ಬೆಂಗಳೂರು, ಮಾ.21 www.bengaluruwire.com : ಆಭರಣ ರಫ್ತಿಗೆ ಉತ್ತೇಜನ ನೀಡಲು ಸರ್ಕಾರ ಒತ್ತು ನೀಡಲಿದ್ದು, ದೇವನಹಳ್ಳಿ ವಿಮಾನ ನಿಲ್ದಾಣ ಸಮೀಪದಲ್ಲಿ ಜ್ಯುವೆಲ್ಲರಿ ಪಾರ್ಕ್ ನಿರ್ಮಾಣಕ್ಕೆ ಜಾಗ ನೀಡಲು ರಾಜ್ಯ ಸರ್ಕಾರ ಮುಕ್ತವಾಗಿದ್ದು, ಇದನ್ನು ಆಭರಣ ಉದ್ಯಮಿಗಳು ಸದುಪಯೋಗ ಮಾಡಿಕೊಳ್ಳಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಶುಕ್ರವಾರ ಹೇಳಿದರು.
ಇಲ್ಲಿನ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ (BIEC) ಮಾ.24ರ ತನಕ ನಡೆಯುತ್ತಿರುವ ನಾಲ್ಕು ದಿನಗಳ ಆಭರಣ ಪ್ರದರ್ಶನ ಮತ್ತು ವಾಣಿಜ್ಯ ಮೇಳಕ್ಕೆ ಅವರು ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಆಭರಣಗಳ ರಫ್ತಿಗೆ ಇರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಹೂಡಿಕೆ ಮಾಡಲು ಉದ್ಯಮಿಗಳು ಮುಂದಾಗಬೇಕು. ಸುಸ್ಥಿರತೆಗೆ ಒತ್ತು ನೀಡುವ ದಿಸೆಯಲ್ಲಿ ‘ನೆಟ್ ಜೀರೋ ಜ್ಯುವೆಲ್ಲರಿ ಪಾರ್ಕ್’ ನಿರ್ಮಿಸಲು ಹಿತಾಸಕ್ತಿದಾರರು ಗಮನ ವಹಿಸಬೇಕು ಎಂದು ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
ಇದೇ 24ರವರೆಗೆ ನಡೆಯಲಿರುವ ದೇಶದ ಮೂರನೇ ಅತಿದೊಡ್ಡ ಚಿನ್ನಾಭರಣ ಮೇಳವನ್ನು ಮುಂಬರುವ ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ದಿ ಜೆಮ್ ಅಂಡ್ ಜ್ಯೂವೆಲರಿ ಎಕ್ಸ್ಪೋರ್ಟ್ ಪ್ರಮೋಶನ್ ಕೌನ್ಸಿಲ್ ಏರ್ಪಡಿಸಿದೆ.


ವಿಶ್ವ ದರ್ಜೆಯ ಮೂಲಸೌಕರ್ಯ, ಪುರೋಗಾಮಿ ನೀತಿಗಳು ಮತ್ತು ಕೌಶಲ್ಯಪೂರ್ಣ ಕೆಲಸಗಾರರನ್ನು ಹೊಂದಿರುವ ರಾಜ್ಯವು ಆಭರಣ ತಯಾರಿಕೆ ಮತ್ತು ರಫ್ತು ವಹಿವಾಟಿಗೆ ಪ್ರಶಸ್ತ ತಾಣವಾಗಿದೆ. ಇದಕ್ಕೆ ಪೂರಕವಾಗಿ, ಉಡುಪಿಯಲ್ಲಿ ಇರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಜೆಮ್ ಅಂಡ್ ಜ್ಯೂವೆಲ್ಲರಿ ಸಂಸ್ಥೆಯು ಆಭರಣ ಕುಶಲಕರ್ಮಿಗಳನ್ನು ಸಜ್ಜುಗೊಳಿಸುತ್ತಿದೆ ಎಂದು ಸಚಿವರು ವಿವರಿಸಿದರು.

ದೇಶದಲ್ಲಿ ವಾರ್ಷಿಕ 32 ಬಿಲಿಯನ್ ಡಾಲರ್ ಮೊತ್ತದ ಆಭರಣ ವಹಿವಾಟು ನಡೆಯುತ್ತಿದೆ. ಮುಖ್ಯವಾಗಿ ಇಲ್ಲಿಂದ ಅಮೆರಿಕ, ಅರಬ್ ಸಂಯುಕ್ತ ಸಂಸ್ಥಾನ, ರಷ್ಯಾ, ಸಿಂಗಪುರ್ ಮತ್ತು ಹಾಂಕಾಂಗ್ ಮಾರುಕಟ್ಟೆಗೆ ಹೆಚ್ಚಿನ ಆಭರಣಗಳನ್ನು ಕಳುಹಿಸಲಾಗುತ್ತಿದೆ. ಉಡುಪಿಯಲ್ಲಿರುವ ಕಾಮನ್ ಫೆಸಿಲಿಟಿ ಸೆಂಟರ್ ಐದು ವರ್ಷಗಳ ಹಿಂದೆ 55 ವಿದ್ಯಾರ್ಥಿಗಳನ್ನು ಹೊಂದಿತ್ತು. ಈಗ ಅಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಅವರಿಗೆ ಹೊಸ ಬಗೆಯ ಕೌಶಲ್ಯಗಳನ್ನು ಕಲಿಸಲಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಮಹಿಳೆಯರು ಮತ್ತು ಯುವಜನರಿಗೆ ಆದ್ಯತೆ ನೀಡಲಾಗಿದೆ ಎಂದು ಪಾಟೀಲ ಅವರು ತಿಳಿಸಿದರು.
ಪ್ರಸ್ತುತ ಮೇಳದಲ್ಲಿ ಆಭರಣ ವಲಯದ 80 ಪ್ರಮುಖ ಕಂಪನಿಗಳು ಪಾಲ್ಗೊಂಡಿವೆ. ಇವು ಹೊಸ ಬಗೆಯ ಯಂತ್ರೋಪಕರಣಗಳು, ತಂತ್ರಜ್ಞಾನ ಮತ್ತು ಪ್ಯಾಕೇಜಿಂಗ್ ಬಗ್ಗೆ ಗಮನ ಕೇಂದ್ರೀಕರಿಸಿವೆ. ಜತೆಗೆ ಭಾರತದ 15 ಸಾವಿರ ಮತ್ತು ವಿದೇಶಗಳ 300ಕ್ಕೂ ಹೆಚ್ಚು ಆಭರಣ ಖರೀದಿದಾರರು ಭಾಗವಹಿಸುತ್ತಿದ್ದಾರೆ. ಈಗ ಹೊಸ ಬಗೆಯ ವಿನ್ಯಾಸಗಳ ಆಭರಣಗಳಿಗೆ ಇರುವ ಬೇಡಿಕೆಯನ್ನು ತಿಳಿಸಿದರೆ, ಅಂತಹ ವಿನ್ಯಾಸಗಳನ್ನು ಅಕ್ಷಯ ತೃತೀಯ ವೇಳೆಗೆ ಸಿದ್ಧಪಡಿಸಿ, ವ್ಯಾಪಾರಿಗಳಿಗೆ ಪೂರೈಸಲಾಗುವುದು ಎಂದರು.
ರಾಜ್ಯವು ಉದ್ಯಮಸ್ನೇಹಿ ಮತ್ತು ರಫ್ತುಕೇಂದ್ರಿತ ಹೊಸ ಕೈಗಾರಿಕಾ ನೀತಿಯನ್ನು ಹೊಂದಿದೆ. ವಿದೇಶಿ ಹೂಡಿಕೆಯಲ್ಲಿ ದೇಶದಲ್ಲಿ ಮೊದಲ ಸ್ಥಾನದಲ್ಲಿರುವ ಕರ್ನಾಟಕವು ಜಿ.ಎಸ್.ಟಿ. ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿದೆ. ಇದಲ್ಲದೆ, ಉದ್ಯಮ ಬೆಳವಣಿಗೆಗೆ ಸಂಬಂಧಿಸಿದ ಇನ್ನೂ ಕೆಲವಾರು ಸೂಚ್ಯಂಕಗಳಲ್ಲಿ ರಾಜ್ಯವು ಮೇಲ್ಪಂಕ್ತಿಯಲ್ಲಿದೆ.
2033ರ ವೇಳೆಗೆ ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಲಿದ್ದು, ಅದಕ್ಕಾಗಿ ಈಗಾಗಲೇ ಕಾರ್ಯ ಆರಂಭವಾಗಿದೆ. ಹೀಗಾಗಿ, ಆಭರಣ ಉದ್ದಿಮೆದಾರರು ರಾಜ್ಯದಲ್ಲಿ ಹೂಡಿಕೆ ಮಾಡುವತ್ತ ಗಮನ ಹರಿಸಬೇಕು. ಈ ವಲಯದ ಬೆಳವಣಿಗೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನೂ ಸರಕಾರವು ಒದಗಿಸಲಿದೆ ಎಂದು ಬೆಂಬಲದ ಮಾತುಗಳನ್ನಾಡಿದರು.
ನಾಲ್ಕು ದಿನಗಳ ಆಭರಣ ಮೇಳ, ಅಂಗಡಿ ಮತ್ತು ದೊಡ್ಡ ಮಟ್ಟದ ಆಭರಣ ಉದ್ಯಮದವರಿಗೆ ಮಾತ್ರ ಪ್ರವೇಶವಿದೆ.