ಬೆಂಗಳೂರು, ಮಾ.26 www.bengaluruwire.com : ಹೃದಯ ವೈಫಲ್ಯಕ್ಕೆ ಒಳಗಾಗುವ ಸ್ಥಿತಿಗೆ ತಲುಪಿದ್ದ 9 ವರ್ಷದ ಬಾಲಕನಿಗೆ ನಗರದಲ್ಲಿನ ಯಶವಂತಪುರ ಸ್ಪರ್ಶ್ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿಯಾಗಿ ಹೃದಯ ಕಸಿ ಮಾಡುವ ಮೂಲಕ ಬಾಲಕನಿಗೆ ಮರುಹುಟ್ಟು ನೀಡಿದ್ದಾರೆ.
ಯಶವಂತಪುರ ಸ್ಪರ್ಶ್ ಆಸ್ಪತ್ರೆಯ ಹೃದಯ ಕಸಿತಜ್ಞ, ಹೃದಯ ರಕ್ತನಾಳಗಳ ಹಿರಿಯ ಶಸ್ತ್ರ ಚಿಕಿತ್ಸಕರಾದ ಡಾ.ರವಿಶಂಕರ್ ಶೆಟ್ಟಿ.ಕೆ. ಅವರ ವೈದ್ಯ ತಂಡ ಈ ಯಶಸ್ವಿ ಹೃದಯ ಕಸಿ ನಡೆಸಿದೆ.
ಈ ಕುರಿತು ಮಾತನಾಡಿದ ಡಾ.ರವಿಶಂಕರ್ ಶೆಟ್ಟಿ.ಕೆ, “9 ವರ್ಷದ ರಿಯಾಂಶ್ ರಾವಲ್ ಎಂಬ ಬಾಲಕ ಹುಟ್ಟಿನಿಂದಲೇ ತೀವ್ರತರದ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ. ಕ್ರಮೇಣ ಈ ಸಮಸ್ಯೆ ಬಾಲಕನಿಗೆ ಉಸಿರಾಡಲು ಸಹ ಕಷ್ಟಪಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಬಾಲಕ ಬೆಳೆದಂತೆ ಹೃದಯ ಸಮಸ್ಯೆಯೂ ದೊಡ್ಡದಾಗುತ್ತಾ, ಹೃದಯ ವೈಫಲ್ಯದವರೆಗೂ ತಲುಪಿತ್ತು”.
“ಹೃದಯದ ಕಸಿ ಮಾಡುವುದೊಂದೇ ಬಾಲಕನನ್ನು ಬದುಕುಳಿಸುವ ಮಾರ್ಗವಾಗಿತ್ತು. ಆದರೆ, ಸೂಕ್ತ ಸಮಯಕ್ಕೆ ಹೃದಯ ದೊರೆಯುವುದು ಸವಾಲಿನ ಕೆಲಸವಾಗಿತ್ತು. ಹೀಗಾಗಿ ನೋಂದಣಿ ಮಾಡುತ್ತಾ ಕಾಯುತ್ತಿದ್ದರು. ಸೂಕ್ತ ಸಮಯಕ್ಕೆ ರಿಯಾಂಶ್ಗೆ ಹೊಂದಾಣಿಕೆಯಾಗುವ ಹೃದಯವು ಕರ್ನಾಟಕ ಅಂಗ ಮತ್ತು ಅಂಗಾಂಶಗಳ ಕಸಿ ಸಂಸ್ಥೆ (SOTTO Karnataka)ಯ ಸಕ್ರಿಯ ಮತ್ತು ಸಕಾಲಿಕ ಪ್ರಯತ್ನದೊಂದಿಗೆ ದೊರೆಯಿತು”.

“ನಮ್ಮ ಅರಿವಳಿಕೆ ತಜ್ಞರು, ತುರ್ತು ಚಿಕಿತ್ಸಾ ವಿಭಾಗದ ನುರಿತರ ನಿರಂತರ ನಿಗಾ, ದಾದಿಯರು ಹಾಗೂ ಹೃದಯ ಕಸಿ ನಂತರದ ಚಿಕಿತ್ಸಾ ವಿಭಾಗದ ತಜ್ಞರಿಂದ ಹೃದಯವೂ ಸೇರಿದಂತೆ ಉಳಿದ ಅಂಗಾಂಗಗಳಿಗೆ ಸೂಕ್ತವಾದ ರಕ್ತ ಸಂಚಲನ ಪ್ರಕ್ರಿಯೆ ನಡೆಸುವ ತಂಡದ ಆರೈಕೆಯಿಂದಾಗಿ ರಿಯಾಂಶ್ಗೆ ಯಶಸ್ವಿಯಾಗಿ ಹೃದಯ ಕಸಿ ನೆರವೇರಿದ್ದು, ಆತ ಇದೀಗ ಎಲ್ಲಾ ಸಮಸ್ಯೆಯಿಂದ ಚೇತರಿಸಿಕೊಂಡಿದ್ದಾನೆ” ಎಂದು ವೈದ್ಯರು ವಿವರಿಸಿದರು.
