ಬೆಂಗಳೂರು, ಫೆ.24 www.bengaluruwire.com : ಮುಖ್ಯಮಂತ್ರಿ ಸಿದ್ಧರಾಮಯ್ಯ (Chief Minister Siddaramiah) ಮಾರ್ಚ್ ಮೊದಲ ವಾರದಲ್ಲಿ 16ನೇ ಬಾರಿ ಬಜೆಟ್ ಮಂಡಿಸುವ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B Y Vijayendra) ಕಾಂಗ್ರೆಸ್ ಸರ್ಕಾರದ ಎರಡು ವರ್ಷಗಳ ಆಡಳಿತ ವೈಫಲ್ಯವನ್ನು ಟೀಕಿಸಿದ್ದಾರೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ಸಿಎಂಗೆ ಬಹಿರಂಗ ಪತ್ರ (Open Letter) ಬರೆದಿದ್ದಾರೆ.
ಇದಲ್ಲದೆ 2025-26ನೇ ಸಾಲಿನ ಬಜೆಟ್ ನಲ್ಲಿ, “ಆರ್ಥಿಕ ವಿವೇಕ, ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಕಲ್ಯಾಣದ ಪ್ರದರ್ಶನವಾಗಲಿ ಎಂದು ಆಶಿಸುತ್ತೇನೆ. ಮುಂದಿನ ಬಜೆಟ್ ಅನ್ನು ತಾವು ಮಂಡಿಸುವಿರೋ ಅಥವಾ ಇಲ್ಲವೋ ಗೊತ್ತಿಲ್ಲ! ಹಾಗಿರುವಾಗ ರಾಜ್ಯದ ಜನರ ನಿರ್ಣಾಯಕ ಅಗತ್ಯಗಳನ್ನು ಪೂರೈಸುವುದರ ಜೊತೆಗೆ ರಾಜ್ಯದ ಆರ್ಥಿಕ ಸ್ಥಿರತೆಯನ್ನು ಬಲಪಡಿಸಲು ನಿಮಗೆ ಇದೊಂದು ಸದಾವಕಾಶ ಎಂದು ನಾನು ಭಾವಿಸುತ್ತೇನೆ” ಎಂದು ವಿಜಯೇಂದ್ರ ಅವರು ಹೇಳುವ ಮೂಲಕ ಮುಂದಿನ ಬಜೆಟ್ ಗೂ ಮುನ್ನ ಕಾಂಗ್ರೆಸ್ ಸಿಎಂ ಬದಲಾವಣೆಯಾಗುವ ಬಗ್ಗೆ ವ್ಯಂಗ್ಯವಾಡಿದ್ದಾರೆ.

“ಕರ್ನಾಟಕವು ಸಂಪೂರ್ಣ ದಿವಾಳಿ ಆಗುವ ಕಡೆ ಮುನ್ನಡೆದಿದೆ ಎಂದು ಸೂಕ್ಷ್ಮವಾಗಿ ತಮಗೆ ತಿಳಿಯಬಯಸುತ್ತೇನೆ. ಸರ್ಕಾರಿ ನೌಕರರಿಗೆ ನಿಗದಿತ ಸಮಯದಲ್ಲಿ ವೇತನ ಕೊಡಲು ಸರ್ಕಾರದ ಬಳಿ ಹಣ ಇಲ್ಲ. ಸಾರಿಗೆ ಇಲಾಖೆಗೆ ಸರ್ಕಾರ ನೀಡಬೇಕಾದ 7 ಸಾವಿರ ಕೋಟಿ ಬಾಕಿ ಇದೆ. ವಿದ್ಯುತ್ ವಿತರಣಾ ಕಂಪನಿಗಳಿಗೆ ವಿದ್ಯುತ್ ಬಿಲ್ ಕಟ್ಟಲಾಗದೇ ರಾಜ್ಯದ ಎಲ್ಲಾ ಎಸ್ಕಾಂಗಳು ದಯನೀಯ ಸ್ಥಿತಿಯನ್ನು ತಲುಪುತ್ತಿವೆ ಎಂಬ ಮಾಹಿತಿ ದೊರಕುತ್ತಿದೆ. ಈ ಕುರಿತು ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಲು ನಾನು ಈ ಮೂಲಕ ನಿಮ್ಮನ್ನು ಆಗ್ರಹಿಸುತ್ತೇನೆ” ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಸಾಲಗಳನ್ನು ಬಂಡವಾಳ ಹೂಡಿಕೆಗಳ ಕಡೆಗೆ ನಿರ್ದೇಶಿಸಿ :
“ಯಾವುದೇ ರಾಜ್ಯದ ಆರ್ಥಿಕತೆಯು ಬಂಡವಾಳ ವೆಚ್ಚವನ್ನು ಅವಲಂಬಿಸಿರುತ್ತದೆ. ಇದು ಮೂಲಸೌಕರ್ಯ, ಉದ್ಯೋಗ ಸೃಷ್ಠಿ ಹಾಗೂ ದೀರ್ಘಕಾಲೀನ ಅಭಿವೃದ್ಧಿಯನ್ನು ಪ್ರೇರೇಪಿಸುತ್ತದೆ. ಸರ್ಕಾರವು ತನ್ನ ಹಣಕಾಸಿನ ಬದ್ಧತೆಗಳನ್ನು ಪೂರೈಸಲು ಸಾಲಗಳನ್ನು ತೆಗೆದುಕೊಳ್ಳಬೇಕು ಎಂಬುದು ಎಲ್ಲರಿಗೂ ತಿಳಿದಿರುವಂತದ್ದೆ. ಆದರೇ ಅಂತಹ ಸಾಲಗಳನ್ನು ಬಂಡವಾಳ ಹೂಡಿಕೆಗಳ ಕಡೆಗೆ ನಿರ್ದೇಶಿಸಬೇಕೆ ಹೊರತು ರಾಜಸ್ವ ವೆಚ್ಚದ ಕಡೆಗೆ ಅಲ್ಲ. ರಾಜಸ್ವ ವೆಚ್ಚದ ಕಡೆಗೆ ಬಂಡವಾಳ ಹೂಡಿಕೆಯನ್ನು ಹರಿಸಿದರೆ ರಾಜ್ಯದ ಆರ್ಥಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.”
ವಿವೇಕಯುತ ಹಣಕಾಸು ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳುವುದರಿಂದ ಕರ್ನಾಟಕದ ಆರ್ಥಿಕ ಭವಿಷ್ಯ ರಕ್ಷಣೆಯಾಗುತ್ತದೆ ಮತ್ತು ಸಮರ್ಥನೀಯವಲ್ಲದ ಸಾಲದ ಹೊರೆಯನ್ನು ತಡೆಯುತ್ತದೆ. ಆದರೆ ಕಳೆದ 2 ವರ್ಷಗಳ ತಮ್ಮ ಆಯವ್ಯಯದಲ್ಲಿ ರಾಜಸ್ವ ಕೊರತೆಯ ಬಜೆಟ್ನ್ನು ನಿರಂತರವಾಗಿ ಮಂಡಿಸುವುದರೊಂದಿಗೆ ತಾವೇ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಆರ್ಥಿಕ ಶಿಸ್ತು ಹೊಣೆಗಾರಿಕೆ ಅಧಿನಿಯಮವನ್ನು ತಾವೇ ಉಲ್ಲಂಘಿಸಿದ್ದೀರಿ ಎಂದು ನಾನು ವಿಧಿಯಿಲ್ಲದೇ ಹೇಳಲೇಬೆಕಾದ ಅನಿವಾರ್ಯತೆಯನ್ನು ರಾಜ್ಯದ ಜನತೆಯ ಮುಂದೆ ತಾವೇ ಸೃಷ್ಠಿಸಿರುತ್ತೀರಿ ಎಂದು ವಿಜಯೇಂದ್ರ ವಿಶ್ಲೇಷಿಸಿದ್ದಾರೆ.
ಸಾರ್ವಜನಿಕ ಹಣಕಾಸನ್ನು ಸಂಕಷ್ಟಕ್ಕೆ ಸಿಲುಕಿಸುವ ಅಲ್ಪಾವಧಿಯ ಕ್ರಮಗಳಿಗಿಂತ ಕೌಶಲ್ಯ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮತ್ತು ಸುಧಾರಿತ ಆರೋಗ್ಯ ಮೂಲಸೌಕರ್ಯದಂತಹ ದೀರ್ಘಕಾಲೀನ ಕಲ್ಯಾಣ ಕ್ರಮಗಳ ಮೇಲೆ ಬಜೆಟ್ ಗಮನಹರಿಸಬೇಕು. ಹಣಕಾಸಿನ ಸೋರಿಕೆಯನ್ನು ತಡೆಗಟ್ಟಲು ಮತ್ತು ಸರ್ಕಾರಿ ವೆಚ್ಚ ನಿಜವಾಗಿಯೂ ಜನರಿಗೆ ಪ್ರಯೋಜನವನ್ನು ನೀಡುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ಪಾರದರ್ಶಕ ನಿಧಿ ಹಂಚಿಕೆ ಮತ್ತು ಪರಿಣಾಮಕಾರಿ ಮೇಲ್ವಿಚಾರಣಾ ಕಾರ್ಯವಿಧಾನಗಳು ಜಾರಿಯಲ್ಲಿರಬೇಕು.
“ಪುನಃ ಎಷ್ಟು ಸಾಲವನ್ನು ಮಾಡಲಿದ್ದೀರಿ ಎಂಬ ಆತಂಕದಲ್ಲಿ ರಾಜ್ಯದ ಜನರಿದ್ದಾರೆ” :
“ಕೇವಲ ಎರಡೇ ವರ್ಷದಲ್ಲಿ ಸುಮಾರು 2 ಲಕ್ಷ ಕೋಟಿ ರೂಗಳ ಸಾಲದ ಹೊರೆಯನ್ನು ಜನತೆಗೆ ನೀಡಿ, ಈ ಬಾರಿಯ ಬಜೆಟ್ನಲ್ಲಿ ಪುನಃ ಎಷ್ಟು ಸಾಲವನ್ನು ಮಾಡಲಿದ್ದೀರಿ ಎಂಬ ಆತಂಕದಲ್ಲಿ ರಾಜ್ಯದ ಜನರು ತೆರೆದ ಕಣ್ಣುಗಳಿಂದ ತಾವು ಮಂಡಲಿಸಲಿರುವ ಬಜೆಟ್ನ್ನು ಎದುರು ನೋಡುತ್ತಿದ್ದಾರೆ.”
“ಆರ್ಥಿಕವಾಗಿ ಸದೃಡವಾಗಿದ್ದ ಕರ್ನಾಟಕವನ್ನು ನೌಕರರಿಗೆ ಸಂಬಳ ಕೊಡಲಾಗದ, ವಿದ್ಯುತ್ ಬಿಲ್ ಭರಿಸಲಾಗದ, ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಲಾಗದ ದಾರುಣ ಸ್ಥಿತಿಗೆ ತಂದು ನಿಲ್ಲಿಸಿದ ಅಪಕೀರ್ತಿಗೆ ತಾವು ಗುರಿಯಾಗಬಾರದೆಂಬ ಕಿವಿಮಾತನ್ನು ಹೇಳಲಿಚ್ಚಿಸುತ್ತೇನೆ” ಎಂದು ತಮ್ಮ ಬಹಿರಂಗ ಪತ್ರದಲ್ಲಿ ವಿವರಿಸಿದ್ದಾರೆ.
“ಕಾಂಗ್ರೆಸ್ ಪಕ್ಷವು ಚುನಾವಣಾ ಸಂದರ್ಭದಲ್ಲಿ ಮತ ಸೆಳೆಯುವುದಕ್ಕಾಗಿ ಘೋಷಿಸಿದ ಗ್ಯಾರಂಟಿ ಯೋಜನೆಗಳು ನಿಶ್ಚಿತವಾಗಿ ಪ್ರತಿ ತಿಂಗಳು ಫಲಾನುಭವಿಗಳಿಗೆ ತಲುಪುತ್ತಿಲ್ಲ ಆದುದರಿಂದ ತಾವು ನುಡಿದಂತೆ ನಡೆದುಕೊಳ್ಳುವಲ್ಲಿ ಈಗಾಗಲೇ ವಿಫಲರಾಗಿದ್ದೀರಿ. ಅಲ್ಲದೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ದಿಗಾಗಿ ಈ ಸಮುದಾಯಗಳಿಗೆ ಆದಾಯದ ಮೂಲವನ್ನು ಸೃಷ್ಠಿಸುವ ಕಾರ್ಯಕ್ರಮಗಳಾದ ಭೂ ಒಡೆತನ, ಗಂಗಾ ಕಲ್ಯಾಣ, ಉದ್ಯಮ ಶೀಲತೆ ಹಾಗೂ ನೇರ ಸಾಲಗಳಂತಹ ಆರ್ಥಿಕವಾಗಿ ಚೇತರಿಕೆಯನ್ನು ನೀಡಬಲ್ಲಂತಹ ಎಲ್ಲಾ ಯೋಜನೆಗಳ ಭೌತಿಕ ಗುರಿಗಳನ್ನು ನೆಲಕಚ್ಚಿಸಿದ್ದೀರಿ” ಎಂದಿದ್ದಾರೆ.
“ಎಸ್ ಸಿ-ಎಸ್ ಟಿ ಶ್ರೇಯೋಭಿವೃದ್ಧಿ ಯೋಜನೆ ಹಣ ಅನ್ಯ ಯೋಜನೆಗೆ ಬಳಕೆ” :
“ತಮ್ಮ ಆಡಳಿತದ 2 ವರ್ಷಗಳ ಅವಧಿಯ 2023-24 ಮತ್ತು 2024-25ರ ಆಯ-ವ್ಯಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಶ್ರೇಯೋಭಿವೃದ್ಧಿಗಾಗಿ ರೂಪಿಸಲಾದ ಯೋಜನೆಯಲ್ಲಿ ಕ್ರಮವಾಗಿ 11,144 ಕೋಟಿ ರೂಗಳು ಹಾಗೂ 14,282 ಕೋಟಿ ರೂಗಳು ಸೇರಿದಂತೆ ಒಟ್ಟು 25,426 ಕೋಟಿ ರೂ.ಗಳ ಹಣವನ್ನು ಕಾನೂನು ಬಾಹಿರವಾಗಿ ಅನ್ಯ ಯೋಜನೆಗಳಿಗೆ ಬಳಸಿದ್ದಾಗಿ ತಾವೇ ಒಪ್ಪಿಕೊಂಡಿದ್ದೀರಿ. ಈ ವಿಷಯವು ತಪ್ಪೆಂದು ತಮಗೆ ಅನಿಸಿದರೂ ಸಹ ಸಂದರ್ಭದ ಒತ್ತಡದಿಂದ ತಾವು ಸಮರ್ಥಿಸಿಕೊಂಡಿದ್ದೀರಿ.”
“ಪ್ರಗತಿ ನಿಜವಾಗಿಯೂ ಅರ್ಥಪೂರ್ಣವಾಗಿರಬೇಕಾದರೆ ದೂರದೃಷ್ಟಿಯುಳ್ಳ ಯೋಜನೆಗಳು ಸಮಾಜದ ಅತ್ಯಂತ ಹಿಂದುಳಿದ ವರ್ಗಗಳನ್ನು ಒಳಗೊಳ್ಳಬೇಕು. ಈ ಹಂಚಿಕೆಗಳು ದುರುಪಯೋಗವಾಗದಂತೆ ಹಾಗೂ ಬೇರೆ ಉದ್ದೇಶಗಳಿಗೆ ವರ್ಗಾವಣೆಯಾಗದೆ ಉದ್ದೇಶಿತ ಫಲಾನುಭವಿಗಳನ್ನು ತಲುಪುವಂತೆ ಸರ್ಕಾರವು ನೋಡಿಕೊಳ್ಳಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸವಲತ್ತು ತಲುಪಬೇಕೆಂಬ ಧ್ಯೇಯೋದ್ದೇಶದ ಪಕ್ಷ ನಮ್ಮದು ಎಂದು ಹೇಳಿಕೊಳ್ಳುವ ಕಾಂಗ್ರೆಸ್ನ ಮುಖವಾಡ ಇದರಿಂದ ಕಳಚಿಬಿದ್ದಿದೆ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.
“ಬೆಂಗಳೂರನ್ನು ಸುಸ್ಥಿರಗೊಳಿಸಲು ಭಗವಂತನಿಂದಲೂ ಸಾಧ್ಯವಿಲ್ಲ” :
ತಮ್ಮ ಸಂಪುಟ ಸಹೋದ್ಯೋಗಿ ಡಿ.ಕೆ. ಶಿವಕುಮಾರ್ರವರು ಬೆಂಗಳೂರನ್ನು ಸುಸ್ಥಿರಗೊಳಿಸಲು ಭಗವಂತನಿಂದಲೂ ಸಾಧ್ಯವಿಲ್ಲ ಎಂಬ ಹೇಳಿಕೆಯೊಂದಿಗೆ ಅಭಿವೃದ್ಧಿಯ ಶಸ್ತ್ರವನ್ನೇ ತ್ಯಾಗ ಮಾಡಿದ್ದಾರೆ. ಇನ್ನು ಬೆಂಗಳೂರಿನ ಜನತೆ ಭರವಸೆಯಿಂದ ನಿಮ್ಮ ಸರ್ಕಾರವನ್ನು ನೋಡುವುದಾದರೂ ಹೇಗೆ? ಮಹಿಳೆಯರ ಅಸುರಕ್ಷತೆ, ಬಾಣಂತಿಯರ ಸಾವು, ರೈತರ ಆತ್ಮಹತ್ಯೆ, ಅಧಿಕಾರಿಗಳ ಮೇಲಿನ ದೌರ್ಜನ್ಯದಿಂದ ಉಂಟಾಗುತ್ತಿರುವ ಆತ್ಮಹತ್ಯೆಗಳು ಹಾಗೂ ಶೂನ್ಯ ಅಭಿವೃದ್ಧಿ ಕರ್ನಾಟಕವನ್ನು ದಶಕಗಳಷ್ಟು ಹಿಂದಕ್ಕೆ ತಳ್ಳುತ್ತಿರುವುದು ತಮ್ಮನ್ನು ಭಾದಿಸುತ್ತಿಲ್ಲವೇ? ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ನಿಮ್ಮ ಸಂಪುಟದ ಸಹೋದ್ಯೋಗಿಗಳು ನೀಡುತ್ತಿರುವ ಉದ್ಧಟತನದ ಹೇಳಿಕೆಗಳು ನಿಮಗೆ ಮುಜುಗರವನ್ನುಂಟು ಮಾಡುತ್ತಿಲ್ಲವೆ?
ಬಸ್ಸಿನ ಪ್ರಯಾಣ ದರವು ಶೇ. 15 ರಷ್ಟು ಹೆಚ್ಚಾಗಿದೆ. ಮೆಟ್ರೋ ಪ್ರಯಾಣ ದರ ಗರಿಷ್ಠ ಏರಿಕೆಗೆ ಕೇವಲ ರಾಜ್ಯ ಸರ್ಕಾರವೇ ಕಾರಣವಾಗಿದೆ. ರಾಜ್ಯ ಸರ್ಕಾರವು ದರ ನಿಗದಿ ಆಯೋಗಕ್ಕೆ ಪತ್ರ ಬರೆಯದಿದ್ದಲ್ಲಿ ಮೆಟ್ರೋ ಬೆಲೆ ಏರಿಕೆಯ ಸಂದರ್ಭವೇ ಒದಗಿ ಬರುತ್ತಿರಲಿಲ್ಲವೆಂದು ಮತ್ತೊಮ್ಮೆ ಒತ್ತಿ ಹೇಳುತ್ತೇನೆ. ಚೆನ್ನೈ, ಮುಂಬೈ, ಕೋಲ್ಕತ್ತ, ದೆಹಲಿಯಲ್ಲಿ ಮೆಟ್ರೋ ದರ ಏರಿಕೆ ಆಗಿಲ್ಲ. ರಾಜ್ಯ ಸರಕಾರದ ಆಗ್ರಹದಿಂದಲೇ ಇಲ್ಲಿ ಹೀಗಾಗಿದೆ.
ಎರಡನೇ ಬಾರಿಗೆ ಹಾಲು, ವಿದ್ಯುತ್ ದರ ಏರಿಸದಂತೆ ಆಗ್ರಹ :
“ತಮ್ಮ ಅವಧಿಯಲ್ಲಿ ನೀರು, ಹಾಲು, ಪೆಟ್ರೋಲ್, ವಿದ್ಯುತ್, ಆಸ್ತಿ ತೆರಿಗೆ ಸೇರಿದಂತೆ ಎಲ್ಲಾ ದಿನನಿತ್ಯದ ಜೀವನಕ್ಕೆ ಬೆಲೆ ಏರಿಕೆಯ ಬರೆ ಈಗಾಗಲೇ ಎಳೆದಾಗಿದೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಎರಡೇ ವರ್ಷಗಳಲ್ಲಿ 2ನೇ ಬಾರಿಗೆ ಮತ್ತೆ ಹಾಲಿನ ದರ ಏರಿಸಲು, ವಿದ್ಯುತ್ ದರ ಹೆಚ್ಚಿಸಲು ನಿಮ್ಮ ಸರಕಾರವು ಚರ್ಚೆಯನ್ನು ಆರಂಭಿಸಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ತಾವೇ ನಿರ್ಮಿಸಿದ್ದೀರಿ. ಇದನ್ನು ರಾಜ್ಯದ ಜನತೆಯ ಪರವಾಗಿ ನಾನು ಉಗ್ರವಾಗಿ ವಿರೋಧಿಸುತ್ತೇನೆ.”
“ಈಗ ತಾವು ಮಂಡಿಸುತ್ತಿರುವ 16ನೇ ಬಜೆಟ್ನಲ್ಲಿ ಕರ್ನಾಟಕಕ್ಕೆ ಆರ್ಥಿಕವಾಗಿ ಜವಾಬ್ದಾರಿಯುತ, ಅಭಿವೃದ್ಧಿ ಆಧಾರಿತ ಮಾರ್ಗಸೂಚಿಯನ್ನು ಮಂಡಿಸಲು ಒಂದು ಅವಕಾಶವಿದೆ. ತಾವು ಮಂಡಿಸಲಿರುವ ಬಜೆಟ್ ಈ ಆದ್ಯತೆಗಳನ್ನು ಪ್ರತಿಬಿಂಬಿಸುತ್ತದೆ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆ, ಸಾಮಾಜಿಕ ಕಲ್ಯಾಣ ಮತ್ತು ವಿವೇಚನಾಯುಕ್ತ ಹಣಕಾಸು ನಿರ್ವಹಣೆಗೆ ಅಡಿಪಾಯ ಹಾಕುತ್ತದೆ ಎಂದು ನಾನು ಭಾವಿಸುತ್ತೇನೆ. ಈ ಮಹತ್ವದ ಪ್ರಯತ್ನದಲ್ಲಿ ನಿಮಗೆ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ” ಎಂದು ತಮ್ಮ ಸುಧೀರ್ಘ ಪತ್ರದಲ್ಲಿ ವಿವರಿಸಿದ್ದಾರೆ.