೆ ಹಣ ತೆರಬೇಕಾದ ಪರಿಸ್ಥಿತಿ ಬರಬಹುದು ಎಂದು ಅವರು ಎಚ್ಚರಿಸಿದ್ದಾರೆ.
ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್ ಅವರಿಗೆ ಈ ವಿಷಯಗಳ ಕುರಿತು ಸಂವೇದನೆ ಬೇಕಲ್ಲವೇ ಎಂದು ಪ್ರಶ್ನಿಸಿರುವ ಸುರೇಶ್ ಕುಮಾರ್, ಈಗಾಗಲೇ ನಿರ್ಮಾಣವಾದ ಬಡಾವಣೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿರುವಾಗ ಮತ್ತಷ್ಟು ಹೊಸ ಬಡಾವಣೆಗಳನ್ನು ನಿರ್ಮಿಸಲು ಯಾವ ಅಂಶಗಳನ್ನು ಆಧಾರವಾಗಿಟ್ಟುಕೊಂಡಿದ್ದೀರಿ?
ಬೆಂಗಳೂರಿನ ಬಡಾವಣೆಗಳನ್ನೇ ನಿರ್ವಹಿಸಲು ಸಾಧ್ಯವಾಗದಿದ್ದಾಗ ಹೊಸ ಬಡಾವಣೆಗಳನ್ನು ನಿರ್ಮಾಣ ಮಾಡುವ ಸಾಮರ್ಥ್ಯ ಬಿಡಿಎಗೆ ಅಥವಾ ಸರ್ಕಾರಕ್ಕೆ ಇದೆಯೇ ಎಂದು ಕೇಳಿದ್ದಾರೆ. ಆದ್ದರಿಂದ ಈಗಿರುವ ಬಡಾವಣೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಪೂರ್ಣ ಪ್ರಮಾಣದ ಅಭಿವೃದ್ಧಿಯನ್ನು ಮಾಡಿ ನಿವೇಶನದಾರರಿಗೆ ಹಸ್ತಾಂತರಿಸಿದ ನಂತರವಷ್ಟೇ ಹೊಸ ಬಡಾವಣೆಗಳ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಬೇಕೆಂದು ಸುರೇಶ್ ಕುಮಾರ್ ಒತ್ತಾಯಿಸಿದ್ದಾರೆ.






















