ಬೆಂಗಳೂರು, ಫೆ.13 www.bengaluruwire.com : ಇತ್ತೀಚಿಗೆ ಬಾಬುಸಾಪಾಳ್ಯದಲ್ಲಿ ಸಂಭವಿಸಿದ ಭೀಕರ ದುರಂತದ ಹಿನ್ನೆಲೆಯಲ್ಲಿ ಜನಾಧಿಕಾರ ಸಂಘರ್ಷ ಪರಿಷತ್ತು ಕೆರೆಗಳ ಬಫರ್ ಝೋನ್, ರಾಜಕಾಲುವೆ, ನಾಲಾಗಳಿಗೆ ಹಾನಿ ಉಂಟು ಮಾಡುವ ಯೋಜನೆಗಳಿಗೆ ಉದ್ದೇಶಪೂರ್ವಕವಾಗಿ ಅನುಮೋದನೆ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ, ಬಿಡಿಎ ಆಯುಕ್ತರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಿಸಿದೆ.
ಅಪಾರ್ಟ್ಮೆಂಟ್ ಖರೀದಿದಾರರು ಭಾರೀ ಮಳೆ ಮತ್ತು ಪ್ರವಾಹದ ಸಂದರ್ಭದಲ್ಲಿ ನಮ್ಮ ಪರಿಸರಕ್ಕೆ ಹಾನಿಯಾಗುವುದರ ಜೊತೆಗೆ ಜೀವಹಾನಿ, ವಾಹನಗಳಿಗೆ, ಆಸ್ತಿಪಾಸ್ತಿ ಹಾನಿಗೆ ಕಾರಣವಾಗುತ್ತದೆ. ಇದು ಆಯ್ದ ಬಿಲ್ಡರ್ಗಳಿಗೆ ಒಲವು, ನಿಯಮಗಳ ಉಲ್ಲಂಘನೆ, ಉದ್ದೇಶಪೂರ್ವಕ ನಿರ್ಲಕ್ಷ್ಯ ಮತ್ತು ಕರ್ತವ್ಯಲೋಪ ಎಸಗಲಾಗುತ್ತಿದೆ ಎಂದು ಆರೋಪಿಸಿ ಜನಾಧಿಕಾರ ಸಂಘರ್ಷ ಪರಿಷತ್ತಿನ ಸಹ ಅಧ್ಯಕ್ಷ ಬಿ.ಕೆ.ಪ್ರಕಾಶ್ ಬಾಬು ಲೋಕಾಯುಕ್ತದದಲ್ಲಿ ದೂರು ದಾಖಲಿಸಿದ್ದಾರೆ.
ರಾಜಧಾನಿಯಲ್ಲಿ ಉಳಿದಿರುವ ಜಲಮೂಲಗಳನ್ನು ಅತಿಕ್ರಮಿಸಲು ಮತ್ತು ಹಾನಿ ಮಾಡಲು ಬಿಲ್ಡರ್ಗಳಿಗೆ ಬಿಬಿಎಂಪಿ ಮತ್ತು ಬಿಡಿಎ ಕ್ರಮಗಳು ದಾರಿ ಮಾಡಿಕೊಡುತ್ತಿದೆ. ಮಳೆಗಾಲದಲ್ಲಿ ಭಾರೀ ಮಳೆ, ಪ್ರವಾಹದ ಸಮಯದಲ್ಲಿ ಸಾಮಾನ್ಯ ಜನರಿಗೆ ಸಾಕಷ್ಟು ಹಾನಿ ಉಂಟು ಮಾಡುತ್ತದೆ.
ಬಿಬಿಎಂಪಿ ಮತ್ತು ಬಿಡಿಎ ಅಧಿಕಾರಿಗಳು ಹಾಗೂ ಬಿಲ್ಡರ್ಗಳ ನಡುವಿನ ಅಪವಿತ್ರ ಸಂಬಂಧದಿಂದ ಬೆಂಗಳೂರು ಇತರ ಸ್ಥಳಗಳ ಮಧ್ಯಮ ವರ್ಗದ ನಾಗರಿಕರು ನರಕಯಾತನೆ ಅನುಭವಿಸುತ್ತಿದ್ದಾರೆ. ಬಿಬಿಎಂಪಿ ಮತ್ತು ಬಿಡಿಎ ಅಧಿಕಾರಿಗಳು ಕಾನೂನಿನ ಪ್ರತಿಯೊಂದು ನಿಯಮವನ್ನು ಉಲ್ಲಂಘಿಸುತ್ತಿದ್ದಾರೆ ಮತ್ತು ಪರಿಸರಕ್ಕೆ ಮತ್ತು ಅಪಾರ್ಟ್ಮೆಂಟ್, ಸೈಟ್ಗಳು, ವಿಲ್ಲಾಗಳನ್ನು ಖರೀದಿಸುವವರಿಗೆ ತೊಂದರೆ ಮಾಡುತ್ತಿದ್ದಾರೆ. ಇದರಿಂದಾಗಿ ಜನಸಾಮಾನ್ಯರು ನರಕಯಾತನೆ ಅನುಭವಿಸುತ್ತಿದ್ದಾರೆ ಎಂದು ಸಂಸ್ಥೆಯ ಸಹ ಅಧ್ಯಕ್ಷ ಆರ್.ಆದರ್ಶ್ ಅಯ್ಯರ್ ಬೇಸರ ವ್ಯಕ್ತಪಡಿಸಿದ್ದಾರೆ.

ಹೀಗಾಗಿ ಜನಾಧಿಕಾರ ಸಂಘರ್ಷ ಪರಿಷತ್ ನಿಂದ ಲೋಕಾಯುಕ್ತದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ನಗರ ಯೋಜನೆ ಹೆಚ್ಚುವರಿ ನಿರ್ದೇಶಕ ಬಿ.ಎನ್ ಗಿರೀಶ್, ಪಾಲಿಕೆ ನಗರ ಯೋಜನೆ ದಕ್ಷಿಣ ಜೆಡಿಟಿಪಿ ಸಾವಿತ್ರಿ ಪಾಟೀಲ್, ಬಿಡಿಎ ಆಯುಕ್ತ ಎನ್.ಜಯರಾಮ್, ಪ್ರಾಧಿಕಾರದ ಎಂಜಿನಿಯರ್ ಸದಸ್ಯ ಎನ್.ವಿ.ಧನಂಜಯ ರೆಡ್ಡಿ, ಜಂಟಿ ನಿರ್ದೇಶಕ ಹನುಮಂತ ರೆಡ್ಡಿ ಸೇರಿದಂತೆ ಆರು ಮಂದಿ ವಿರುದ್ಧ ದೂರು ದಾಖಲಿಸಲಾಗಿದೆ.

“ಮಲ್ಲಸಂದ್ರ ಗ್ರಾಮದ ಕನಕಪುರ ರಸ್ತೆ ಮತ್ತು ನೈಸ್ ರಸ್ತೆಯ ಜಂಕ್ಷನ್ ಬಳಿ ಕಾಸಗ್ರಾಂಡ್ ಲೋಟಸ್ ಪ್ರೈವೇಟ್ ಲಿಮಿಟೆಡ್ ಎಂಬ ಬಿಲ್ಡರ್ ನಿಂದ ಕಟ್ಟಲಾಗುತ್ತಿರುವ 800+ ಯೂನಿಟ್ಟಿನ ಅಪಾರ್ಟ್ಮೆಂಟ್ ಸಂಕೀರ್ಣದ ಒಂದು ಪ್ರಕರಣದಲ್ಲಿ, ಕಂದಾಯ ದಾಖಲೆಗಳ ಪ್ರಕಾರ ನದಿ ಎಂದು ಗೊತ್ತುಪಡಿಸಿದ ಕಾಲುವೆಯು, ದಕ್ಷಿಣ ಬೆಂಗಳೂರಿನ ಹೆಚ್ಚಿನ ಪ್ರದೇಶದಿಂದ ನೀರನ್ನು ಸಂಗ್ರಹಿಸುತ್ತದೆ. ಈ ನೀರನ್ನು ಎರಡು ದೊಡ್ಡ ಕೆರೆಗಳಾದ ವಡೇರಹಳ್ಳಿ ಕೆರೆ, ಒ ಬಿ ಚೂಡನಹಳ್ಳಿ ಕೆರೆಗಳನ್ನು ಸಂಪರ್ಕಿಸುತ್ತದೆ. ಇದು ಕನಕಪುರ ಗ್ರಾಮದ ಬಳಿ ಹರಿಯುವ ಉಪನದಿಗೆ ನೀರನ್ನು ಪೂರೈಸುತ್ತದೆ. ಈ ಕಾಲುವೆಯು ವಿಶಾಲವಾಗಿದ್ದು ಸುಮಾರು 80+ ಮೀಟರ್ಗಳಷ್ಟು ಅಗಲವಾಗಿದೆ”.
“ಆದರೆ, ಬಿಡಿಎ ಹಾಗೂ ಬಿಬಿಎಂಪಿ ಅಧಿಕಾರಿಗಳ ದುರುದ್ದೇಶಿತ ಅದೇಶದಂತೆ ಈ ಕಾಲುವೆಯ ಮಧ್ಯಭಾಗದಿಂದ ಕೇವಲ 25 ಮೀಟರ್ಗಳ ಬಫರ್ ಅನ್ನು ಬಿಟ್ಟು ಕಟ್ಟಡ ನಿರ್ಮಿಸಲು ಅನುಮತಿ ನೀಡಲಾಗಿದೆ. ಅದರಂತೆ ಬಫರ್ ವಲಯವು ಈ ಕಾಲುವೆಯ ಒಳಗೆ ಅಂತ್ಯವಾಗಿ ಕಾಲುವೆಯಲ್ಲಿಯೇ ಕಟ್ಟಡ ಕಟ್ಟಲು ಅನುಮತಿಸಿದಂತಾಗುತ್ತದೆ. ಇದರರ್ಥ ಬಿಲ್ಡರ್ ಕಾಲುವೆಯೊಳಗೇ ಕಟ್ಟಡಗಳನ್ನು ನಿರ್ಮಿಸಬಹುದು. ಹೀಗಾಗಿ ಪರಿಸರಕ್ಕೆ ಗಂಭೀರ ಹಾನಿಯಾಗುತ್ತದೆ ಮತ್ತು ಈಗಾಗಲೇ ಕುಸಿದಿರುವ ಬೆಂಗಳೂರಿನ ಅಂತರ್ಜಲದ ಮರುಪೂರಣಕ್ಕೆ ಮಾರಕವಾಗುವುದು ಹಾಗೂ ಜಲಮೂಲಗಳ ಶಾಶ್ವತ ನಷ್ಟವಾಗುವುದು” ಎಂದು ಪರಿಷತ್ ಲೋಕಾಯುಕ್ತಕ್ಕೆ ನೀಡಿರುವ ದೂರಿನಲ್ಲಿ ವಿವರಿಸಲಾಗಿದೆ.
“ನಮ್ಮ ಜನಾಧಿಕಾರ ಸಂಘರ್ಷ ಸಮಿತಿ ಸಂಘಟನೆಯು ಬಿಡಿಎ ಮತ್ತು ಬಿಬಿಎಂಪಿ ಅನುಮೋದಿಸಿದ ಇತರ ಇತ್ತೀಚಿನ ಯೋಜನೆಗಳ ಕುರಿತು ಹೆಚ್ಚಿನ ವಿವರವಾದ ಅಧ್ಯಯನವನ್ನು ಮಾಡಿದಾಗ ಈ ತರಹದ ಹಲವು ಭ್ರಷ್ಟ, ಸ್ವಾರ್ಥ, ಬೇಜವಾಬ್ದಾರಿ ಮತ್ತು ಹೊಣೆಗಾರಿಕೆಯಿಲ್ಲದ ಸರ್ಕಾರಿ ಅಧಿಕಾರಿಗಳಿಂದ ಇಂತಹುದೇ ಹಲವಾರು ಉಲ್ಲಂಘನೆಗಳು ಕಂಡುಬಂದಿರುತ್ತದೆ. ಹಾಗಾಗಿ ಈ ಅಧಿಕಾರಿಗಳ ಇಂತಹ ಅಕ್ರಮದ ವಿರುದ್ಧ ನಮ್ಮ ಸಂಘಟನೆಯು ತೀವ್ರತರನಾದ ಹೋರಾಟ ಹಮ್ಮಿಕೊಳ್ಳಲು ನಿರ್ಧರಿಸಿದೆ” ಎಂದು ಸಮಿತಿ ಸಹ ಅಧ್ಯಕ್ಷರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರವು ಇಂತಹ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಬಿಬಿಎಂಪಿ ಮತ್ತು ಬಿಡಿಎನ ಈ ಉನ್ನತ ಅಧಿಕಾರಿಗಳು ನಡೆಸಿರುವ ಅಕ್ರಮಗಳಿಂದ ಜನಸಾಮಾನ್ಯರಿಗೆ ಆಗುವ ಸಮಸ್ಯೆಗಳ ಗಂಭೀರತೆಯನ್ನು ಅರಿತು, ಸದರಿ ಅಧಿಕಾರಿಗಳನ್ನು ಅಮಾನತ್ತುಗೊಳಿಸಿ, ಅವರ ಅಕ್ರಮ ಹಾಗೂ ಕಾನೂನು ಉಲ್ಲಂಘನೆಗಳ ಬಗ್ಗೆ ತನಿಖೆಗೆ ಆದೇಶಿಸಬೇಕು. ಈ ಕೂಡಲೇ ಅವರನ್ನು ಈ ಹುದ್ದೆಯಿಂದ ಇಳಿಸಿ ಅವರ ಬದಲಿಗೆ ಕಾನೂನು ಪಾಲಿಸುವ ಜವಾಬ್ದಾರಿಯುತ ಅಧಿಕಾರಿಗಳನ್ನು ನೇಮಿಸಬೇಕೆಂದು ಪರಿಷತ್ ಬಿ.ಕೆ.ಪ್ರಕಾಶ್ ಬಾಬು ಹಾಗೂ ಆರ್.ಆದರ್ಶ್ ಅಯ್ಯರ್ ಆಗ್ರಹಿಸಿದ್ದಾರೆ. (ಚಿತ್ರದಲ್ಲಿ ಬಳಸಿದ ಚಿತ್ರ ಸಾಂದರ್ಭಿಕ)