ಬೆಂಗಳೂರು, ಫೆ.18 www.bengaluruwire.com : ರಾಜ್ಯದ ಜನತೆಗೆ ಸಿಹಿಸುದ್ದಿ. ರಾಜ್ಯ ಸರ್ಕಾರವು ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿನ ಅನಧಿಕೃತ ಸ್ವತ್ತು (Unauthorized property)ಗಳಿಗೆ ಸಹ ಖಾತಾ ನೀಡುವ ಸಂಬಂಧ ಕಾಯ್ದೆ ಮತ್ತು ನಿಯಮಗಳಿಗೆ ತಿದ್ದುಪಡಿ ತರಲಾಗಿರುತ್ತದೆ. ಇದರಿಂದ ಅನಧಿಕೃತ ಸ್ವತ್ತು (ಬಿ-ಖಾತಾ)ಗಳ ಮಾಲೀಕರು ತಮ್ಮ ಸ್ವತಿನ ಕಂದಾಯವನ್ನು ಪಾವತಿಸಿ, ಇ-ಖಾತಾ (E-Khata) ಪಡೆಯಬಹುದಾಗಿದೆ.
ಈ ವಿಷಯದ ಬಗ್ಗೆ ಪೌರಾಡಳಿತ ಮತ್ತು ಹಜ್ ಸಚಿವ ರಹೀಮ್ ಖಾನ್ (Rahim Khan) ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯ್ತಿ ಅಧ್ಯಕ್ಷರಿಗೆ ಫೆ.17ರಂದು ಬರೆದ ಪತ್ರದಲ್ಲಿ, ಈ ಕುರಿತು ತಮ್ಮ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳ ಸ್ವತ್ತಿನ ಮಾಲೀಕರುಗಳಿಗೆ ಮಾಹಿತಿ ನೀಡಿ, ಅಗತ್ಯ ದಾಖಲೆಗಳನ್ನು ಸಲ್ಲಿಸಿ. ಇ-ಖಾತಾ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರು ಮನವಿ ಮಾಡಿದ್ದಾರೆ.
ಅನಧಿಕೃತ ಸ್ವತ್ತುಗಳಿಗೆ ಖಾತಾ ನೀಡುವ ಬಗ್ಗೆ ಕಾಯ್ದೆ ಮತ್ತು ನಿಯಮಗಳಿಗೆ ತಿದ್ದುಪಡಿ ತರಲಾಗಿದೆ. ಇದರಿಂದಾಗಿ ಬಹಳ ದಿನಗಳಿಂದ ಅನಧಿಕೃತ ಸ್ವತ್ತುಗಳ ಖಾತಾ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗಿರುತ್ತದೆ. ಅನಧಿಕೃತ ಸ್ವತ್ತಿನ ಮಾಲೀಕರು ತಮ್ಮ ನಗರ ಸ್ಥಳೀಯ ಸಂಸ್ಥೆಗೆ ಭೇಟಿ ನೀಡಿ, ಸ್ವತ್ತಿನ ಮಾಲೀಕತ್ವದ ದಾಖಲೆಗಳಾದ ನೋಂದಾಯಿತ ಪತ್ರಗಳು, ಚಾಲ್ತಿ ಸಾಲಿನವರೆಗೆ ಕಂದಾಯ ಪಾವತಿ ರಶೀದಿ, ಋಣಭಾರ ಪ್ರಮಾಣ ಪತ್ರ ಹಾಗೂ ಮಾಲೀಕರ ಪೋಟೊ, ಆಧಾರ ಕಾರ್ಡ್ ಸಲ್ಲಿಸಿದ 7 ದಿನಗಳ ಒಳಾಗಾಗಿ ಇ-ಖಾತಾ ಪಡೆಯಬಹುದಾಗಿದೆ ಎಂದು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಈ ಪತ್ರದ ಪ್ರತಿ ಬೆಂಗಳೂರು ವೈರ್ ಗೆ ಲಭ್ಯವಾಗಿದೆ.
ಈ ಕಾರ್ಯವನ್ನು ಮೂರು ತಿಂಗಳ ಒಳಗೆ ಮುಕ್ತಾಯಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಸರ್ಕಾರದ ಈ ಜನಸ್ನೇಹಿ ನೀತಿಯನ್ನು ಜನಸಾಮಾನ್ಯರಿಗೆ ಇ-ಖಾತಾ ಅಭಿಯಾನದ ಮೂಲಕ ಇ-ಖಾತಾ ಪಡೆಯಲು ಜಾಗೃತಿ ಹಾಗೂ ಅನುವು ಮಾಡಿಕೊಡಲು ಸಹಕರಿಸಬೇಕು ಎಂದು ಅವರು ಕೋರಿದ್ದಾರೆ.


ರಾಜ್ಯ ಸರ್ಕಾರವು ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಖಾತಾ ನೀಡುವ ಅಭಿಯಾನ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಜಿಲ್ಲಾಧಿಕಾರಿಗಳು, ಯೋಜನಾ ನಿರ್ದೇಶಕರು ಹಾಗೂ ಎಲ್ಲಾ ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರು, ಪೌರಾಯುಕ್ತರು, ಮುಖ್ಯಾಧಿಕಾರಿಗಳೊಂದಿಗೆ ಮಂಗಳವಾರ ವಿಡಿಯೋ ಸಂವಾದ ಕೈಗೊಂಡಿದ್ದಾರೆ. ಮೇ 10ರ ತನಕ ಇ-ಖಾತಾ ಅಭಿಯಾನ ನಡೆಯಲಿದೆ ಎಂದು ಪೌರಾಡಳಿತ ಇಲಾಖೆ ತಿಳಿಸಿದೆ.

ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿರುವ ಆಸ್ತಿಗಳ ಲಭ್ಯ ಮಾಹಿತಿಯನ್ನು https//:aasthikanajakarnatakasmartcity.in/kmf24 ಎಂಬ ಜಾಲತಾಣಕ್ಕೆ ಭೇಟಿ ನೀಡಿ ತಮ್ಮ ಸ್ವತ್ತಿನ ಮಾಹಿತಿಯು ಸರಿಯಾಗಿರುವ ಕುರಿತು ಪರಿಶೀಲಿಸಲು ಅವಕಾಶ ಕಲ್ಪಿಸಲಾಗಿದೆ. ಅಕಸ್ಮಾತ್ ಸ್ವತ್ತಿನ ಮಾಹಿತಿಯಲ್ಲಿ ತಿದ್ದುಪಡಿಗಳಿದ್ದಲ್ಲಿ ಅಗತ್ಯ ದಾಖಲೆಗಳನ್ನು ನಗರ ಸ್ಥಳೀಯ ಸಂಸ್ಥೆಗೆ ಸಲ್ಲಿಸಿ ತಿದ್ದುಪಡಿ ಮಾಡಲು ಅವಕಾಶವನ್ನು ಕಲ್ಪಿಸಲಾಗಿರುತ್ತದೆ. ಇ-ಖಾತೆ ಪಡೆಯಲು ಯಾವುದಾದರೂ ಸಮಸ್ಯೆ ಇದ್ದಲ್ಲಿ 080-23003100 ದೂರವಾಣಿ ಸಂಖ್ಯೆ ಸಹಾಯವಾಣಿಗೆ ಅಥವಾ ವಾಟ್ಸಪ್ ಸಂಖ್ಯೆ : 6366674001 ಸಂಪರ್ಕಿಸಬಹುದು.