ಬೆಂಗಳೂರು, ಫೆ.06 www.bengaluruwire.com : ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ 2024 (Greater Bengaluru Administration Bill 2024) ರಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (Greater Bengaluru Authority) ರಚನೆ ಕುರಿತು ನಗರದಲ್ಲಿ ಫೆ.10 ರಿಂದ 3 ದಿನಗಳ ಕಾಲ ಸಾರ್ವಜನಿಕರು, ಸಂಘ ಸಂಸ್ಥೆಗಳಿಂದ ಸಲಹೆಗಳನ್ನು ಸ್ವೀಕರಿಸಲು ಸಭೆಗಳನ್ನು ಆಯೋಜಿಸಲಾಗಿದೆ.
ಎಲ್ಲಾ ಎಂಟು ವಲಯಗಳನ್ನು ಒಳಗೊಂಡಂತೆ 5 ಕಡೆಗಳಲ್ಲಿ ಈ ಸಭೆಗಳು ನಡೆಯಲಿದೆ. ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ 2024ರ ಪರಿಶೀಲನೆ ಮತ್ತು ವರದಿಗೆ ಸಂಬಂಧಿಸಿದಂತೆ ಕರ್ನಾಟಕ ವಿಧಾನ ಮಂಡಲ ಜಂಟಿ ಪರಿಶೀಲನಾ ಸಮಿತಿ (Karnataka Legislative Assembly Joint Scrutiny Committee)ಯನ್ನು ರಚಿಸಲಾಗಿದೆ. ಆ ಸಮಿತಿಗೆ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ರಿಜ್ವಾನ್ ಹರ್ಷದ್ (MLA Rizwan Harshad) ರವರನ್ನು ಅಧ್ಯಕ್ಷರನ್ನಾಗಿ ನಿಯೋಜನೆ ಮಾಡಿದೆ.
ಗ್ರೇಟರ್ ಬೆಂಗಳೂರು ಪ್ರದೇಶದ ಅಭಿವೃದ್ಧಿಯ ಯೋಜನೆ, ಸಮನ್ವಯ ಮತ್ತು ಮೇಲ್ವಿಚಾರಣೆಗಾಗಿ, ಪರಿಣಾಮಕಾರಿ ಸಹಭಾಗಿತ್ವದ ಮತ್ತು ಸ್ಪಂದನಶೀಲ ಆಡಳಿತಕ್ಕಾಗಿ, ನಗರಾಡಳಿತದ ಮೂಲಕ ಘಟಕಗಳನ್ನಾಗಿಸುವುದಕ್ಕೆ, ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಸುಗಮಗೊಳಿಸುವುದಕ್ಕೆ, ಸಹಭಾಗಿ, ದಕ್ಷ ಮತ್ತು ನ್ಯಾಯೋಚಿತ ಆಡಳಿತದ ಚೌಕಟ್ಟನ್ನು ಸ್ಥಾಪಿಸುವ ಸಲುವಾಗಿ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ-2024 ಜಾರಿಗೆ ತರಲಾಗುತ್ತಿದೆ.
ಈ ಮೇಲ್ಕಂಡ ವಿಷಯಗಳನ್ನು ಕೂಲಂಕುಷವಾಗಿ ಪರಿಶೀಲಿಸುವ ಸಲುವಾಗಿ ಕರ್ನಾಟಕ ವಿಧಾನಮಂಡಲದ ಜಂಟಿ ಪರಿಶೀಲನಾ ಸಮಿತಿ ಕ್ರಮ ಕೈಗೊಳ್ಳಲಿದೆ. ಅಲ್ಲದೆ ಸಮಿತಿಯು ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಕುರಿತು ಸಾರ್ವಜನಿಕರು/ಸಂಘ-ಸಂಸ್ಥೆಗಳಿಂದ ಸಲಹೆಗಳನ್ನು ಸ್ವೀಕರಿಸಲಿದ್ದು, ವಲಯವಾರು ಸಭೆಗಳನ್ನು ಆಯೋಜಿಸಲಾಗಿದೆ. ಅದರ ವಿವರ ಈ ಕೆಳಕಂಡತಿದೆ:

ಬಿಬಿಎಂಪಿ ಪೂರ್ವ ವಲಯ:

ಪೂರ್ವ ವಲಯದಲ್ಲಿ 10ನೇ ಫೆಬ್ರವರಿ 2025 ರಂದು ವಸಂತನಗರ ತಿಮ್ಮಯ್ಯ ರಸ್ತೆಯಲ್ಲಿನ ಬಂಜಾರ ಭವನದಲ್ಲಿ ಬೆಳಿಗ್ಗೆ 11.00 ರಿಂದ ಮಧ್ಯಾಹ್ನ 01.00 ಗಂಟೆಯವರೆಗೆ ಸಭೆಯನ್ನು ಆಯೋಜಿಸಲಾಗಿದೆ.
ಮಹದೇವಪುರ ವಲಯ:
ಮಹದೇವಪುರ ವಲಯದಲ್ಲಿ 10ನೇ ಫೆಬ್ರವರಿ 2025 ರಂದು ಕೆ.ಆರ್ ಪುರ ಟಿಸಿ ಪಾಳ್ಯದ ಹತ್ತಿರವಿರುವ ಕೇಂಬ್ರಿಡ್ಜ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮಧ್ಯಾಹ್ನ 03.00 ರಿಂದ ಸಂಜೆ 05.00 ಗಂಟೆಯವರೆಗೆ ಸಭೆಯನ್ನು ಆಯೋಜಿಸಲಾಗಿದೆ.
ದಕ್ಷಿಣ ಹಾಗೂ ಬೊಮ್ಮನಹಳ್ಳಿ ವಲಯ:
ದಕ್ಷಿಣ ಹಾಗೂ ಬೊಮ್ಮನಹಳ್ಳಿ ವಲಯಗಳು ಸಭೆಯನ್ನು ಫೆ.11 ರಂದು ಜೆ.ಪಿ ನಗರ 1ನೇ ಹಂತದಲ್ಲಿನ ಆರ್.ವಿ ಡೆಂಟಲ್ ಕಾಲೇಜಿನಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಾರ್ವಜನಿಕ ಸಭೆ ನಡೆಯಲಿದೆ.
ರಾಜರಾಜೇಶ್ವರಿ ನಗರ ಹಾಗೂ ಪಶ್ಚಿಮ ವಲಯ:
ರಾಜರಾಜೇಶ್ವರಿ ನಗರ ಹಾಗೂ ಪಶ್ಚಿಮ ವಲಯಗಳು ಸೇರಿದಂತೆ ಫೆ.11 ರಂದು ಬೆಂಗಳೂರು ವಿಶ್ವವಿದ್ಯಾನಿಲಯ ಜ್ಞಾನಭಾರತಿ ಕ್ಯಾಂಪಸ್ ನಲ್ಲಿರುವ ಡಾ. ಹೆಚ್. ನರಸಿಂಹಯ್ಯ ಸಭಾಂಗಣದಲ್ಲಿ ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆಯವರೆಗೆ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.
ಯಲಹಂಕ ಹಾಗೂ ದಾಸರಹಳ್ಳಿ ವಲಯ:
ಯಲಹಂಕ ಹಾಗೂ ದಾಸರಹಳ್ಳಿ ವಲಯ ಸೇರಿದಂತೆ ಫೆ.12 ರಂದು ಯಲಹಂಕ ನ್ಯೂಟೌನ್ ನಲ್ಲಿನ ಡಾ. ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಭೆ ನಡೆಯಲಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 3 ದಿನಗಳ ಕಾಲ 5 ಕಡೆಗಳಲ್ಲಿ ಪಾಲಿಕೆಯ ಎಲ್ಲಾ ಎಂಟು ವಲಯಗಳಿಗೆ ಸಂಬಂಧಿಸಿಂತೆ ಸಭೆ ನಡೆಯಲಿದ್ದು, ಈ ಸಭೆಗಳಿಗೆ ಸ್ಥಳೀಯ ನಾಗರೀಕರು, ಸಂಘ ಸಂಸ್ಥೆಗಳು ಹಾಗೂ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಅತ್ಯಮೂಲ್ಯವಾದ ಸಲಹೆಗಳನ್ನು ನೀಡಲು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕೋರಿದ್ದಾರೆ.
“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.