ಬೆಂಗಳೂರು, ಮಾ.18 www.bengaluruwire.com : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA)ದ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಉಪನೋಂದಣಾಧಿಕಾರಿಗಳ ಕುಮ್ಮಕ್ಕಿನಿಂದ ಜಯನಗರ ಒಂದನೇ ಬ್ಲಾಕಿನಲ್ಲಿನ 100 ಕೋಟಿ ರೂ. ಹೆಚ್ಚು ಮೌಲ್ಯದ ಪ್ರಾಧಿಕಾರದ್ದು ಎನ್ನಲಾದ ಭೂಮಿ ಬಿಲ್ಡರ್ ಒಬ್ಬರ ಪಾಲಾಗಿದೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಆರೋಪಿಸಿದ್ದಾರೆ.
ಈ ಹಿಂದೆ ಪ್ರಾಧಿಕಾರ ಜಯನಗರ ಬಡಾವಣೆ ನಿರ್ಮಿಸುವ ಸಂಬಂಧ ಭೂಸ್ವಾಧೀನಪಡಿಸಿಕೊಂಡಿದ್ದ ಭೂಮಿಯ ಪೈಕಿ 32,670 ಚ. ಅಡಿಗಳಷ್ಟು ವಿಸ್ತೀರ್ಣದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಈ ಅಮೂಲ್ಯ ಸ್ವತ್ತನ್ನು ಕೂಡಲೇ ಬಿಡಿಎ ವಶಪಡಿಸಿಕೊಳ್ಳಬೇಕು. ಈ ಸ್ವತ್ತು ಬಿಡಿಎ ಆಸ್ತಿ ಎಂದು ಗೊತ್ತಿದ್ದರೂ ಅನ್ಯರ ಪಾಲಾಗಲು ಬಿಟ್ಟ ಪ್ರಾಧಿಕಾರದ ಭ್ರಷ್ಟ ಅಧಿಕಾರಿಗಳು, ಈ ಸ್ವತ್ತನ್ನು ನೋಂದಣಿ ಮಾಡಿಕೊಟ್ಟ ಬೊಮ್ಮನಹಳ್ಳಿ ಮತ್ತು ರಾಜರಾಜೇಶ್ವರಿನಗರ ಉಪ ನೊಂದಣಾಧಿಕಾರಿಗಳು ಹಾಗೂ ಅಶೋಕ್ ಧಾರಿವಾಲ್ ಎಂಬ ಬಿಲ್ಡರ್ ವಿರುದ್ಧ ಕಾನೂನು ರೀತ್ಯಾ ಪ್ರಕರಣಗಳನ್ನು ದಾಖಲಿಸಿ ಎಂದು ಬಿಡಿಎ ಆಯುಕ್ತರಿಗೆ, ಕಂದಾಯ ಸಚಿವ ಕೃಷ್ಣಭೈರೇಗೌಡ ಅವರಿಗೆ ದಾಖಲೆ ಸಹಿತ ಎನ್.ಆರ್.ರಮೇಶ್ ದೂರು ನೀಡಿದ್ದಾರೆ.
ಏನಿದು ಪ್ರಕರಣ?:
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ರಚಿಸಿದ ಮೊಟ್ಟ ಮೊದಲ ಎರಡು ಬಡಾವಣೆಗಳ ಪೈಕಿ ಏಷ್ಯಾದ ಪ್ರಪ್ರಥಮ ಬಡಾವಣೆ ಎಂಬ ಖ್ಯಾತಿಗೆ ಪಾತ್ರವಾಗಿರುವ ಜಯನಗರ ಬಡಾವಣೆ ರಚನೆಗಾಗಿ ನೂರಾರು ಎಕರೆ ವಿಸ್ತೀರ್ಣದ ಸ್ವತ್ತುಗಳನ್ನು 1948 ರಲ್ಲಿ City Improvement Trust Board (CITB ಅಥವಾ ಈಗಿನ BDA) ಭೂಸ್ವಾಧೀನಪಡಿಸಿಕೊಂಡಿತ್ತು.

“ಈ ರೀತಿ ಭೂಸ್ವಾಧೀನಪಡಿಸಿಕೊಂಡಿದ್ದ ನೂರಾರು ಎಕರೆಗಳಷ್ಟು ವಿಸ್ತೀರ್ಣದ ಜಮೀನುಗಳ ಪೈಕಿ, ಸಿದ್ಧಾಪುರ ಗ್ರಾಮದ ಸರ್ವೆ ನಂ: 27/3 ರ 30 ಗುಂಟೆ (32,670 ಚ. ಅಡಿ) ವಿಸ್ತೀರ್ಣದ ಸ್ವತ್ತಿನಲ್ಲಿ “ಹೂವು – ಹಣ್ಣುಗಳನ್ನು ಬೆಳೆಯುವ ಸಸಿಗಳನ್ನು ಪೋಷಿಸುವ ನರ್ಸರಿ ಇದ್ದ ಕಾರಣ, ಆ ನರ್ಸರಿ ಮಾಲೀಕರಿಂದ “ನರ್ಸರಿಯನ್ನು ನಡೆಸಿಕೊಂಡು ಹೋಗಲು ಇನ್ನಷ್ಟು ಕಾಲಾವಕಾಶ ನೀಡಿ ಮತ್ತು ಮುಂದೆ ನರ್ಸರಿಯನ್ನು ಮುಚ್ಚುವ ಸಮಯದಲ್ಲಿ ಸಿಐಟಿಬಿ (ಬಿಡಿಎಗೆ ಮುಂಚೆ ಇದ್ದ ಮಂಡಳಿ)ಯ ವಶಕ್ಕೆ ಒಪ್ಪಿಸುತ್ತೇವೆ”ಎಂಬರ್ಥದ ಮುಚ್ಚಳಿಕೆ ಪತ್ರವನ್ನು ಸಿಐಟಿಬಿ ಅಧಿಕಾರಿಗಳು ಈ ಸ್ವತ್ತಿನ ಭೂ ಮಾಲೀಕರಿಂದ ಲಿಖಿತ ರೂಪದಲ್ಲಿ ಬರೆಸಿಕೊಂಡಿದ್ದರು” ಎಂದು ಬಿಡಿಎ ಆಯುಕ್ತರು ಹಾಗೂ ಕಂದಾಯ ಸಚಿವರಿಗೆ ನೀಡಿದ ದೂರಿನ ಪತ್ರದಲ್ಲಿ ರಮೇಶ್ ಅವರು ತಿಳಿಸಿದ್ದಾರೆ.

“ಅಲ್ಲದೇ ಸಿದ್ಧಾಪುರ ಗ್ರಾಮದ ಸರ್ವೆ ನಂ: 27/3 ರ ಭೂ ಮಾಲೀಕರಿಗೆ ಸಿಐಟಿಬಿ ವತಿಯಿಂದ “ಭೂ ಸ್ವಾಧೀನ ಪ್ರಕ್ರಿಯೆ”ಗೆ ಸಂಬಂಧಿಸಿದಂತೆ ನ್ಯಾಯಯುತವಾದ ಪರಿಹಾರ ಧನವೂ ಸಹ ಬಿಡುಗಡೆಯಾಗಿತ್ತು. ಇದೇ ಜಾಗದಲ್ಲಿದ್ದ ನರ್ಸರಿಯು ಕಳೆದ ಐದು ವರ್ಷಗಳ ಹಿಂದೆಯೇ ಸ್ಥಗಿತಗೊಂಡಿತ್ತು. ಈ ರೀತಿ ಸ್ಥಗಿತಗೊಂಡಿದ್ದ ನರ್ಸರಿಯ ಜಾಗವನ್ನು 1948 ರಲ್ಲಿ ಆ ಭೂ ಮಾಲೀಕರಿಂದ ಮುಚ್ಚಳಿಕೆ ಬರೆಯಿಸಿಕೊಂಡಿದ್ದ ಪತ್ರದಲ್ಲಿನ ಷರತ್ತಿನಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಕಾನೂನು ರೀತ್ಯಾ ತಮ್ಮ ವಶಕ್ಕೆ ಪಡೆದುಕೊಳ್ಳಬೇಕಿತ್ತು”.
“ಆದರೆ ಬಿಡಿಎ ಅಧಿಕಾರಿಗಳ ನಿರ್ಲಕ್ಷ್ಯವನ್ನು ದುರ್ಬಳಕೆ ಮಾಡಿಕೊಂಡ ಅಶೋಕ್ ಧಾರಿವಾಲ್ ಎಂಬ ಬಿಲ್ಡರ್ ಒಬ್ಬರು, ತಮ್ಮ ಆರ್ಥಿಕ ಪ್ರಭಾವದಿಂದ 100 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯ ಹೊಂದಿರುವ 32,670 ಚ. ಅಡಿಗಳಷ್ಟು ವಿಸ್ತೀರ್ಣದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಈ ಅಮೂಲ್ಯ ಸ್ವತ್ತನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಮೊದಲಿಗೆ 2024ರ ಜ.02 ರಂದು ₹ 23.76 ಕೋಟಿ ಮೊತ್ತವನ್ನು ನಮೂದಿಸಿ, ಹತ್ತಾರು ಲಕ್ಷ ರೂಪಾಯಿಗಳನ್ನು ಲಂಚದ ರೂಪದಲ್ಲಿ ನೀಡಿ ಕೋರಮಂಗಲದಲ್ಲಿರುವ ಬೊಮನಹಳ್ಳಿ ಉಪ ನೊಂದಣಾಧಿಕಾರಿಗಳ ಕಛೇರಿಯಲ್ಲಿ ಪ್ರಸ್ತುತ ಇರುವ 23 ಜನರಿಂದ ‘Sale Agreement'(ಕ್ರಯದ ಕರಾರು ಪತ್ರ) ಮಾಡಿಸಿಕೊಂಡರು” ಎಂದು ಅವರು ತಮ್ಮ ದೂರಿನ ಪತ್ರದಲ್ಲಿ ತಿಳಿಸಿದ್ದಾರೆ.
“ಆನಂತರ ರಾಜರಾಜೇಶ್ವರಿನಗರ ಉಪ ನೊಂದಣಾಧಿಕಾರಿಗಳ ಕಚೇರಿಯಲ್ಲಿ ತಮ್ಮ ಹೆಸರಿಗೆ ಸ್ವತ್ತನ್ನು ನೋಂದಾಯಿಸಿಕೊಂಡಿದ್ದಾರೆ. ಆದರೆ ಸ್ವತ್ತಿನ 23 ಜನರ ಪೈಕಿ ‘ಶಾಂತಕುಮಾರ್’ಎಂಬ ವ್ಯಕ್ತಿಯು ಸಹಿ ಹಾಕದ ಕಾರಣ ಆ ನೋಂದಣಿಯನ್ನು ಬಾಕಿಯಿಡಲಾಗಿದೆ” ಎಂದು ಎನ್.ಆರ್.ರಮೇಶ್ ಹೇಳಿದ್ದಾರೆ.