ಬೆಂಗಳೂರು, ಅ.3 www.bengaluruwire.com : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ನೂತನ ಆಯುಕ್ತರಾಗಿ ಹಿರಿಯ ಐಎಎಸ್ ಅಧಿಕಾರಿ ಎನ್.ಜಯರಾಮ್, ಇಂದು ಅಧಿಕಾರ ಸ್ವೀಕರಿಸಿದರು.
ಅಧಿಕಾರ ಸ್ವೀಕರಿಸಿದ ನಂತರ ಪ್ರಾಧಿಕಾರದ ಅಧಿಕಾರಿಗಳೊಡನೆ ಸಭೆಯನ್ನು ನಡೆಸಿ, ಬಿಡಿಎ ಕಾರ್ಯವೈಖರಿ, ಪ್ರಸ್ತುತ ಯೋಜನೆಗಳು ಹಾಗೂ ಮುಂಬರುವ ಯೋಜನೆಗಳ ಬಗ್ಗೆ ಮಾಹಿತಿಗಳನ್ನು ಪಡೆದರು.
ಬಿಡಿಎ ನ ಹಿಂದಿನ ಆಯುಕ್ತರಾಗಿದ್ದ ಕುಮಾರ್ ನಾಯಕ್ ಅವರ ನಿವೃತ್ತಿಯಿಂದ ತೆರವಾದ ಸ್ಥಾನಕ್ಕೆ ಬರಲು ಸರ್ಕಾರದ ಮಟ್ಟದಲ್ಲಿ ಸಾಕಷ್ಟು ಲಾಭಿ ನಡೆದಿತ್ತು. ಈ ಹಿಂದೆ ಬಿಡಿಎ ಆಯುಕ್ತರಾಗಿ ಸೇವೆ ಸಲ್ಲಿಸಿದ್ದ ಜೆ.ಸಿ.ಪ್ರಕಾಶ್ ಹಾಗೂ ರಾಜೇಶ್ ಗೌಡ ಅವರು ಈ ಸ್ಥಾನಕ್ಕೆ ಪುನಃ ಮರಳಲು ಸಾಕಷ್ಟು ಪ್ರಯತ್ನಪಟ್ಟಿದ್ದರು ಎಂದು ತಿಳಿದುಬಂದಿತ್ತು.
ಎನ್.ಜಯರಾಮ್ ಪ್ರಸ್ತುತ ಮುಖ್ಯಮಂತ್ರಿಗಳ ಕಾರ್ಯದರ್ಶಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದು, ಬೆಂಗಳೂರು ಜಲಮಂಡಳಿಯ ಅಧ್ಯಕ್ಷ ಸ್ಥಾನದಿಂದ ಬಿಡಿಎ ಆಯುಕ್ತರ ಹುದ್ದೆಗೆ ಸರ್ಕಾರ ಅ.2ರಂದು ವರ್ಗಾವಣೆ ಮಾಡಿ ಆದೇಶಿಸಿತ್ತು.

ಬಿಡಿಎ ಸಿಎ ನಿವೇಶನ, ಬದಲಿ ನಿವೇಶನ ಹಂಚಿಕೆಯಲ್ಲಿ ವಿಳಂಬ, ಭೂ ಪರಿಹಾರ ವಿತರಣೆಯಲ್ಲಿ ಗೋಲ್ ಮಾಲ್, ಬಿಡಿಎ ಪೆರಿಫಿರಿಯಲ್ ರಿಂಗ್ ರೋಡ್ ನಿರ್ಮಾಣ, ಕೆಂಪೇಗೌಡ ಮತ್ತು ಶಿವರಾಮ ಕಾರಂತ ಬಡಾವಣೆ ನಿರ್ಮಾಣದ ಅಭಿವೃದ್ಧಿ ಕಾಮಗಾರಿ ಮುಂತಾದ ವಿಚಾರದಲ್ಲಿ ದಕ್ಷ ಮತ್ತು ಖಡಕ್ ಅಧಿಕಾರಿಯನ್ನು ಬಳಸಿ ಸಮರ್ಥ ಆಡಳಿತ ನೀಡಿ ಬಿಡಿಎ ಅಕ್ರಮಗಳ ಕೂಪ ಎಂಬ ಕಳಂಕ ತೊಳೆಯಲು ರಾಜ್ಯ ಸರ್ಕಾರ ನಿರ್ಧರಿಸಿ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.
