ಸಾಲಿಗ್ರಾಮ, ಜ.15 www.bengaluruwire.com : ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ಸಾಲಿಗ್ರಾಮ ಶ್ರೀ ಗುರುನರಸಿಂಹ ಕ್ಷೇತ್ರದ ವೈಭವದ ಸಾಲಿಗ್ರಾಮ ಹಬ್ಬ-2025ರ ಬ್ರಹ್ಮರಥೋತ್ಸವ ಕಾರ್ಯಕ್ರಮದ ರಥಾರೋಹಣ ನಾಳೆ ಬೆಳಗ್ಗೆ 10.30ಕ್ಕೆ ಸಲ್ಲುವ ಕುಂಭ ಲಗ್ನದಲ್ಲಿ ರಥಾರೋಹಣಕ್ಕೆ ಚಾಲನೆ ದೊರೆಯಲಿದೆ.
ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದಲ್ಲಿ ಜ.10ರಿಂದಲೇ ರಥಾರಂಭ, ಕಲಶಾಭಿಷೇಕ, ರಂಗಪೂಜೆ ಮತ್ತು ಮಂಗಳವಾರ ಸಂಕ್ರಾಂತಿ ದಿನದಂದು ಧ್ವಜಾರೋಹಣ ಕಾರ್ಯಕ್ರಮ ನಡೆದಿದ್ದು ನಾಳೆ ಬ್ರಹ್ಮರಥೋತ್ಸವ ನಡೆಯಲಿದೆ. ಜ.18ರ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.
ಬ್ರಹ್ಮರಥೋತ್ಸವಕ್ಕೆ ಭಕ್ತರಿಗೆ ಆಹ್ವಾನ :
ಪೌಷ ಮಾಸ ಬಹುಳ ತದಿಗೆ ಜ.16 ಗುರುವಾರ ಪೂರ್ವಾಹ್ನ 10.30ಕ್ಕೆ ಸಲುವ ಕುಂಭ ಲಗ್ನದಲ್ಲಿ ಶ್ರೀ ಗುರು ನರಸಿಂಹ ದೇವರ ವಾರ್ಷಿಕ ಬ್ರಹ್ಮರಥೋತ್ಸವ ಹಾಗೂ ಎಲ್ಲಾ ಕಾರ್ಯಕ್ರಮಗಳಲ್ಲಿ ಸಮಸ್ತ ಭಕ್ತರು ಆಗಮಿಸಿ, ಉತ್ಸವದ ಭಾಗವಹಿಸಿ ಶ್ರೀಮದ್ಯೋಗಾನಂದ ಗುರುನರಸಿಂಹ ಹಾಗೂ ಶ್ರೀ ಆಂಜನೇಯ ಸಹಿತ ಪರಿಹಾರ ದೇವರುಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಕೆ.ಎಸ್ ಕಾರಂತರು ಆಹ್ವಾನಿಸಿದ್ದಾರೆ.

ರಥಬೀದಿಯಲ್ಲಿ ಗುರುವಾರ ಶ್ರೀ ಗುರುನರಸಿಂಹ ದೇವರ ವಾರ್ಷಿಕ ಬ್ರಹ್ಮರಥೋತ್ಸವಕ್ಕೆ ಚಾಲನೆ ದೊರೆಯಲಿದೆ. ನಂತರ ದೇವರ ಉತ್ಸವಮೂರ್ತಿಯನ್ನು ಹೊತ್ತ ರಥ ಗುರುನರಸಿಂಹ ದೇವಸ್ಥಾನದ ಎದುರಿನ ಶ್ರೀ ಆಂಜನೇಯ ದೇವಸ್ಥಾನದ ವರೆಗೆ ರಥೋರೋಹಣ ನಡೆಯಲಿದೆ.

ಸಂಜೆ 6ಕ್ಕೆ ರಥಾವರೋಹಣ, ಓಲಗಮಂಟಪ ಸೇವೆ, ಅಷ್ಟಾವಧಾನ ಸೇವೆ, ದಿ|| ಪಾರಂಪಳ್ಳಿ ರಾಮಚಂದ್ರ ಐತಾಳರ ಶಿಷ್ಯ ವೃಂದದವರಿಂದ`ಸಂಗೀತ ಸೇವೆ, ಮಹಾಮಂಗಳಾರತಿ, ಭೂತಬಲಿ, ಶಯನೋತ್ಸವ, ದೇವಸ್ಥಾನಕ್ಕೆ ಬರುವ ಭಕ್ತರಿಗೆ ಪಾನಕ ವಿತರಣೆ ನಡೆಯಲಿದೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಮಧ್ಯಾಹ್ನ ಅನ್ನಸಂತರ್ಪಣೆ ಸೇವೆ ಹಮ್ಮಿಕೊಳ್ಳಲಾಗಿದೆ. ಜ.18ರ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಜ.19ರ ತನಕ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.

ಇಂದು ಸಂಜೆ 6ರಿಂದ 8 ಗಂಟೆಯವರೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಒಂಭತ್ತು ಗಣ್ಯರಿಗೆ ಪ್ರಶಸ್ತಿ ಪುರಸ್ಕಾರ ಹಾಗೂ ರಾಜ್ಯ ಸರ್ಕಾರದ ಮಕ್ಕಳ ದಿನಾಚರಣೆಯ ದಿನದಂದು ಹೊಯ್ಸಳ ಶೌರ್ಯ ಪ್ರಶಸ್ತಿ ಪಡೆದ ಧೀರಜ್ ಸುಧೀಂದ್ರ ಐತಾಳ ಎಂಬ ಬಾಲಕನಿಗೆ ವಿಶೇಷ ಪುರಸ್ಕಾರವನ್ನು ನೀಡಿ ಗೌರವಿಸಲಾಗುತ್ತದೆ.
ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್.ಕಾರಂತರು ಸಭೆಯ ಅಧ್ಯಕ್ಷತೆ, ಮುಖ್ಯ ಅತಿಥಿಗಳಾಗಿ ಉಡುಪಿ ಮತ್ತು ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಣಿಪಾಲ ವಿಶ್ವವಿದ್ಯಾಲಯದ ಉಪಕುಲಪತಿ ಲೆಫ್ಟಿನೆಂಟ್ ಜನರಲ್ ಎಂ.ಡಿ.ವೆಂಕಟೇಶ್ ಆಗಮಿಸಲಿದ್ದಾರೆ. ಕೂಟ ಮಹಾಜಗತ್ತು ಅಂಗಸಂಸ್ಥೆಯ ಕೇಂದ್ರ ಸಂಸ್ಥೆಯ ಅಧ್ಯಕ್ಷ ಎಸ್.ಸತೀಶ್ ಹಂದೆ ಉಪಸ್ಥಿತರಿರಲಿದ್ದಾರೆ.
ನಾಳೆ ಬೆಳಗ್ಗೆ 5.30ರಿಂದಲೇ ಗುರುನರಸಿಂಹ ದೇವಸ್ಥಾನದಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ದೇವಸ್ಥಾನದಲ್ಲಿನ ಬೇರೆ ಬೇರೆ ಸ್ಥಳಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ವಾರ್ಷಿಕ ಬ್ರಹ್ಮ ರಥೋತ್ಸವ ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀದೇವರ ದರ್ಶನ ಪಡೆಯುತ್ತಾರೆ. ಕರಾವಳಿ ಭಾಗದಲ್ಲಿ ಶ್ರೀ ಗುರುನರಸಿಂಹ ಬ್ರಹ್ಮರಥೋತ್ಸವ ಹಲವು ದಶಕಗಳಿಂದ ವೈಭವಯುತವಾಗಿ ನಡೆದುಕೊಂಡು ಬರುತ್ತಿದೆ.
ಕೋಟ ಗ್ರಾಮದ ಸುತ್ತಲಿನ 14 ಹಾಗೂ ಆಸುಪಾಸಿನ ಗ್ರಾಮಗಳ ಭಕ್ತರಲ್ಲದೆ, ದೇಶ ವಿದೇಶಗಳು ಹಾಗೂ ವಿವಿಧ ರಾಜ್ಯಗಳಲ್ಲಿರುವ ಶ್ರೀ ಗುರುನರಸಿಂಹನ ಭಕ್ತರು ಬ್ರಹ್ಮರಥೋತ್ಸವದಂದು ಒಂದೆಡೆ ಸೇರಿ, ಸಾಲಿಗ್ರಾಮ ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಪಡುವುದು ಅನಾದಿ ಕಾಲದಿಂದ ಸತ್ಸಂಪ್ರದಾಯವಾಗಿ ನಡೆದುಕೊಂಡು ಬರುತ್ತಿದೆ.
ಗುರುನರಸಿಂಹ ದೇವಸ್ಥಾನದ ಇತಿಹಾಸ ಮತ್ತು ವೈಶಿಷ್ಟ್ಯತೆ :
ಗುರುನರಸಿಂಹ ದೇಗುಲವು ಕೂಟ ಬ್ರಾಹ್ಮಣರ ಆಡಳಿತವನ್ನು ಹೊಂದಿದ ಏಕೈಕ ದೇವಸ್ಥಾನವಾಗಿದೆ. ಕೋಟ ಸುತ್ತಲಿನ 14 ಹಾಗೂ ಆಸುಪಾಸಿನ ಗ್ರಾಮಗಳನ್ನೊಳಗೊಂಡ ಕೋಟ ಮಹಾಜಗತ್ತು ಅಥವಾ ಕೂಟ ಮಹಾಜಗತ್ತು ಎನ್ನುವುದಾಗಿ ಹಾಗೂ ಇಲ್ಲಿ ವಾಸಿಸುವ ಬ್ರಾಹ್ಮಣರನ್ನು ಕೂಟ ಮತಸ್ಥ ಬ್ರಾಹ್ಮಣರೆಂದು ಕರೆಯಲಾಗುತ್ತದೆ. ಇವರೆಲ್ಲರಿಗೂ ಪ್ರತ್ಯೇಕವಾದ ಮಠ ಅಥವಾ ಮಠಾಧೀಶ ಗುರು ಪರಂಪರೆ ಇಲ್ಲ. ಇವರು ಗುರುನರಸಿಂಹನನ್ನೇ ಗುರುವಾಗಿ, ಕುಲದೇವರಾಗಿ ನಂಬಿಕೊಂಡು ಬಂದವರು ಮತ್ತು ಗುರುವಿಗೆ ಸಲ್ಲಿಸಬೇಕಾದ ಗುರುಕಾಣಿಕೆ, ಹರಿಕೆ ಸೇವೆಗಳನ್ನು ನರಸಿಂಹನಿಗೆ ಸಲ್ಲಿಸುವವರು.
ಪ್ರಸಿದ್ಧ ನರಸಿಂಹ ಕ್ಷೇತ್ರಗಳಲ್ಲಿ ಈ ದೇವಸ್ಥಾನವೂ ಒಂದು :
ಪ್ರಸಿದ್ಧ ನರಸಿಂಹ ಕ್ಷೇತ್ರಗಳಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ಸಾಲಿಗ್ರಾಮ ಶ್ರೀ ಗುರುನರಸಿಂಹ ಕ್ಷೇತ್ರವು ಒಂದಾಗಿದೆ. ಯೋಗಾನಂದ ಶ್ರೀ ಗುರುನರಸಿಂಹನೆಂದು ಕರೆಯಲ್ಪಡುತ್ತಿರುವ ಇಲ್ಲಿನ ಶ್ರೀ ದೇವರ ಮೂರ್ತಿಯು ಸಾಲಿಗ್ರಾಮ ಶಿಲೆಯಿಂದ ನಿರ್ಮಿತವಾಗಿದ್ದು, ಆದಿಯಲ್ಲಿ ಶ್ರಿ ಮಹಾಗಣಪತಿ ಯಂತ್ರ ಸ್ಥಾಪಿಸಿ ಅದರ ಮೇಲೆ ಕಮಲಪತ್ರದ ಮೇಲೆ ಶ್ರೀನರಸಿಂಹ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.
ಶ್ರೀದೇವರ ವಿಗ್ರಹವು ಅರ್ಧಯೋಗ ಪಟ್ಟಾನ್ವಿತವಾಗಿದ್ದು ಇದನ್ನು ಯೋಗನರಸಿಂಹನೆಂದು ಲಕ್ಷಿತ್ರ್ಮಯು ಹೃದಯ ಭಾಗದಲ್ಲಿ ಅಂತರ್ಗತವಾಗಿರುವುದರಿಂದ ಶ್ರೀಲಕ್ಷಿತ್ರ್ಮೕನರಸಿಂಹನೆಂದು ಕರೆಯುತ್ತಾರೆ. ಸ್ವಯಂ ವ್ಯಕ್ತವಾದ ಮಹಾ ವಿಷ್ಣುವಿನ ಅಷ್ಠ ಕ್ಷೇತ್ರಗಳಲ್ಲಿ ಇದು ಒಂದಾಗಿದ್ದು ಶ್ರೀದೇವರ ವಿಗ್ರಹವು ಎಂಟನೇ ಶತಮಾನದ್ದಾಗಿರಬಹುದೆಂದು ಗುರುತಿಸಲಾಗಿದೆ.
ದೇವಳವು ಚರ್ತುರಶ್ವ ಸಿಂಹ ಆಯದಲ್ಲಿದ್ದು ಪ್ರಧಾನ ದೇವರು ನರಸಿಂಹ, ದಕ್ಷಿಣ ಪೌಳಿಯ ಪಶ್ಚಿಮ ಮೂಲೆಯಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಿಯ ವಿಗ್ರಹ, ಉತ್ತರ ಪೌಳಿಯ ಪಶ್ಚಿಮ ಮೂಲೆಯಲ್ಲಿ ಗಣಪತಿ ವಿಗ್ರಹದಿಂದ ಕಂಗೊಳಿಸುತ್ತಿದ್ದರೆ, ನರಸಿಂಹನಿಗೆ ಎದುರಾಗಿ ರಥಬೀದಿ ಪಶ್ಚಿಮ ತುದಿಯಲ್ಲಿ ಆಂಜನೇಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ.
ದೇವಸ್ಥಾನದ ಹೊರಪೌಳಿಯ ನೈರುತ್ಯ ದಿಕ್ಕಿನಲ್ಲಿ ಶಂಖ ತೀರ್ಥ ಸರೋವರದ ದಡದಲ್ಲಿ ನಾಗನ ದೇವರನ್ನು ಸ್ಥಾಪಿಸಲಾಗಿದೆ. ಶ್ರೀ ಯೋಗಾನಂದ ನರಸಿಂಹಮೂರ್ತಿಯು ಪಶ್ಚಿಮಾಭಿಮುಖವಾಗಿದ್ದು ದ್ವಿಭುಜವಾಗಿದೆ. ಬಲಗೈಯಲ್ಲಿ ಚಕ್ರವೂ, ಎಡಗೈಯಲ್ಲಿ ಶಂಖವೂ ಧರಿಸಲ್ಪಟ್ಟದ್ದರಿಂದ ದೇವಳದ ಎಡಬಲಗಳಲ್ಲಿ ಶಂಖ ತೀರ್ಥ ಮತ್ತು ಚಕ್ರತೀರ್ಥ ಸರೋವರಗಳಿವೆ. ಇವುಗಳ ತೀರ್ಥಸ್ನಾನ ಹಾಗೂ ನರಸಿಂಹ ಆರಾಧನೆಯಿಂದ ಬ್ರಹ್ಮಹತ್ಯಾದಿ ಸರ್ವ ದೋಷಗಳು ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಜನಜನಿತವಾಗಿದೆ.
ದೇವಸ್ಥಾನದ ಇತಿಹಾಸ :
ಹಿಂದೆ ನರಸಿಂಹನ ಪ್ರತಿಮೆಯನ್ನು ಪೂರ್ವಾಭಿಮುಖವಾಗಿ ಸ್ಥಾಪಿಸಲಾಗಿತ್ತು. ಆಗ ನರಸಿಂಹನ ಉಗ್ರತೆಯಿಂದ ಪೂರ್ವದಿಕ್ಕಿನ ಗದ್ದೆಗಳಲ್ಲಿ ಬೆಳೆದ ಕೃಷಿ ಭಸ್ಮವಾಗುತ್ತಿತ್ತು. ಇದರಿಂದ ಮೂರ್ತಿಯನ್ನು ಪಶ್ಚಿಮಾಭಿಮುಖವಾಗಿ ಅಂದರೆ ಅರಬ್ಬಿಸಮುದ್ರದ ಕಡೆ ಮುಖ ಮಾಡಿ ಸ್ಥಾಪಿಸಲಾಯಿತು. ಪಶ್ಚಿಮಬದಿಯ ಕೃಷಿಯ ಹಾನಿ ತಪ್ಪಿಸಲು ಬ್ರಹ್ಮಾವರದ ಕುಕ್ಕುಡೆಗುಂಡಿಯಲ್ಲಿದ್ದ ಆಂಜನೇಯನ ವಿಗ್ರಹವನ್ನು ತಂದು ನರಸಿಂಹ ವಿಗ್ರಹದ ನೇರವಾಗಿ ಎದುರಿನ ಕಟ್ಟೆಯಲ್ಲಿ ಪ್ರತಿಷ್ಠಾಪಿಸಿದರು ಎನ್ನುವ ಇತಿಹಾಸವಿದೆ.
ಅಂದಿನಿಂದ ನರಸಿಂಹನ ಉರಿಯನ್ನು ಸಹಿಸಲು ಸಾಧ್ಯವಾಗುವಂತೆ ಈ ಆಂಜನೇಯನ ವಿಗ್ರಹಕ್ಕೆ ಚಂದ್ರ (ಸಿಂಧೂರ) ಬೆಣ್ಣೆಯನ್ನು ಲೇಪಿಸಲಾಗುತ್ತಿದೆ. ಹಾಗೂ ಅಂದು ಸ್ಥಾಪಿಸಿದ ನಂದಾದೀಪಗಳಲ್ಲಿ ನಿರಂತರವಾಗಿ ದೀಪವು ಉರಿಯುತ್ತಿದ್ದು ದೂರ ಪ್ರಯಾಣ ಬೆಳೆಸುವರು ಸುಖ ಪ್ರಯಾಣಕ್ಕಾಗಿ ಮತ್ತು ಭಕ್ತಾದಿಗಳು ಎಣ್ಣೆಯನ್ನು ನಂದಾದೀಪಕ್ಕೆ ಹರಕೆ ರೂಪದಲ್ಲಿ ಹಾಕಿ ಪ್ರಾರ್ಥಿಸುವ ಸಂಪ್ರದಾಯ ಇಟ್ಟುಕೊಂಡಿರುತ್ತಾರೆ. ಭಕ್ತರು ಇಷ್ಟಾರ್ಥ ಪ್ರಾಪ್ತಿಗಾಗಿ ಪೂರ್ಣಾಲಂಕಾರ, ರಂಗಪೂಜೆ, ಸುಂದರಕಾಂಡ ಪಾರಾಯಣ ಸೇವೆ ಸಲ್ಲಿಸುತ್ತಾರೆ.
ಶ್ರೀ ಗುರುನರಸಿಂಹ ಹಾಗೂ ಆಂಜನೇಯ ದೇವಸ್ಥಾನದ ವಿಹಂಗಮ ನೋಟದ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿರುವ ಸುಂದರ ವಿಡಿಯೋ :