ಬೆಂಗಳೂರು: ಮೇ.16 www.bengaluruwire.com : ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಉದ್ಯಾನವನಗಳಲ್ಲಿ ವಾಯುವಿಹಾರಿಗಳಿಗೆ ಮತ್ತು ಸಾರ್ವಜನಿಕರಿಗೆ ಪರಿಸರದ ಸಂರಕ್ಷಣೆ ಕುರಿತು ಅರಿವು ಮೂಡಿಸುವ ಸಲುವಾಗಿ ಸಾಂಸ್ಕೃತಿಕ ಮತ್ತು ಇನ್ನಿತರ ಕಲಾ ಚಟುವಟಿಕೆಗಳನ್ನೊಳಗೊಂಡ “ಬೆಂಗಳೂರು ಹಬ್ಬ” ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಾಳೆ ಸಂಜೆ 5 ಗಂಟೆಗೆ ವರ್ಷವಿಡೀ ನಡೆಯುವ ಈ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬಸವನಗುಡಿ ಬ್ಯೂಗಲ್ ರಾಕ್ ಉದ್ಯಾನವನದಲ್ಲಿ ಚಾಲನೆ ದೊರೆಯಲಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ 27 ವಿಧಾನಸಭಾ ಕ್ಷೇತ್ರಗಳಲ್ಲಿ 1 ವಿಧಾನ ಸಭಾ ಕ್ಷೇತ್ರಕ್ಕೆ ಒಂದರಂತೆ 27 ಉದ್ಯಾನವನಗಳಲ್ಲಿ ಮೇ-2025 ರಿಂದ ಮಾರ್ಚ್-2026 ರವರೆಗೆ ವರ್ಷವಿಡೀ ಸಾಂಸ್ಕೃತಿಕ ಮತ್ತು ಮಕ್ಕಳಿಗೆ ಉತ್ತೇಜಿಸುವ ಕಲೆಗಳ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಉದ್ಯಾನವನಗಳಿಗೆ ವೀಕ್ಷಿಸಲು ಬರುವಂತಹ ಸಾರ್ವಜನಿಕರಿಗೆ ಮತ್ತು ವಾಯುವಿಹಾರಿಗಳಿಗೆ ಅನುಕೂಲವಾಗಲೆಂದು ಉದ್ಯಾನವನಗಳಲ್ಲಿ “ಬೆಂಗಳೂರು ಹಬ್ಬ” ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ಪಾರಂಪರಿಕ ಸಂಸ್ಕೃತಿ, ಕಲೆಗಳು ಮತ್ತು ಇನ್ನಿತರ ಕಲಾ ಚಟುವಟಿಕೆಗಳಾದ ಡೊಳ್ಳುಕುಣಿತ, ಜಾನಪದ ಗಾಯನ, ಸುಗಮ ಸಂಗೀತ ಮತ್ತು ಜಾನಪದ ಕಲಾತಂಡಗಳನ್ನು ಒಳಗೊಂಡಂತೆ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಉದ್ಯಾನವನಗಳು ಬೆಂಗಳೂರಿನ ನಾಗರಿಕರಿಗೆ ಉತ್ತಮವಾದ ಆಮ್ಲಜನಕ ಮತ್ತು ಮನೋಲ್ಲಾಸವನ್ನು ಒದಗಿಸುವ ಮೂಲವಾಗಿದೆ. “ಉದ್ಯಾನ ನಗರಿ” ಯಲ್ಲಿ ಪಾಲಿಕೆಯು 1,287 ಉದ್ಯಾನವನಗಳನ್ನು ಅಭಿವೃದ್ಧಿಗೊಳಿಸಿ ನಿರ್ವಹಣೆ ಮಾಡುತ್ತಿದೆ.
ಜಾಗೃತಿ ಜಾಥಾ ಕಾರ್ಯಕ್ರಮ:

ಬೆಂಗಳೂರು ಹಬ್ಬ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲಿಕೆಯ ಆಡಳಿತಗಾರರು, ಮುಖ್ಯ ಆಯುಕ್ತರು, ವಿಶೇಷ ಆಯುಕ್ತರುಗಳು, ವಲಯ ಆಯುಕ್ತರುಗಳು ಸೇರಿದಂತೆ ಇನ್ನಿತರೆ ಗಣ್ಯರುಗಳು/ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೂ ಮುಂಚಿತವಾಗಿ ರಾಮಕೃಷ್ಣ ಮಠ ವೃತ್ತದಿಂದ ಬ್ಯೂಗಲ್ ರಾಕ್ ಉದ್ಯಾನವನದವರೆಗೆ “ಬೆಂಗಳೂರು ಹಬ್ಬ” ಕುರಿತಾಗಿ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಕೂಡಾ ಹಮ್ಮಿಕೊಳ್ಳಲಾಗಿದ್ದು, ನಾಗರಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಯಶಸ್ವಿಗೊಳಿಸಬೇಕಾಗಿ ಬಿಬಿಎಂಪಿ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದೆ.
