ರಾಯಚೂರು, ಮೇ.26 www.bengaluruwire.com : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ರಾಯಚೂರು ವಿಭಾಗದ ಲಿಂಗಸುಗೂರು ಘಟಕದಲ್ಲಿ ಚಾಲಕ ಕಂ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬಸಪ್ಪ ಮತ್ತು ಅವರ ಪತ್ನಿ ನಾಗರತ್ನ ದಂಪತಿಯ ಮಗ ಆನಂದಕುಮಾರ ಅವರು ಭಾರತ ಸರ್ಕಾರದ ಕೇಂದ್ರ ಲೋಕಸೇವಾ ಆಯೋಗದ (UPSC) ಭಾರತೀಯ ಅರಣ್ಯ ಸೇವೆ (IFS) ಪರೀಕ್ಷೆಯಲ್ಲಿ 41ನೇ ರ್ಯಾಂಕ್ ಗಳಿಸುವ ಮೂಲಕ ಇಡೀ ಕುಟುಂಬಕ್ಕೆ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಕೀರ್ತಿ ತಂದಿದ್ದಾರೆ.
ಆನಂದಕುಮಾರ ಅವರ ಈ ಸಾಧನೆಗೆ ಸಾರಿಗೆ ಹಾಗೂ ಮುಜರಾಯಿ ಸಚಿವರು ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರೂ ಆದ ರಾಮಲಿಂಗಾ ರೆಡ್ಡಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಆನಂದಕುಮಾರ ಅವರಿಗೆ ₹1 ಲಕ್ಷ ಪ್ರೋತ್ಸಾಹ ಧನದೊಂದಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, “ನಮ್ಮ ಸಾರಿಗೆ ಸಿಬ್ಬಂದಿ ಮಕ್ಕಳು ವೈದ್ಯಕೀಯ, ಇಂಜಿನಿಯರಿಂಗ್, ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದು, ಅವರ ಮಕ್ಕಳಿಗಾಗಿ ಸಾರಿಗೆ ವಿದ್ಯಾ ಚೇತನ ಯೋಜನೆಯಡಿ ವಿದ್ಯಾರ್ಥಿ ವೇತನವನ್ನು ಐದರಿಂದ ಹತ್ತು ಪಟ್ಟು ಹೆಚ್ಚಳ ಮಾಡಿ ಪ್ರೋತ್ಸಾಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಯಶಸ್ಸು ಸಾಧಿಸುವಂತಾಗಲಿ” ಎಂದು ಆಶಿಸಿದರು.
ಸಚಿವರು ಆನಂದಕುಮಾರ್ಗೆ ಭಾರತೀಯ ಆಡಳಿತ ಸೇವೆ (IAS) ಅಥವಾ ಭಾರತೀಯ ವಿದೇಶಾಂಗ ಸೇವೆ (IFS) ಗೆ ತಯಾರಿ ನಡೆಸಲು ಸಲಹೆ ನೀಡಿದರು. “ದೇಶಕ್ಕಾಗಿ ಒಳ್ಳೆಯ ಕೆಲಸವನ್ನು ಮಾಡಿ ರಾಜ್ಯಕ್ಕೆ ಕೀರ್ತಿ ಇರಲಿ” ಎಂದು ಶುಭ ಹಾರೈಸಿದರು.
ಕಠಿಣ ಪರಿಶ್ರಮಕ್ಕೆ ಸಿಕ್ಕ ಫಲ :

ಆನಂದಕುಮಾರ ಅವರು ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ (ಅಗ್ರಿ) ಪದವಿಯನ್ನು ಪೂರ್ಣಗೊಳಿಸಿದ್ದಾರೆ. ತಮ್ಮ ಮೂರನೇ ಪ್ರಯತ್ನದಲ್ಲಿ ಯು.ಪಿ.ಎಸ್.ಸಿ ಐಎಫ್ಎಸ್ ಪರೀಕ್ಷೆಯಲ್ಲಿ 41ನೇ ರ್ಯಾಂಕ್ ಗಳಿಸುವ ಮೂಲಕ ಯಶಸ್ಸು ಸಾಧಿಸಿದ್ದಾರೆ. ಅವರ ಈ ಸಾಧನೆ, ಛಲ ಮತ್ತು ಕಠಿಣ ಪರಿಶ್ರಮಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಆರ್ಥಿಕ ಅಡಚಣೆಗಳು ಮತ್ತು ಸವಾಲುಗಳ ನಡುವೆಯೂ ಛಲ ಬಿಡದೆ ಓದಿ ಉನ್ನತ ಹುದ್ದೆ ಗಳಿಸಿದ ಆನಂದಕುಮಾರ, ರಾಜ್ಯದ ಯುವ ಜನಾಂಗಕ್ಕೆ ಸ್ಫೂರ್ತಿಯಾಗಿದ್ದಾರೆ.

ಈ ಸಂದರ್ಭದಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಎಂ. ರಾಚಪ್ಪ, ಕ ಆ ಸೇ( ಹಿರಿಯ ಆಯ್ಕೆ ಶ್ರೇಣಿ), ರಾಯಚೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ, ಚಂದ್ರಶೇಖರ ಎಂ. ಎಸ್., ಆನಂದಕುಮಾರ್ ಅವರ ಪರಿವಾರದವರು ಹಾಗೂ ಇನ್ನಿತರ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.