ಬೆಂಗಳೂರು, ಮೇ.15 www.bengaluruwie.com : ಇದೊಂದು ಸಿನಿಮಾ ದೃಶ್ಯದಂತೆ ಭಾಸುವಾಗುವಂತೆ ಬಸ್ ಪ್ರಯಾಣಿಕರ ಕಣ್ಣ ಮುಂದೆ ನಡೆದು ಹೋಗಿತ್ತು. ಮಾನವೀಯತೆ ಸೆಲೆಯಲ್ಲಿ ನಡೆದ ಈ ಘಟನೆಗೆ ಸಹ ಪ್ರಯಾಣಿಕರು ಸಾಕ್ಷಿಯಾಗಿದ್ದರು.
ಸೋಮವಾರ ಬೆಂಗಳೂರು- ಚಿಕ್ಕಮಗಳೂರು ಕೆಎಸ್ ಆರ್ ಟಿಸಿ ಬಸ್ ಕೆ.ಎ-18,ಎಫ್-0865ರಲ್ಲಿ ಬಸ್ ನಲ್ಲಿ ಬೆಂಗಳೂರಿನಿಂದ ಬೇಲೂರಿಗೆ ಪ್ರಯಾಣಿಸುತ್ತಿದ್ದ ಓರ್ವ ಗರ್ಭಿಣಿ ಮಹಿಳೆಗೆ ಉದಯಪುರ ಸಮೀಪವಿರುವ ಕೃಷಿ ಕಾಲೇಜು ಹತ್ತಿರ ಮಧ್ಯಾಹ್ನ 1.35ರ ಸಮಯದಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಹತ್ತಿರ ಯಾವುದೇ ಆಸ್ಪತ್ರೆ ಇರಲಿಲ್ಲ. ಆ ಸಂದರ್ಭದಲ್ಲಿ ಗರ್ಭಿಣಿ ಮಹಿಳೆಯ ಪರಿಸ್ಥಿತಿ ಅರಿತ ಮಹಿಳಾ ನಿರ್ವಾಹಕಿ ಎಸ್.ವಸಂತಮ್ಮ, ಬಸ್ಸನ್ನು ನಿಲ್ಲಿಸಲು ಚಾಲಕರಿಗೆ ತಿಳಿಸಿದರು. ಬಳಿಕ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ ಪ್ರಯಾಣಿಕರನ್ನು ಕೆಳಗೆ ಇಳಿಸಿ ಬಸ್ಸಿನಲ್ಲಿಯೇ ಹೆರಿಗೆಯನ್ನು ಮಾಡಿಸಿರುತ್ತಾರೆ.
ಹೆರಿಗೆಯಾದ ಮಹಿಳೆಯು ಆರ್ಥಿಕವಾಗಿ ದುರ್ಬಲಳಾಗಿದ್ದ ಕಾರಣ ನಿಗಮದ ಚಾಲನಾ ಸಿಬ್ಬಂದಿ, ಮಹಿಳೆಯ ತುರ್ತು ಖರ್ಚಿಗಾಗಿ ಎಲ್ಲಾ ಪ್ರಯಾಣಿಕರಿಂದ ಒಟ್ಟು ರೂ.1500 ರೂ.ಸಂಗ್ರಹಿಸಿ ಮಹಿಳೆಗೆ ನೀಡಿದರು. ನಂತರ ಬಾಣಂತಿ ಮಹಿಳೆಯನ್ನು ಆಂಬುಲೆನ್ಸ್ ಮುಖೇನ ಶಾಂತಿಗ್ರಾಮ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲು ಸಹಕರಿಸಿದರು. ಸದ್ಯ ಆ ಮಹಿಳೆ ಮತ್ತು ಹೆಣ್ಣು ಮಗು ಆರೋಗ್ಯವಾಗಿದ್ದಾರೆ ಎಂದು ಕೆಎಸ್ ಆರ್ ಟಿಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಸಕಾಲದಲ್ಲಿ ಮಹಿಳಾ ಪ್ರಯಾಣಿಕರಿಗೆ ಸ್ಪಂದಿಸಿ ಮಗು ಮತ್ತು ತಾಯಿಯನ್ನು ಉಳಿಸಿ ಮಾನವೀಯ ನೆರವನ್ನು ನೀಡಿದ ನಿರ್ವಾಹಕಿ ಎಸ್.ವಸಂತಮ್ಮ ಅವರ ಕಾರ್ಯವು ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕರಾದ ಜಿ.ಸತ್ಯವತಿ ಅವರು ಅಭಿನಂದಿಸಿದ್ದಾರೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.