ಬೆಂಗಳೂರು, ಏ.14 www.bengaluruwire.com : ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷೀಯ ಚುನಾವಣೆ-2025ರಲ್ಲಿ ವೇದಬ್ರಹ್ಮ ಭಾನುಪ್ರಕಾಶ್ ಅವರನ್ನು 2164 ಮತಗಳ ಅಂತರದಲ್ಲಿ ಮಣಿಸಿ ನೂತನ ಅಧ್ಯಕ್ಷರಾಗಿ ಎಸ್.ರಘುನಾಥ್ ಅವರು ಆಯ್ಕೆಯಾಗಿದ್ದಾರೆ.
ಏ.13ರಂದು ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ನಡೆದ ಮಹಾಸಭಾ ಚುನಾವಣೆಯ ಮತದಾನದಲ್ಲಿ ಅಧ್ಯಕ್ಷೀಯ ಅಭ್ಯರ್ಥಿ ಭಾನುಪ್ರಕಾಶ್ ಶರ್ಮರವರು 11,235 ಮತಗಳನ್ನು ಪಡೆದರೆ, ಮತ್ತೊಬ್ಬ ಅಭ್ಯರ್ಥಿಯಾದ ಎಸ್.ರಘುನಾಥ್ ರವರು 13,399 ಮತಗಳನ್ನು ಪಡೆದು 2164 ಮತಗಳ ಅಂತರದಲ್ಲಿ ವಿಜಯಿಯಾದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಎಸ್.ರಘುನಾಥ್ ಅವರು, ನನ್ನ ಗೆಲುವಿಗೆ ವಿಪ್ರ ಸಮುದಾಯದ ಮುಖಂಡರು, ಕಾರ್ಯಕರ್ತರು ಸ್ನೇಹಿತರು ನಾಡಿನ ಸಮಸ್ತ ವಿಪ್ರ ಕುಲ ಭಾಂದವರಿಗೆ ಹೃತ್ವೂರ್ವಕ ಧನ್ಯವಾದಗಳು ಎಂದು ಹೇಳಿದರು.
ರಾಜ್ಯದಲ್ಲಿ 45 ಲಕ್ಷ ಬ್ರಾಹ್ಮಣರ ಜನಸಂಖ್ಯೆಯಿದೆ. ನಮ್ಮಲ್ಲಿ ಆರ್ಥಿಕವಾಗಿ ಹಿಂದುಳಿದವರು ಹೆಚ್ಚಿನ ಜನಸಂಖ್ಯೆಯಲ್ಲಿ ಇದ್ದಾರೆ. ಪೌರೋಹಿತ್ಯ, ಅಡುಗೆ ಕೆಲಸ ಮಾಡುವವರು ಹಾಗೂ ಅರ್ಚಕ ವೃತ್ತಿ ಮಾಡುವವರು ಇನ್ನಿತರೆ ವೃತ್ತಿ ಮಾಡುವವರ ಮಕ್ಕಳಿಗೆ ಶಿಕ್ಷಣ, ಉದ್ಯೋಗದಲ್ಲಿ ಹೆಚ್ಚಿನ ಅವಕಾಶ ಸಿಗಬೇಕು. ವೃತ್ತಿ ಬಾಂಧವರಿಗೆ ಆರ್ಥಿಕವಾಗಿ ಶಕ್ತಿ ತುಂಬಬೇಕು. ಅವರು ಸಹ ಎಲ್ಲರಂತೆ ಸಮಾಜದ ಮುಖ್ಯವಾಹಿನಿ ತರಬೇಕು ಎಂದು ಹಲವಾರು ಯೋಜನೆಗಳನ್ನು ಮುಂದಿನ ದಿನಗಳಲ್ಲಿ ರೂಪಿಸಲಾಗುತ್ತದೆ ಎಂದರು.


ಈ ಚುನಾವಣೆಯಲ್ಲಿ ವಿಪ್ರ ಹಿರಿಯ ಗಣ್ಯರುಗಳಾದ ಸಿ.ವಿ.ಎಲ್.ಶಾಸ್ತ್ರಿ, ಬಿ.ಎನ್.ಸುಬ್ರಮಣ್ಯರವರ ಅಭಿಮಾನಿಗಳು ಸ್ನೇಹಿತರು ಸಂಪೂರ್ಣ ಬೆಂಬಲ ನೀಡಿದ್ದಾರೆ. ಮಾಜಿ ಅಧ್ಯಕ್ಷರಾದ ಎಂ.ಆರ್.ವಿ.ಪ್ರಸಾದರವರು, ಕಳೆದ ಬಾರಿ ಅಧ್ಯಕ್ಷ ಸ್ಥಾನಕ್ಕೆ ನಿಂತಿದ್ದ ಆರ್.ಲಕ್ಷ್ಮಿಕಾಂತ್ ರವರು ಸಹಕಾರ ನೀಡಿದ್ದಾರೆ.

ವಿಪ್ರ ಸಮುದಾಯದ ಏಳಿಗೆಗಾಗಿ 100ಕೋಟಿ ದೇಣಿಗೆ ಸಂಗ್ರಹ ಮಾಡಿ ದತ್ತಿ ನಿಧಿ ಸ್ಥಾಪನೆ ಮಾಡಿ, ಅದರಿಂದ ಶಿಕ್ಷಣ ಸಂಸ್ಥೆ ನಿರ್ಮಾಣ ಮಾಡಿ ವಿಪ್ರ ಸಮುದಾಯದ ಮಕ್ಕಳಿಗೆ ಅವಕಾಶ ನೀಡುವುದು ಹಾಗೂ ವಿಶ್ರಾಂತಿ ಭವನ ನಿರ್ಮಾಣ, ಉದ್ಯೋಗ ಮೇಳ, ಸಾಮೂಹಿಕ ಉಪನಯನ ಮತ್ತು ವಧು-ವರ ಆನ್ವೇಷಣೆ ಕೇಂದ್ರ, ವಿಕಲಚೇತನರಿಗೆ ಸಹಾಯಧನ ಕಲ್ಪಿಸಲಾಗುವುದು. ಸರ್ಕಾರದಲ್ಲಿ ಮೇಲ್ವರ್ಗದವರಿಗೆ ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ಕಡ್ಡಾಯಗೊಳಿಸಲು ಹೋರಾಟ ಮಾಡಲಾಗುವುದು ಎಂದು ಅವರು ಹೇಳಿದರು.
ಮಹಾಸಭಾದ ಸದಸ್ಯತ್ವ ಅಭಿಯಾನವನ್ನು ರಾಜ್ಯಾದ್ಯಂತ ಚುರುಕುಗೊಳಿಸುವುದು ವಿಪ್ರ ಸಮುದಾಯದ ಅಭಿವೃದ್ದಿಗೆ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ ಎಂದು ನೂತನ ಅಧ್ಯಕ್ಷರಾದ ಎಸ್.ರಘುನಾಥ್ ಅವರು ತಿಳಿಸಿದರು.
ರಾಜ್ಯದಲ್ಲಿ ಮಹಾಸಭಾದ ಒಟ್ಟು 66 ಸಾವಿರ ಮತದಾರರಿದ್ದು, ಆ ಪೈಕಿ ಬೆಂಗಳೂರು ನಗರ ಪ್ರದೇಶದಲ್ಲಿ 34 ಸಾವಿರ ಮತದಾರರು ಇದ್ದಾರೆ. ಏ.13ರ ಭಾನುವಾರ ಬೆಳಗ್ಗೆ 8ರಿಂದ 4 ಗಂಟೆಗೆ ವರಗೆ ಮತದಾನ ನಡೆದು ನಂತರ ಮತ ಏಣಿಕೆ ಕಾರ್ಯ ಜರುಗಿತು.
ಇದೇ ವೇಳೆ ಬೆಂಗಳೂರು ನಗರ ಪ್ರದೇಶದಲ್ಲಿ 8 ಜಿಲ್ಲಾ ಪ್ರತಿನಿಧಿ ಸ್ಥಾನಗಳಿಗೂ ಚುನಾವಣೆ ನಡೆಯಿತು. ದಕ್ಷಿಣ ಜಿಲ್ಲಾ ಪ್ರತಿನಿಧಿ, ಕೇಂದ್ರ ಜಿಲ್ಲಾ ಪ್ರತಿನಿಧಿ ಹಾಗೂ ಉತ್ತರ ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ಚುನಾವಣೆ ನಡೆಯಿತು.
ಬೆಂಗಳೂರಿನಲ್ಲಿ ರಾಯರಾಯ ಕಲ್ಯಾಣ ಮಂಟಪ, ಚಂದ್ರಶೇಖರಭಾರತಿ ಕಲ್ಯಾಣ ಮಂಟಪ ಮತ್ತು ಎ.ಪಿ.ಎಸ್.ಕಾಲೇಜುಗಳಲ್ಲಿ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು ಮತ್ತು ರಾಜ್ಯದ ಹಲವಾರು ಜಿಲ್ಲೆಗಳಲ್ಲಿ 1000ಕ್ಕೂ ಹೆಚ್ಚು ಮತ ಇರುವ ಜಿಲ್ಲೆಗಳಲ್ಲಿ ಮತಗಟ್ಟೆ ಸ್ಥಾಪನೆ ಮಾಡಿ ಆಯಾ ಜಿಲ್ಲೆಯವರು ಅಲ್ಲಿಯೇ ಮತದಾನ ಮಾಡುವಂತೆ ವ್ಯವಸ್ಥೆ ಮಾಡಲಾಗಿತ್ತು.