ಬೆಂಗಳೂರು, ಫೆ.13 www.bengaluruwire.com : ನಮ್ಮ ಮೆಟ್ರೋ ಪರಿಷ್ಕ್ರತ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಕೆಲವೊಂದು ನಿಗದಿತ ಸ್ಟೇಜ್ ಗಳನ್ನು ಸೇರ್ಪಡೆ ಮಾಡಲಾಗುತ್ತದೆ. ಪರಿಷ್ಕೃತ ದರ ಏರಿಕೆಯಲ್ಲಿ ಶೇ.90 ರಿಂದ ಶೇ.100ರಷ್ಟು ಅತಿ ಹೆಚ್ಚಳವಾಗಿರುವ ಕಡೆ ಗರಿಷ್ಠ ಶೇ.70 ತನಕ ಬೆಲೆ ಏರಿಕೆಗೆ ಮಿತಿ ಹಾಕಲಾಗಿದೆ. ಇದರಿಂದ ಪ್ರಯಾಣ ದರ ಶೇ.30ರಷ್ಟು ಕಡಿಮೆಯಾಗಲಿದೆ ಎಂದು ನಮ್ಮ ಮೆಟ್ರೋ ತಿಳಿಸಿದೆ.
ಗುರುವಾರ ಈ ಸಂಬಂಧ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ಮೆಟ್ರೋ ರೈಲು ನಿಗಮ(BMRCL) ದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್, ಎಲ್ಲೆಲ್ಲಿ ಶೇ.100ರ ತನಕ ಹೆಚ್ಚಿನ ದರ ಏರಿಕೆ ಆಗಿದೆಯೋ ಅಂತಹ ಕಡೆಗಳಲ್ಲಿ ಶೇ.30ರಷ್ಟರ ತನಕ ದರ ಇಳಿಕೆಯಾಗಲಿದೆ. ಗರಿಷ್ಠ ದರ ಏರಿಕೆಗೆ ಶೇ.70ರಷ್ಟು ಮಿತಿ ಹಾಕಲಾಗಿದೆ. ನೂತನ ದರ ಪಟ್ಟಿಯು ನಾಳೆಯಿಂದಲೇ ಜಾರಿಯಾಗಲಿದೆ. ಆ ಮೂಲಕ ಕನಿಷ್ಠ ದಿನಂಪ್ರತಿ ಓಡಾಡುವ 2.5 ಲಕ್ಷ ಜನರಿಗೆ ಅನುಕೂಲವಾಗಲಿದೆ ಎಂದರು.
ನಾವು ಫೇರ್ ಮ್ಯಾಟ್ರಿಕ್ಸ್ ಮೇಲೆಯೇ ರೈಲ್ವೆ ಟಿಕೆಟ್ ದರ ನಿರ್ಧಾರ ಮಾಡಿದ್ದೇವೆ. ಮುಖ್ಯಮಂತ್ರಿಗಳು, ಪ್ರಯಾಣಿಕರು, ಶಾಸಕರು ಎಲ್ಲರೂ ದರ ಏರಿಕೆ ಜಾಸ್ತಿಯಾಗಿದೆ ಕಡಿಮೆ ಮಾಡುವಂತೆ ಒತ್ತಾಯ ಮಾಡಿದ್ದಾರೆ. ಈ ಬಗ್ಗೆ ನಿನ್ನೆ ಸಂಜೆ ಮತ್ತು ಇಂದು ಬೆಳಗ್ಗೆ ಮೆಟ್ರೋ ಮಂಡಳಿ ಸಭೆ ನಡೆಸಿದೆ. ಆ ನಂತರ ಈ ನಿರ್ಧಾರಕ್ಕೆ ಬರಲಾಗಿದೆ. 4,600 ಪ್ರಕರಣಗಳ ಮ್ಯಾಟ್ರಿಕ್ಸ್ ಪೈಕಿ 600ಕ್ಕೂ ಹೆಚ್ಚಿನ ಪ್ರಕರಣಗಳಲ್ಲಿ ಶೇ.70 ರಿಂದ 100ರಷ್ಟು ದರ ಹೆಚ್ಚಳವಾಗಿತ್ತು. ಈಗ ಅದರ ಗರಿಷ್ಠ ವಯುಕ್ತಿಕ ಪ್ರಯಾಣ ದರದ ಮಿತಿಯನ್ನು ಶೇ.70ಕ್ಕೆ ಮಿತಿ ಹಾಕಲಾಗಿದೆ.
ಮೆಟ್ರೋ ಪ್ರಯಾಣಿಕರಿಗೆ ಟಿಕೆಟ್ ದರದಲ್ಲಿ ಸ್ವಲ್ಪ ಮಟ್ಟಿಗೆ ಅನುಕೂಲ ಮಾಡುವ ಉದ್ದೇಶವಿದೆ. ಮೆಟ್ರೋ ರೈಲ್ವೆ ಕಾಯ್ದೆ ಸೆಕ್ಷನ್ 37 ಪ್ರಕಾರ ದರ ನಿಗದಿ ಮಾಡಿದ್ದೇವೆ. ಬಿಎಂಆರ್ ಸಿಎಲ್ ಜನರ ಹಿತಾಸಕ್ತಿಯಿಟ್ಟುಕೊಂಡೇ ಕಾರ್ಯ ನಿರ್ವಹಿಸುತ್ತಿದೆ. ಮೆಟ್ರೋ ಕಾಮಗಾರಿಗಳಿಗೆ, ನಿರ್ವಹಣೆಗೆ ನೂರಾರು ಕೋಟಿ ಹೂಡಿಕೆ ಮಾಡಿದ್ದೇವೆ. ಜನರಿಗೆ ಗುಣಮಟ್ಟದ ಸೇವೆ ನೀಡಲು ನಾವು ಬದ್ಧರಾಗಿದ್ದೇವೆ. ಮೆಟ್ರೋ ವಿಸ್ತರಣೆಗಾಗಿ ಈಗಾಗಲೇ ಸಾವಿರಾರು ಕೋಟಿ ರೂ. ಹೂಡಿಕೆ ಮಾಡಿದ್ದೇವೆ. ಕಾಲಕಾಲಕ್ಕೆ ಪಡೆದ ಸಾಲಕ್ಕೆ ಬಡ್ಡಿ, ಸಿಬ್ಬಂದಿ ವೇತನ, ದೈನಂದಿನ ಆಡಳಿತ ನಿರ್ವಹಣೆಯ ವೆಚ್ಚ ಎಲ್ಲವೂ ಹೆಚ್ಚಾಗಿದೆ. 2017ರಿಂದಲೂ ನಮ್ಮ ಮೆಟ್ರೋ ಪ್ರಯಾಣ ದರದಲ್ಲಿ ಏರಿಕೆ ಮಾಡಿಲ್ಲ. ಈಗ ದರ ಏರಿಕೆ ಮಾಡುವ ಅನಿವಾರ್ಯತೆಯಿತ್ತು ಎಂದು ಸಮರ್ಥಿಸಿಕೊಂಡರು.

ಟಿಕೆಟ್ ದರವನ್ನು ಶೇ.40-55ರಷ್ಟು ಸರಾಸರಿಯಾಗಿ ನಮ್ಮ ಮೆಟ್ರೋ ಹೆಚ್ಚಳ ಮಾಡಿದೆ. ಕೆಲವೊಂದು ಕಡೆ ಪ್ರಯಾಣ ದರ ತುಂಬಾ ಜಾಸ್ತಿ ಆಗಿರುವ ಕಡೆ ಸ್ವಲ್ಪ ಕಡಿಮೆ ಮಾಡುತ್ತೇವೆ. ಕೆಲವೊಂದು ಕಡೆ ಎರಡು ಸ್ಲಾಬ್ ಗಳನ್ನು ಒಟ್ಟಿಗೆ ಸೇರಿಸುತ್ತೇವೆ. ಉದಾಹರಣೆಗೆ ಪ್ರಯಾಣ ದರ 60 ರೂ. ಹೆಚ್ಚಾಗಿದ್ದರೆ 50ರೂ. ಗೆ ಇಳಿಸುತ್ತೇವೆ ಎಂದು ಅವರು ಹೇಳಿದರು.

ಈಗ ಪೀಕ್ ಅವಧಿಯಲ್ಲಿ ಶೇ.100ರಷ್ಟು ಸಾಮರ್ಥ್ಯದಲ್ಲಿ 55 ರೈಲುಗಳು ಓಡಾಡುತ್ತಿವೆ. ನಮ್ಮ ಮೆಟ್ರೋ ನಷ್ಠದಲ್ಲಿ ನಡೆಯುತ್ತಿದೆ. ಮುಂದಿನ ಮೂರು ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಈ ರೀತಿ ದರ ನಿಗದಿ ಮಾಡಿದ್ದೇವೆ. ಕಳೆದ ಎರಡು ದಿನಗಳಿಂದ ಮೆಟ್ರೋ ದರ ಏರಿಕೆಯಿಂದ ಪ್ರಯಾಣಿಕರ ಸಂಖ್ಯೆ ಶೇ.10ರಷ್ಟು ಕಡಿಮೆಯಾಗಿದೆ ಎಂದು ಮಹೇಶ್ವರ ರಾವ್ ಹೇಳಿದರು.
ದರ ಹೆಚ್ಚಳ ಹಾಗೂ ಇಳಿಕೆಯ ಕುರಿತಂತೆ ಮೆಟ್ರೋ ಅಧಿಕಾರಿಗಳಲ್ಲಿ ಸ್ಪಷ್ಟತೆ ಇರದೆ ಗೊಂದಲಕ್ಕೆ ಒಳಗಾಗಿದ ಬಗ್ಗೆ ಮಾಧ್ಯಮದವರು ಆಕ್ಷೇಪ ವ್ಯಕ್ತಪಡಿಸಿದ ಘಟನೆಯೂ ನಡೆಯಿತು. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಮೆಟ್ರೋ ಎಂಡಿ ಮಹೇಶ್ವರ ರಾವ್ ಸೂಕ್ತರೀತಿಯಲ್ಲಿ ಸಮಜಾಯುಷಿ ನೀಡಿದರು.
ದರ ನಿಗದಿ ಸಮಿತಿ ಕೂಡ ನಮ್ಮ ಮೆಟ್ರೋ ಸ್ವತ್ತುಗಳಿಂದ ಜಾಹೀರಾತು ಮತ್ತಿತರ ಆದಾಯ ಮೂಲಗಳನ್ನು ಬಳಸಿಕೊಂಡು ಆರ್ಥಿಕ ಸಂಪನ್ಮೂಲ ಹೆಚ್ಚಳಕ್ಕೆ ಬಳಸಿಕೊಳ್ಳಲು ಸಲಹೆ ನೀಡಿದೆ. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.
ಫೆ.09ರಿಂದ ಜಾರಿಗೆ ಬರುವಂತೆ ಪ್ರಯಾಣ ದರ ಏರಿಕೆಯಿಂದ ವ್ಯಾಪಕ ಟೀಕೆಗೆ ಒಳಗಾಗಿದ್ದ ಬಿಎಂಆರ್ ಸಿಎಲ್ ನಡೆಯಿಂದಾಗಿ ಪ್ರಯಾಣಿಕರು ಮೆಟ್ರೋ ರೈಲು ಬಿಟ್ಟು ಬಿಎಂಟಿಸಿ ಬಸ್ ಹಾಗೂ ಸ್ವಂತ ವಾಹನಗಳತ್ತ ಮುಖ ಮಾಡಿದ್ದರಿಂದ ಮೆಟ್ರೋನಲ್ಲಿ ದಿನಂಪ್ರತಿ ಓಡಾಡುವ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿತ್ತು.
ಫೆ.09ರಿಂದ ಜಾರಿಗೆ ಬರುವಂತೆ ಮೆಟ್ರೋ ರೈಲಿನ ಪ್ರಯಾಣ ದರವನ್ನು ಶೇ.46ರಿಂದ 47ರಷ್ಟು ಏರಿಕೆ ಮಾಡಲಾಗಿತ್ತು ಎಂದು ಮೆಟ್ರೋ ನಿಗಮ ತಿಳಿಸಿತ್ತು.ಆದರೆ ಕೆಲವು ಮಾರ್ಗಗಳಲ್ಲಿ ಪ್ರಯಾಣ ದರ ಶೇ.100ಕ್ಕಿಂತ ಹೆಚ್ಚಳವಾಗಿತ್ತು. ಇದರಿಂದಾಗಿ ಮೆಟ್ರೋ ಪ್ರಯಾಣಿಕರು, ಸಾರ್ವಜನಿಕರು, ಸಂಘ ಸಂಸ್ಥೆಗಳಿಂದ ವ್ಯಾಪಕ ಟೀಕೆ ಹಾಗೂ ವಿರೋಧ ವ್ಯಕ್ತವಾಗಿತ್ತು. ದರ ಹೆಚ್ಚಳ ವಿಷಯ ಬಿಜೆಪಿ- ಕಾಂಗ್ರೆಸ್ ನಡುವೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿತ್ತು. ಇಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ, ವಿಪರೀತವಾಗಿ ದರ ಹೆಚ್ಚಳವಾದ ಕಡೆ ತುರ್ತಾಗಿ ದರ ಇಳಿಸುವಂತೆ ಬಿಎಂಆರ್ ಸಿಎಲ್ ಗೆ ಕೋರಿದ್ದಾಗಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು.